ಗುಳೇದಗುಡ್ಡ
ಬಸವ ಕೇಂದ್ರ, ಶ್ರೀ ಶೆಟ್ಟರ ಸಮಸ್ತ ಸಮಾಜ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಸಂಯುಕ್ತ ಆಶ್ರಯದೊಂದಿಗೆ, ಬಸಮ್ಮ ಮಂಗಳಗುಡ್ಡ ಕಲ್ಯಾಣ ಮಂಟಪದಲ್ಲಿ ಧರ್ಮಗುರು, ಕರ್ನಾಟಕದ ಸಾಂಸ್ಕೃತಿಕ ನಾಯಕ ಶ್ರೀ ಬಸವ ಗುರುವಿನ ಸ್ಮರಣೋತ್ಸವ ಸಮಾರಂಭ ಏಪ್ರಿಲ್ 30 ನಡೆಯಿತು.
ಬಸವ ಸ್ಮರಣೋತ್ಸವವನ್ನು ಎರಡು ಹಂತಗಳಲ್ಲಿ ಆಚರಿಸಲಾಯಿತು. ಅಂದು ಬೆಳಿಗ್ಗೆ 7 ಗಂಟೆಗೆ ಸಹಜ ಶಿವಯೋಗವನ್ನು ಆಯೋಜಿಲಾಗಿತ್ತು. ಶರಣ ಮುರುಘೇಶ ಶೇಖಾ ಅವರು ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಶರಣೆ ಜಯಶ್ರೀ ಬರಗುಂಡಿ ಹಾಗೂ ಶರಣೆ ದಾನಮ್ಮ ಕುಂದರಗಿ ಅವರು ವೇದಿಕೆ ಮೇಲೆ ಇಷ್ಟಲಿಂಗ ಪೂಜೆಯಲ್ಲಿ ಸಮಯೋಚಿತ ವಚನಗಳನ್ನು ಹಾಡಿದರು.
ಪ್ರಾಸಂಗಿಕವಾಗಿ ಶ್ರೀ ಶೇಖಾ ಮುರುಘೇಶ ಅವರು ಸ್ಥಾವರ ಲಿಂಗಪೂಜೆ ಇಷ್ಟಲಿಂಗ ಪೂಜೆಗೆ ಇರುವ ವ್ಯತ್ಯಾಸವನ್ನು ತಿಳಿಸುತ್ತ, ಅರುಹಿನ ಕುರುಹಾದ ಇಷ್ಟಲಿಂಗ ಹಾಗೂ ಅದರ ಸಮಾನತೆ, ಸಮಕಳೆ, ಸಮಸುಖಗಳನ್ನು ತಿಳಿಸುತ್ತ, ಇಷ್ಟಲಿಂಗ ಪೂಜೆಯಲ್ಲಿರುವ ಗೊಂದಲಗಳನ್ನು ಭ್ರಮೆಗಳನ್ನು ತೆಗೆಯಲು ಬಾಹ್ಯ ಪೂಜೆಗಿಂತ, ಅನುಸಂಧಾನದ ಮಹತ್ವವನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಅದರ ಮಹತ್ವವನ್ನು ವೈಜ್ಞಾನಿಕವಾಗಿ ವಿವರಿಸುತ್ತ, ನವಚಕ್ರಗಳಲ್ಲಿ ನವಲಿಂಗಗಳನ್ನು ಅಳವಡಿಸಿಕೊಳ್ಳುವ ವಿಧಾನವನ್ನು ಕ್ರಮವಾಗಿ ಬೋಧಿಸಿದರು.

ಪುತ್ರಪ್ಪ ಬೀಳಗಿ, ಶ್ರೀಕಾಂತ ಗಡೇದ, ಅಶೋಕ ಸವದಿ, ವಿಶಾಲಕ್ಷೀ ಗಾಳಿ ಮೊದಲಾದವರು ಸಹಜ ಶಿವಯೋಗಕ್ಕೆ ಅನುಕೂಲತೆಯನ್ನು ಒದಗಿಸಿದರು.
ಇಷ್ಟಲಿಂಗ ಪೂಜೆ ಪಾದೋದಕ ಪ್ರಸಾದದ ನಂತರ ಎರಡನೆಯ ಅವಧಿ ಬಸವ ಸ್ಮರಣೋತ್ಸವ ಪ್ರಾರಂಭಗೊಂಡಿತು. ಕಾರ್ಯಕ್ರಮದ ಸಾನಿಧ್ಯವನ್ನು ಅಕ್ಕಮಹಾದೇವಿ ಮಂದಿರದ ಶರಣಮ್ಮ ತಾಯಿಯವರು ವಹಿಸಿದ್ದರೆ, ಶತಾಯುಷ್ಯದ ಸಮೀಪದಲ್ಲಿರುವ ಹಿರಿಯ ಅನುಭಾವಿ ಶರಣ ಹುಚ್ಚಪ್ಪ ಹುಳಿಪಲ್ಲೇದ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಶರಣ ಪ್ರೊ. ಸುರೇಶ ರಾಜನಾಳ ಹಾಗೂ ಶರಣ ಬಸನಗೌಡ ವಾಯ್. ಗೌಡರ ಅನುಭಾವ ನೀಡಿದರು.
ಜಾ.ಲಿಂ.ಮಹಾಸಭಾ ತಾಲೂಕಾ ಘಟಕದ ಅಧ್ಯಕ್ಷ ರಾಚಣ್ಣ ಕೆರೂರ, ಶೆಟ್ಟರ ಸಮಸ್ತ ಸಮಾಜದ ಶರಣ ರವಿ ಅಂಗಡಿ ವೇದಿಕೆ ಮೇಲಿದ್ದರು. ಮಹಿಳಾ ಘಟಕದ ಶರಣೆ ಗೀತಾ ತಿಪ್ಪಾ ಅವರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಬಸವ ಷಟ್ಸ್ಥಲ ಧ್ವಜಾರೋಹಣವನ್ನು ಶ್ರೀ ಎಚ್. ಎಸ್. ಹುಳಿಪಲ್ಲೇದ ಧ್ವಜಗೀತೆಯೊಂದಿಗೆ ಮಾಡಿದರು. ತದನಂತರದಲ್ಲಿ ಶರಣ ಸಿದ್ಧಲಿಂಗಪ್ಪ ಬರಗುಂಡಿಯವರಿಂದ ಸ್ವಾಗತ, ಮುರುಘೇಶ ಶೇಖಾ ಅವರಿಂದ ಸಂವಿಧಾನ ಪೀಠಿಕೆ ಬೋಧನೆಯಾಯಿತು.

ಉಪನ್ಯಾಸಕರಾಗಿ ಆಗಮಿಸಿದ ಪ್ರೊ. ಸುರೇಶ ತಿ. ರಾಜನಾಳ ಅವರು ಅನುಭಾವವನ್ನು ನೀಡುತ್ತ ಧರ್ಮಗುರು ಬಸವಣ್ಣನವರು ಈ ನಾಡಿನಲ್ಲಿ ಹುಟ್ಟಿ ಬಂದದ್ದು, ನಮ್ಮೆಲ್ಲರ ಭಾಗ್ಯ ಅಷ್ಟೇ ಅಲ್ಲ ಜಗತ್ತಿನ ಕಲ್ಯಾಣಕ್ಕಾಗಿ, ಸಮಾನತೆಯನ್ನು ತರುವುದಕ್ಕಾಗಿ ಕಾಯಕಕ್ಕೆ ಮಹತ್ವವನ್ನು ನೀಡುವುದಕ್ಕಾಗಿ ದಾಸೋಹದ ಮೂಲಕ ಹಸಿವಿನ ಕೊರತೆಯನ್ನು ಅಳಿಸುವದಕ್ಕಾಗಿ ನೊಂದವರನ್ನು ಮೇಲೆತ್ತುವುದಕ್ಕಾಗಿ ಬಂದವರು. ಪ್ರಧಾನ ಮಂತ್ರಿ ಸ್ಥಾನದಲ್ಲಿದ್ದರೂ ತಳಸಮುದಾಯವನ್ನು (ಶೋಷಿತ ವರ್ಗದವರನ್ನು) ಪ್ರಾಮಾಣಿಕವಾಗಿ ಅಪ್ಪಿಕೊಂಡವರಾಗಿದ್ದರು. ಅವರ ಈ ಸತ್ಯ ಶುದ್ಧ ನಡೆನುಡಿಗಳೇ ವಿಶ್ವದಾದ್ಯಂತ ಶರಣರನ್ನು ಆಕರ್ಷಿಸುವಂತೆ ಮಾಡಿತು.
ಇಷ್ಟಲಿಂಗವನ್ನು ನೀಡುವ ಮೂಲಕ ಧಾರ್ಮಿಕ ಡಂಬಾಚಾರ, ಮೌಢ್ಯ, ಶೋಷಣೆ ಹಾಗೂ ಜೊಳ್ಳು ಆಚರಣೆಗಳಿಗೆ ತಿಲಾಂಜಲಿಯನ್ನು ಇತ್ತು, ಸರ್ವಸಮಾನತೆಯ ಹೊಸ ಯುಗವನ್ನೇ ಸೃಷ್ಟಿಸಿದರು. ಇಂದು ಇಡೀ ವಿಶ್ವವೇ ಅವರ ಸಿದ್ಧಾಂತವನ್ನು ಒಪ್ಪಿಕೊಂಡು, ಅಪ್ಪಿಕೊಂಡು ನಡೆಯುತ್ತಿರುವಾಗ ನಮ್ಮಲ್ಲಿ ಇನ್ನೂ ನಿಜವಾದ ಅರಿವು ಮೂಡದಿರುವುದು ಖೇದನೀಯ. ದೇಶ ವಿದೇಶಗಳಿಂದ ಆಗಮಿಸಿದ ಜನರಿಗೆ ಸಮಾನತೆಯ ಶರಣತ್ವದ ಪಟ್ಟವನ್ನು ಕಟ್ಟಿ, ಕನ್ನಡ ಕಲಿಸಿ, ವಚನಗಳನ್ನು ರಚನೆ ಮಾಡಲು ಪ್ರೋತ್ಸಾಹಿಸಿ ಶರಣ ತತ್ವ ಶಾಶ್ವತವಾಗಿರುವಂತೆ ಮಾಡಿದ ಮಹಾನುಭಾವರು ಬಸವಣ್ಣನವರು, ಅದಕ್ಕಾಗಿಯೇ ನಾವೆಲ್ಲರೂ ನಿಜದ ಅರುವಿನ ಬಸವಾಯತರಾಗಬೇಕು ಇದು ಇಂದಿನ ಜರೂರು ಎಂದು ಸುರೇಶ ರಾಜನಾಳ ಅವರು ಕರೆ ನೀಡಿದರು.
ಇನ್ನೋರ್ವ ಉಪನ್ಯಾಸಕರಾಗಿ ಆಗಮಿಸಿದ ಹಿರಿಯ ಅನುಭಾವಿಗಳು ಆದ ಶರಣ ಬಿ. ವಾಯ್. ಗೌಡರ ಅವರು ಮಾತನಾಡುತ್ತ ಆಧುನಿಕ ಕಾಲದ ಪ್ರಜಾಪ್ರಭುತ್ವ, ಸಂವಿಧಾನ, ಸಂಸತ್ತು, ಮಾನವ ಹಕ್ಕು ಎನ್ನುವ ಮೊದಲಾದ ಕಲ್ಪನೆಗಳನ್ನು ಸುಮಾರು 900 ವರ್ಷಗಳ ಹಿಂದೆಯೇ ಮಹಾಮಾನವತಾವಾದಿ ಬಸವಣ್ಣನವರು ಜಾರಿಗೆ ತಂದಿದ್ದರು.
ಅದರ ಫಲವಾಗಿಯೇ ಇಂಗ್ಲೆಂಡಿನ ಥೇಮ್ಸ್ ನದಿ ದಂಡೆಯ ಮೇಲೆ ಬಸವ ಪುತ್ಥಳಿ ಸ್ಥಾಪನೆ. ಭಾರತ ಸಂಸತ್ ಭವನದಲ್ಲಿ ಅನುಭವ ಮಂಟಪದ ಚಿತ್ರ ಅನಾವರಣಗಳು ಜರುಗಿವೆ. ಬಸವಣ್ಣನವರು ದೇಶ ಭಾಷೆ ಧರ್ಮವನ್ನು ಮೀರಿದವರು. ನಿಜವಾಗಿಯೂ ಅವರು ವಿಶ್ವಗುರುಗಳು. ಅವರ ವಚನಗಳು ದೇಶ ವಿದೇಶಗಳಲ್ಲಿ ಇನ್ನೂ ವಿಶ್ಲೇಷಣೆಯಾಗುತ್ತಲಿವೆ. ಅವರ ತತ್ವಗಳಿಗೆ ಜಗತ್ತೇ ನಿಬ್ಬೆರಗಾಗಿದೆ. ಬಸವಣ್ಣನವರನ್ನು ಕರ್ನಾಟಕದ ಮಾರ್ಟಿನ್ ಲೂಥರ ಎಂದು ಕರೆಯುತ್ತಾರೆ. ಅದು ತಪ್ಪು ಹನ್ನೇರಡನೇ ಶತಮಾನದ ಬಸವಣ್ಣನವರೆಲ್ಲಿ ಹದಿನಾರನೆ ಶತಮಾನದ ಮಾರ್ಟಿನ್ ಲೂಥರ್ ಎಲ್ಲಿ? ಆದುದರಿಂದ ಮಾರ್ಟಿನ ಲೂಥರ್ ಅವರನ್ನು ಯುರೋಪಿನ ಬಸವಣ್ಣನೆಂದು ಕರೆಯುವದೇ ಸೂಕ್ತ.

ಇಂದು ನಾವೆಲ್ಲ ಬಸವಣ್ಣನವರ ತತ್ವಗಳನ್ನೇ ಅಳವಡಿಸಿಕೊಳ್ಳಬೇಕು. ಅದು ಅನಿವಾರ್ಯ ಕೂಡಾ ಎಂದು ಗೌಡರ ಅವರು ವಿವರವಾಗಿ ತಿಳಿಸಿದರು.
ಸಭೆಯಲ್ಲಿ ಕ.ಸಾ.ಪ. ಅಧ್ಯಕ್ಷ ಡಾ. ಎಚ್. ಎಸ್. ಘಂಟಿ ಹಾಗೂ ಶರಣಬಸವಶ್ರೀ ಪ್ರಶಸ್ತಿ ಪುರಸ್ಕೃತ ಶರಣೆ ಮಾಲಾಶ್ರೀ ರಾಜನಾಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಮಧ್ಯೆ ಶರಣೆ ರೇಖಾ ಘಟ್ಟದ, ಕುಮಾರಿಯರಾದ ಲಕ್ಷ್ಮೀ, ಅಕ್ಷತಾ ನಾಯನೇಗಲಿ ಸಹೋದರಿಯರಿಂದ ವಚನ ಗಾಯನ ಜರುಗಿತು. ಶರಣು ಸಮರ್ಪಣೆಯನ್ನು ಮುರುಘೇಶ ಶೇಖಾ ಅವರು ಮಾಡಿದರು. ಶರಣ ಶಂಕರ ಸಣಪಾ ಅವರು ವಚನ ಮಂಗಲವನ್ನು ಹಾಗೂ ಶರಣೆ ದಾಕ್ಷಾಯಣಿ ಹೀರೆಮಠ ಅವರು ಕಾರ್ಯವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶರಣರಾದ ಮಲ್ಲಿಕಾರ್ಜುನ ಶೀಲವಂತರ, ಶಿವಕುಮಾರ ಶೀಪ್ರೀ, ಶಿವಕುಮಾರ ಶೆಟ್ಟರ, ಚಂದ್ರಶೇಖರ ಹರವಿ, ಸಂಜು ಬರಗುಂಡಿ, ಪಾಂಡಪ್ಪ ಕಳಸಾ, ಕೃಷ್ಣಾಜಿ ಮಹೀಂದ್ರಕರ, ಶರಣು ಚಿಕ್ಕನರಗುಂದ, ಬಸವರಾಜ ಗೆದ್ದಲಮರಿ, ಸುರೇಖಾ ಗೆದ್ದಲಮರಿ, ನಿರ್ಮಲಾ ಬರಗುಂಡಿ, ನೀಲಕ್ಕ ಯಳಮೇಲೆ, ಶ್ರೀಮತಿ ಮಾನುಟಗಿ, ಪ್ರಿಯಾ ಕೆರೂರ, ಅಕ್ಕನಬಳಗದ ಸದಸ್ಯರು, ಕವಿತಾ ಬಂಕಾಪುರ, ಶ್ರೀದೇವಿ ಶೇಖಾ, ನೇತ್ರಾವತಿ ಮ. ತಾಂಡೂರು, ಪವಿತ್ರ ಚಿಂದಿ, ಶಿವಾನಂದ ಸಿಂದಗಿ, ಮಹಾಲಿಂಗಪ್ಪ ಕರನಂದಿ, ಜಾ.ಲಿಂ.ಮ.ದ ಉಪಾಧ್ಯಕ್ಷ ಮೋಹನ ಕರನಂದಿ, ಅಯ್ಯಪ್ಪ ಶೇಖಾ, ಕವಿತಾ ಬರಗುಂಡಿ, ಶೆಟ್ಟರ ಸಮಾಜದ ಸದಸ್ಯರು ಮುಂತಾದವರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.