ಗುಳೆ ಗ್ರಾಮದಲ್ಲಿ 892 ನೇ ಗುರು ಬಸವ ಜಯಂತಿ

ಯಲಬುರ್ಗಾ

ತಾಲೂಕಿನ ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳ, ಅಕ್ಕ ನಾಗಲಾಂಬಿಕ ಮಹಿಳಾ ಗಣ ಹಾಗು ರಾಷ್ಟ್ರೀಯ ಬಸವ ದಳ ಯುವ ಘಟಕದ ವತಿಯಿಂದ ವಿಶ್ವಗುರು ಬಸವ ಮಂಟಪದಲ್ಲಿ ಸೋಮವಾರದಂದು ಸಂಜೆ 892ನೇ ಬಸವ ಜಯಂತಿಯ ಕಾರ್ಯಕ್ರಮ ನಡೆಯಿತು.

ಪ್ರಾಸ್ತಾವಿಕ ಮಾತನಾಡಿದ ಶರಣ ಶರಣಪ್ಪ ಹೊಸಳ್ಳಿ ಸಮಸಮಾಜ ನಿರ್ಮಾಣ ಮಾಡುವುದರಲ್ಲಿ ಗುರು ಬಸವಣ್ಣನವರು ಮೊದಲಿಗರು. ಮೌಢ್ಯತೆಯ ವಿರುದ್ಧ ಹೋರಾಡಿದ ಬಸವಣ್ಣನವರು ಈ ನಾಡಿಗೆ ಬೆಳಕಾಗಿದ್ದಾರೆ ಎಂದರು.

ಶರಣ ಬಸವರಾಜ ಹಳ್ಳಿ ಮಾತನಾಡಿ, ಸುಮಾರು 60 ವರ್ಷಗಳ ಹಿಂದೆ ‘ಬಸವ ಜಯಂತಿ’ ಎಂದರೆ ವ್ಯವಸಾಯಕ್ಕೆ ಬಳಸುವ ‘ಎತ್ತುಗಳು’ ಎನ್ನುವ ನಂಬಿಕೆ ಇತ್ತು. ಎತ್ತುಗಳ ಮೈತೊಳೆದು, ಕೊಂಬುಗಳಿಗೆ ಬಣ್ಣ ಹಚ್ಚಿ, ಕೊರಳಿಗೆ ಗಂಟೆ ಕಟ್ಟಿ, ಮೈಮೇಲೆ ಜೂಲ ಹಾಕಿ ಊರತುಂಬ ಅವುಗಳ ಉತ್ಸವ ಮಾಡಿದರೆ ಬಸವ ಜಯಂತಿ ಮುಗಿದಂತೆ ಎನ್ನುವುದು ರೂಢಿಯಲ್ಲಿತ್ತು. ಅದರ ಬದಲು ಕರ್ನಾಟಕದ ಗಾಂಧಿ ಹರಡೇಕರ್ ಮಂಜಪ್ಪನವರು 1913ರಲ್ಲಿ ಪ್ರಥಮ ಬಾರಿಗೆ ‘ಬಸವಣ್ಣ’ ಎಂದರೆ ಎತ್ತಲ್ಲ; 12ನೆಯ ಶತಮಾನದಲ್ಲಿ ನಮ್ಮ ನಿಮ್ಮಂತೆ ಮನುಷ್ಯರಾಗಿ ಜನಿಸಿದ ವ್ಯಕ್ತಿ. ತಮ್ಮ ಸಾಧನೆಯ ಮೂಲಕ ಅಜ್ಞಾನ, ಮೌಢ್ಯ, ಶೋಷಣೆ ಇತ್ಯಾದಿಗಳ ಕೆಸರಲ್ಲಿ ಸಿಕ್ಕಾಕಿದವರನ್ನು ಮೇಲೆತ್ತಿದ ಮಹಾಮಾನವ.

ಬಸವ ಜಯಂತಿ ಆಚರಿಸುವುದು ಎಂದರೆ ಎತ್ತಿನ ಮೆರವಣಿಗೆ ಮಾಡುವುದಲ್ಲ. ಬದಲಾಗಿ ಭಕ್ತಿಭಂಡಾರಿ ಬಸವಣ್ಣನವರ ತತ್ವಸಿದ್ಧಾಂತಗಳ ಅರಿವಿನ ಮೆರವಣಿಗೆ ಮಾಡುವುದು ಎಂದು ಜನತೆಯನ್ನು ಜಾಗೃತಗೊಳಿಸುತ್ತ ಬಂದರು ಎಂದು ನುಡಿದರು.

ಅಧ್ಯಕ್ಷತೆ ವಹಿಸಿ ಶರಣ ಬಸವನಗೌಡ ಪೋಲಿಸ್ ಪಾಟೀಲ್ ನಿವೃತ್ತ ಪಿ ಎಸ್ ಐ ಮಾತನಾಡಿ, ಮಂಗಳವೇಡದ ರಾಜ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾದ ಬಸವಣ್ಣ ಹಲವಾರು ಜನಪರ ಮತ್ತು ಸಮಾಜ ಸುಧಾರಣೆ ಕ್ರಮಗಳನ್ನು ಕೈಗೊಂಡರು. ‘ಕಾಯಕವೇ ಕೈಲಾಸ’ವೆಂದು ಸಾರಿ, ಜನರನ್ನು ದುಡಿದು ಬದುಕುವ ಪಥದಲ್ಲಿ ಮುನ್ನೆಡೆಸಿದರು. ಜಾತಿ, ಲಿಂಗ, ವರ್ಣ, ಭಾಷೆ ಭೇದವಿಲ್ಲದೆ, ಶರಣ ತತ್ವದಲ್ಲಿ, ಸಮಾನತೆಯಲ್ಲಿ ಮತ್ತು ಕಾಯಕ ನಿಷ್ಠೆಯಲ್ಲಿ ನಂಬಿಕೆಯುಳ್ಳವರನ್ನು ನಿಜವಾದ ” ಶಿವಶರಣರು” ಅಂತಹ ಶರಣರ ಚಿಂತನೆ ನಿರಂತರ ಸಾಗುತ್ತ, ಬಸವಾದಿ ಶರಣರ ವಿಚಾರಗಳನ್ನ ಮೈಗೂಡಿಸಿಕೊಂಡು ಬದುಕಿದರೆ ಜೀವನ ಪಾವನ ಆಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಾಗಿ ವೇದಿಕೆ ಹಂಚಿಕೊಂಡು ಮಾತನಾಡಿದ ಶರಣ ಪಂಪಣ್ಣ ಗಂಗಾವತಿ, ನಿಜಲಿಂಗಪ್ಪ ಮೆಣಸಗಿ, ಬಸವರಾಜಪ್ಪ ಇಂಗಳದಾಳ, ಅಮರೇಶಪ್ಪ ಗಡಿಹಳ್ಳಿ, ಅಮರೇಶಪ್ಪ ಬಳ್ಳಾರಿ ಮಾತನಾಡಿದರು.

ಷಟಸ್ಥಲ ಧ್ವಜಾರೋಹಣ ಶರಣ ಸಂಗಣ್ಣ ತೆಂಗಿನಕಾಯಿ ಯಲಬುರ್ಗಾ ಇವರು ನೇರವೇರಿಸಿದರು. ಬಸವರಾಜ ಹೂಗಾರ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಬಸವೇಶ್ವರರ ಭಾವಚಿತ್ರ ಮೆರವಣಿಗೆ ಮಾಡುವುದರ ಮೂಲಕ, ಬಾಲಕರು ವಚನ ಕಟ್ಟುಗಳನ್ನ ಹೊತ್ತುಕೊಂಡು, 12ನೇ ಶತಮಾನದ ಶಿವಶರಣ ಶರಣೆಯರ ರೂಪಕಗಳನ್ನು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಶರಣ ನಾಗನಗೌಡ ಜಾಲಿಹಾಳ, ದೇವಪ್ಪ ಕೋಳೂರು, ಗಿರಿಮಲ್ಲಪ್ಪ ಪರಂಗಿ, ಬಸವರಾಜ ಮೇಟಿ, ಚನ್ನಪ್ಪ ಗದಾರಿ, ನಿಜಲಿಂಗಪ್ಪ ಮಂತ್ರಿ, ಮಲ್ಲಿಕಾರ್ಜುನ ಮಂತ್ರಿ, ಪಕೀರಪ್ಪ ಮಂತ್ರಿ, ಹನುಮೇಶ ಹೊಸಳ್ಳಿ, ಬಸಣ್ಣ ಹೊಸಳ್ಳಿ, ಲಿಂಗನಗೌಡ ದಳಪತಿ, ಶಿವಪುತ್ರಪ್ಪ ಉಚ್ಚಲಕುಂಟಿ, ಯಮನೂರಪ್ಪ ಕೋಳೂರು, ನಿಂಗಪ್ಪ ಮಂತ್ರಿ, ಜಗದೀಶ ಮೇಟಿ, ಶಾಂತಕುಮಾರ ಹೊಸಳ್ಳಿ, ನಿಂಗಪ್ಪ ಮೇಟಿ, ದೇವೇಂದ್ರಪ್ಪ ಆವಾರಿ, ಬಸವರಾಜ ಹೊಸಳ್ಳಿ ಹಾಗು ಅಕ್ಕನಾಗಲಾಂಬಿಕೆ ಬಳಗದ ಶರಣೆ ಶರಣಮ್ಮ ಪೋಲಿಸಪಾಟೀಲ, ಯಮನಮ್ಮ ಗೌಡ್ರ, ಅಕ್ಕಮಹಾದೇವಿ ಮೇಟಿ, ಗುರಲಿಂಗಮ್ಮ ಮಂತ್ರಿ, ಚನ್ನಮ್ಮ, ನಿಂಗಮ್ಮ ಕೋಳೂರು, ಹನುಮಮ್ಮ ಉಚ್ಚಲಕುಂಟಿ, ಶಂಕ್ರಮ್ಮ ಹೊಸಳ್ಳಿ, ಸಾವಿತ್ರಮ್ಮ ಆವಾರಿ, ನಾಗಮ್ಮ ಜಾಲಿಹಾಳ, ಮಲ್ಲಮ್ಮ ಮಂತ್ರಿ, ಬಸಮ್ಮ ಹೂಗಾರ, ರೇಣುಕಮ್ಮ ಮಂತ್ರಿ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮದಿಂದ ಅನೇಕ ಬಸವಾಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FYCnBXoFfiK0GH4dAJvoia/

Share This Article
Leave a comment

Leave a Reply

Your email address will not be published. Required fields are marked *