ದಾವಣಗೆರೆ
ಜಗತ್ತನ್ನು ಸರಿದಾರಿಗೆ ತರಲು ಕೆಲವರ ಅಗತ್ಯವಿದೆ, ಅದಕ್ಕೆ ಕುಟುಂಬದ ಕೆಲವು ಹೆಣ್ಣು ಮಕ್ಕಳನ್ನಾದರೂ ಅಕ್ಕಮಹಾದೇವಿ ಅವರಂತೆ ಬೆಳೆಸಬೇಕು, ಎಂದು ಪ್ರಜಾಪಿತ ಈಶ್ವರೀಯ ವಿವಿಯ ದಾವಣಗೆರೆ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಆಶಯ ವ್ಯಕ್ತಪಡಿಸಿದರು.
ನಗರದಲ್ಲಿ ಇತ್ತೀಚೆಗೆ ನಡೆದ ಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವದಲ್ಲಿ ಮಾತನಾಡುತ್ತಾ ಅಕ್ಕಮಹಾದೇವಿ ಜಯಂತಿ ಆಚರಿಸುವ ತಾಯಂದಿರು ತಮ್ಮ ಹೆಣ್ಣುಮಕ್ಕಳನ್ನು ಅಕ್ಕನಂತೆ ಆಧ್ಯಾತ್ಮಿಕ ಅನುಭಾವಿಗಳನ್ನಾಗಿ ಮಾಡುತ್ತಿಲ್ಲ. ಮದುವೆ ಮಾಡಿ ಜವಾಬ್ದಾರಿ ನಿಭಾಯಿಸುವ ಯೋಚನೆ ಮಾಡುತ್ತಿದ್ದಾರೆ. ಬ್ರಹ್ಮಾಕುಮಾರಿ ಸಂಸ್ಥೆಯಲ್ಲಿ 15 ಸಾವಿರ ಸೇವಾಕರ್ತೆಯರಿದ್ದಾರೆ. ಹೀಗಾಗಲು ಹೆಣ್ಣುಮಕ್ಕಳಲ್ಲಿ ಅಕ್ಕನ ಧೈರ್ಯ ತುಂಬಬೇಕು ಎಂದು ಕಿವಿಮಾತು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು, ವಚನ ಸಾಹಿತ್ಯ ಪರಿಷತ್ತು, ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ, ತೆಲಿಗಿಯ ಸ್ಫೂರ್ತಿ ಪ್ರಕಾಶನ, ಯೋಗಾನಂದ ಯೋಗ ಕೇಂದ್ರದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, 12ನೇ ಶತಮಾನದಲ್ಲಿಯೇ ಇಂದಿನ ಸಂಸತ್ತಿನ ಕಲ್ಪನೆಯನ್ನು ರೂಪಿಸಿದ್ದ ಬಸವಣ್ಣನವರು ವಿಶ್ವಮಾನ್ಯರು. ರಾಜ್ಯ ಸರ್ಕಾರ ಕೂಡ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಗುರುತಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಎಚ್. ರಾಜಶೇಖರ ಗುಂಡಗಟ್ಟಿ, ಕಾರ್ಯದರ್ಶಿ ಕೆ.ಪಿ. ತಾರೇಶ್ ಅಣಬೇರು, ಸ್ಪೂರ್ತಿ ಪ್ರಕಾಶನ ಅಧ್ಯಕ್ಷ ಎಂ. ಬಸವರಾಜ್, ಯೋಗ ಶಿಕ್ಷಕ ಕೊಂಡಜ್ಜಿ ಉಮೇಶ್, ವಕೀಲ ತ್ಯಾವಣಗಿ ಮಲ್ಲಿಕಾರ್ಜುನಪ್ಪ, ಕೆ.ಎಸ್. ವೀರಭದ್ರಪ್ಪ ತೆಲಿಗಿ ಇದ್ದರು.