ಮಂಡ್ಯ
ಮಹಿಳಾ ಹಾಗೂ ಪ್ರಗತಿಪರ ಸಂಘಟನೆಗಳ ಪ್ರತಿಭಟನೆಗೆ ಮಣಿದು ನಗರದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿ ಟಿ ರವಿ ಗೈರಾಗಿದ್ದಾರೆ.
ಸಮ್ಮೇಳನದ ಎರಡನೇ ದಿನ, ‘ಸಾಹಿತ್ಯದಲ್ಲಿ ರಾಜಕೀಯ: ರಾಜಕೀಯದಲ್ಲಿ ಸಾಹಿತ್ಯ’ ಎಂಬ ವಿಚಾರಗೋಷ್ಠಿಯಲ್ಲಿ ‘ಸಾಹಿತ್ಯ ಕೇಂದ್ರಿತವಾದ ಸೈದ್ಧಾಂತಿಕ- ರಾಜಕೀಯ ನಿಲುವು’ ವಿಷಯದ ಬಗ್ಗೆ ಸಿ.ಟಿ. ರವಿ ಅವರಿಗೆ ವಿಚಾರ ಮಂಡಿಸಲು ಅವಕಾಶ ಕಲ್ಪಿಸಲಾಗಿತ್ತು.

ಆದರೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲವಾಗಿ ನಿಂದಿಸಿದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿಗೆ ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ಕಲ್ಪಿಸಬಾರದು ಎಂದು ಪ್ರತಿಭಟನೆ ನಡೆಯಿತು.
ಸಿ.ಟಿ. ರವಿ ಗೋ ಬ್ಯಾಕ್, ಮಾನವ ಪ್ರೀತಿಯ ಮಂಡ್ಯದ ಮಣ್ಣಿನ ಮೇಲೆ ಮಹಿಳಾ ವಿರೋಧಿಗಳು ಕಾಲಿಡಬಾರದು, ನೀಚ ನಾಲಿಗೆಯ ಸೀಟಿ ರವಿ ನಿನ್ನ ಭಾಷಣ ನಮಗೆ ಬೇಕಿಲ್ಲ, ಬುದ್ಧ ಬಸವ ಅಂಬೇಡ್ಕರ್ ಸಾವಿತ್ರಿ ಮಾತೆ ಗಾಂಧಿಯನ್ನು ಕಂಡ ದೇಶದಲ್ಲಿ ಜೀವವಿರೋಧಿ, ಮಹಿಳಾ ವಿರೋಧಿ, ಸಾಮರಸ್ಯ ವಿರೋಧಿಗಳ ವಿರುದ್ಧ ನಮ್ಮ ಪ್ರತಿರೋಧ, …. ಹೀಗೆ ಹಲವಾರು ಘೋಷಣೆಗಳನ್ನು ಕೂಗುತ್ತಾ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯ ಮುಂಭಾಗದಲ್ಲಿರುವ ಬಸವಣ್ಣನವರ ಪ್ರತಿಮೆ ಎದುರು ಮಹಿಳಾ ಹಾಗೂ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ದೇವಿ, ಕೃಷ್ಣೇಗೌಡ ಟಿ.ಎಲ್, ಭರತರಾಜ್, ಕೃಷ್ಣ ಪ್ರಕಾಶ, ಸಿದ್ದರಾಜು, ರಾಮಯ್ಯ, ಲಕ್ಷ್ಮಣ, ನರಸಿಂಹಮೂರ್ತಿ, ಟಿ.ಡಿ. ನಾಗರಾಜ ಸೇರಿದಂತೆ ಹಲವಾರು ಜನ ಮುಖಂಡರು ಪ್ರತಿಭಟನೆಯಲ್ಲಿದ್ದರು.
