ದೇವನಾಗಲು ಬಹುದು ಬಸವಣ್ಣನಾಗಲು ಬಾರದಯ್ಯ

ಶರಣು ಶಿಣ್ಣೂರ್
ಶರಣು ಶಿಣ್ಣೂರ್

ಕಲಬುರಗಿ

ಸ್ವರ್ಗ-ನರಕ, ಪಾಪ-ಪುಣ್ಯ, ಮಂತ್ರ-ತಂತ್ರ, ಜ್ಯೋತಿಷ್ಯ-ಪಂಚಾಂಗ, ನೇಮ-ನಿತ್ಯ, ದೇವ-ದಾನವ ಇತ್ಯಾದಿ ಕಂದಾಚಾರಗಳ ಆಧಾರದ ಮೇಲೆ ಕ್ರೂರ ಸಾಮಾಜಿಕ ವ್ಯವಸ್ಥೆಯನ್ನು ಕಟ್ಟಿ, ಬೆಳೆಸಿ, ಪೋಷಿಸುತ್ತಾ ಬಂದಿದ್ದರು ಚಾತುರ್ವರ್ಣದ ನಿರ್ಮಾಪಕರು.

ವೀರ-ಶೂರತ್ವ ಮೆರೆಯುವ ರಾಜಾದಿ-ಮಹಾರಾಜರುಗಳೂ ಕೂಡ ಹೆದರಿ ತಲೆಬಗ್ಗಿಸಿ ನಮಿಸುವಂಥ ಗುಲಾಮಿಗಿರಿಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದಿದ್ದರು ಪಟ್ಟಭದ್ರ ಹಿತಾಸಕ್ತಿಗಳು.

ಇಂತಹ ದೇವರ ದಲ್ಲಾಳಿಗಳಿಂದ ಧರ್ಮವು ತನ್ನ ನಿಜ ಅಸ್ತಿತ್ವವನ್ನು ಕಳೆದುಕೊಂಡು, ಅಧರ್ಮವೆಂಬ ಪಿಶಾಚಿಯು ಭಾರತೀಯ ನೆಲಮೂಲದ ಜನಾಂಗವನ್ನು ಇನ್ನಿಲ್ಲದಂತೆ ಉಸಿರುಗಟ್ಟಿಸಿ ಪ್ರತಿಕ್ಷಣ ಹಿಂಸಿಸುತ್ತಿತ್ತು.

ಅಂದಿನ ಸಾಮಾಜಿಕ ವ್ಯವಸ್ಥೆಯು ಕಲುಷಿತಗೊಂಡು ಕೊಳೆತು ಗಬ್ಬು ನಾರುತ್ತಿರುವಾಗ ಮರ್ತ್ಯಲೋಕವೆಂಬ ಮಹಾಮನೆಯು ಹಾಳಾಗಬಾರದೆಂದು ಕರ್ತನಟ್ಟಿದನಯ್ಯಾ ಅಂದು ಗುಹೇಶ್ವರ ಲಿಂಗಕ್ಕೆ ವಿಳಾಸವಾಗಿದ್ದ ಸಂಗನಬಸವನನ್ನು.

ಅಂದಿನ ಕರ್ಮಟ ವ್ಯವಸ್ಥೆಯ ಕಪಟನಾಟಕ ಸೂತ್ರಧಾರಿಗಳಾಗಿದ್ದ ಮಧ್ಯ ಏಷಿಯಾದಿಂದ ಭಾರತಕ್ಕೆ ವಲಸೆ ಬಂದ ಆರ್ಯಮೂಲದವರು, ದೇವರು ಮತ್ತು ಧರ್ಮದ ಬಗ್ಗೆ ಬಣ್ಣಬಣ್ಣದ ಸುಳ್ಳು ಕಥೆಗಳನ್ನು ಸೃಷ್ಟಿಸಿ ಈ ನೆಲಮೂಲದ ನಿವಾಸಿಗಳನ್ನು ಶೂದ್ರರೆಂದು, ಅಸ್ಪೃಶ್ಯರೆಂದು ಸ್ವತಃ ಒಪ್ಪಿಕೊಳ್ಳುವಂತೆ ನಂಬಿಸಿ ಚಿತ್ರ ವಿಚಿತ್ರವಾಗಿ ಕ್ರೂರತನದಿಂದ ನಡೆಸಿಕೊಂಡರು.

ಹಸಿವು ಎನ್ನುವ ಸಂಗತಿಯ ಬಗ್ಗೆ ಸ್ವಲ್ಪವೂ ಅರಿವಿರದ ಮೇಲ್ವರ್ಗದವರು ಪರಾವಲಂಬಿಯಾಗಿ ಒಂದು ಕಡೆ ಐಶಾರಾಮಿ ಜೀವನ ನಡೆಸುತ್ತಿದ್ದರೇ, ಶೂದ್ರರು ಮನುಷ್ಯರೇ ಅಲ್ಲವೇನೋ ಎಂಬಂತೆ ಇನ್ಶೋನೊಂದು ಕಡೆ ಶೋಷಣೆಗೊಳಲ್ಪಡುತ್ತಿದ್ದರು.

ಹೌದು. ಅಂದಿನ ಸಮಾಜದ ಕಟ್ಟಕಡೆಯ ವ್ಯಕ್ತಿಯಾಗಿದ್ದ ಅಸ್ಪೃಶ್ಯನೊಬ್ಬ ಊರೊಳಗೆ ಸ್ವಾತಂತ್ರ್ಯವಾಗಿ, ಭಯ-ರಹಿತವಾಗಿ ಸುಳಿಯುವಂತಿದ್ದಿಲ್ಲ. ಮೇಲ್ಜಾತಿಯವರ ಮನೆಯ ತಂಬಿಗೆ ಮುಟ್ಟಿ ನೀರು ಕುಡಿಯುವಂತಿದ್ದಿಲ್ಲ. ಕೊರಳಲ್ಲಿ ಮಣ್ಣಿನ ಗಡಿಗೆ ಕಟ್ಟಿಗೊಂಡು ಸೊಂಟಕ್ಕೆ ಬಾರಿಗೆ ಕಟ್ಟಿಕೊಂಡು ಸಂಭೋಳಿ ಸಂಭೋಳಿ ಎಂದು ಜೋರಾಗಿ ಕೂಗುತ್ತಾ ನಡುಮದ್ಯಾಹ್ನದಲ್ಲಿ ಊರೊಳಗೆ ಬಂದು, ಸತ್ತು ಬಿದ್ದಿದ್ದ ದನವನ್ನೋ ಅಥವಾ ನಾಯಿಯನ್ನೋ ಹೊತ್ತೊಯ್ಯಲು ಮಾತ್ರ ಪ್ರವೇಶವಿತ್ತು.

ಸಮಾಜದ ಕಟ್ಟಕಡೆಯ ವರ್ಗವಾಗಿದ್ದ ಶೂದ್ರರ ಮತ್ತು ಅಸ್ಪೃಶ್ಯರ ಆತ್ಮ ವಿಶ್ವಾಸ ಸತ್ತು ಅದಾಗಲೇ ಕೊಳೆತು ಶತ-ಶತಮಾನಗಳಾಗಿದ್ದವು. ಇಂಥ ಧಾರುಣ ಸ್ಥಿತಿಯನ್ನು ಕಂಡು ಆ ದೇವರು ಕೂಡ “ಅಹುದೆನಲಮ್ಮೆ ಇಲ್ಲೆನಲಮ್ಮೆ” ಎನ್ನುವಂಥ ಅಸಹಾಯಕ ಸ್ಥಿತಿಯವನಾಗಿದ್ದ.

ಇನ್ನೂ ಸ್ತ್ರೀಯರ ಸ್ಥಾನಮಾನವಂತೂ ಅಧೋಗತಿಗೆ ಬಂದು ನಿಂತಿತ್ತು. ಹೆಣ್ಣು ಶೂದ್ರಳು, ಹೆಣ್ಣು ಮಾಯೆ, ಹೆಣ್ಣು ರಾಕ್ಷಸಿ, ಹೆಣ್ಣು ಅಬಲೆ, ಶಿಕ್ಷಣಕ್ಕೆ ಅರ್ಹರಲ್ಲ ಎಂಬ ಇತ್ಯಾದಿಗಳಿಂದ ಶೋಷಣೆಗೊಳಲ್ಪಟ್ಟು ತನ್ನ ಅಸ್ತಿತ್ವದ ಅರಿವೇ ಇಲ್ಲದಂತಾಗಿತ್ತು ಅವಳಿಗೆ. ಒಂದು ಕಡೆ ಶೂದ್ರರ ಮತ್ತು ಅಸ್ಪೃಶ್ಯರ ಮನೆಯ ಕನ್ಯೆಯರನ್ನು ದೇವದಾಸಿಯರನ್ನಾಗಿ ದೇವಸ್ಥಾನಗಳಲ್ಲಿರಿಸಿ, ದೇವರ ಹೆಸರಲ್ಲಿ ಕಾಮತೀಟೆ ತೀರಿಸಿಕೊಳ್ಳುತ್ತಿದ್ದರೆ, ಇನ್ನೊಂದು ಕಡೆ ಸತ್ತ ಗಂಡನ ಜೊತೆಯಲ್ಲೇ ಸಜೀವ ಹೆಂಡತಿಯನ್ನು ಬೆಂಕಿಗೆ ನೂಕುವ “ಸತಿ-ಸಹಾಗಮನ” ಎಂಬ ಸಾಮಾಜಿಕ ಅನಿಷ್ಟ ಕ್ರೂರ ಪದ್ದತಿಯನ್ನು ಚಾಲ್ತಿಯಲ್ಲಿಟ್ಟಿದ್ದರು. ಹೌದು. “ಹೆಣ್ಣಾಗಿ ಹುಟ್ಟುವುದು ಮಹಾ ಶಾಪ” ಎಂಬುದು ಇತಿಹಾಸ ಪುಟಗಳಲ್ಲಿನ ನಗ್ನ ಸತ್ಯ.

“ಒಲೆಹತ್ತಿ ಉರಿದಡೆ ನಿಲಬಹುದಲ್ಲದೇ, ಧರೆಹತ್ತಿ ಉರಿದಡೆ ನಿಲಬಹುದೇ” ಎನ್ನುವಂತೆ ಶೋಷಣೆಯ ಮತ್ತು ಕ್ರೌರ್ಯದ ಆತ್ಯಂತಿಕ ತುತ್ತತುದಿಯನ್ನು ತಲುಪಿದ್ದ ದಿನಮಾನಕಾಲದಲ್ಲಿ, “ನೀ ಎನ್ನಂತೊಮ್ಮೆ ಒಡಲುಗೊಂಡು ನೋಡಾ ರಾಮನಾಥ” ಎಂದು ಆ ದೇವನಿಗೆ ಸವಾಲು ಹಾಕುವಷ್ಟರಲ್ಲಿ ದೇವಲೋಕದವರಿಗೂ ದೇವನಾದ, ಮರ್ತ್ಯಲೋಕದವರಿಗೂ ದೇವನಾದ ಹಾಗೂ ಆ ಚೆನ್ನಮಲ್ಲಿಕಾರ್ಜುನದೇವನಿಗೂ ಕೂಡ ದೈವವಾಗಿದ್ದ ಒಂದು ಅಪ್ರತಿಮ ಅತ್ಯದ್ಭುತವೊಂದು ಒಡಲುಕಟ್ಟಿಕೊಂಡೇ ಈಗಿನ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಸುಕ್ಷೇತ್ರ ಇಂಗಳೇಶ್ವರದಲ್ಲಿ ವಾಸವಾಗಿದ್ದ ಶೈವಬ್ರಾಹ್ಮಣ ಕಮ್ಮೆಕುಲದ ಮಾದರಸ ಮತ್ತು ಮಾದಲಾಂಬಿಕೆ ದಂಪತಿಗಳ ಮಗನಾಗಿ ಆಗಾಗಲೇ ಭೂಮಿಗೆ ಅವತರಿಸಿ ಬಂದಿತ್ತು ಬಸವಣ್ಣನವರಾಗಿ.

ಹೌದು. ಶಿಕ್ಷಣದಿಂದ ಮತ್ತು ಸಂಸ್ಕಾರಗಳಿಂದ ಹೊರಗಿಟ್ಟು ರಕ್ಕಸಿ ಎಂಬಂತೆ ಬಿಂಬಿಸಿದ್ದ ಹೆಣ್ಣನ್ನು ಅನುಭವ ಮಂಟಪಕ್ಕೆ ಕರೆತಂದು “ಹೆಣ್ಣು ಸಾಕ್ಷಾತ್ ಕಪಿಲಸಿದ್ಧಮಲ್ಲಿಕಾರ್ಜುನ” ಎಂದು ನಿರೂಪಿಸಲು ಬಂದರು ಅಂದು ಬಸವಣ್ಣನವರು.

“ಇವನಾರವ”? “ಮುಟ್ಟಬೇಡ” ಎಂದೆನಿಸಿಕೊಂಡವರನ್ನು “ಅಪ್ಪಿಕೊಂಡು” ಅನುಭವ ಮಂಟಪಕ್ಕೆ ಕರೆತಂದು “ಇವನಮ್ಮವ”ನೆಂದು ನಿರೂಪಿಸಲು ಬಂದರು ಅಂದು ಬಸವಣ್ಣನವರು.

ನಾವೇ ಹಿರಿಕುಲದವರೆಂದು ಮೆರೆಯುತ್ತಿದ್ದ ಮೇಲ್ವರ್ಗದವರಿಗೆ “ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ” ಎನ್ನುವ ಮೂಲಕ ಸೊಕ್ಕು ಮುರಿಯಲು ಬಂದರು ಅಂದು ಬಸವಣ್ಣನವರು.

ನಮಗಾರೂ ಇಲ್ಲ ಎಂದು ಆತ್ಮವಿಶ್ವಾಸ ಕಳೆದುಕೊಂಡಿದ್ದ ಕೆಳಸ್ಥರದ ಅಸ್ಪೃಶ್ಯರಿಗೆ “ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹಾರ ಕಕ್ಕಯ್ಯ” ಎನ್ನುವ ಮೂಲಕ ಅವರಿಗೆ ಮಗನಾಗಿ ಆತ್ಮಸ್ಥೈರ್ಯ ತುಂಬಲು ಬಂದರು ಅಂದು ಬಸವಣ್ಣನವರು.

ಮಹಾಕವಿಗಳಿಂದ ಅಂತೆಕಂತೆಗಳ ವ್ಯಾಕರಣಬದ್ಧವಾದ ಸಂಸ್ಕೃತ ದಲ್ಲಿನ ಜನವಿರೋಧಿ ವೈಧಿಕ ಸಾಹಿತ್ಯದ ರಚನೆಯ ಬದಲಿಗೆ, ಬೆವರವಾಸನೆಯ ನೆಲಮೂಲದ ಶ್ರಮಜೀವಿಗಳಿಂದ ಕನ್ನಡದಲ್ಲಿ ಲೋಕೋಪಯೋಗಿ ಮಹಾನ್ ಅನುಭಾವ ಒಳಗೊಂಡ ವಚನ ಸಾಹಿತ್ಯ ರಚಿಸಲು ಬಂದರು ಅಂದು ಬಸವಣ್ಣನವರು.

ದೇವರ ದರ್ಶನವೇ ಇಲ್ಲದೇ “ಸ್ಥಾವರ ಶಿವಲಿಂಗ”ದ ಗುಡಿ ಹೊರಗಡೆಯೆ ನಿಂತಿದ್ದ ಅಸ್ಪೃಶ್ಯರ ಪರವಾಗಿ “ಆನು ದೇವಾ ಹೊರಗಣವನು” ಎಂದೇಳಿ “ದಾಸೀ ಪುತ್ರನಾಗಲೀ; ವೇಶ್ಯೆ ಪುತ್ರನಾಗಲಿ; ಶಿವದೀಕ್ಷೆಯಾದ ಬಳಿಕ ಎಲ್ಲರೂ ಒಂದೇ” ಎಂಬ ಅರಿವಿನ ಕುರುಹಾದ ಇಷ್ಟಲಿಂಗ ಕಟ್ಟಲು ಬಂದರು ಅಂದು ಇಷ್ಟಲಿಂಗದ ಜನಕ ಬಸವಣ್ಣನವರು.

ಬೌದ್ಧಿಕ ವೃತ್ತಿ ಶ್ರೇಷ್ಠ; ದೈಹಿಕ ವೃತ್ತಿ ಕನಿಷ್ಟ ಎಂಬ ತಾರತಮ್ಯದ ವ್ಯವಸ್ಥೆಯನ್ನು “ಆನು ಹಾರವನೆಂದರೆ ನಗುವನಯ್ಯ ಕೂಡಲಸಂಗಯ್ಯ” ಎನ್ನುವ ಮೂಲಕ ವೃತ್ತಿಬೇಧ ವನ್ನು ಬುಡಸಮೇತ ಕಿತ್ತು ಹಾಕಿ “ಕಾಯಕವೇ ಕೈಲಾಸ” ಎಂಬ ಪರಿಣಾಮಕಾರಿ ತತ್ವ ನೀಡಿ ಎಲ್ಲಾ ವೃತ್ತಿಗಳನ್ನು ಅಂತರಾಳದಿಂದ ಪ್ರಾಮಾಣಿಕವಾಗಿ ಗೌರವಿಸುವುದನ್ನು ಕಲಿಸಲು ಬಂದರು ಅಂದು ಬಸವಣ್ಣನವರು.

“ದುಡಿಮೆಯ ಫಲಾಫಲಗಳು ಆ ದೇವರಿಗೆ ಬಿಟ್ಟಿದ್ದು” ಎಂದು ಶೋಷಣೆಯ ಹಾದಿ ಹಿಡಿದು ಪರಾವಲಂಬಿಯಾಗಿ ಬದುಕುತ್ತಿದ್ದವರಿಗೆ “ತುತ್ತು ಅನ್ನ ನೀಡುವ ನಾ ದೇವನಲ್ಲದೇ ನೀ ದೇವನೆಂತಾದೆ” ಎಂದು ಆ ದೈವವನ್ನೇ ಪ್ರಶ್ನಿಸುವಂತಹ ಅಹಂರಹಿತ ಗಟ್ಟಿತನವನ್ನು ಪ್ರತಿಯೊಬ್ಬರಲ್ಲೂ ಬೆಳೆಸಲು ಬಂದರು ಅಂದು ಬಸವಣ್ಣನವರು.

ಶೂದ್ರರ ಶ್ರಮದ ಫಲವನ್ನು ನಿರಾಯಾಸವಾಗಿ ಅನುಭವಿಸುತ್ತಿದ್ದ ಪರಾವಲಂಬಿ ಪುರೋಹಿತ ವರ್ಗಕ್ಕೆ “ಸೋಹಂ ಎನಿಸದೇ ದಾಸೋಹಂ ಎಂದೆನಿಸಯ್ಯಾ” ಎಂಬ ಆತ್ಮೋದ್ಧಾರದ ಮತ್ತು ಸಮಜೋದ್ಧಾರದ “ದಾಸೋಹ” ತತ್ವವನ್ನು ತಿಳಿಸಿ ಕಾಯಕಕ್ಕೆ ದೈವತ್ವ ನೀಡಲು ಬಂದರು ಅಂದು ಬಸವಣ್ಣನವರು.

ಪುಂಡರು ಬರೆದ ಪುರಾಣಗಳಲ್ಲಿನ ಲೌಕಿಕ ಸುಖಭೋಗಲೋಲುಪ ಬಹುದೇವತೆಗಳ ನಿಜಸ್ವರೂಪ ತಿಳಿಸಿ, “ಸಹಜಭಾವ ನಿಜೈಕ್ಯ ಕೂಡಲಸಂಗಮದೇವನೊಬ್ಬನೇ ದೇವಾ” ಎಂದು ಏಕೋಪಾಸನೆಯ ಮಾರ್ಗ ತೋರಿಸಲು ಬಂದರು ಅಂದು ಬಸವಣ್ಣನವರು.

ಕಳ್ಳನನ್ನು “ಸಾಕ್ಷಾತ್ ಸಂಗಮನಾಥನೇ ನೀನು” ಎನ್ನುವ ಮೂಲಕ ಅವರನ್ನು ಮನಪರಿವರ್ತಿಸಿ “ಬೇಡುವವನಿಲ್ಲದೇ ಬಡವಾದೆನಯ್ಯಾ” ಎಂದೆನ್ನುವಂತೆ ಕಾಯಕ-ದಾಸೋಹ ತತ್ವದ ಅಡಿಯ ಮೇಲೆ ಕಲ್ಯಾಣ ಕಟ್ಟಲು ಬಂದರು ಅಂದು ಬಸವಣ್ಣನವರು.

ಹೋಮ-ಹವನ, ಕುರಿಬಲಿ, ನರಬಲಿ ಎಂದು ಧರ್ಮಾಚರಣೆ ಹೆಸರಲ್ಲಿ ಮೂಢಾಚರಣೆಯನ್ನು ಬಿತ್ತಿ “ಭಯವೇ ಧರ್ಮದ ಮೂಲ” ಎಂದಿದ್ದ ಕುಲಜರೆಲ್ಲರಿಗೂ “ದಯವೇ ಧರ್ಮದ ಮೂಲವಯ್ಯ”. “ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ನಮ್ಮ ಕೂಡಲಸಂಗನ ಶರಣರೇ ಕುಲಜರು ನೋಡಾ” ಎನ್ನುವ ಮೂಲಕ ದಯಾಮಯದ ನಿಜತತ್ವವನ್ನು ತಿಳಿಸಲು ಬಂದರು ಅಂದು ಬಸವಣ್ಣನವರು.

ಸಂಸ್ಕೃತ ಮಂತ್ರಗಳನ್ನು ಕೇಳಲು ಕೂಡ ಭಯಪಡುತ್ತಿದ್ದ ಅಂದಿನ ಅಶಿಕ್ಷಿತ ಅಸ್ಪೃಶ್ಯ ಶೂದ್ರರನ್ನು “ಅನುಭವ ಮಂಟಪ” ಎಂಬ ಜಗತ್ತಿನ ಮೊದಲ ಸಂಸತ್ತಿಗೆ ಕರೆತಂದು ಸರ್ವಶ್ರೇಷ್ಠ “ವಚನ ಸಾಹಿತ್ಯ” ರಚನೆಯ ಭಾಗಿದಾರರನ್ನಾಗಿಸಲು ಬಂದರು ಅಂದು ಬಸವಣ್ಣನವರು.

ಹಿರಿಕುಲದ ಮಧುವರಸರ ಮಗಳನ್ನು ಕಿರಿಕುಲದ ಹರಳಯ್ಯರ ಮನೆಗೆ ಸೊಸೆಯಾಗಿಸಿ ಶರಣ ಧರ್ಮದ ಗಟ್ಟಿತನ ಮೆರೆಯಲು ಬಂದರು ಅಂದು ಬಸವಣ್ಣನವರು.

ಹೌದು. “ಸಗಣಕ್ಕೆ ಸಾಸಿರ ಹುಳು ಹುಟ್ಟವೇ ದೇವಾ” ಎನ್ನುವಂತೆ ಸುಮಾರು 3000 ವರ್ಷಗಳ ಧಾರ್ಮಿಕ ಇತಿಹಾಸದಲ್ಲಿ ಹುಟ್ಟಿ-ಸತ್ತ ಎಷ್ಟೋ ಕೋಟ್ಯಾನುಕೋಟಿ ಮಾನವರಲ್ಲಿ ಯಾರೊಬ್ಬರೂ ಮಾಡದ ಮೇಲಿನ ಸಾಧನೆಗಳನ್ನು ಅಂದು ಬಸವಣ್ಣನವರು ಮಾಡಿ ಸಾರ್ಥಕತೆಯನ್ನು ಮೆರೆದಿದ್ದರು.

ಸಮಾಜ ಸಂಘಟನೆಗೆ ಒಂಟಿಯಾಗಿ ನಿಂತು ಸಾರ್ವಕಾಲಿಕ ಅರಿವನ್ನು ಸಾಮೂಹಿಕವಾಗಿ ಹಂಚಿ ನಿಜದೇವನ ದರ್ಶನ ಮಾಡಿಸಿ ಆಧ್ಯಾತ್ಮಿಕ, ಸಾಮಾಜಿಕ ಮತ್ತು ಧಾರ್ಮಿಕತೆಯ ಸಂಸ್ಕಾರವನ್ನು ಸಮಾನವಾಗಿ ಒದಗಿಸಿದರು.

ಶಾಸ್ತ್ರಗಳ ಕುಲಮಧಕ್ಕೆ ತಕ್ಕ ಶಾಸ್ತಿ ಕೊಟ್ಟ ಆ ಶರಣನ ನಡೆಗೆ ಪಟ್ಟಭದ್ರ ಹಿತಾಸಕ್ತಿಗಳು ಬಸವಣ್ಣನವರನ್ನು ಗಡಿಪಾರಿ ಮಾಡಿ ವಚನಗಳ ರಾಶಿಯನ್ನು ಸುಟ್ಟು ಹಲವಾರು ಶರಣರ ಹತ್ಯೆ ಮಾಡಿದರು. ಇತ್ತಿಚಿನ ವಿಶ್ವಸಂಸ್ಥೆಯು ಯಾವ ಮೂಲ ಉದ್ದೇಶಗಳಿಗಾಗಿ ಸ್ಥಾಪನೆಯಾಯಿತೋ ಆ ಮೂಲ ಉದ್ದೇಶಗಳ ಚಿಂತನೆಯ ಮೊದಲಿಗ ೧೨ ನೇ ಶತಮಾನದ ಶರಣ ಬಸವಣ್ಣನವರದ್ದಾಗಿತ್ತು. ಮತ್ತು ಜಗತ್ತಿನಲ್ಲಿಯೇ ಮೊಟ್ಟಮೊದಲ ಬಾರಿಗೆ ಪ್ರಾಯೋಗಿಕವಾಗಿ ಜಾರಿಗೆ ತಂದು ತೋರಿಸಿದ್ದರು ಬಸವಣ್ಣನವರು.

ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ್ದ ಬಸವಣ್ಣನವರು “ನೀವು ಕಳುಹಿದ ಬೆಸನು ಸಂದಿತ್ತು, ಉಘೆ, ಇನ್ನೂ ಕೂಡಿಕೊಳ್ಳಾ ಕೂಡಲಸಂಗಮದೇವಾ” ಎಂದು ಆ ಪರಮಾತ್ಮನಲ್ಲಿ ಒಂದಾಗುವ ಇಚ್ಚಾಮರಣ ವನ್ನು ಬಯಸಿದ್ದರು.

ನಂತರದ ದಿನಗಳಲ್ಲಿ ಹರಳಯ್ಯ ದಂಪತಿಗಳು ತತ್ವ ನಿಷ್ಠೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದನ್ನು ತಿಳಿದು ಮತ್ತು ಗಣಾಚಾರಿ ಶರಣರು ವಚನ ಸಂರಕ್ಷಣೆ ಯಲ್ಲಿ ತೊಡಗಿಸಿಕೊಂಡಿರುವುದರ ಬಗ್ಗೆ ತಿಳಿದು ಬಸವಣ್ಣನವರು ಹೆಮ್ಮೆಯಿಂದ “ನೀವು ಹೇಳಿದ ಮಣಿಹವ ಮಾಡಿದೆ. ಇನ್ನು ಕೂಡಿಕೊಳ್ಳಾ ಕೂಡಲಸಂಗಮದೇವಾ” ಎಂದು ಲಿಂಗೈಕ್ಯರಾಗುತ್ತಾ, “ಕರ್ತನು ಮತ್ತೆ ಬರಲೆಂದಟ್ಟಿದಡೆ ಕೂಡಲಸಂಗಮದೇವರ ನಿರೂಪಕ್ಕೆ ಮಹಾಪ್ರಸಾದವೆಂಬೆನು” ಎಂದು ಮತ್ತೇ ಹುಟ್ಟಿ ಬರಬಹುದಾದ ಸಣ್ಣ ಎಳೆಯ ಮುನ್ಸೂಚನೆಯನ್ನೂ ಸಹ ನೀಡುತ್ತಾರೆ.

ಕೊಲುವೆನೆಂಬ ಭಾಷೆಯ ಆ ದೇವನು ತಾನೇ ಸ್ವತಃ ಕೋಟಿ ಜನ್ಮ ಎತ್ತಿ ಬಂದಿದ್ದರೂ ಸಹ ಸಾಧಿಸಲಾಗದ್ದನ್ನು ಒಂದೇ ಒಂದು ಜನ್ಮದಲ್ಲಿ ಸಾಧಿಸಿ ಸಾರ್ಥಕತೆಯನ್ನು ಮೆರೆದಿದ್ದರು ಗೆಲುವೆನೆಂಬ ಭಾಷೆಯ ಆ ಭಕ್ತಿಭಂಡಾರಿ ಬಸವಣ್ಣನವರು.

ವೈಧಿಕ ವ್ಯವಸ್ಥೆಯ ವಿರುದ್ದವಾಗಿ ಹಾಗೂ ಸರ್ವಾಧಿಕಾರಿತ್ವದ ಪ್ರಭುಪರಂಪರೆಯ ಆಡಳಿತವಿದ್ದ ೧೨ನೇ ಶತಮಾನದಲ್ಲೇ ಅತಿ ಪರಿಣಾಮಕಾರಿಯಾಗಿ ಸಾಧಿಸಿ ಸಾರ್ಥಕತೆ ಮೆರೆದ ಆ ಮಹಾತ್ಮನನ್ನು ಕಂಡ ಆ ಸೃಷ್ಟಿಕರ್ತ ಕೂಡಲಸಂಗಯ್ಯನು, ತನ್ನ ಸೃಷ್ಟಿಯನ್ನು ತಾನೇ ನೋಡಿ ನಿಬ್ಬೆರಗಾಗಿ ನಿಂದು “ಶರಣು_ಶರಣೆಂದಿದ್ದ” ಬಸವಣ್ಣನವರಿಗೆ.

ಅಂಥ ಮಹಾನ್ ಶರಣನ ಸೀಮಾತೀತ ಮೇರು ಸದೃಶ ವ್ಯಕ್ತಿತ್ವದ ಬಗ್ಗೆ ಹೇಳುವುದೆಂದರೆ ಸಾಗರದಲ್ಲಿನ ಬೊಗಸೆ ನೀರು ಕುಡಿದಂತೆ ಸರಿ.

ಅಂಥ ಮಹಾನ್ ಚೇತನದವರಾದ ಕ್ರಾಂತಿಕಾರಿ, ಸುಮಾಜ ಸುಧಾರಕ, ಭಕ್ತಿಭಂಡಾರಿ, ಶರಣರ ಆದಿ, ವಿಶ್ವಗುರು, ಕರ್ನಾಟಕದ ಸಾಂಸ್ಕೃತಿ ನಾಯಕ ಬಸವಣ್ಣನವರ ಜನನ ಜಾಗೃತಿಯ ಸವಿ ನೆನಪಿನಲ್ಲಿ,

ತಮ್ಮೆಲ್ಲರಿಗೂ ಬಸವ ಜಯಂತಿಯ ಹಾರ್ಧಿಕ ಶುಭಾಶಯಗಳು

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KrUBaygNRHP7UH6E1mcSRN

Share This Article
Leave a comment

Leave a Reply

Your email address will not be published. Required fields are marked *

ಕಲಬುರ್ಗಿಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಕಾಯಕ ಮಾಡುತ್ತಾರೆ.