ಬಾಗಲಕೋಟೆ
ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ನಿರಂತರ ಹೋರಾಟ ನಡೆದುಕೊಂಡು ಬಂದಿದ್ದು, ಸರ್ಕಾರ ಸೆ. ೨೨ ರಿಂದ ಆರಂಭಿಸಲಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಗಣತಿ ವೇಳೆ ಬಸವತತ್ವ ಪಾಲಕರೆಲ್ಲ ಧರ್ಮದ ಕಾಲಂನಲ್ಲಿ ‘ಲಿಂಗಾಯತ’ ಎಂದು ಬರೆಯಿಸುವಂತೆ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷರಾದ ಅಶೋಕ ಬರಗುಂಡಿ ಅವರು ಮನವಿ ಮಾಡಿದರು.
ನಗರದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಸವ ಸಂಸ್ಕೃತಿ ಪ್ರತಿಪಾದಕರು ಮೊದಲಿನಿಂದ ಸ್ವತಂತ್ರ ಲಿಂಗಾಯತ ಧರ್ಮಕ್ಕಾಗಿ ಹೊರಾಡುತ್ತಲೆ ಬಂದಿದ್ದಾರೆ. ಸಮಸಮಾಜ ಸಿದ್ದಾಂತ ಲಿಂಗಾಯತ ಸಂಸ್ಕೃತಿ. ಇದು ಎಲ್ಲರನ್ನೂ ಒಳಗೊಳ್ಳುವ ಸಂಸ್ಕೃತಿ ಆಗಿದೆ. ಲಿಂಗಾಯತ ಅಸ್ಮಿತಿ ಉಳಿಸಿಕೊಳ್ಳಲು ಗಣತಿ ವೇಳೆ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಯಿಸಬೇಕು ಎಂದರು.
ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಯಿಸುವುದರಿಂದ ಹೆಚ್ಚಿನ ಅನುಕೂಲವಾಗಲಿದೆ. ಸಂಖ್ಯೆ ಬಹಳ ಮುಖ್ಯವಾಗಿದೆ. ಹಾಗಾಗಿ ಧರ್ಮಧ ಕಾಲಂನಲ್ಲಿ ಲಿಂಗಾಯತ ಎಂದು, ಜಾತಿ ಕಾಲಂನಲ್ಲಿ ಒಳ ಪಂಗಡ ಹೆಸರು ಬರೆಯಿಸಬೇಕು ಎಂದು ಹೇಳಿದರು.
ಬಾಗಲಕೋಟೆಯಲ್ಲಿ ಬಸವ ಸಂಸ್ಕೃತಿ ಅಭಿಯಾನ ಅದ್ಧೂರಿಯಾಗಿ ನಡೆದ ಹಿನ್ನೆಲೆಯಲ್ಲಿ, ಸಂಘಟಕರನ್ನು ಗೌರವಿಸಲು ಶೀಘ್ರ ಧನ್ಯತಾ ಸಮಾವೇಶ ನಡೆಯಲಿದೆ ಎಂದು ಕಾರ್ಯದರ್ಶಿ ರವಿ ಯಡಹಳ್ಳಿ ಹೇಳಿದರು.
ಬೆಂಗಳೂರಿನಲ್ಲಿ ಅ. ೫ ರಂದು ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭ ಅರಮನೆ ಮೈದಾನದಲ್ಲಿ ಜರುಗಲಿದ್ದು, ಬಸವಣ್ಣ ಸಾಂಸ್ಕೃತಿಕ ನಾಯಕರು ಎಂದು ಘೋಷಿಸಿದ ಸರ್ಕಾರದ ಪ್ರತಿನಿಧಿಗಳಿಗೆ ಸನ್ಮಾನ ನಡೆಯಲಿದೆ ಎಂದು ಸಹ ಅವರು ತಿಳಿಸಿದರು.
ಬಸವರಾಜ ಕಡಪಟ್ಟಿ, ಶ್ರೀಶೈಲ ಕರಿಶಂಕರಿ, ಗುರುಬಸವ ಸಿಂಧೂರ, ಬಸವರಾಜ ಅನಗವಾಡಿ, ಶೋಭಾ ಹುಲಗಬಾಳಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.