ಹುಕ್ಕೇರಿ
ತಾಲೂಕಿನ ಹೆಬ್ಬಾಳ ಗ್ರಾಮದ ಬಸವ ಭವನದಲ್ಲಿ ಶರಣ ಮಾಸದ ಅಂಗವಾಗಿ ನಡೆದ ಅಕ್ಕನ ವೈರಾಗ್ಯ ಜೀವನ ಕುರಿತು ಪ್ರವಚನ ಕಾರ್ಯಕ್ರಮದ ಮಹಾಮಂಗಲೋತ್ಸವ ಹಾಗೂ ವಚನ ಪಲ್ಲಕ್ಕಿ ಮೆರವಣಿಗೆ ಅತಿ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರವಚನಕಾರರಾದ ಮನಗೂಳಿ ವಿರಕ್ತಮಠದ ಪೂಜ್ಯ ವಿರತೀಶಾನಂದ ಸ್ವಾಮಿಗಳು, ಪೂಜ್ಯ ಚೆನ್ನಬಸವಾನಂದ ಸ್ವಾಮಿಗಳು ಬಸವಧಾಮ ಶಿವಪುರ ಉಳವಿ, ಪೂಜ್ಯ ಸಿದ್ದಬಸವ ದೇವರು ಜಗದ್ಗುರು ಶೂನ್ಯ ಸಂಪಾದನ ಹುಣಸಿಕೊಳ್ಳಮಠ ಯಮಕನಮರಡಿ, ಪೂಜ್ಯ ದಿಲ್ಲಿ ಮಹಾಂತಸ್ವಾಮಿಗಳು, ಪೂಜ್ಯ ಅನಾದಿನಾಥ ಶರಣರು ಹಾಗೂ ಹೆಬ್ಬಾಳ ಗ್ರಾಮದ ಶರಣರು ಹಾಗೂ ಸುತ್ತ ಮುತ್ತಲಿನ ಸಾವಿರಾರು ಜನ ಶರಣ ಶರಣೆಯರು ಭಾಗವಹಿಸಿದ್ದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ತಳಿರುತೋರಣ ಕಟ್ಟಿ, ರಸ್ತೆಯಲ್ಲಿ ರಂಗೋಲಿ ಹಾಕಿ ಶೃಂಗರಿಸಲಾಗಿತ್ತು. ಅತ್ಯಂತ ವಿಜೃಂಭಣೆಯಿಂದ ಮೆರವಣಿಗೆ ನಡೆಯಿತು.

ಮೆರವಣಿಗೆಯಲ್ಲಿ ಶರಣೆಯರು ತಲೆಯ ಮೇಲೆ ವಚನ ಗ್ರಂಥಗಳನ್ನು ಹೊತ್ತು ಓಂ ಶ್ರೀ ಗುರಬಸವ ಲಿಂಗಾಯ ನಮಃ ಮಂತ್ರದೊಂದಿಗೆ ಸಾಗಿದರು. ಬಸವಾದಿ ಶರಣ ಶರಣೆಯರಿಗೆ ಜಯಘೋಷ ಹಾಕಿದರು. ವಚನಗಳ ವಡಪು ಹೇಳಿದರು, ಮಕ್ಕಳು ಶರಣರ ವೇಷಭೂಷಣ ಧರಿಸಿದ್ದರು, ಕರಡಿ ಮಜಲು, ಶಹನಾಯಿ ವಾದ್ಯಕಲಾ ಮೇಳಗಳು ಮೆರವಣಿಗೆಗೆ ಮೆರಗು ತಂದವು.
ಬೆಳಗಾವಿ, ದಾವಣಗೆರೆ, ಭದ್ರಾವತಿ, ಸಂಕೇಶ್ವರ, ಬೋರಗಲ್ಲ, ಬಸ್ಸಾಪುರ, ಚಿಕ್ಕೊಪ್ಪ, ಅಂಕಲಗುಡಿ ಕ್ಷೇತ್ರ, ಯಮಕನಮರಡಿ ಸೇರಿದಂತೆ ಹೆಬ್ಬಾಳ ಗ್ರಾಮದ ಹಾಗೂ ಸುತ್ತ ಮುತ್ತಲಿನ ಸಾವಿರಾರು ಜನ ಶರಣರು ಪಾಲ್ಗೊಂಡಿದ್ದರು. ನಂತರ ದಾಸೋಹ ಸೇವೆ ನೆರವೇರಿತು.