ಗುಳೇದಗುಡ್ಡ
ಬಸವ ಕೇಂದ್ರದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಶನಿವಾರ ಪತ್ರಿಕಾ ವರದಿಗಾರ ಶರಣ ಹುಚ್ಚೇಶ ಯಂಡಿಗೇರಿ ಅವರ ಮನೆಯಲ್ಲಿ ನಡೆಯಿತು.
ಆಯ್ದುಕೊಂಡ ವಚನ ವೀರ ಗಣಾಚಾರಿ ಮಡಿವಾಳ ಮಾಚಿದೇವರದು –
ಅಂಗದ ಮೇಲೆ ಲಿಂಗವ ಧರಿಸಿ ಲಿಂಗವಂತರೆನಿಸಿಕೊಂಬ
ಮಹಾಲಿಂಗವಂತರು ನೀವು ಕೇಳಿರೊ
ಮನೆಗೊಂದು ದೈವ, ನಿಮಗೊಂದು ದೈವ
ನಿಮ್ಮಂಗನೆ ಅನ್ಯದೇವಕ್ಕೆಂದು ನಿಯಾಮಿಸಿ ಮಾಡಿದ ಪಾಕವ
ನಿಮ್ಮ ಇಷ್ಟಲಿಂಗಕ್ಕೆ ಕೊಟ್ಟು ಭುಂಜಿಸುತಿರ್ದು
ಮತ್ತೆ ಮರಳಿ ಲಿಂಗವಂತರೆನಿಸಿಕೊಂಬ ಲಿಂಗದ್ರೊಹಿಗಳಿಗೆ
ಕುಂಭೀ ಪಾತಕ ನಾಯಕ ನರಕ
ತಪ್ಪದೆಂದ ಕಲಿದೇವಯ್ಯ
ಸದರಿ ವಚನವನ್ನು ಎತ್ತಿಕೊಂಡ ಪ್ರೊ. ಶ್ರೀಕಾಂತ ಗಡೇದ ಅವರು ಮಾಚಿದೇವಯ್ಯನವರ ಕಿರು ಪರಿಚಯವನ್ನು ಮಾಡಿಕೊಡುತ್ತ, ಅವರ ಗಣಾಚಾರ ವ್ಯಕ್ತಿತ್ವವನ್ನು ಬಣ್ಣಿಸಿದರು. ಯಾವ ಮುಲಾಜೂ ಇಲ್ಲದೆ, ಧರ್ಮಬಾಹಿರನ್ನು ಖಂಡಿಸುವ ಅವರ ಗುಣ ನೇರ ಹಾಗೂ ದಿಟ್ಟವಾದುದು. ಅಂಗದ ಮೇಲೆ ಲಿಂಗವನ್ನು ಧರಿಸಿದ ಮೇಲೆ ಅದಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ಎಂತಹುದೇ ಪ್ರಸಂಗ ಬಂದರೂ ಹಿಡಿದ ದಾರಿ ಬಿಡಕೂಡದು. ಮನೆಯ ಸದಸ್ಯರೆಲ್ಲರೂ ಅದೇ ದಾರಿಯಲ್ಲಿ ನಡೆಯಬೇಕು.
ಮನೆಯ ಒಬ್ಬೊಬ್ಬರಿಗೆ ಒಂದೊಂದು ದೈವವಾಗದೆ ಎಲ್ಲರೂ ಇಷ್ಟಲಿಂಗಧಾರಿಗಳೇ ಆಗಿದ್ದು, ಅಂಗ ಗುಣಗಳನ್ನು ಕಳೆದುಕೊಂಡು ಲಿಂಗಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರ ಲಿಂಗವಂತ ಎಂಬ ಪದಕ್ಕೆ ಅರ್ಹನಾಗುತ್ತಾನೆ. ಇಲ್ಲದಿದ್ದರೆ ಆತ ಪಾತಕಿ ಎಂದೂ, ಭವಿಯೆಂದೂ ಕರೆಯಲ್ಪಡುತ್ತಾನೆ ಎಂದು ಅವರು ತಿಳಿಹೇಳಿದರು.

ಇನ್ನೋರ್ವ ಅನುಭಾವಿ ಡಾ. ಗಿರೀಶ ನೀಲಕಂಠಮಠ ಅವರು, ಲಿಂಗಾಚಾರಿಯಾದವನು ಏಕದೇವೋಪಾಸಕನಾಗಿರತಕ್ಕದ್ದು. ಆತನಿಗೆ ಇಷ್ಟಲಿಂಗವೇ ದೇವನಲ್ಲದೆ ಅನ್ಯದೈವಂಗಳಿಲ್ಲ. ಹಾಗೇನಾದರೂ ಅನ್ಯದೈವಕ್ಕೆರಗಿದರೆ ಶರಣರು ಒಪ್ಪುವದಿಲ್ಲ. ಅದರಲ್ಲೂ ವೀರ ಗಣಾಚಾರ ವೃತ್ತಿಯಲ್ಲಿರುವ ಶರಣರಂತೂ ಎಷ್ಟು ಮಾತ್ರಕ್ಕೂ ಸಹಿಸರು. ಅಂಥವರಲ್ಲಿ ಮಡಿವಾಳ ಮಾಚಿದೇವಯ್ಯನವರೂ ಒಬ್ಬರು.
ಇಷ್ಟಲಿಂಗ ಧರಿಸುವುದೆಂದರೆ ಕೇವಲ ಕುತ್ತಿಗೆಯಲ್ಲಿ ಕಟ್ಟಿಕೊಳ್ಳವದು ಮಾತ್ರವಲ್ಲ. ಸರ್ವಾಂಗವೆಲ್ಲವೂ ಲಿಂಗಮಯವಾಗಬೇಕು ಆಗ ಆತ ಲಿಂಗವಂತನೆನಸಿಕೊಳ್ಳುತ್ತಾನೆ. ಮತ್ತು ಶರಣಸತಿ – ಲಿಂಗಪತಿಯಾಗಿ ನಡೆದುಕೊಳ್ಳಬೇಕು. ಇದಕ್ಕೆ ತಪ್ಪಿ ನಡೆದಲ್ಲಿ ಭವಿ, ದುರಾಚಾರಿ ಎನಿಸಿಕೊಳ್ಳುತ್ತಾನೆ. ಅಷ್ಟೇ ಅಲ್ಲ ಆತನು ಶಿಕ್ಷೆಗೂ ಅರ್ಹ ಎನ್ನುತ್ತ ಇನ್ನೋರ್ವ ಶರಣ ಅಂಬಿಗರ ಚೌಡಯ್ಯನವರ ವಚನಗಳನ್ನು ಉದಾಹರಿಸಿದರು.
ಅನ್ಯ ದೇವರ ಪೂಜಿಸುವುದು ನಿಷಿದ್ಧ. ಒಂದೇ ಮನೆಯಲ್ಲಿ ಬೇರೆ ಬೇರೆ ದೇವತೆಗಳನ್ನು ಆರಾಧಿಸಿ, ಅದರಲ್ಲಿಯೂ ಮನೆಯ ಹೆಂಡತಿ ಅನ್ಯದೈವ ಪೂಜಕಳಾಗಿದ್ದು, ಆಕೆ ಮಾಡಿದ ಪಾಕವನ್ನೇ ಇಷ್ಟಲಿಂಗಕ್ಕೆ (ತಾನು) ಅರ್ಪಿಸುವುದೇ ಲಿಂಗದ್ರೋಹ ಹಾಗೆ ಮಾಡಿಯೂ ಲಿಂಗವಂತನೆನ್ನಿಸಿಕೊಳ್ಳುವಲ್ಲಿ ಅರ್ಥವಿಲ್ಲ. ಕಾರಣ ಲಿಂಗವಂತರಾದವರು, ‘ಲಿಂಗವನ್ನಲ್ಲದೆ ಅನ್ಯವನರಿಯದಿಹುದೇ ಲಿಂಗಾಚಾರ’ ಎಂಬ ತತ್ವದಲ್ಲಿ ನಂಬುಗೆಯನ್ನಿಟ್ಟು ನಡೆಯಬೇಕು. ಇದಕ್ಕೆ ತಪ್ಪಿದಲ್ಲಿ ಅದು ಧರ್ಮಬಾಹಿರವಾಗುತ್ತದೆಯೆಂದು ಮಡಿವಾಳ ಮಾಚಿದೇವರು ಈ ವಚನದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ ಪ್ರತಿಪಾದಿಸಿದರು.
ಮಹಾಮನೆಯ ವಚನದ ನಿರ್ವಚನದಲ್ಲಿ ಭಾಗವಹಿಸಿದ ಪ್ರೊ. ಸಿದ್ಧಲಿಂಗಪ್ಪ ಬ. ಬರಗುಂಡಿಯವರು ಮಾತನಾಡುತ್ತ, ಲಿಂಗಾಯತರಲ್ಲಿ ಅಷ್ಟಾವರಣಗಳೇ ಅಂಗವಾಗಿ, ಪಂಚಾಚಾರಗಳೇ ಪ್ರಾಣವಾಗಿ ಮತ್ತು ಷಟ್ಸ್ಥಲಗಳೇ ಆತ್ಮವಾಗಿರುತ್ತದೆ. ಇದರಲ್ಲಿ ಒಂದು ಬಿಟ್ಟು ಇನ್ನೊಂದು ಇರುವುದಿಲ್ಲ, ಇವೆಲ್ಲವೂ ಒಂದಕ್ಕೊಂದು ಪೂರಕವಾಗಿರುತ್ತವೆ. ಇವುಗಳನ್ನು ಅರಿವು, ಆಚಾರ, ಅನುಭಾವಗಳನ್ನಾಗಿ ಶರಣರು ಕಂಡಿದ್ದಾರೆ.
ಶರಣಧೀರ ಮಾಚಿದೇವ ತಂದೆಯವರ ಈ ವಚನದ ಹಿನ್ನೆಲೆಯಲ್ಲಿ ನೋಡುವುದಾದರೆ, ಕೇವಲ ಅರಿವೇ ಮುಖ್ಯವಲ್ಲ ಅದಕ್ಕೆ ಆಚಾರವೂ ಮುಖ್ಯವಾಗುತ್ತದೆ. ಅರಿವಿಗೆ ತಕ್ಕಂತೆ ಆಚಾರವಿಲ್ಲದಿದ್ದರೆ ಅದು ಡಾಂಭಿಕವೆನಿಸುತ್ತದೆ. ನಮ್ಮ ಅರಿವು ಕ್ರಿಯೆಯಲ್ಲಿ ಬರಬೇಕು; ಆಚಾರಕ್ಕಿಳಿಯಬೇಕು. ಮನೆಯ ಯಾವುದೇ ಒಬ್ಬ ಲಿಂಗಧರಿಸುವುದಲ್ಲ, ಮನೆಯ ಸದಸ್ಯರೆಲ್ಲರೂ ಲಿಂಗಧರಿಸಿ ಆಚಾರವಂತರಾಗಬೇಕು.
ಕೇವಲ ಲಿಂಗಧರಿಸಿ ಲಿಂಗದ ಆಚರಣೆಯಿಲ್ಲದೆ ತೋರಿಕೆಯ ಭಕ್ತರು ಅಂದೂ ಇರಬಹುದು, ಅಂಥವರನ್ನು ನೋಡಿಯೇ ಮಾಚಿದೇವ ತಂದೆಗಳು ‘ಮಹಾಲಿಂಗವಂತರು’ ಎಂದು ಸಂಭೋದಿಸುವ ಮೂಲಕ ಹೀಯಾಳಿಸಿದ್ದಾರೆ. ಇರುವುದೊಂದೆ ಸತ್ಯ, ಅದು ಮಹಾಲಿಂಗ. ಅದನ್ನೂ ಬಿಟ್ಟು ಮನೆಗೊಂದು ದೈವ, ಕುಲಕ್ಕೊಂದು ದೈವ, ಇತರರಿಗೊಂದು ದೈವ ಎನ್ನುವದನ್ನು ಶರಣರು ಒಪ್ಪಲಾರರು. ಅವರು ಅಂಥ ದೇವತೆಗಳನ್ನು ಕ್ಷುದ್ರದೇವತೆಗಳೆಂದು ಕರೆದಿದ್ದಾರೆ.
ಅಲ್ಲಿ ತಾನೆಂಬುದಿಲ್ಲ, ದ್ವಂದ್ವವಿದೆ. ತನ್ನ ಬಿಟ್ಟು ಅನ್ಯ ಆರಾಧನೆ ಇದೆ. ಇಡೀ ವಿಶ್ವವನ್ನೆಲ್ಲ ವ್ಯಾಪಿಸಿರುವ ವಿಶ್ವಚೈತನ್ಯಾತ್ಮಕ ಲಿಂಗವೆಲ್ಲಿ, ಹುಟ್ಟು-ಸಾವುಗಳಿರುವ ಈ ದೈವಂ(ದೇವತೆ)ಗಳೆಲ್ಲಿ? ಕಾರಣ ಇವೆಲ್ಲವುಗಳು ಲಿಂಗಕ್ಕೆ ದೂರವಾದವುಗಳು. ಉಳಿದ ಸ್ಥಾವರರೂಪಿ ದೈವಂಗಳಿಗೆ ಮಾಡಿದ ನೈವೇದ್ಯವೂ ಲಿಂಗಕ್ಕೆ ಸಲ್ಲದು. ಅದು ಪರಮ ಪಾತಕಕ್ಕೆ ಸಮ. ಇವೆಲ್ಲವುಗಳು ಲಿಂಗಾಚಾರಕ್ಕೆ ಹೊರಗು.

ಅಷ್ಟಕ್ಕೂ ಇಷ್ಟಲಿಂಗಕ್ಕೆ ಅರ್ಪಿಸುವುದು ಕೇವಲ ಪದಾರ್ಥ ರೂಪಿ ಪ್ರಸಾದವನ್ನಷ್ಟೇ ಅಲ್ಲ, ತಾನು ಕರಣೇಂದ್ರಿಯಗಳ ಮೂಲಕ ಸೇವಿಸುವ ಎಲ್ಲ ಬಗೆಯ ಪದಾರ್ಥಗಳನ್ನು ಲಿಂಗಕ್ಕರ್ಪಿಸಿ, ಪ್ರಸಾದವನ್ನಾಗಿಸಿ ಸ್ವೀಕರಿಸಬೇಕು. ಇದು ತತ್ವ ಹಾಗಿಲ್ಲದೆ ಇಂದ್ರಿಯಗಳ ಸುಖವನ್ನೇ ಮುಂದು ಮಾಡಿಕೊಂಡು ಬದುಕುವುದು ಸಲ್ಲದು. ಇಂಥವರನ್ನು ಲಿಂಗದ್ರೋಹಿಗಳೆಂದು ಕರೆಯಲು ಕೂಡಾ ಮಾಚಿದೇವ ತಂದೆಗಳು ಹಿಂದೆಮುಂದೆ ನೋಡುವುದಿಲ್ಲ. ಈ ವಚನದಲ್ಲಿ ಅದನ್ನು ನಾವು ಕಾಣಬೇಕಾದುದು. ಲಿಂಗದ ಮೇಲಿರುವ ನಿಷ್ಠೆಯನ್ನೇ ಹೊರತಾಗಿ ಅನ್ಯದೈವ ನಿಂದನೆಯಲ್ಲಿ, ಲಿಂಗದ ಮೇಲಿನ ನಿಷ್ಠೆ ನಮಗೆ ಲಿಂಗತತ್ವವನ್ನು ಅರುಹಬೇಕು. ಅದನ್ನು ನಾವಿಲ್ಲಿ ಕಾಣುತ್ತೇವೆ ಎಂದು ಬರಗುಂಡಿಯವರು ಹೇಳಿದರು.
ಪ್ರಾರಂಭದಲ್ಲಿ ಶರಣೆ ಜಯಶ್ರೀ ಬ. ಬರಗುಂಡಿ ಹಾಗೂ ಸಂಗಡಿಗರು ಸಾಮೂಹಿಕ ಪ್ರಾರ್ಥನೆ ಮಾಡಿಸಿದರು. ಶರಣೆಯರಿಂದ ವಚನ ಮಂಗಲವಾಯಿತು. ಮಹಾಮನೆಗೆ ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಕಾರ್ಯಕ್ರಮದ ಸಂಘಟಕರು ಶರಣು ಸಮರ್ಪಣೆ ಸಲ್ಲಿಸಿದರು.
ಕುಟುಂಬದ ಬಂಧುಗಳಲ್ಲದೆ ರಾಚಣ್ಣ ಕೆರೂರ, ಪಾಂಡಪ್ಪ ಕಳಸಾ, ಪುತ್ರಪ್ಪ ಬೀಳಗಿ, ಕಂಬಾಳಿಮಠ ಸರ್, ಪ್ರೊ. ಗಾಯತ್ರಿ ಕಲ್ಯಾಣಿ, ನೇತ್ರಾ ವಾಯ್. ರಕ್ಕಸಗಿ, ವಚನಾ ಶೇಖಾ, ಶ್ರೀದೇವಿ ಶೇಖಾ, ವಿಶಾಲಕ್ಷಿ ಗಾಳಿ ಮೊದಲಾದರು ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.