ದಾವಣಗೆರೆಯಲ್ಲಿ ಬಸವತತ್ವದ ‘ಮನೆಯೊಕ್ಕಲು’ (ಗುರು ಪ್ರವೇಶ) ಸಮಾರಂಭ

ದಾವಣಗೆರೆ

ಬಸವ ಧರ್ಮದ ತತ್ವ ಸಿದ್ಧಾಂತಗಳು, ಆಚರಣೆಗಳು ಮುಂದಿನ ಪೀಳಿಗೆಗೆ ತಿಳಿಸಬೇಕಾದರೆ ಇಂದು ನಾವು ನಿಜಾಚರಣೆಗಳನ್ನು ನಡೆಸಬೇಕಾಗಿದೆ.

ನಮಗೆ ಹುಟ್ಟಿನಿಂದ ಸಾಯುವವರೆಗೂ ನಾಮಕರಣ, ಲಿಂಗದೀಕ್ಷೆ, ಮದುವೆ, ಗುರುಪ್ರವೇಶ (ಮನೆ ಪ್ರವೇಶ, ಗೃಹಪ್ರವೇಶ), ಲಿಂಗೈಕ್ಯ ಹೀಗೆ ಅನೇಕ ಆಚರಣೆಗಳಿರುತ್ತವೆ. ಇತ್ತೀಚಿಗೆ ಬಸವಧರ್ಮಿಯರು, ಲಿಂಗಾಯತರು ಎಂದೆನಿಸಿಕೊಳ್ಳುವವರೇ ಧರ್ಮದ ನಿಜಾಚಾರಣೆಗಳನ್ನು ಮರೆತಿರುವುದು ನೋವಿನ ಸಂಗತಿ. ಹಾಗಾಗಿ ನಾವುಗಳು ಬಸವಧರ್ಮದ ಆಚರಣೆಗಳನ್ನು ಆಚರಿಸಿ ಪರಿಚಯಿಸುವ ಕೆಲಸ ಆಗಬೇಕಿದೆ.

ಬಸವ ಧರ್ಮದ ನಿಜಾಚಾರಣೆಗಳನ್ನು ನಡೆಯಲ್ಲಿ ತರುವ ಮತ್ತು ತಿಳಿಸುವ ಒಂದು ಕಾರ್ಯಕ್ರಮವು ದಾವಣಗೆರೆಯಲ್ಲಿ ಇತ್ತೀಚೆಗೆ ನಡೆಯಿತು.

ದಾವಣಗೆರೆ ನಿವಾಸಿಯಾದ ದಾವಣಗೆರೆ ವಿರಕ್ತಮಠದ ಪೂಜ್ಯ ಬಸವಪ್ರಭು ಸ್ವಾಮೀಜಿಯವರಿಂದ ಕ್ರಿಯಾಮೂರ್ತಿ ದೀಕ್ಷೆಯನ್ನು ಪಡೆದು ಚರಜಂಗಮರಾಗಿರುವ ವಚನಮೂರ್ತಿ ಷಣ್ಮುಖಪ್ಪ ಸಾಲಿಯವರು ದಾವಣಗೆರೆಯ ಸೌಥರ್ನ್ ಬಡಾವಣೆಯಲ್ಲಿ ಮನೆಯೊಂದನ್ನು ನಿರ್ಮಿಸಿದ್ದಾರೆ. ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ ಎನ್ನುವಂತೆ, ಪೂರ್ಣಿಮಾ, ಷಣ್ಮುಖಪ್ಪ ಸಾಲಿ ದಂಪತಿಗಳು ಕಳೆದ ಭಾನುವಾರ ಬಸವತತ್ವ ಮನೆ ಪ್ರವೇಶ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಭಾನುವಾರ ಬೆಳಿಗ್ಗೆ ಬಸವಪ್ರಭು ಸ್ವಾಮೀಜಿಯವರ ಸಾನಿಧ್ಯದಲ್ಲಿ ಬಂದು ಬಳಗದವರ, ಬಸವ ಭಕ್ತರ ಉಪಸ್ಥಿತಿಯಲ್ಲಿ, ಬಸವಣ್ಣನವರ ಭಾವಚಿತ್ರ ಮತ್ತು ವಚನ ಗ್ರಂಥದೊಂದಿಗೆ ನ್ಯಾಮತಿಯ ಶರಣ ಶಂಬುಲಿಗಪ್ಪನವರ ತಂಡದವರು ಸಮಾಳ ವಾದ್ಯದೊಂದಿಗೆ ವಚನಗಳನ್ನು ಹೇಳುವ ಮೂಲಕ, ವಚನ ಗುಗ್ಗಳ ಕಾರ್ಯಕ್ರಮವನ್ನು ಬಡಾವಣೆಯ ಓಣಿಯಲ್ಲಿ ನಡೆಸಿದರು.

ನಂತರ ಕ್ರಿಯಾಮೂರ್ತಿಗಳಾದ ಶರಣ ಶಿವಾನಂದ ಅರಭಾವಿಯವರು ವಚನ ಗುಗ್ಗಳ ಮೆರವಣಿಗೆಯನ್ನು ಬರಮಾಡಿಕೊಂಡು, ಮನೆಯ ಅಂಗಳದಲ್ಲಿ ಷಟ್ ಸ್ಥಲ ದ್ವಜದ ಮಾಹಿತಿಯನ್ನು ತಿಳಿಸಿದರು, ಬಸವಪ್ರಭು ಸ್ವಾಮೀಜಿಯವರು ದ್ವಜಾರೋಹಣ ಮಾಡಿದರು. ಅನಂತರ ಮನೆಯೊಳಗೆ ಧರ್ಮಗುರು ಬಸವಣ್ಣನವರ ಭಾವಚಿತ್ರವನ್ನು, ಧರ್ಮಗ್ರಂಥವನ್ನು ಪ್ರತಿಷ್ಠಾಪಿಸಿದರು.

ಜಗತ್ತಿನ ಕತ್ತಲನ್ನು ಕಳೆಯಲು ಸೂರ್ಯ ಇದ್ದಾನೆ, ಮನಸ್ಸಿನ ಕತ್ತಲನ್ನು ಕಳೆಯಲು ಶಿವಯೋಗವಿದೆ. ಈ ದೃಷ್ಟಿಯಿಂದ ಶಿವಯೋಗಕ್ಕೆ ಸಾಧನವಾದ ಇಷ್ಟಲಿಂಗವನ್ನು ಕಂಡುಹಿಡಿದರು ಬಸವಣ್ಣನವರು. ಈ ತತ್ವದ ಅನುಭಾವವನ್ನು ತಿಳಿಸಲು ವಿಶೇಷವಾದ ವಚನ ಸಾಹಿತ್ಯವನ್ನು ಕೊಟ್ಟರು.

ಈ ಹಾದಿಯಲ್ಲಿ ಸಾಗಿ ಮೌಢ್ಯ ಆಚರಣೆಗಳಿಂದ ದೂರ ಇದ್ದು, ಸರಳತೆ ಸದ್ಗುಣಗಳೊಂದಿಗೆ ಜೀವನ ನಡೆಸಬೇಕು. ಈ ನಿಟ್ಟಿನಲ್ಲಿ ನಮ್ಮ ವಚನಮೂರ್ತಿಗಳಾದ ಷಣ್ಮುಖಪ್ಪ ಸಾಲಿ ಮತ್ತು ಪೂರ್ಣಿಮಾ ದಂಪತಿಗಳು ನಡೆಯುವಂತವರಾಗಿದ್ದಾರೆ, ಎಂದು ಬಸವಪ್ರಭು ಸ್ವಾಮೀಜಿಯವರು ಮನೆಪ್ರವೇಶದ ಕುರಿತು ಮಾತನಾಡಿ ಶಿವಯೋಗ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಈ ಸಂಧರ್ಭದಲ್ಲಿ ಹೊಳಲ್ಕೆರೆ ಒಂಟಿಕಂಬ ಮಠದ ಪೂಜ್ಯ ತಿಪ್ಪೆರುದ್ರ ಸ್ವಾಮೀಜಿಯವರು ಉಪಸ್ಥಿತರಿದ್ದರು.

ಬೆಳಗಿನ ಪ್ರಸಾದದ ನಂತರ, ಅನುಭಾವ ಚಿಂತನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಸಾನಿಧ್ಯವನ್ನು ತಿಪ್ಪೆರುದ್ರ ಸ್ವಾಮೀಜಿಯವರು ಸಾನಿಧ್ಯಹಿಸಿ ಮಾತನಾಡಿದರು.

ಶರಣಬಸವೇಶ್ವರ ಪೂರ್ಣಿಮಾ ಸಾಲಿ ಅವರು ಸ್ವಾಗತಿಸಿದರು, ಬಸವ ಕಲಾಲೋಕದವರು ವಚನ ಗಾಯನ ನಡೆಸಿಕೊಟ್ಟರು. ಈ ಸಂಧರ್ಭದಲ್ಲಿ ಕುಶಾಲ್ ಸಾಲಿ, ವಚನ್ ಸಾಲಿ , ಕ್ರಿಯಾಮೂರ್ತಿಗಳಾದ ಶರಣ ರೇಣುಕಯ್ಯ , ಶರಣ ವೀರಭದ್ರಯ್ಯ, ಶಂಭುಲಿಂಗಪ್ಪ ನ್ಯಾಮತಿ ನಿಂಬಪ್ಪ, ಶಿವಣ್ಣ ನ್ಯಾಮತಿ, ಶಿವಪ್ರಸಾದ್ ಕರ್ಜಗಿ, ಮಲ್ಲಪ್ಪ ಡಾಬಳ್ಳಿ, ಸತೀಶ್, ಬಸವ ಬಳಗದ ವೀಣಕ್ಕ, ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿಗಳಾದ ವಿಶ್ವೇಶರಯ್ಯ ಬಿ.ಎಂ, ಶಿವಮೂರ್ತ್ಯಯ್ಯ, ದಾವಣಗೆರೆ ಬಸವ ಬಳಗದವರು, ಬಸವ ಅಭಿಮಾನಿಗಳು, ಬಸವಪರ ಸಂಘಟನೆಗಳು, ಬಡಾವಣೆಯ ನಿವಾಸಿಗಳು ಹಾಗೂ ಬಂಧು ಮಿತ್ರರು ಸಹೋದ್ಯೋಗಿಗಳು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FgE69G06eauFQg8Bv3ecgq

Share This Article
Leave a comment

Leave a Reply

Your email address will not be published. Required fields are marked *