ಗುಳೇದಗುಡ್ಡ
ಬಸವ ಕೇಂದ್ರದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಶನಿವಾರ ಸಂಜೆ ಶರಣ ಸಂತೋಷ ಉಮಚಗಿ ಅವರ ಮನೆಯಲ್ಲಿ ನಡೆಯಿತು.
ಅನುಭವಕ್ಕಾಗಿ ಈ ಕೆಳಗಿನ ವಚನವನ್ನು ಆಯ್ದುಕೊಳ್ಳಲಾಗಿತ್ತು.
ಹಸಿವಾಯಿತ್ತೆಂದು ಅರ್ಪಿತವ ಮಾಡುವರಯ್ಯಾ
ತೃಷೆಯಾಯಿತ್ತೆಂದು ಮಜ್ಜನಕ್ಕೆರೆವರಯ್ಯ,
ಹಸಿವು-ತೃಷೆ-ವಿಷಯಕ್ಕೆ ಬಳಲುವರಯ್ಯಾ
ಹಸಿವೆಯಾಯಿತ್ತೆಂದು ಅರ್ಪಿತವ ಮಾಡಲಿಲ್ಲ,
ತೃಷೆಯಾಯಿತ್ತೆಂದು ಮಜ್ಜನಕ್ಕೆರೆಯಲಿಲ್ಲ,
ಇದು ಕಾರಣ ಕೂಡಲಸಂಗನ ಪೂಜಿಸಿ
ಪ್ರಸಾದವ ಹೆವರೊಬ್ಬರು ಇಲ್ಲ!
ಪ್ರಾರಂಭದಲ್ಲಿ ಈ ವಚನವನ್ನು ಅನುಭವಕ್ಕಾಗಿ ಎತ್ತಿಕೊಂಡ ಪ್ರೊ. ಶ್ರೀಕಾಂತ ಗಡೇದ ಅವರು ವಚನ ಸಾಹಿತ್ಯದ ಮಹತ್ವವನ್ನು ತಿಳಿಸಿ, ವಚನಗಳು ಅಂತರಂಗದ ಅನಾವರಣದ ಶಾಬ್ದಿಕ ದೃಶ್ಯಗಳು, ಈ ವಚನದಲ್ಲಿಯೂ ಜನಮಾನಸದ ರೀತಿ ನೀತಿಗಳನ್ನು ಅರಿಯಬಹುದಾಗಿದೆ. ಜನರು ತಮಗೆ ಹಸಿವಾಗಿದೆಯೆಂದು ಭಗವಂತನಿಗೆ ಅರ್ಪಿಸಿತ್ತಾರೆಯೇ ವಿನಃ ಭಗವಂತನ ಹಸಿವನ್ನು ಗಮನಿಸಲಾರರು. ಅದೇ ರೀತಿ ತಮ್ಮ ತೃಷೆಯನ್ನು ಹಿಂಗಿಸಿಕೊಳ್ಳಲು ನೀರನ್ನರ್ಪಿಸುತ್ತಾರೆ ವಿನಃ ಭಗವಂತನಿಗಾಗಿ ಅಲ್ಲ. ಇದರಲ್ಲಿ ಕೇವಲ ಯಾಂತ್ರಿಕ ಭಾವವಿದೆಯೇ ವಿನಃ ಪ್ರಾಮಾಣಿಕತೆ ಇಲ್ಲ ಹೀಗಾಗಿ ಜನ ತಮ್ಮ ಡಾಂಭಿಕವಾದ ಭಕ್ತಿಯಿಂದ ಭಗವಂತನಿಂದ ದೂರವಾಗಿಯೇ ಇರುತ್ತಾರೆ ಎಂದು ತಿಳಿಸಿದರು.
ಶರಣೆ ಪ್ರೊ. ಗಾಯತ್ರಿ ಕಲ್ಯಾಣಿಯವರು ವಚನದ ಅರ್ಥವನ್ನು ಮುಂದುವರೆಯಿಸುತ್ತ, ಮನುಷ್ಯನಾದವನು ತನ್ನ ದೈಹಿಕ ಹಸಿವು ನೀರಡಿಕೆಗಳನ್ನು ನೀಗಿಸಿಕೊಳ್ಳಲು ಭಗವಂತನನ್ನು ನೆಪವಾಗಿರಿಸಿಕೊಳ್ಳುತ್ತಾನೆ. ಅಲ್ಲಿ ನಿಜವಾದ ಪ್ರೀತಿಯಿಲ್ಲ ಅದು ಕೇವಲ ತೋರಿಕೆಯಾಗುವುದು. ಈ ಹಸಿವು ತೃಷೆಗಳು ಭಗವಂತನನ್ನು ಕಾಣುವ ಅಂತರಂಗಿಕ ಹಂಬಲವಾಗಬೇಕು. ಆಗ ಆತನಿಗೆ ತನ್ನ ಅರಿವಿನ ಮೂಲ ರೂಪವೇ ಗೋಚರಿಸುತ್ತದೆ. ಇಲ್ಲದಿದ್ದರೆ ಕೂಡಲಸಂಗಮದೇವನ ಸಾನಿಧ್ಯ ದೊರೆಯುವದಿಲ್ಲ ಎಂಬುದು ಇಲ್ಲಿ ಅರ್ಥ ಎಂದು ವಿವರಿಸಿದರು.
ಪ್ರೊ. ಮಹಾದೇವಯ್ಯಸ್ವಾಮಿ ಪಂ. ನೀಲಕಂಠಮಠ ಅವರು ಈ ವಚನವು ಪ್ರಸಾದಿ ಸ್ಥಲಕ್ಕೆ ಸಂಬಂಧಿಸಿದ್ದು, ಪ್ರಸಾದ ತತ್ವವನ್ನು ವಿವರಿಸುತ್ತದೆ ಎಂದರು. ಮುಂದುವರೆದು ಪದಾರ್ಥವನ್ನು ಲಿಂಗಕ್ಕೆ ಅರ್ಪಿಸಿ ಜಂಗಮಕ್ಕೆ ಅರ್ಪಿಸಿ ಒಕ್ಕುಮಿಕ್ಕಿದುದನ್ನು ಸ್ವೀಕರಿಸಿದಾಗ ಅದು ಪ್ರಸಾದವಾಗುತ್ತದೆ. ಮನುಷ್ಯ ಒಡಲ ಹಸಿವು ತೃಷೆಗಳನ್ನು ಕಡೆಗಣಿಸಿ ಲಿಂಗದ ಮುಖವಾದ ಜಂಗಮಕ್ಕೆ ಪದಾರ್ಥವನ್ನು ಅರ್ಪಿಸಬೇಕು. ಜಂಗಮವೆಂದರೆ ಸಮಾಜ, ಅದು ನಮ್ಮೆದುರಿಗೆ ಇರುವಂತಹದು. ತನ್ನ ವೈಯಕ್ತಿಕ ಹಿತಾಸಕ್ತಿಗಿಂತ ಸಮಾಜದ ಹಿತಾಸಕ್ತಿಯನ್ನು ಕಾಯುವದು ಬಸವಣ್ಣನವರ ಮೂಲ ಉದ್ದೇಶವಾಗಿತ್ತು. ಅದೇ ಈ ವಚನದಲ್ಲಿ ವಿವರವಾಗಿ ಬಂದಿದೆ ಎಂದು ಪ್ರೊ. ನೀಲಕಂಠಮಠ ಅವರು ಹೇಳಿದರು.

ಈ ವಚನವನ್ನು ನಿರ್ವಚನಕ್ಕಾಗಿ ಎತ್ತಿಕೊಂಡ ಸಿದ್ಧಲಿಂಗಪ್ಪ ಬರಗುಂಡಿಯವರು ಮಾತನಾಡುತ್ತಾ, ಜಗದ ಜನರೆಲ್ಲ ನಾನಾ ತರದ ದೇವರಿಗೆ ಪದಾರ್ಥವನ್ನುರ್ಪಿಸಿದಂತೆ ಮಾಡಿ ಮರಳಿ ಅದನ್ನೇ ಪ್ರಸಾದವೆಂದು ಸ್ವೀಕರಿಸಿದ್ದಾರೆ. ಆದರೆ ಕೂಡಲಸಂಗಮದೇವನಿಂದ ಪ್ರಸಾದವನ್ನು ಪಡೆದವರು ಯಾರೂ ಇಲ್ಲವೆಂದು ಅಪ್ಪನವರು ತಿಳಿಸಿದ್ದಾರೆ.
ಅದು ಸತ್ಯವೂ ಇದೆ. ಕಲ್ಲು ದೇವರು, ಮಣ್ಣು ದೇವರನ್ನು ಮಾಡಿಕೊಂಡು ಆಹಾರವನ್ನರ್ಪಿಸಿದ್ದಾರೆ. ಅಲ್ಲಿ ಅರ್ಪಣಾ ಮನೋಭಾವವಿಲ್ಲ, ಅಲ್ಲಿ ಹಸಿವು-ತೃಷೆಗಳ ಆಶಯವಿದೆ. ತನ್ನ ಮೂಲ ಅರಿವೇ ಆದ ಮಹಾಲಿಂಗದ ನಿರೂಪವೇ ಆದ ಕೂಡಲಸಂಗಮದೇವನಿಗೆ ಪ್ರಸಾದವನ್ನು ಅರ್ಪಿಸುವುದಾಗಲಿ, ಆತನಿಂದ ಮರಳಿ ಪ್ರಸಾದವ ಪಡೆಯುವ ಕ್ರಮವನ್ನಾಗಲಿ ಜನರು ಮಾಡದಿರುವುದನ್ನು ಇಲ್ಲಿ ವಿಗಂಡಿಸಲಾಗಿದೆ.
ಡಾಂಭಿಕ ಭಕ್ತರು ದೇವರಿಗೆ ನೈವೇದ್ಯವರ್ಪಿಸಿದ ಬಳಿಕ ಆಹಾರ ಪಾನಾದಿಗಳನ್ನು ತೆಗೆದುಕೊಳ್ಳುವ ವ್ರತವನ್ನಾಚರಿಸುತ್ತಾರೆ. ಇಂಥವರು ತಮ್ಮ ಹಸಿವು ತೃಷೆಗಳನ್ನು ಹೀಗಿಸಿಕೊಳ್ಳಲು ಅವಸರವಸರವಾಗಿ ದೇವರಿಗರ್ಪಿಸಿ, ಮರುಕ್ಷಣವೇ ತಾವು ಸ್ವೀಕರಿಸುತ್ತಾರೆ.
ಜಗತ್ತಿನಲ್ಲಿ ಹಸಿವು ತೃಷೆಗಳು ಬಹು ಕೆಟ್ಟ ಪರಿಣಾಮ ಉಂಟು ಮಾಡುವಂತಹವು. ಇವುಗಳ ಕೊರತೆಯಿಂದಲೆ ಕಳ್ಳತನ, ಸುಳ್ಳು, ಮೋಸ, ವಂಚನೆಗಳು ನಡೆಯುತ್ತವೆ. ಇದರ ಜೊತೆಗೆ ಮನುಷ್ಯನ ವಿಷಯಾಸಕ್ತಿಗಳ ಹಸಿವು ಬೇರೆ, ಅದು ಒಡಲ ಹಸಿವಿನಿಂದ ಘೋರ, ಸಮಾಜ ಸ್ವಾಸ್ಥ್ಯವಾಗಿರಬೇಕಾದರೆ ನಾಡು, ಸುಭಿಕ್ಷುವಾಗಿರಬೇಕು, ಜನರು ತೃಪ್ತಿಯಿಂದ ಇರಬೇಕು. ಅದನ್ನು ನೋಡಿಕೊಳ್ಳ ಬೇಕಾದದ್ದು, ಪ್ರತಿಯೊಬ್ಬರ ಜವಾಬ್ದಾರಿ ಹೀಗಾಗಿ ಈ ಜಗತ್ತನ್ನೇ ಸಮಾಜವನ್ನೇ ಬಸವಣ್ಣನವರು ಜಂಗಮವೆಂದು ಕರೆದರು. ಅದನ್ನು ತೃಪ್ತವಾಗಿಸಲು ಹೆಣಗಿದರು. ಈ ಜಂಗಮದ ತೃಪ್ತ ಕೂಡಲಸಂಗಮನ ಪ್ರಸಾದ. ಇಂತಹ ಸ್ಥಿತಿಯನ್ನು ನಿರ್ಮಾಣ ಮಾಡುವುದು ಬಸವಣ್ಣನವರ ಆಶಯವಾಗಿತ್ತು.

ತನ್ನ ಸ್ವಂತದ ಹಸಿವು ನೀರಡಿಕೆಗಳ ಜೊತೆಗೆ ಜನರ ಹಸಿವನ್ನು ನೀರಡಿಕೆಯನ್ನು ತಣಿಸಬೇಕು. ಅದು ಸಾರ್ಥಕ ಬದುಕು ಎಂಬುದನ್ನು ಬಸವಣ್ಣನವರು ಈ ವಚನದಲ್ಲಿ ಹೇಳಿದ್ದಾರೆ ಎಂದು ಶರಣ ಬರಗುಂಡಿಯವರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಶರಣೆ ಜಯಶ್ರೀ ಬ. ಬರಗುಂಡಿ, ಶ್ರೀದೇವಿ ಶೇಖಾ ಅವರಿಂದ ಸಾಮೂಹಿಕ ಪ್ರಾರ್ಥನೆಯನ್ನು ಮಾಡಿದರು. ಅನುಭಾವದ ನಂತರ ವಚನ ಮಂಗಲವಾಯಿತು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಕಾರ್ಯಕ್ರಮದ ಸಂಘಟಕರು ಶರಣು ಸಮರ್ಪಣೆ ಸಲ್ಲಿಸಿದರು. ಈ ಮಹಾಮನೆಯಲ್ಲಿ ಕುಟುಂಬದ ಬಂಧುಗಳಲ್ಲದೆ ಜಾ.ಲಿ.ಮ. ಅಧ್ಯಕ್ಷ ರಾಚಣ್ಣ ಕೆರೂರ, ಬಸವರಾಜ ಪಾಂಡಪ್ಪ ಕಳಸಾ, ಪುತ್ರಪ್ಪ ಬೀಳಗಿ, ವಿಶಾಲಕ್ಷಿ ಗಾಳಿ, ಸುರೇಶ ರಾಜನಾಳ, ಶಿವುಕುಮಾರ ಶೀಪ್ರೀ, ಕಂಬಾಳಿಮಠ ಸರ್, ರಾಚಪ್ಪ ಯಂಡಿಗೇರಿ, ಮೊದಲಾದರು ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.