ಎಲ್ಲರ ಮೂಲವೂ ಒಂದೇ: ಜೇಡರ ದಾಸಿಮಯ್ಯ ತಂದೆಯ ವಚನ ನಿರ್ವಚನ

ಘಟವನೊಡೆದು ಬಯಲ ನೋಡಲದೇಕೆ? ನನ್ನೊಳಗಿರುವವನೇ ನಿನ್ನೊಳಗೂ ಇದ್ದಾನೆ

ಗುಳೇದಗುಡ್ಡ

ಬಸವ ಕೇಂದ್ರದ ವತಿಯಿಂದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಶನಿವಾರ ಸಂಜೆ ಶರಣ ಆನಂದ ವ್ಹಿ. ತಿಪ್ಪಾ ಅವರ ಮನೆಯಲ್ಲಿ ನಡೆಯಿತು.

ಅಂದು ಆಯ್ದುಕೊಂಡ ವಚನ ಆದ್ಯ ವಚನಕಾರ ಜೇಡರ ದಾಸಿಮಯ್ಯ ತಂದೆಗಳವರದು.

ಘಟವನೊಡೆದು ಬಯಲ ನೋಡಲದೇಕೆ?
ಘಟದೊಳಗಿಪ್ಪುದೆ ಬಯಲೆಂದರಿದಡೆ ಸಾಲದೆ?
ಪಟವ ಹರಿದು ತಂತುವ ನೋಡಲದೇಕೆ?
ಆ ಪಟವೇ ತಂತುವೆಂದರಿದಡೆ ಸಾಲದೆ?
ಕಟಕವ ಮುರಿದು ಕಾಂಚನವ ನೋಡಲದೇಕೆ?
ಆ ಕಟಕವೆ ಕಾಂಚನವೆಂದರಿದಡೆ ಸಾಲದೆ?
ತನ್ನನಳಿದು ಘನವ ನೋಡಲದೇಕೆ?
ತಾನೇ ಘನವೆಂದರಿದಡೆ ಸಾಲದೆ?
ಹೇಳಾ! ರಾಮನಾಥ

ಜೇಡರ ದಾಸಿಮಯ್ಯನವರ ಈ ವಚನವನ್ನು ವಿಶ್ಲೇಷಿಸುವುದಕ್ಕಿಂತ ಮೊದಲ ಪ್ರೊ. ಶ್ರೀಕಾಂತ ಗಡೇದ ಅವರು ವಚನಕಾರರ ಸಾಹಿತ್ಯ ಸೃಷ್ಠಿಯಲ್ಲಿ ಜೇಡರ ದಾಸಿಮಯ್ಯನವರ ಪಾತ್ರವನ್ನು ಕುರಿತು ಮಾತನಾಡಿದರು. ಅಲ್ಲದೆ ಈ ಲಿಂಗಾಯತ ಧರ್ಮ ಸಂಸಾರಿಕ ಶರಣ ಧರ್ಮವೇ ವಿನಃ ಸನ್ಯಾಸಿಗಳ ಧರ್ಮವಲ್ಲ ಎನ್ನುವದಕ್ಕೆ ಪತಿ ದಾಸಿಮಯ್ಯ ಪತ್ನಿ ದುಗ್ಗಳೆಯ ಆದರ್ಶ ದಾಂಪತ್ಯವೇ ಸಾಕ್ಷಿ.

ಅವರದು ಸತಿಪತಿಗಳೊಂದಾದ ಸುಂದರ ಸಂಸಾರ, ಪರಸ್ಪರ ಅರಿತು ಬೆರೆತು ನಡೆವ ಸಂಸಾರ. ಇಂತಹ ಬದುಕನ್ನು ಬದುಕಿದ ದಾಸಿಮಯ್ಯನವರ ವಚನಗಳೂ ಸಹ ಅಷ್ಠೇ ಸರಳವಾದವು ಎನ್ನುವದಕ್ಕೆ ಈ ವಚನವೇ ಸಾಕ್ಷಿಯಾಗಿದೆ. ವ್ಯಕ್ತಿ ದೇವರನ್ನೂ ಹೊರಗೆ ನೋಡುವುದಕ್ಕಿಂತ ಒಳಗೆ ನೋಡಿಕೊಂಡಲ್ಲಿ ಸುಲಭವಾಗಿಯೇ ದೇವರ ದರ್ಶನವಾಗುತ್ತದೆ. ಇಲ್ಲವಾದಲ್ಲಿ ತನ್ನ ಅರಿವೇ ಆತನಿಗೆ ಆಗಲಾರದು.

ಘಟವನ್ನು ಒಡೆದು ನೋಡುವುದಕ್ಕಿಂತ ಅದರೊಳಗೆ ಬಯಲು ಇದೆ ಎಂಬ ಕನಿಷ್ಠ ಜ್ಞಾನವನ್ನು ಉಳಿಸಿಕೊಂಡರೆ ಸಾಕು. ಹಾಗೆಯೇ ತನ್ನೊಳಗೆ ಇರುವ ಆ ಮಹಾಚೈತನ್ಯವನ್ನು ತನ್ನೊಳಗೆ ಕಂಡುಕೊಂಡರೆ ಸಾಕು. ಇದು ಸುಲಭದ ಮಾರ್ಗ. ಇದನ್ನು ಬಿಟ್ಟು ಹೊರಗೆ ನೋಡುವ ವ್ಯರ್ಥ ಪ್ರಯತ್ನಬೇಡ ಎಂದು ಶ್ರೀಕಾಂತ ಗಡೇದ ಅವರು ತಿಳಿಹೇಳಿದರು.

ವಚನದ ನಿರ್ವಚನವನ್ನು ಮುಂದುವರೆಯಿಸಿದ ಪ್ರೊ. ಸಿದ್ಧಲಿಂಗಪ್ಪ ಬರಗುಂಡಿಯವರು, ಜನರು ದೇವರನ್ನು ಸರಿಯಾಗಿ ಅರ್ಥೈಸಿಕೊಳ್ಳದೆ, ಆತನ ಇರುವಿಕೆಯ ನಿಜ ಠಾವನ್ನು ಕಂಡುಕೊಳ್ಳದೆ, ವ್ಯರ್ಥಪ್ರಯತ್ನವನ್ನು ಮಾಡುವುದನ್ನು ಕಂಡು ಕನಿಕರಗೊಂಡು, ಭಗವಂತನನ್ನು ಹಾಗೂ ಆತನ ಇರುವಿಕೆಯನ್ನು ಅತ್ಯಂತ ಸುಲಭವಾಗಿ ಮೂರು-ನಾಲ್ಕು ಉದಾಹರಣೆಗಳ ಮೂಲಕ ಈ ವಚನದಲ್ಲಿ ತಿಳಿಸಿದ್ದಾರೆ.

ಘಟದೊಳಗಿನ ಬಯಲನ್ನು ನೋಡಲು ಘಟವನ್ನು ಒಡೆಯಬೇಕಾಗಿಲ್ಲ, ಅದರೊಳಗೆ ಬಯಲಿದೆ ಎಂಬುದನ್ನು ತಿಳಿದರೆ ಸಾಕು. ಅದಕ್ಕೆ ಘಟವನ್ನು ಒಡೆಯಬೇಕಾಗಿದನ್ನು ಮೊದಲೇ ಬಯಲಿನಲ್ಲಿಯೇ ತಯಾರಿಸಿದ ಗಡಿಗೆ-ಮಡಿಕೆಗಳಲ್ಲಿ (ಘಟ) ಬಯಲೇ ತುಂಬಿಕೊಂಡಿರುತ್ತದೆ. ಹಾಗೂ ಇದು ಯಾವುದೇ ಕುಂಬಾರನೂ ಪ್ರಯತ್ನ ಪೂರ್ವಕವಾಗಿ ಬಯಲನ್ನು ಸೇರಿಸಿರುವುದಿಲ್ಲ. ಅದು ಸಹಜವೇ ಇದೆ. ಹಾಗೂ ಇತ್ತು. ಅಲ್ಲದೆ ಮುಂದೆಯೂ ಇರುತ್ತದೆ.

ಈ ಮಡಿಕೆ ಒಡೆದರೆ ಹೊರಗಿನ ಹಾಗೂ ಒಳಗಿನ ಬಯಲು ಎರಡೂ ಒಂದೇ ಆಗಿದ್ದವು. ಅದನ್ನು ಮಡಿಕೆ ಮಾಡಿದಾಗ ಬೇರ್ಪಡಿಸಿದಂತೆ ಆಗಿದೆ. ಆದುದರಿಂದ ಮಡಿಕೆಯನ್ನು ಒಡೆಯದೇ ಬಯಲನ್ನು ಕಾಣುವುದು ಅನುಭವ ಸಿದ್ಧವಾದುದು.

ಅದರಂತೆಯೇ ಈ ಜಗತ್ತು ಕೂಡಾ ನಿರ್ಮಾಣವಾಗಿದೆ. ಬಯಲಿನಲ್ಲಿ ಆಲಯವನ್ನು ಕಟ್ಟಿ ಊರನ್ನು, ಮನೆಗಳನ್ನು ಕೃತವಾಗಿ ನಿರ್ಮಿಸಿ ಇದನ್ನು ಬಯಲಿನಿಂದ ಪ್ರತ್ಯೇಕ ಎಂಬ ತಪ್ಪು ತಿಳುವಳಿಕೆಗೆ (ಭ್ರಮೆಗೆ) ಒಳಗಾದೆವು. ಇದರಿಂದ ನಮ್ಮ ಮನೆ, ಊರು, ದೇಶವೆಂದು ನಿಮ್ಮ ಮನೆ, ಊರು, ದೇಶವೆಂದು ಭಿನ್ನಾಭಿಪ್ರಾಯಗಳನ್ನು ಉಂಟು ಮಾಡಿಕೊಂಡು ಬಡಿದಾಡುತ್ತಲಿದ್ದೇವೆ. ಆಕಸ್ಮಾತ್ ನಮ್ಮ ಮೂಲ ಒಂದೇ ಎಂಬ ಅರಿವು ಉಂಟಾಗಿದ್ದರೆ, ಜನ-ಜನಗಳ ಮಧ್ಯೆ ಹೊಡೆದಾಟಗಳಿರುತ್ತಿದ್ದಿಲ್ಲ.

ಇದು ಹೊರಗಿನ ಘಟಕ್ಕೆ ಸಂಬಂಧಿಸಿದ್ದುದಾಯಿತು. ಇನ್ನು ನಮ್ಮ ಕಡೆಗೆ ಹೊರಳಿದರೆ ಈ ಶರೀರವೇ ಘಟ, ಅದರೊಳಗಿರುವ ಬಯಲೇ ಮಹಾಚೈತನ್ಯ. ಪಂಚಭೂತಗಳು ಇಂದ್ರಿಯಗಳು, ಅಂತಃಕರಣಗಳು, ಅರಿಷಡ್ವಘರ್ಗಗಳು, ಅಷ್ಟಮದಗಳು ಮುಂತಾಗಿ ಅನೇಕ ಗೋಡೆಗಳನ್ನು ಕಟ್ಟಿ ಆ ಮಹಾಬಯಲಾದ ಪರಶಿವನನ್ನೇ ಅನೇಕಾನೇಕ ಮಾಡಿದ್ದೇವೆ. ಇದರ ಅರಿವಿಲ್ಲದ ಹೊರಗಿನ ಕಲ್ಲು, ಮಣ್ಣು, ಲೋಹ ಮೊದಲಾದ ವಸ್ತುಗಳಲ್ಲಿ ಇಲ್ಲದ ದೇವರನ್ನು ಸೃಷ್ಠಿಸಿಕೊಂಡು ನಾಶವಾಗುತ್ತಿದ್ದೇವೆ.

ಇಂಥವರನ್ನು ಕುರಿತೇ ದಾಸಿಮಯ್ಯನವರು ಘಟವನೊಡೆದು ಬಯಲ ನೋಡಲದೇಕೆ? ಎಂದು ಕೇಳಿದ್ದು ಹಾಗೂ ಆತ ನಿನ್ನೊಳಗೇ ಇದ್ದಾನೆಂದು ಘಟದೊಳಗಿಪ್ಪುದೇ ಬಯಲು ಎಂದು ತಿಳಿಸಿದ್ದು.

ಅದೇ ರೀತಿ ನೂಲಿನ ಎಳೆಗಳಿಂದ (ತಂತು) ಮಾಡಿದ ಬಟ್ಟೆ (ಪಟ)ಯಲ್ಲಿನ ಎಳೆಗಳನ್ನು ನೋಡುವುದಕ್ಕಿಂತ ಆ ಬಟ್ಟೆಯ ಒಳಗೆ ಎಳೆಗಳಿವೆ ಎಂದು ತಿಳಿದರೆ ಸಾಕು. ಬಂಗಾರದಿಂದ ಹಲವು ಆಭರಣಗಳನ್ನು ತಯಾರಿಸಿ ಅವಕ್ಕೆ ಸರ, ಚೈನು, ಬಳೆ, ಬಿಲವಾರ, ಪಾಟಲಿ ಮುಂತಾಗಿ ಹೆಸರಿಡುತ್ತಾರೆ.

ಇದರಲ್ಲಿ ಬಂಗಾರವಿದೆ ಎಂಬ ಜ್ಞಾನವಿದ್ದರೆ, ಆ ಆಭರಣಗಳನ್ನು ಕರಗಿಸಿಯೇ ನೋಡಬೇಕಾಗಿಲ್ಲ. ಇದಕ್ಕೆ ಜ್ಞಾನದ ಅವಶ್ಯಕತೆ ಇದೆ. ಕುಶಲಕರ್ಮಿಯಾದ ಚಿನಿವಾರನೊಬ್ಬ ಆಭರಣವನ್ನು ನೋಡಿದ ಮಾತ್ರಕ್ಕೆ ಬಂಗಾರವನ್ನು ಗುರುತಿಸುವಂತೆ, ವಸ್ತ್ರಗಳನ್ನು ನೋಡಿದ ಮಾತ್ರಕ್ಕೆ ಅದರೊಳಗಿನ ನೂಲಿನ ಎಳೆಗಳನ್ನು ಗುರುತಿಸುವ ನೇಕಾರನಂತೆ, ಮಾನವರಿಗೂ ಸಹ ಸ್ವಾನುಭಾವದ ಅರಿವಿದ್ದರೆ ಈ ನರಜನ್ಮವನ್ನು ನೀಗಿಕೊಂಡು ಹರಜನ್ಮ ಪಡೆಯಲು ಸಾಧ್ಯವಾಗುತ್ತದೆ. ಈಗ ತಾನೇ ಘನವೆಂದು ಅರಿದಾತನೇ ಮಹಾಜ್ಞಾನಿಯಾಗುತ್ತಾನೆ ಎಂಬ ಸುಲಭದ ದಾರಿಯನ್ನು ಜೇಡರ ದಾಸಿಮಯ್ಯನವರು ಈ ವಚನದ ಮೂಲಕ ತಿಳಿಸಿದ್ದಾರೆ ಎಂದು ಸಿದ್ಧಲಿಂಗಪ್ಪ ಬ. ಬರಗುಂಡಿಯವರು ವಿವರಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಶರಣೆ ಜಯಶ್ರೀ ಬ. ಬರಗುಂಡಿ ಹಾಗೂ ಸಂಗಡಿಗರು ಸಾಮೂಹಿಕ ಪ್ರಾರ್ಥನೆಯನ್ನು ಮಾಡಿಸಿದರು. ಅನುಭಾವದ ನಂತರ ಶರಣೆಯರಿಂದ ವಚನ ಮಂಗಲವಾಯಿತು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಕಾರ್ಯಕ್ರಮದ ಸಂಘಟಕರು ಶರಣು ಸಮರ್ಪಣೆ ಸಲ್ಲಿಸಿದರು. ಈ ಮಹಾಮನೆಯಲ್ಲಿ ಕುಟುಂಬದ ಬಂಧುಗಳಲ್ಲದೆ ರಾಚಣ್ಣ ಕೆರೂರ, ಪಾಂಡಪ್ಪ ಕಳಸಾ, ಪುತ್ರಪ್ಪ ಬೀಳಗಿ, ಕಂಬಾಳಿಮಠ ಸರ್, ಸುವರ್ಣ ಸಾಲಿಮಠ, ಶ್ರೀದೇವಿ ಶೇಖಾ, ವಿಶಾಲಕ್ಷಿ ಗಾಳಿ ಮೊದಲಾದರು ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Dv8eAoC8n2rJOtZKYt4o86

Share This Article
Leave a comment

Leave a Reply

Your email address will not be published. Required fields are marked *