ವೇಮನರ ಪದ್ಯಗಳಲ್ಲಿ ಆದರ್ಶ ಸಮಾಜದ ಪರಿಕಲ್ಪನೆ: ಡಾ. ತೋಂಟದ ಸಿದ್ಧರಾಮ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ

ವೈಶಿಷ್ಟ್ಯಪೂರ್ಣ ವಿನೂತನ ಆಲೋಚನೆಗಳನ್ನು ಹೊಂದಿದ ಮಹಾಯೋಗಿ ವೇಮನರು ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರು. ಯೋಗಿ ವೇಮನರ ಪದ್ಯಗಳಲ್ಲಿ ಆರ್ದಶ ಸಮಾಜ ನಿರ್ಮಾಣದ ಪರಿಕಲ್ಪನೆ ಇದೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೭೨೯ ನೇ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ನಡೆದುದೆಲ್ಲವನ್ನು ನೇರವಾಗಿ ಪದ್ಯಗಳ ಮೂಲಕ ಹೇಳುವ ಸ್ವಭಾವ ಯೋಗಿ ವೇಮನರದ್ದು. ಯೋಗಿ ವೇಮನ ಮೊದಲಿನಿಂದಲೂ ಸತ್ಯಪ್ರಿಯ. ಜಗದಲ್ಲಿ ಎಲ್ಲರೂ ಸಮಾನರು. ಮೇಲಿಲ್ಲ ಕೀಳಿಲ್ಲ ಎಂಬುದನ್ನು ಹೇಳುತ್ತಾ, ಎಲ್ಲಾ ಜಾತಿಗಳ ಹಿರಿತನವನ್ನು ಪೊಳ್ಳು ಎಂದು ಸಾರಿದ, ಜಾತಿ ವ್ಯವಸ್ಥೆಯನ್ನು ಖಂಡಿಸಿದ, ಸಮಾನತೆಯಿಂದ ಸಾಮರಸ್ಯದಿಂದ ಬದುಕಿದಾಗ ಮಾತ್ರ ಮನುಷ್ಯನ ಬಾಳು ಬೆಳಕಾಗುತ್ತದೆ ಎಂದು ಶ್ರೀಗಳು ಮಾತನಾಡಿದರು.

ಮುಂದುವರೆದು ಮಾತನಾಡಿದ ಶ್ರೀಗಳು, ಬಸವರಾಜ ಹೊರಟ್ಟಿಯವರು ಈಗಾಗಲೇ ಅವ್ವ ಸೇವಾ ಟ್ರಸ್ಟಿನ ವತಿಯಿಂದ ೧ ಲಕ್ಷ ೧೦ ಸಾವಿರ ರೂಪಾಯಿ ದತ್ತಿನಿಧಿ ಇಟ್ಟಿದ್ದರು. ಹೆಚ್ಚುವರಿಯಾಗಿ ೩ ಲಕ್ಷ ರೂಪಾಯಿಗಳನ್ನು ದತ್ತಿನಿಧಿಯಾಗಿ ನೀಡಿದ್ದಾರೆ. ಈ ದತ್ತಿನಿಧಿಯಿಂದ ಪ್ರಸ್ತುತ ಸಮಾಜಕ್ಕೆ ಅವ್ವನ ಪಾತ್ರ ಮತ್ತು ಮಹತ್ವ ಅರಿಯಲು ಸಾಕಷ್ಟು ಪ್ರೇರಕ ಶಕ್ತಿಯಾಗಿದೆ ಎಂದರು.

ಎಸ್.ಎಸ್.ಎಲ್.ಸಿ. ಪರೀಕ್ಷೆ ಇನ್ನೂ ೫೯ ದಿನ ಮಾತ್ರ ಉಳಿದಿದೆ. ಮಕ್ಕಳು ಚೆನ್ನಾಗಿ ಏಕಾಗ್ರತೆಯಿಂದ ಓದಬೇಕು, ಭಯಪಡಬಾರದು. ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದು ಉತ್ತಮ ಫಲಿತಾಂಶ ಗಳಿಸಬೇಕೆಂದು ಶ್ರೀಗಳು ಶುಭಹಾರೈಸಿದರು.

ಅವ್ವ ಸೇವಾ ಟ್ರಸ್ಟಿನ ಗದಗ ಸಂಚಾಲಕರಾದ ಡಾ. ಬಸವರಾಜ ಧಾರವಾಡ ಅವರು ಎಸ್.ಎಸ್.ಎಲ್.ಸಿ. ಸಂವಾದ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ಕಳೆದ ೧೪ ವರ್ಷಗಳಿಂದ ಸಭಾಪತಿ ಬಸವರಾಜ ಹೊರಟ್ಟಿಯವರ ನೇತೃತ್ವದ ಅವ್ವ ಸೇವಾ ಟ್ರಸ್ಟ ಅಸಹಾಯಕರಿಗೆ, ಪ್ರತಿಭಾವಂತರಿಗೆ ಆಸರೆಯಾಗಿ ಧನಸಹಾಯ ಮಾಡುತ್ತಾ ‘ಅವ್ವನ ಪ್ರೀತಿ’ ಯನ್ನು ಉಣಿಸುತ್ತಿದೆ ಎಂದು ಮಾತನಾಡಿದರು.

ಉಪನ್ಯಾಸಕರಾಗಿ ಆಗಮಿಸಿದ ಗದಗ ಜಿಲ್ಲೆಯ ಉಪನಿರ್ದೇಶಕರಾದ ಆರ್.ಎಸ್.ಬುರಡಿ ಮಾತನಾಡಿ, ವೇಮನರ ಪದ್ಯಗಳು ಸಮಾಜದಲ್ಲಿನ ಮೌಢ್ಯ, ಅಂಧಶ್ರದ್ಧೆ, ಮೇಲು ಕೀಳು ಎಂಬ ಭಾವವನ್ನು ತೊಡೆದು ಹಾಕುವಲ್ಲಿ ದಾರಿದೀಪವಾಗಿವೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ವಿ.ವಿ. ನಡವಿನಮನಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗ್ರಾಮೀಣ ಗದಗ, ಶ್ರೀಮತಿ ಮಂಗಳಾ ತಾಪಸ್ಕರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗದಗ, ಶಂಕರ ಹಡಗಲಿ ಸ.ನಿ. ಅಕ್ಷರದಾಸೋಹ ಗದಗ, ಹಾಗೂ ಶಿಕ್ಷಣ ಸಂಯೋಜಕ ಮುರುಳಿ ಸೊಲ್ಲಾಪುರ ಉಪಸ್ಥಿತರಿದ್ದರು.

ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಸಂಗೀತ ಸೇವೆ ನೀಡಿದರು. ಧರ್ಮಗ್ರಂಥ ಪಠಣ ತೆಹರಿನ್ ಖವಾಸ, ವಚನ ಚಿಂತನವನ್ನು ಕೀರ್ತಿರಾಜ ಹೂಗಾರ ನೆರವೇರಿಸಿದರು. ದಾಸೋಹ ಸೇವೆಯನ್ನು ಚಂದ್ರಶೇಖರ ಶರಣಪ್ಪ ಅಂಗಡಿ ವಹಿಸಿಕೊಂಡಿದ್ದರು.

ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸೆಲ್ವಾಸಿ, ಗಂಗಾಧರ, ಕೆ.ವಿ.ಕೊರಡ್ಡಿ, ಸಿ.ಎಸ್.ಮಾನ್ವಿ, ಉಮೇಶ ನಿಪ್ಪಾಣಿಕರ, ಎಂ.ಐ.ಶಿವನಗೌಡ್ರ, ಸತೀಶ ಹೊಂಬಾಳೆ ಹಾಜರಿದ್ದರು. ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಮಕ್ಕಳ ಸಂವಾದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಿ ಹಲವಾರು ಪ್ರಶ್ನೆಗಳಿಗೆ ಪರಿಹಾರ ಸೂಚಿಸಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ.ಉಮೇಶ ಪುರದ, ವಿದ್ಯಾ ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮು ಪುರಾಣಿಕ, ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಸೇರಿದಂತೆ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು. ಸಹಚೆರಮನ್ ಶಿವಾನಂದ ಹೊಂಬಳ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ನಿರೂಪಿಸಿದರು.

Share This Article
Leave a comment

Leave a Reply

Your email address will not be published. Required fields are marked *