ಲಿಂಗಾಯತರಲ್ಲಿ ಮತಾಂತರ 2/2
ಮತಾಂತರದಲ್ಲಿ ಜಾತಿ ಭೇದ ಮಾಡುತ್ತಿದ್ದ ಧರ್ಮಗಳನ್ನು ಶರಣರು ಖಂಡಿಸಿದರು. ಅಬ್ರಾಹ್ಮಣರಿಗೆ ಲಿಂಗದ ಬದಲು ಬರಿ ವಿಭೂತಿ, ಮಂತ್ರ ನೀಡುತ್ತಿದ್ದ ಶೈವರನ್ನು ಅರಿವಿನ ಮಾರಿತಂದೆ ನಿಂದಿಸುತ್ತಾರೆ.
ಬಸವಣ್ಣನವರ ನಾಯಕತ್ವದಲ್ಲಿ ಶರಣರು ಎಲ್ಲರನ್ನು ಮುಕ್ತವಾಗಿ ಒಳ ಬರಮಾಡಿಕೊಂಡರು. ವರ್ಣ, ಜಾತಿ, ವರ್ಗ, ಲಿಂಗ, ಸೂತಕ ನೋಡದೆ ಎಲ್ಲರಿಗೂ ಸಮಾನವಾಗಿ ಇಷ್ಟಲಿಂಗ ನೀಡಿದರು.
ಕೆರೆಯ ಪದ್ಮರಸರಂತಹ ಶರಣ ಸಾಹಿತಿಗಳು ವಿವರಿಸುವ ದೀಕ್ಷಾಭೋದೆಯಲ್ಲಿ ಸಾಮಾಜಿಕ ಕಾಳಜಿಯಿದೆ. ದೀಕ್ಷೆಯ ಮೂಲಕ ವ್ಯಕ್ತಿಯ ಜನನ, ಜಾತಿ, ಸಂಪತ್ತಿನ ಗರ್ವಗಳನ್ನು ನಿವಾರಿಸುವ ಪ್ರಯತ್ನವಿದೆ.
ಬಸವಣ್ಣನವರ ಮುಕ್ತ ಧೋರಣೆಯಿಂದ ಬೇರೆ ಧರ್ಮಗಳಿಗೆ ಒಕ್ಕಲಾಗಿದ್ದವರೆಲ್ಲರೂ ಪ್ರವಾಹದಂತೆ ಒಳಬಂದರು. ಅನೇಕ ಶೈವ ಧರ್ಮಗಳು ಕ್ಷೀಣಿಸಿ ಲಿಂಗಾಯತ ಧರ್ಮದಲ್ಲಿ ಲೀನವಾದವು.
ಒಳ ಬಂದ ಎಲ್ಲ ಶ್ರೇಣಿಯ ಜನರನ್ನು ಶರಣರು ಯಾವುದೇ ಭೇದವಿಲ್ಲದೆ ಸಮಾನರಾಗಿ ಕಂಡರು. ದಲಿತ ಮೂಲದ ಶರಣರನ್ನು ‘ಪಿರಿಯ ಮಾಹೇಶ್ವರರು’ ಎಂದು ಗೌರವದಿಂದ ಕರೆದರು.
ಶರಣರು ವೈದಿಕ ವ್ಯವಸ್ಥೆ, ಸಿದ್ದಾಂತಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದರು. ಸಹ ಭೋಜನದಿಂದ ಹಿಡಿದು ಜಾತಿಗಳ ನಡುವೆ ರಕ್ತ ಸಂಬಂಧ ಕಲ್ಪಿಸುವಷ್ಟು ಅವರ ಚಟುವಟಿಕೆಗಳು ಬೆಳೆದವು.
(‘ಶರಣ ಧರ್ಮ: ಜಾತಿ ನಾಶ-ಜಾತಿ ನಿರ್ಮಾಣ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸುವ ಭಾಗ – ಮಾರ್ಗ ೪)