ಬುಧವಾರದ ಸಭೆಯಲ್ಲಿ ಒಟ್ಟು 1,58,000 ರೂ.ಗಳ ದಾಸೋಹ ಘೋಷಣೆ ಆಯಿತು.
ಗದಗ
ಗದಗ ಜಿಲ್ಲೆಯಲ್ಲಿ ಸೆಪ್ಟೆಂಬರ್ 9ರಂದು ನಡೆಯಲಿರುವ ‘ಬಸವ ಸಂಸ್ಕೃತಿ ಅಭಿಯಾನ’ವನ್ನು ಯಶಸ್ವಿಗೊಳಿಸಲು ತೋಂಟದಾರ್ಯ ಮಠದ ಅನುಭವ ಮಂಟಪದಲ್ಲಿ ಲಿಂಗಾಯತ ಮತ್ತು ಬಸವಪರ ಸಂಘಟನೆಗಳು ಬುಧವಾರ ಪೂರ್ವಸಿದ್ಧತಾ ಸಭೆ ನಡೆಸಿದವು.
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ನೇತೃತ್ವದಲ್ಲಿ ಸೆಪ್ಟೆಂಬರ್ 1ರಿಂದ ಅಕ್ಟೋಬರ್ ವರೆಗೆ ರಾಜ್ಯಾದ್ಯಂತ ‘ಬಸವ ಸಂಸ್ಕೃತಿ ಅಭಿಯಾನ’ ನಡೆಯಲಿದೆ.
ಲಿಂಗಾಯತ ಮಠಾಧೀಶರ ಒಕ್ಕೂಟದ ಪ್ರಮುಖರಾದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಭೆಯ ಸಾನಿಧ್ಯ ವಹಿಸಿ, ಸರ್ಕಾರ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ಎಂದು ಘೋಷಿಸಿ ಒಂದು ವರ್ಷವಾಗಿದೆ. ಬಸವಣ್ಣನವರು ಕರ್ನಾಟಕ ಮಾತ್ರವಲ್ಲ, ವಿಶ್ವದ ಸಾಂಸ್ಕೃತಿಕ ನಾಯಕರಾಗಿದ್ದಾರೆ.

ಇಂಥ ದಾರ್ಶನಿಕರ ಆಶಯದಂತೆ ಸಮಸಮಾಜ ನಿರ್ಮಾಣ, ವ್ಯಸನಮುಕ್ತ ಸಮಾಜ ನಿರ್ಮಾಣ, ಅಂಧಶ್ರದ್ಧೆ ಅಳಿಸಿ ಸುಜ್ಞಾನ ಬೆಳೆಸುವದು, ಸದೃಢ ಸಮಾಜ ಕಟ್ಟುವುದು, ಮಕ್ಕಳಲ್ಲಿ ಆಧ್ಯಾತ್ಮದ ಅರಿವನ್ನು ಮೂಡಿಸುವದು, ಮಹಿಳೆಯರ ಘನತೆಯನ್ನು ಕಾಪಾಡುವದು, ವ್ಯಕ್ತಿತ್ವ ವಿಕಸನ ಇತ್ಯಾದಿ ಬಸವ ಸಂಸ್ಕೃತಿ ಅಭಿಯಾನದ ಆಶಯಗಳಾಗಿವೆ.
ಆದ್ದರಿಂದ ಈ ಅಭಿಯಾನದಲ್ಲಿ ನಾವು ನೀವೆಲ್ಲರೂ ಭಾಗವಹಿಸಿ ಈ ಅಭಿಯಾನವನ್ನು ಯಶಸ್ವಿಗೊಳಿಸೋಣ, ಕಾರ್ಯಕ್ರಮಕ್ಕೆ ಎಲ್ಲರೂ ತನು, ಮನ, ಧನ ಸಹಾಯ ಸಹಕಾರ ನೀಡಬೇಕು ಎಂದು ಹೇಳಿದರು.
ಜೆ.ಎಲ್.ಎಂ. ಜಿಲ್ಲಾ ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಭಿಯಾನದ ರೂಪುರೇಷೆಗಳನ್ನು ವಿವರಿಸಿದರು.
ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ ಈ ಅಭಿಯಾನದ ಪೂರ್ವ ಎಲ್ಲಾ ತಾಲೂಕುಗಳಲ್ಲಿ ಜಾಗ್ರತೆ ಮೂಡಿಸಿ ಹೆಚ್ಚು ಯುವಕರು ಪಾಲ್ಗೊಳ್ಳುವಂತೆ ಮಾಡಬೇಕೆಂದರು.
ಮುಂಡರಗಿ ತಾಲೂಕು ಜಾ.ಲಿಂ. ಮಹಾಸಭಾ ಅಧ್ಯಕ್ಷ ನವಲಗುಂದ ಮಾತನಾಡಿ, ಈ ಅಭಿಯಾನದ ಕಾರ್ಯಕ್ರಮಕ್ಕೆ ಹೆಚ್ಚು ಪ್ರಚಾರ ಮಾಡಿ ಎಲ್ಲರೂ ಪಾಲ್ಗೊಳ್ಳುವಂತೆ ಮಾಡಬೇಕೆಂದರು.

ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣ ಕೆ.ಎ.ಬಳಿಗೇರ ಅವರು ಮಾತನಾಡಿ, ಅಭಿಯಾನದ ಕಾರ್ಯಕ್ರಮಕ್ಕೆ ವಿವಿಧ ಸಮಿತಿಗಳನ್ನು ರಚಿಸಿ ಅವರಿಗೆ ಜವಾಬ್ದಾರಿ ನೀಡಬೇಕು ಎಂದು ಸಲಹೆ ಕೊಟ್ಟರು.
ಗದಗ ಬೆಟಗೇರಿ ಬಸವದಳದ ಅಧ್ಯಕ್ಷರಾದ ವಿ.ಕೆ. ಕರೇಗೌಡ್ರ ಮಾತನಾಡಿ, ಈ ಅಭಿಯಾನಕ್ಕೆ ಬಸವ ದಳದ ವತಿಯಿಂದ 10,000 ರೂಪಾಯಿ ಕೊಡುವ ವಾಗ್ದಾನ ಮಾಡಿದರು. ಮತ್ತು ಸಂಘಟನೆಯ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುತ್ತೇವೆ ಎಂದರು.
ಗಜೇಂದ್ರಗಡ ತಾಲೂಕು ಶ.ಸಾ.ಪ. ಅಧ್ಯಕ್ಷ ಬಸವರಾಜ ಕೊಟಗಿ ಮಾತನಾಡಿ, ಅಭಿಯಾನಕ್ಕೆ ತಾಲೂಕಿನ ವತಿಯಿಂದ 25,000 ರೂ. ಕೊಡುವ ವಾಗ್ದಾನ ಮಾಡಿ ಎಲ್ಲರೂ ಪಾಲ್ಗೋಳ್ಳುತ್ತೇವೆ ಎಂದರು.
ಬಸವರಾಜ ಹಿರೇಹಡಗಲಿ 25,000 ರೂ. ಕೊಡುವ ವಾಗ್ದಾನ ಮಾಡಿದರು. ಹಾಗೂ ಇಂದಿನ ಸಭೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಿದರು.
ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಡಾ. ಧನೇಶ ದೇಸಾಯಿ ಮಾತನಾಡಿ, ಅಭಿಯಾನಕ್ಕೆ ವೈಯಕ್ತಿಕವಾಗಿ 10,000 ರೂ. ಹಾಗೂ ಜಾತ್ರಾ ಕಮೀಟಿಯ ವತಿಯಿಂದ 25000 ರೂ. ಕೊಡುವ ವಾಗ್ದಾನ ಮಾಡಿ ಎಲ್ಲರೂ ಪಾಲ್ಗೋಳ್ಳುತ್ತೇವೆ ಎಂದು ಹೇಳಿದರು.
ಸಭೆಯಲ್ಲಿ ಭಾಗವಹಿಸಿದ ಈರಣ್ಣ ಮುದಗಲ್ಲ 5000, ಪ್ರೊ. ಎನ್.ಎಮ್. ಪವಾಡಿಗೌಡ್ರ 5000, ಶಿವಕುಮಾರ ರಾಮನಕೊಪ್ಪ 10,000, ಶರಣು ಗದಗ 10,000, ಎಸ್.ಎಸ್. ಕಳಸಾಪೂರಶೆಟ್ರ 5000, ಎಸ್.ಎಸ್. ಶೆಟ್ಟರ ವಕೀಲರು 25000, ರತ್ನಕ್ಕ ಪಾಟೀಲ 2000 ಹಾಗೂ ಷಣ್ಮುಖ ನಂದಗಾವಿ 1000 ರೂಪಾಯಿಗಳನ್ನು ಕೊಡುವ ವಾಗ್ದಾನ ಮಾಡಿ ನಾವೆಲ್ಲರೂ ಅಭಿಯಾನದಲ್ಲಿ ಪಾಲ್ಗೋಳ್ಳುತ್ತೇವೆ ಎಂದು ಹೇಳಿದರು. ಸಭೆಯಲ್ಲಿ ಒಟ್ಟು 1,58,000 ರೂ.ಗಳ ಘೋಷಣೆ ಆಯಿತು.
ಸಭೆಯ ಅಧ್ಯಕ್ಷತೆಯನ್ನು ಜೆ.ಎಲ್.ಎಂ. ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಚಟ್ಟಿ ಅವರು ವಹಿಸಿ ಇಂದು ಸಭೆಗೆ ಬಂದವರಿಗೆ ಧನ್ಯವಾದ ಹೇಳಿದರು. ಮುಂದೆ ಜಿಲ್ಲೆಯಲ್ಲಿ ನಡೆಯುವ ಅಭಿಯಾನವನ್ನು ಯಶಸ್ವಿ ಮಾಡಲು ಎಲ್ಲರಿಂದಲೂ ಸಹಕಾರ ಕೋರಿದರು.
ಪಾಲಾಕ್ಷಿ ಗುಣದಿನ್ನಿ , ಬಸವರಾಜ ಅಂಗಡಿ, ಗೌರಕ್ಕ ಬಡಿಗಣ್ಣವರ, ಗಿರಿಜಾ ಹಸಬಿ, ಪ್ರೊ. ಕೆ.ಎಚ್. ಬೇಲೂರ, ಚನ್ನಬಸಪ್ಪ ಕಂಠಿ, ಮತ್ತಿತರರು ಮಾತನಾಡಿದರು.

ಸಭೆಯಲ್ಲಿ ಜಾ.ಲಿಂ. ಮಹಾಸಭಾ, ಬಸವದಳ, ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು, ಬಸವ ಕೇಂದ್ರ, ತೋಂಟದಾರ್ಯ ಜಾತ್ರಾ ಸಮಿತಿ, ಲಿಂಗಾಯತ ಪ್ರಗತಿಶೀಲ ಸಂಘ, ಯೋಗ ಪಾಠಶಾಲೆ, ಕುಂಬಾರ, ಮಡಿವಾಳ, ಹಡಪದ ಸಮಾಜ, ದಲಿತ, ಪ್ರಗತಿಪರ ಸಂಘಟನೆಗಳ ಪ್ರಮುಖರು,
ಎಲ್ಲಾ ತಾಲೂಕುಗಳ ಲಿಂಗಾಯತ, ಬಸವಪರ ಸಂಘಟನೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗಿಯಾಗಿದ್ದರು.
ಆರಂಭದಲ್ಲಿ ಮಹಾಸಭಾದ ಮಹಿಳಾ ಘಟಕದ ಸದಸ್ಯರು ವಚನ ಪ್ರಾರ್ಥನೆ ಮಾಡಿದರು. ಸ್ವಾಗತವನ್ನು ಶರಣ ಪ್ರಕಾಶ ಅಸುಂಡಿ, ಶರಣೆ ಮಂಜುಳಾ ಹಾಸಿಲಕರ ಅವರು ವಚನ ಮಂಗಲ ಹಾಡಿದರು.
ಗದಗ ಜಿಲ್ಲೆಯ ಬಸವಪರ ಸಂಘಟನೆಗಳಿಗೆ ಅಭಿನಂದನೆಗಳು, ರಾಜ್ಈಯದಲ್ಲಿ ಅಭಿಯಾನದ ಮೂಲಕ ಪ್ರತಿ ತಾಲೂಕಿನಲ್ಲಿ ಬಸವ ತತ್ವ ಗಟ್ಟಿಯಾಗಲಿ, ಎಲ್ಲರನ್ನೂ ಒಳಗೊಂಡು ಬಸವ ತತ್ವ ಚಿಂತನೆ ಹೆಮ್ಮರವಾಗಿ ಬೆಳೆಯಲಿ. ಪೂಜ್ಯ ಡಾ. ತೋಂಟದ ಸಿದ್ದಲಿಂಗ ಸ್ವಾಮೀಜಿಯವರ ಕನಸು ನನಸಾಗಲಿ.
ಎಲ್ಲಾ ದಾನಿಗಳಿಗೆ ನನ್ನ ಅಭಿನಂದನೆಗಳು ಮತ್ತು ಶರಣಾರ್ಥಿ