ದಾವಣಗೆರೆ
ಸುತ್ತೂರು ಕ್ಷೇತ್ರದ ಜಾತ್ರಾ ಮಹೋತ್ಸವದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ರಥಯಾತ್ರೆ ನಗರಕ್ಕೆ ಆಗಮಿಸಿತು. ಅಕ್ಕಮಹಾದೇವಿ ಕಲ್ಯಾಣ ಮಂಟಪದ ಎದುರು ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಅಣಬೇರು ರಾಜಣ್ಣ ನೇತೃತ್ವದಲ್ಲಿ ಪುಷ್ಪಾರ್ಚನೆ ಮಾಡಿ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಅಣಬೇರು ರಾಜಣ್ಣ ಮಾತನಾಡಿ, ನಮ್ಮ ಮಠಗಳು ಅನ್ನ, ಜ್ಞಾನ ದಾಸೋಹದ ಮೂಲಕ ಸ್ಮರಣಾರ್ಹ ಕಾರ್ಯ ಮಾಡುತ್ತಿವೆ. ನಾನು ಎಲ್ಲಾ ಮಠಗಳ ಸಂಪರ್ಕದಲ್ಲಿರುವೆ. ಸುತ್ತೂರು ಮಠ ಎತ್ತರದ ಸ್ಥಾನದಲ್ಲಿದೆ. ವಿದೇಶದಲ್ಲು ಶಿಕ್ಷಣ ಸಂಸ್ಥೆ ಮಾಡಿ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣ ಸೇವೆ ನಡೆಸುವ ಶ್ರೀಮಂತ ಮಠವಾಗಿದೆ.
ಮಠದಲ್ಲಿ 8ರಿಂದ 9 ಸಾವಿರ ಮಕ್ಕಳು ಓದುತ್ತಾ ಇದ್ದಾರೆ. ಅವರಿಗೆ ಅನ್ನ, ಜ್ಞಾನ ದಾಸೋಹ ನಡೆಯುತ್ತಿದೆ. ದಾವಣಗೆರೆ ಹೊರಭಾಗದ ಬಾತಿಯ ಸಮೀಪ ಮಠದಿಂದ ಶಿಕ್ಷಣ ಸಂಸ್ಥೆ ಆರಂಭವಾಗಲಿದೆ ಎಂದರು.
ಬಸವಪ್ರಭು ಸ್ವಾಮೀಜಿ ಮಾತನಾಡುತ್ತ, ಮಠ-ಮಾನ್ಯಗಳಿರುವುದು ಸಮಾಜ, ನಾಡಿನ ಬಡವರು, ನೊಂದವರ ಉದ್ಧಾರಕ್ಕೆ. ಜನ ಯಾರೇ ಇರಲಿ, ಬರಲಿ ಅವರನ್ನು ಇವನಮ್ಮವ ಎಂದು ನಮ್ಮ ಲಿಂಗಾಯತ ಮಠಗಳು ಅಪ್ಪಿಕೊಂಡು ಸೇವೆ ಸಲ್ಲಿಸುತ್ತಿವೆ.
ಮಠಗಳು ಜನರಿಗೆಲ್ಲಾ ಅನ್ನ, ಆಶ್ರಯ ಕೊಡುತ್ತಿವೆ. ಮಠಗಳಿರದೇ ಹೋಗಿದ್ದರೆ ನಾಡಿನ ಮುಕ್ಕಾಲುಪಾಲು ಜನ ಅವಿದ್ಯಾವಂತರಾಗಿರುತ್ತಿದ್ದರು. ಮಠಮಾನ್ಯಗಳು ಇಲ್ಲದ ಬಿಹಾರ, ಉತ್ತರಪ್ರದೇಶ, ಅಸ್ಸಾಂ ರಾಜ್ಯಗಳಂತೆ ನಮ್ಮ ರಾಜ್ಯವು ಹಿಂದುಳಿಯುತ್ತಿತ್ತು ಎಂದರು.
ರಥಯಾತ್ರೆ, ಜಾತ್ರಾ ಸಮಿತಿ ಸಂಚಾಲಕ ಪಂಚಾಕ್ಷರಿ ಮಾತನಾಡಿ, ಸರ್ವರನ್ನು ಸುತ್ತೂರು ಮಠದ ಜಾತ್ರೆಗೆ ಆಹ್ವಾನಿಸಿದರು.
ರಥವನ್ನು ಸ್ವಾಗತಿಸಿ, ಬೀಳ್ಕೊಡುವ ಕಾರ್ಯಕ್ರಮದಲ್ಲಿ ಎಮ್. ಶಿವಕುಮಾರ, ಕೆ.ಬಿ. ಪರಮೇಶ್ವರಪ್ಪ, ಐಗೂರ ಚಂದ್ರಶೇಖರ, ಎನ್.ಎಸ್. ರಾಜು, ಕಂಚಿಕೆರೆ ಸುಶೀಲಮ್ಮ, ಶಿವರಾಜ ಕಬ್ಬೂರು, ಅಜ್ಜಂಪುರ ರಾಜಣ್ಣ, ಮಮತಾ ನಾಗರಾಜ, ಬಿ.ಟಿ. ಪ್ರಕಾಶ, ಮಲ್ಲಿಕಾರ್ಜುನಸ್ವಾಮಿ, ಮೊಗಳ್ಳಿ ಶಿವಣ್ಣ, ಅಜ್ಜಂಪುರ ಷಡಕ್ಷರಿ ಸೇರಿದಂತೆ ಬಸವಪರ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು.
ಮುಂದೆ ರಥ ಹೆಬ್ಬಾಳು, ಭರಮಸಾಗರದ ಮೂಲಕ ಚಿತ್ರದುರ್ಗಕ್ಕೆ ತೆರಳಿತು.
