ಹಿರಿಯೂರು:
ತಾಲ್ಲೂಕಿನ ಐಮಂಗಲ ಗ್ರಾಮದ ಹರಳಯ್ಯ ಗುರುಪೀಠದಲ್ಲಿ ಏರ್ಪಡಿಸಿದ್ದ ಶಿವಶರಣ ಹರಳಯ್ಯ ನಾಟಕ ಪ್ರದರ್ಶನಕ್ಕೆ ಪೂಜ್ಯ ಬಸವ ಹರಳಯ್ಯ ಸ್ವಾಮೀಜಿ ಮಂಗಳವಾರ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿ ಧರ್ಮದ ಹೆಸರಿನಲ್ಲಿ ವಿಷ ಬೀಜ ಬಿತ್ತುವ ದುಷ್ಟ ಶಕ್ತಿಗಳಿವೆ ಎನ್ನುವುದಕ್ಕೆ ಇರಾನ್–ಇಸ್ರೇಲ್ ದೇಶಗಳ ನಡುವಿನ ಯುದ್ಧವೇ ಸಾಕ್ಷಿ. ಆಡಳಿತಗಾರರು ಅಹಿಂಸೆಯ ಪ್ರತಿಪಾದಕರಾಗಿರುವ ಜೊತೆಗೆ ಸರ್ವಧರ್ಮ ಸಮನ್ವಯಕ್ಕೂ ಒತ್ತು ನೀಡಬೇಕು, ಎಂದು ಸ್ವಾಮೀಜಿ ತಿಳಿಸಿದರು.
ಹರಳಯ್ಯನವರು ಕಲ್ಯಾಣ ಕ್ರಾಂತಿಯ ಮೂಲಕ ಲೋಕ ಕಲ್ಯಾಣ ಮಾಡಿದರು. ಸಾಮಾಜಿಕ ಜನಜಾಗೃತಿಗಾಗಿ, ಮೌಢ್ಯದಿಂದ ಜನರನ್ನು ಹೊರತರಬೇಕು ಎಂಬ ಉದ್ದೇಶದಿಂದ ಈ ನಾಟಕ ಪ್ರದರ್ಶಿಸಲಾಗುತ್ತಿದೆ ಎಂದು ಹೇಳಿದರು.
ಚಿತ್ರದುರ್ಗದ ಚಿಂತಕ ತಿಪ್ಪೇಸ್ವಾಮಿ, ಮುಖ್ಯ ಶಿಕ್ಷಕ ಜಯಪ್ರಕಾಶ್, ಸಿದ್ದೇಶ್ ಹಿಟ್ನೂರ್, ಕಲಾವಿದ ಕುಮಾರ್, ಮಲ್ಲಿಕಾರ್ಜುನ್, ಕಲ್ಲಹಟ್ಟಿ ಹರೀಶ್, ಜಯಶೀಲ, ನಂದಿನಿ, ರಕ್ಷಿತ ಆಯೇಷ ಹಾಜರಿದ್ದರು.
