ಗಂಗನಕೋಟೆ ಗ್ರಾಮದಲ್ಲಿ ಬಸವ ಜಯಂತೋತ್ಸವ, ವಚನ ಮೆರವಣಿಗೆ

ನ್ಯಾಮತಿ

ದೇವರ ಸಾಕ್ಷಿಯಾಗಿ, ತನ್ನ ಮನಸ್ಸಾಕ್ಷಿಯಾಗಿ, ಸತ್ಯಸಾಧನೆಯ ಪಥದಲ್ಲಿ ನುಡಿದ ನುಡಿಗಳೇ ವಚನಗಳು. ವಚನಗಳನ್ನು ಗುರುತಿಸಬೇಕಾದರೆ ವಚನಾಂಕಿತ ಇರುತ್ತದೆ. ವಚನಾಂಕಿತ ಅವರ ಇಷ್ಟದೈವದ ಸಂಕೇತವಾಗಿರುತ್ತದೆ. ಇಷ್ಟಲಿಂಗವೇ ವಚನಕಾರರ ಇಷ್ಟದೈವವಾಗಿರುತ್ತದೆ ಎಂದು ಬಸವಕಲ್ಯಾಣದ ಅನುಭಾವಿ ಶ್ರೀ ಬಸವ ದೇವರು ನುಡಿದರು.

ನ್ಯಾಮತಿ ತಾಲೂಕಿನ ಗಂಗನಕೋಟೆ ಗ್ರಾಮದಲ್ಲಿ ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ ಸಹಯೋಗದಲ್ಲಿ ನಡೆದ ಬಸವಣ್ಣನವರ ಜಯಂತೋತ್ಸವದ ಅಂಗವಾಗಿ
ನಡೆದ ಕಾರ್ಯಕ್ರಮದಲ್ಲಿ ಅವರು ಅನುಭಾವ ನೀಡಿದರು.

ಸಾವಿನ ಒಳಗಿದ್ದವರು ಜೀವಾತ್ಮರಾಗುತ್ತಾರೆ. ಸಾವನ್ನು ಯಾರು ಜಯಿಸುತ್ತಾರೋ ಅವರು ಶರಣರಾಗುತ್ತಾರೆ. ಅವರೇ ಅಮರರಾಗುತ್ತಾರೆ. ಶರಣರು ತಂದೆ-ತಾಯಿಯ ಗರ್ಭದಿಂದಲೇ ಹುಟ್ಟಿ ಬರುತ್ತಾರೆ. ಸಂಸ್ಕಾರವಂತರಾಗಿ ಸತ್ಯಶುದ್ಧ ಕಾಯಕದಲ್ಲಿ ತೊಡಗಿ, ಇಷ್ಟಲಿಂಗಧಾರಿಗಳಾಗಿ ಶಿವನ ಆರಾಧನೆಯನ್ನು ಯಾರು ಮಾಡುತ್ತಾರೆ ಅಂತಹ ಸದ್ಭಕ್ತ ತಂದೆ ತಾಯಿಗಳ ಹೊಟ್ಟೆಯಲ್ಲಿ ಶರಣರು ಹುಟ್ಟಿ ಬರುತ್ತಾರೆ, ಆದ್ದರಿಂದ ಅವರಿಗೆ ಉಪಮಿಸಬಾರದ ಉಪಮಾತೀತರು ಎಂದು ಕರೆಯುತ್ತಾರೆಂದರು.

ಗ್ರಾಮದ ಹಿರಿಯ ಶರಣ ಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಎಚ್. ಮಹೇಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸುರಹೊನ್ನೆಯ ಶ್ರೀ ಬಸವೇಶ್ವರ ಮಹಿಳಾ ಭಜನಾ ಸಂಘದವರಿಂದ ವಚನ ಭಜನೆ ನಡೆಯಿತು.

ಕಾರ್ಯಕ್ರಮಕ್ಕೆ ಮೊದಲು ಗ್ರಾಮದಲ್ಲಿ ಧರ್ಮಗುರು ಬಸವೇಶ್ವರರ ಭಾವಚಿತ್ರದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಶರಣ ಎಸ್. ಜೆ. ಶಂಭುಲಿಂಗಪ್ಪ ವಚನ ವಡಪುಗಳನ್ನು ಹೇಳಿದರು. ಸುತ್ತಮುತ್ತಲ ಗ್ರಾಮಸ್ಥರು, ಯುವಕರು ಸ್ವಪ್ರೇರಣೆಯಿಂದ ಕಾರ್ಯಕ್ರಮದಲ್ಲಿ ಭಾಗಿಯಾದದ್ದು ವಿಶೇಷವಾಗಿತ್ತು.

basaಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KW7PgYimGT7HL73bAEKzSR

Share This Article
Leave a comment

Leave a Reply

Your email address will not be published. Required fields are marked *