ದಾವಣಗೆರೆ
ಬಸವ ಜಯಂತಿಯನ್ನು ಯಶಸ್ವಿಗೊಳಿಸಿದ ಕಾರ್ಯಕರ್ತರಿಗೆ ಗೌರವಿಸುವ ಸಮಾರಂಭವನ್ನು ಬುಧವಾರ ಸಂಜೆ 5 ಗಂಟೆಗೆ ನಗರದ ಶಿವಯೋಗಿ ಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ವಿರಕ್ತ ಮಠದ ಡಾ. ಬಸವಪ್ರಭು ಸ್ವಾಮೀಜಿ ತಿಳಿಸಿದ್ದಾರೆ.
ನಗರದ ಬಸವ ಭಕ್ತರು ಒಂದಾಗಿ ಮೇ 1 ರಂದು ಶ್ರೀ ಶಿವಯೋಗಿ ಮಂದಿರದಲ್ಲಿ ಬಸವ ಜಯಂತಿಯನ್ನು ಯಶಸ್ವಿಯಾಗಿ ಆಚರಿಸಿದರು. ಅದಕ್ಕೆ ಪೂರ್ವಭಾವಿಯಾಗಿ ಏ. 24 ರಿಂದ 30ರ ವರೆಗೆ ಪ್ರತಿ ದಿನ ಒಂದೊಂದು ಬಡಾವಣೆಯಲ್ಲಿ ಬಸವ ಪ್ರಭಾತ್ ಫೇರಿ, ಬಸವ ಜಯಂತಿ ಕಾರ್ಯಕ್ರಮವು ಅರ್ಥಪೂರ್ಣವಾಗಿ, ಅದ್ದೂರಿಯಾಯಿತು.
ಸಮಾರಂಭ ಯಶಸ್ವಿಯಾಗಲು ದುಡಿದ ಪ್ರತಿಯೊಬ್ಬ ಕಾರ್ಯಕರ್ತರಿಗೆ, ಸೇವೆ ಸಲ್ಲಿಸಿದ ದಾಸೋಹಿಗಳು, ದಾನಿಗಳಿಗೆ ಗೌರವ ಸಲ್ಲಿಸಬೇಕು ಎಂಬುದು ನಮ್ಮ ಶ್ರೀಮಠದ ಸದಾಶಯವಾಗಿದೆ ಎಂದು ಸ್ವಾಮೀಜಿ ಹೇಳಿದ್ದಾರೆ.

ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಬಸವೇಶ್ವರರ ಜಯಂತಿ ಆರಂಭಿಸಿದ ಕೀರ್ತಿ ಚಿತ್ರದುರ್ಗದ ಮುರುಘಾ ಬೃಹನ್ಮಠದ ಶಾಖಾ ಮಠ ಆಗಿರುವ ದಾವಣಗೆರೆ ವಿರಕ್ತ ಮಠಕ್ಕೆ ಸಲ್ಲುತ್ತದೆ. ಕರ್ನಾಟಕದ ಗಾಂಧಿ ಖ್ಯಾತಿಯ ಹರ್ಡೇಕರ್ ಮಂಜಪ್ಪ ಅವರು ಬಸವಣ್ಣನವರ ಜಯಂತಿಯನ್ನು ಸಾರ್ವಜನಿಕವಾಗಿ ಆಚರಿಸಲು ಆಲೋಚಿಸಿ ಮೃತ್ಯುಂಜಯ ಅಪ್ಪ ಅವರಲ್ಲಿ ಭಿನ್ನಹ ಮಂಡಿಸಿದರು. ಈ ವಿಚಾರವನ್ನು ಅವರು ಜಯದೇವ ಜಗದ್ಗುರುಗಳ ಗಮನಕ್ಕೆ ತಂದಾಗ ಬಸವ ಜಯಂತಿಗೆ ಒಪ್ಪಿಗೆ ಸಿಕ್ಕಿ 1913 ರಲ್ಲಿ ಮೊಟ್ಟ ಮೊದಲ ಬಾರಿಗೆ ವಿರಕ್ತ ಮಠದಲ್ಲಿ ಸಾರ್ವಜನಿಕವಾಗಿ ಬಸವ ಜಯಂತಿ ಆಚರಣೆ ಮಾಡಲಾಯಿತು.
ನಂತರ ಜಗತ್ತಿನೆಲ್ಲೆಡೆ ಬಸವ ಜಯಂತಿ ಆಚರಣೆ ಶುರುವಾಯಿತು. ಇಂದಿಗೂ ಕೂಡ ವಿರಕ್ತ ಮಠದಲ್ಲಿ ಬಸವ ಜಯಂತಿಯನ್ನು ವಿಭಿನ್ನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.