ಗುಳೇದಗುಡ್ಡದಲ್ಲಿ ಶರಣ ಮಡಿವಾಳ ಮಾಚಿದೇವರ ವಚನ ನಿರ್ವಚನ

ಗುಳೇದಗುಡ್ಡ

ಬಸವಕೇಂದ್ರದ ಮಹಾಮನೆ ಕಾರ್ಯಕ್ರಮವು ಶನಿವಾರದಂದು ಶರಣ ತಿಪ್ಪಣ್ಣ ಎಂ. ಮಡಿವಾಳ ಅವರ ಮನೆಯಲ್ಲಿ ನಡೆಯಿತು.

ಶರಣ ಮಡಿವಾಳ ಮಾಚಿದೇವರ ಕೆಳಗಿನ ವಚನವನ್ನು ನಿರ್ವಚಿಸಲಾಯಿತು.

ಅಂಗದ ಮೇಲೆ ಲಿಂಗವ ಧರಿಸಿ
ಲಿಂಗವಂತರೆನಿಸಿಕೊಂಬ ಮಹಾಲಿಂಗವಂತರು
ನೀವು ಕೇಳಿರೋ! ಮನೆಗೊಂದು ದೈವ,
ನಿಮಗೊಂದು ದೈವ, ನಿಮ್ಮಂಗನೆ ಅನ್ಯದೈವಕ್ಕೆಂದು
ನಿಯಾಮಿಸಿ ಮಾಡಿದ ಪಾಕವ
ನಿಮ್ಮ ಇಷ್ಟಲಿಂಗಕ್ಕೆ ಕೊಟ್ಟು ಭುಂಜಿಸುತಿರ್ದು
ಮತ್ತೆ ಮರಳಿ ಲಿಂಗವಂತರೆನಿಸಿಕೊಂಬ
ಲಿಂಗದ್ರೋಹಿಗಳಿಗೆ ಕುಂಭೀ ಪಾತಕ, ನಾಯಕ ನರಕ ತಪ್ಪದೆಂದ ಕಲಿದೇವಯ್ಯ

ಕೇವಲ ಅಂಗದ ಮೇಲೆ ಲಿಂಗವ ಧರಿಸಿದ ಮಾತ್ರಕ್ಕೆ ಯಾರೂ ಲಿಂಗಾಯತರಾಗುವುದಿಲ್ಲ. ಸ್ಥೂಲ ಶರೀರದ ಮೇಲೆ ಇಷ್ಟಲಿಂಗವನ್ನು ಧರಿಸಿ ಆ ಮೂಲಕ ಸೂಕ್ಷ್ಮ ಶರೀರದ ಪ್ರಾಣಲಿಂಗಕ್ಕೆ ಸಂಬಂಧವಾಗಿ, ಕಾರಣ ಶರೀರದ ಭಾವಲಿಂಗದಲ್ಲಿ ಬೆರೆಯಬೇಕು.

ಅಲ್ಲೆಲ್ಲ ಅಂಗ ಗುಣಗಳನ್ನು ಅಳಿದು ಲಿಂಗ ಗುಣಗಳನ್ನು ಮೇಳೈವಿಸಿಕೊಳ್ಳಬೇಕು. ಕೇವಲ ತೋರಿಕೆಗಾಗಿ ಲಿಂಗ ಧರಿಸಿ ಮಹಾಲಿಂಗವಂತರೆನಿಸಿಕೊಳ್ಳುವುದು ಡಾಂಭಿಕತನ.

ಅದೇ ರೀತಿ ಮನೆ ತುಂಬ ಹಲವು ಅಡುಗೆಯನ್ನು ಇಷ್ಟಲಿಂಗಕ್ಕೆ ಸಲ್ಲಿಸಲಾಗದು ಇಲ್ಲಿ ಸಲ್ಲಿಸಬೇಕಾದದ್ದು ಪದಾರ್ಥರೂಪಿ ಅಡುಗೆಯನ್ನಲ್ಲ, ಪ್ರಸಾದರೂಪಿ ಅಪ್ಯಾಯನವನ್ನು. ತನ್ನ ಅರುಹಿನ ಕುರುಹಾದ ಇಷ್ಟಲಿಂಗವಲ್ಲದೆ ಅನ್ಯದೈವ ಪೂಜೆ ಹೊಲ್ಲದು. ಅದು ಲಿಂಗದ್ರೋಹ, ನಾಯಕ ನರಕಕ್ಕೆ ತಳ್ಳುತ್ತದೆ ಎಂದು ವೀರ ಘಂಟೆ ಮಹಾಶರಣ ಮಡಿವಾಳ ಮಾಚಿತಂದೆಗಳು ಹೇಳಿದ್ದಾರೆ ಎಂದು ಪ್ರೊ. ಮಹಾದೇವಯ್ಯ ನೀಲಕಂಠಮಠರು ತಿಳಿಸಿದರು.

ಇದಕ್ಕೂ ಮೊದಲು ಅನುಭಾವದಲ್ಲಿ ಪಾಲ್ಗೊಂಡ ಪ್ರೊ. ಶ್ರೀಕಾಂತ ಗಡೇದ ಅವರು ಶರಣ ಮಡಿವಾಳ ಮಾಚಿದೇವರ ಕಿರು ಪರಿಚಯ ಮಾಡಿಕೊಟ್ಟು ಮನೆಯ ಎಲ್ಲ ಸದಸ್ಯರೂ ಇಷ್ಟಲಿಂಗವನ್ನು ಧರಿಸಿಕೊಳ್ಳಬೇಕು ಹಾಗೂ ಲಿಂಗ ತತ್ವವನ್ನು ಅರಿತುಕೊಳ್ಳಬೇಕು. ಅದರಂತೆ ಆಚರಿಸಿ ಕಾಯಕ-ದಾಸೋಹದೊಂದಿಗೆ ಶರಣ ಮಾರ್ಗವನ್ನು ಆಚರಿಸುವುದೇ ಶ್ರೇಯಸ್ಕರ. ಅದೇ ಇಂದಿನ ಅವಶ್ಯಕತೆ ಎಂದು ಪ್ರತಿಪಾದಿಸಿದರು.

ಶರಣ ಮಹಾಂತೇಶ ಸಿಂದಗಿಯವರು, ಮಡಿವಾಳ ಮಾಚಿದೇವರು ತಮ್ಮ ವಚನಗಳಲ್ಲಿ ವೀರ ಗಣಾಚಾರವನ್ನೇ ಪ್ರತಿಪಾದಿಸಿದ್ದಾರೆ. ಅವರ ವಚನಗಳು ನಿಷ್ಠುರತೆಯಿಂದ ಕೂಡಿದ್ದರೂ ಸತ್ಯವನ್ನೇ ಪ್ರತಿಪಾದಿಸುತ್ತವೆ. ಹೊರನೋಟಕ್ಕೆ ಲಿಂಗವ ಧರಿಸಿ, ಲಿಂಗವಿರೋಧಿ ಆಚರಣೆಯಲ್ಲಿ ತೊಡಗಿದರೆ ಏನು ಪ್ರಯೋಜನ? ಕೀರ್ತಿವಾರ್ತೆಗಾಗಿ ಲಿಂಗ ಧರಿಸುವದಲ್ಲ, ತನ್ನ ಸ್ವಾನುಭಾವದ ನೆಲೆಗಟ್ಟನ್ನು ಅರಿಯಲು ಲಿಂಗ ಧರಿಸಬೇಕು ಎಂದು ಅನೇಕ ಉದಾಹರಣೆಗಳೊಂದಿಗೆ ವಿವರಿಸಿದರು.

ನಿವೃತ್ತ ಶಿಕ್ಷಕ ಶರಣ ತಿಪ್ಪಣ್ಣ ಮಡಿವಾಳರ ಅವರು ಮಾಚಿದೇವರನ್ನು ವೀರಭದ್ರನ ಅವತಾರವೆಂದು ವರ್ಣಿಸಿ, ಅವರ ಪೌರಾಣಿಕ ಹಿನ್ನೆಲೆಯನ್ನು ಹೇಳಿ ಅದಕ್ಕಿಂತ ಅವರ ಇತಿಹಾಸಕ್ಕೆ ಮಹತ್ವ ನೀಡಬೇಕು. ಇಂದಿನ ಪರಿಸ್ಥಿತಿಯಲ್ಲಿ ಲಿಂಗಾಯತ ಧರ್ಮವನ್ನು ಹಾಗೂ ವಚನದೇವರುಗಳನ್ನು ಉಳಿಸಿಕೊಳ್ಳುವಲ್ಲಿ, ಪ್ರಚಾರ ಮಾಡುವಲ್ಲಿ ಪ್ರತಿಯೊಬ್ಬರೂ ಮಾಚಿದೇವರಾಗಬೇಕಿದೆ ಎಂದು ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.

ಪ್ರಾರಂಭದಲ್ಲಿ ದಾನಮ್ಮ ಕುಂದರಗಿ, ವಿಶಾಲಾಕ್ಷಿ ಗಾಳಿ ಹಾಗೂ ದಾಕ್ಷಾಯಣಿ ತೆಗ್ಗಿಯವರು ಸಾಮೂಹಿಕ ಪ್ರಾರ್ಥನೆ ಮಾಡಿದರು. ಪ್ರಾರಂಭದಲ್ಲಿ ಸ್ವಾಗತವನ್ನು ಮಾಡಿದ ಪ್ರೊ. ಸಿದ್ಧಲಿಂಗಪ್ಪ ಬರಗುಂಡಿ ಅವರು ಕೊನೆಯಲ್ಲಿ ಸಮಾರೋಪವನ್ನು ಮಾಡಿದರು. ಕಾರ್ಯಕ್ರಮದಲ್ಲಿ ಕೃಷ್ಣಪ್ಪ ಶಿರೂರ, ಅಶೋಕ ಸವದಿ, ಪಾಂಡಪ್ಪ ಕಳಸಾ, ಚನ್ನಮಲ್ಲಪ್ಪ ಮಂಗಳೂರ, ಡಾ. ಗೀರಿಶ ನೀಲಕಂಠಮಠ, ರಾಚಣ್ಣ ಕೆರೂರ, ಸರೋಜಿನಿ ಬೀಳಗಿ, ಮಡಿವಾಳರ ಕುಟುಂಬದ ಸದಸ್ಯರು ಮತ್ತು ನೆರೆಹೊರೆಯವರು, ಬಂಧುಬಳಗದವರು ಮೊದಲಾದವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶ್ವಿಸಿಗೊಳಿಸಿದರು. ವಚನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Share This Article
Leave a comment

Leave a Reply

Your email address will not be published. Required fields are marked *