‘ಹಾಲುಮತ ಸಮಾಜದಲ್ಲಿ ವೀರಗೊಲ್ಲಾಳ ಶರಣರ ಮೇಲೆ ಜಾಗೃತಿ ಮೂಡಿಸುತ್ತೇವೆ’

ಗದಗ

ಗದಗ-ಬೆಟಗೇರಿ ಬಸವದಳದ ಶರಣ ಸಂಗಮ ಕಾರ್ಯಕ್ರಮದಲ್ಲಿ ಶುಕವಾರ ಮುಗ್ಧ ಶಿವಭಕ್ತ ಕುರುಬ ವೀರಗೊಲ್ಲಾಳ ಶರಣರ ಮೇಲೆ ಸಂವಾದ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷರಾದ ರುದ್ರಣ್ಣ ಗುಳಗುಳಿ ಮಾತನಾಡುತ್ತಾ ಬಸವದಳ ಎಲ್ಲಾ ಸಮಾಜದ ಶರಣರ ಬಗ್ಗೆ ಉಪನ್ಯಾಸ, ಜಯಂತಿ, ಸ್ಮರಣೆ ಮಾಡುವುದರಿಂದ ಎಲ್ಲೆಡೆ ತಿಳುವಳಿಕೆ ಮೂಡಿಸಿದಂತಾಗುತ್ತದೆ. ನಮ್ಮ ಸಮಾಜದಲ್ಲಿ ಗೊಲ್ಲಾಳೇಶ್ವರ ಶರಣರ ಬಗ್ಗೆ ತಿಳುವಳಿಕೆ ಮೂಡಿಸುತ್ತೇವೆ ಮತ್ತು ಅವರ ಜೀವನ ಸಾಧನೆಗಳ ಬಗ್ಗೆ, ಅವರ ವಚನಗಳ ಬಗ್ಗೆ ಕಿರುಪುಸ್ತಕಗಳನ್ನು ಪ್ರಕಟಗೊಳಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಕುರುಬ ಸಮಾಜದವರು ಭಾರತದ ಮೂಲ ನಿವಾಸಿಗಳಾಗಿದ್ದಾರೆ ಮತ್ತು ಶೈವ ಧರ್ಮದ ಪ್ರತಿಪಾದಕರಾಗಿದ್ದಾರೆ. ಮೂಲ ದೇವರು ಬೀರಪ್ಪ, ಬೀರೇಶ್ವರಾ, ಬೀರೇಶ್ವರಲಿಂಗ ಎಂದು ತಿಳಿದು ಬರುತ್ತದೆ. ಮಹಾಕವಿ ಕಾಳಿದಾಸ, ರೇವಣಸಿದ್ಧರು, ಕುರುಬಗೊಲ್ಲಾಳೇಶ್ವರಾ, ಕನಕದಾಸರು, ಅಹಲ್ಯಾಬಾಯಿ ಹೋಲ್ಕರ, ಸಜ್ಜಲಗುಡ್ಡದ ಶರಣಮ್ಮ ಮುಂತಾದ ಶರಣ-ಶರಣೆಯರು ಆಗಿ ಹೋಗಿದ್ದಾರೆ, ಎಂದು ಹೇಳಿದರು.

ಶರಣೆ ಗಿರಿಜಕ್ಕ ಧರ್ಮರಡ್ಡಿಯವರು ಕುರುಬ ವೀರಗೊಲ್ಲಾಳ ಶರಣರ ಮೇಲೆ ಉಪನ್ಯಾಸ ನೀಡಿದರು.

ಕುರುಬ ವೀರಗೊಲ್ಲಾಳರು ೧೨ ನೇ ಶತಮಾನದ ಬಸವಾದಿ ಶಿವಶರಣರ ಸಮಕಾಲಿನ ಶರಣರಲ್ಲಿ ಒಬ್ಬರಾಗಿದ್ದರು. ಬಿಜಾಪೂರ ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದ ಹತ್ತಿರವಿರುವ ಢವಲಾರ ಗ್ರಾಮದಲ್ಲಿ ಬಲ್ಲಗ ಮತ್ತು ದುಗ್ಗಳವ್ವ ಎಂಬ ದಂಪತಿಗಳ ಮಗನೇ ಗೊಲ್ಲಾಳ. ಕುರಿಗಳನ್ನು ಕಾಯುವ ಕಾಯಕ ಮಾಡುತ್ತಿದ್ದರು. ಇವರು ಮುಗ್ಧ ಶಿವಭಕ್ತನಾಗಿದ್ದು, ಮಾನವನ ಜೀವನದಲ್ಲಿ ಬದಲಾವಣೆಯ ತಿರುವುಗಳಿಂದ ಶರಣನಾದರು.

ಗೊಲ್ಲಾಳರ ಧರ್ಮಪತ್ನಿ ರೇಚವ್ವೆ ಶಿವಭಕ್ತೆ ಸಂಪನ್ನಳಾಗಿದ್ದಳು. ಗೊಲ್ಲಾಳ ಶರಣರ ಕೇವಲ ೧೦ ವಚನಗಳು ಮಾತ್ರ ಸಿಕ್ಕಿವೆ. ಅವರ ವಚನಾಂಕಿತ “ವೀರಬೀರೇಶ್ವರಾ” ಎಂಬುದಾಗಿದೆ. ಇವರ ವಚನಗಳಲ್ಲಿ ಆಡು, ಕುರಿ, ಹೋತ, ತೋಳ, ಮುಂತಾದ ಪ್ರಾಣಿಗಳ ಉಲ್ಲೇಖವಾಗಿವೆ. ಹರಿಹರ ಮಹಾಕವಿಯ ಲಿಂಗಾರ್ಚನೆ ರಗಳೆ, ತೆಲಗು ಬಸವ ಪುರಾಣ, ಶಿವತತ್ವ ಚಿಂತಾಮಣಿ ಕಾವ್ಯ ಮತ್ತು ಶಿವಲಿಂಗ ಕವಿಯ ಹಾಡುಗಳಲ್ಲಿ ಗೊಲ್ಲಾಳಲರ ಶಿವಭಕ್ತಿಯ ವ್ಯಕ್ತಿತ್ವವನ್ನು ಕಾಣುತ್ತೇವೆ. ಅಲ್ಲದೇ ಶರಣೆ ಸತ್ಯಕ್ಕನವರು ತಮ್ಮ ವಚನದಲ್ಲಿ “ವಿಶ್ವಾಸದಿಂದ ನಂಬಿದರಯ್ಯ ಗೊಲ್ಲಾಳರಾಯರನವರು” ಮತ್ತು ಶರಣ ಗಣದಾಸಿ ವೀರಣ್ಣನವರು ತಮ್ಮ ವಚನಗಳಲ್ಲಿ ಸ್ಮರಿಸಿದ್ದಾರೆ.

ಕುರುಬ ಗೊಲ್ಲಾಳರು ಕಾಯಕನಿಷ್ಠೆ, ಶೃದ್ಧಾಭಕ್ತಿ, ವಿಶ್ವಾಸ, ನಂಬಿಕೆ, ನಿಶ್ಚಲತೆಯನ್ನು ಮೈಗೂಡಿಸಿಕೊಂಡು ಶರಣರ ಸಂಗದಿಂದ ಪರಿವರ್ತನೆಯಾಗಿರುವುದನ್ನು ಕಾಣುತ್ತೇವೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಬಸವದಳದ ಅಧ್ಯಕ್ಷರಾದ ಶರಣ ವಿ. ಕೆ. ಕರೇಗೌಡ್ರ ವಹಿಸಿದ್ದರು, ವೇದಿಕೆಯ ಮೇಲೆ ಹಾಲುಮತ ಮಹಾಸಭಾದ ಗದಗ ಜಿಲ್ಲಾ ಗೌರವಾಧ್ಯಕ್ಷರಾದ ಶರಣ ನಾಗರಾಜ ಎಂ. ಮೆಣಸಗಿ ಇದ್ದರು.

ಶರಣೆ ರೇಣಕ್ಕ ಕರೇಗೌಡ್ರ ಇವರು ಬೆಳಗಿನ ಜಾವ ಸಾಮೂಹಿಕ ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿತೆಯನ್ನು ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಶರಣೆ ಗಿರಿಜಕ್ಕ ಧರ್ಮರಡ್ಡಿ ಇವರು ರಚಿಸಿದ “ಶರಣರು ಕಂಡು ಅನಾದಿ ಬಸವಣ್ಣ” ಎಂಬ ಕೃತಿ ತೆಲಗು ಭಾಷೆಗೆ ಭಾಷಾಂತರವಾಗಿ ಮುದ್ರಣಗೊಂಡಿದೆ. ಬಳ್ಳಾರಿಯ ಡಾ. ಕೆ. ಸುಧಾಕರರಾವ್ ಇವರು ಭಾಷಾಂತರ ಮಾಡಿದ್ದಾರೆ. ಬಸವಾದಿ ಶಿವಶರಣರ ವಚನಗಳ ಅರ್ಥಸಹಿತ ತೆಲುಗು ಭಾಷೆಗೆ ಪ್ರಕಟಗೊಂಡ ನಿಮಿತ್ಯ ಶರಣೆ ಗಿರಿಜಕ್ಕ ಧರ್ಮರಡ್ಡಿಯವರನ್ನು ಬಸವದಳದ ವತಿಯಿಂದ ಸನ್ಮಾನಿಸಲಾಯಿತು.

ಪ್ರಾರಂಭದಲ್ಲಿ ಬಸವದಳದ ಶರಣೆಯರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ಸಭೆಗೆ ಆಗಮಿಸಿದ ಸರ್ವರನ್ನು ಶರಣ ಎಂ. ಬಿ. ಲಿಂಗಧಾಳ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಪ್ರಕಾಶ ಅಸುಂಡಿಯವರು ಮಾಡಿದರೆ, ಶರಣು ಸಮರ್ಪಣೆಯನ್ನು ಡಾ. ಗಿರಿಜಾ ಹಸಬಿ ನೆರವೇರಿಸಿದರು. ಪ್ರಸಾದ ಸೇವೆಯನ್ನು ಶರಣ ರಾಮಣ್ಣ ಕಳ್ಳಿಮನಿ ವಹಿಸಿಕೊಂಡಿದ್ದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಕಾರ್ಯಕ್ರಮದಲ್ಲಿ ಬಸವದಳದ ಶರಣ-ಶರಣೆಯರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/DAHwtSaP5nUL2sT483TnP6

Share This Article
Leave a comment

Leave a Reply

Your email address will not be published. Required fields are marked *