ಗದಗ
ಜಗತ್ತಿನಲ್ಲಿ ಯಾವುದೇ ಧರ್ಮ ತನ್ನ ಸರಳ ಮತ್ತು ಸತ್ಯದ ಆಚರಣೆಗಳನ್ನು ಕಳೆದುಕೊಳ್ಳುತ್ತಾ ಹೋದಾಗ, ಆ ಧರ್ಮದಲ್ಲಿ ಬರೀ ಮೂಢನಂಬಿಕೆ-ಕಂದಾಚಾರಗಳೇ ತುಂಬಿಕೊಂಡಾಗ, ಅವಕಾಶವಾದಿಗಳು ಆ ಧರ್ಮದ ಆಚಾರಗಳ ಹೆಸರಿನಲ್ಲಿ ಸುಲಿಗೆಗೆ ಇಳಿದಾಗ, ಅದು ಜನರ ಶೋಷಣೆಗೆ ಕಾರಣವಾದಾಗ ಅದು ಜಡತೆಯನ್ನು ಪಡೆಯುತ್ತದೆ, ನೇಪಥ್ಯಕ್ಕೆ ಸರಿಯುತ್ತದೆ ಎಂದು ಶರಣತತ್ವ ಚಿಂತಕಿ ಗಿರಿಜಕ್ಕ ಧರ್ಮರಡ್ಡಿ ಹೇಳಿದರು.
ಅವರು ಈಚೆಗೆ ನಡೆದ ಬಸವದಳದ 1649ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ “ಲಿಂಗಾಯತ ಧರ್ಮ ಸಂಸ್ಕಾರಗಳು” ಎಂಬ ವಿಷಯದ ಕುರಿತು ಉಪನ್ಯಾಸ ಮಾಡುತ್ತಿದ್ದರು.

ಧರ್ಮ ತನ್ನ ತತ್ವ ನೀತಿಗಳಿಂದ ಜನಸಾಮಾನ್ಯರನ್ನು ತಮಂಧದಿಂದ ಜ್ಞಾನದ ಬೆಳಕಿನತ್ತ ಹೊರಳಿಸಬೇಕೆ ಹೊರತು, ಅವರಲ್ಲಿ ಅಂಧತ್ವ ತುಂಬಿ ಅಜ್ಞಾನಿಗಳನ್ನಾಗಿ ಮಾಡಬಾರದು. ಅಂದು ಅವಕಾಶವಾದಿಗಳಿಂದ ನಡೆದ ಶೋಷಣೆಯಿಂದ ಕಂಗಾಲಾಗಿದ್ದ ಜನಸಾಮಾನ್ಯರ ಸಂಕಟಮಯ ಸ್ಥಿತಿಯೇ ಬಸವಾದಿ ಶರಣರನ್ನು ಧರ್ಮಕ್ರಾಂತಿಗೆ ಪ್ರೇರೆಪಿಸಿದ್ದು, ಆಗಲೇ ಲಿಂಗಾಯತ ಧರ್ಮ ಉದಯವಾಗಿದ್ದು, “ಅರಿವಿಲ್ಲದ ಆಚರಣೆ ಸಲ್ಲದು, ಜ್ಞಾನಯುಕ್ತವಾದ ವೈಚಾರಿಕ ನಡೆ, ನುಡಿ ಒಂದಾಗಬೇಕು” ಎಂದು ತಮ್ಮ ಅನುಭಾವದ ವಚನಗಳ ಮೂಲಕ ಸಮಾಜದ ಸುಧಾರಣೆಗೆ ಯತ್ನಿಸಿದರು.
ಮನುಷ್ಯನ ಹುಟ್ಟಿನಿಂದ ಅಂತ್ಯದವರೆಗೆ ನಡೆಯುವ ಸರ್ವ ಕಾರ್ಯಗಳ ಅರ್ಥಬದ್ಧ ನಿಜಾಚರಣೆಗಳನ್ನು ತಮ್ಮ ವಚನಗಳಲ್ಲಿ ಹೇಳಿದ್ದಾರೆ. ಇಂಥಹ ವೈಚಾರಿಕ ಸಂಸ್ಕಾರವುಳ್ಳ ಲಿಂಗಾಯತ ಧರ್ಮವನ್ನು ಬಸವಣ್ಣನವರು ಕೊಟ್ಟಿದ್ದಾರೆ.
ಲಿಂಗಾಯತ ಧರ್ಮದ ಸಂಸ್ಕಾರವು ಶಿಶು ಗರ್ಭದೊಳಗಿರುವಾಗಲೇ ಆರಂಭವಾಗುವುದು. ಜನನದ ನಂತರ ವಿವಿಧ ವಯೋಮಾನಗಳವರೆಗೆ ನೀಡುವ ಸಂಸ್ಕಾರಗಳಿಂದ ಮಾನವ ಶರಣತ್ವದ ಕಡೆ ನಡೆಯುತ್ತಾನೆ. ಸದ್ಯ ಇಂಥ ಧರ್ಮ ಸಂಸ್ಕಾರವನ್ನು ಶರಣೆ ಪೂಜಾ, ದರ್ಶನ ಐದನಾಳ ಇವರಿಗೆ ನೀಡಲಾಗಿದೆ.

ಲಿಂಗಾಯತ ಎಂದರೆ ಜಾತಿಯಲ್ಲ, ಅದು ಧರ್ಮ, ಮನುಷ್ಯ ಸಂಸ್ಕಾರಯುತವಾಗಿ ಬದುಕುವ ರೀತಿ ಲಿಂಗಾಯತವಾಗಿದೆ. ಇಲ್ಲಿ ಯಾರು ಬೇಕಾದರೂ ಅಂಗದ ಮೇಲೆ ಇಷ್ಟಲಿಂಗವನ್ನು ಧರಿಸಿಕೊಳ್ಳಬಹುದು. ಅವರೇ ಲಿಂಗಾಯತರಾಗುವರೆಂದು ಗಿರಿಜಕ್ಕ ಹೇಳಿದರು.
ಗದಗ ನಗರದ ಸೌಖ್ಯದ ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಡಾ. ತೇಜಸ್ವಿ ಹಿರೇಮಠವರು ಮಾತನಾಡುತ್ತಾ, ಗರ್ಭ ಧರಿಸಿದ ಸ್ತ್ರೀಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರಬೇಕು. ನಂತರ ಹೆರಿಗೆಯಾಗಿ ಬಾಣಂತಿಯರಾದ ಸಂದರ್ಭದವರೆಗೆ ಬಾಣಂತಿ ಹಾಗೂ ಮಗುವಿನ ಪೋಷಣೆಗೆ ಮಾಡಬೇಕಾದುದನ್ನು ತಮ್ಮ ಅನುಭವಪೂರ್ಣವಾದ ವಿಚಾರಗಳಿಂದ ಹೇಳಿದರು. ಬಾಣಂತಿಯರಿಗೆ ಆಹಾರ, ಮಗುವಿನ ಆರೈಕೆ, ವೈದ್ಯರ ಸಲಹೆಯಂತೆ ಔಷಧಿ ಸೇವನೆ, ಕಾಲಕಾಲಕ್ಕೆ ಮಗುವಿಗೆ ಚುಚ್ಚುಮದ್ದು ಹಾಕಿಸುವುದು, ಎದೆಹಾಲು ಕುಡಿಸುವುದು, ಬಾಣಂತಿ, ಮಗುವಿನ ಪಾಲನೆಗೆ ಅತಿ ಅವಶ್ಯವಾದ ಮಹತ್ವದ ವಿಚಾರಗಳನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಗರ್ಭವತಿಯಾದ ಶರಣೆ ಪೂಜಾ ದರ್ಶನ ಐದನಾಳ ಸಾ. ಲಿಂಗಸಗೂರು ಇವರನ್ನು ಬಸವದಳದ ವತಿಯಿಂದ ಗೌರವಿಸಿ ಶುಭ ಹಾರೈಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶರಣ ವಿ. ಕೆ. ಕರೇಗೌಡ್ರ ವಹಿಸಿ, ಅಧ್ಯಕ್ಷಿಯ ನುಡಿಗಳನ್ನಾಡಿ, ಇಂದು ಸಮಾಜಕ್ಕೆ ಅತಿ ಅವಶ್ಯವಾಗಿ ತಿಳಿಯಬೇಕಾಗಿರುವುದು ಬಸವಾದಿ ಶರಣರ ನಿಜಚಾರಣೆಗಳು, ಈ ಬಸವ ದಳದಿಂದ ಈ ಶುಭ ಕಾರ್ಯಕ್ರಮ ನೆರವೇರಿದ್ದು ಸಂತಸಕರವಾಗಿದೆ ಹಾಗೆಯೇ ಇದೇ ಸಮಾರಂಭದಲ್ಲಿ ತಮ್ಮ ಪಾಂಡಿತ್ಯಪೂರ್ಣ ಉಪನ್ಯಾಸದ ಮೂಲಕ ಬಾಣಂತಿ, ಮಗುವಿನ ಪಾಲನೆಗೆ ಬೇಕಾದ ಉಪಯುಕ್ತ ಸಲಹೆ ನೀಡಿದ ಡಾ. ತೇಜಸ್ವಿ ಹಿರೇಮಠರನ್ನು ಶ್ಲಾಘಿಸಿದರು.
ಆರಂಭದಲ್ಲಿ ವಚನ ಪ್ರಾರ್ಥನೆಯು ಬಸವದಳದ ಶರಣೆಯರಿಂದ ಜರುಗಿತು. ಸ್ವಾಗತವನ್ನು ಪ್ರಕಾಶ ಅಸುಂಡಿ, ನಿರೂಪಣೆ ಮಂಜುಳಾ ಹಾಸೀಲಕರ, ನೀಲಲೋಚನ ಹಂಚಿನಾಳ ಶರಣು ಸಮರ್ಪಣೆಗೈದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಕಾರ್ಯಕ್ರಮದಲ್ಲಿ ಬಸವ ದಳದ ಶರಣ ಬಂಧುಗಳಿಂದ ಪ್ರಸಾದ ಸೇವೆ ಜರುಗಿತು.