ಬೀದರ:
ತಾಲ್ಲೂಕಿನ ಚಾಂಬೋಳ ಗ್ರಾಮದ ಹಿರೇಮಠದಲ್ಲಿ ಮಾರ್ಚ್ 9 ರಿಂದ 15 ರವರೆಗೆ “ಮೊಬೈಲ್ ಬಿಡಿ ಪುಸ್ತಕ ಹಿಡಿ” ಎಂಬ ಘೋಷಣೆ ಅಡಿಯಲ್ಲಿ ಮಕ್ಕಳಿಗಾಗಿ ಶರಣ ಸಂಸ್ಕೃತಿ ಶಿಬಿರ ನಡೆಯಿತು.
ಗ್ರಾಮದ ಎಂಜಿನೀಯರ್, ಉತ್ಸಾಹಿ ಯುವಕ ಸುಭಾಷ್ ಆಮ್ಲಾಪುರೆ ಮತ್ತು ಗೆಳೆಯರು ವಚನ ಮೂರ್ತಿ ಶ್ರೀಶೈಲ ಮಸೂತೆ ಅವರ ಮಾರ್ಗದರ್ಶನದಲ್ಲಿ ಶಿಬಿರ ಆಯೋಜಿಸಿದ್ದರು.

ಮಠದ ಪೂಜ್ಯ ಅಭಿನವ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿಯವರ ಸಾನಿಧ್ಯದಲ್ಲಿ ಗ್ರಾಮದ ಸರ್ಕಾರಿ ಶಾಲೆಯ ಹಲವು ಮಕ್ಕಳು ಭಾಗವಹಿಸಿದ್ದರು.
ಶಿಬಿರದಲ್ಲಿ ವಚನಗಳ ಕಂಠ ಪಾಠ, ವಚನ ಗಾಯನ, ಬಸವಾದಿ ಶರಣರ, ವಚನಕಾರರ ಪರಿಚಯ, ವಚನಗಳ ತಿಳುವಳಿಕೆ ನೀಡುವ ಪಾಠಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಈ ವಿಶೇಷ ಶಿಬಿರ ನಡೆದು, ಇಂಗ್ಲಿಷ್ ಮಾತನಾಡುವ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ, ಸಾಮಾನ್ಯ ಜ್ಞಾನದ ಅರಿವು ಮೂಡಿಸುವ ಸಮಾಜಮುಖಿ ಕೆಲಸ ಈ ಗ್ರಾಮದಲ್ಲಿ ನಡೆದು ಮಾದರಿ ಎನಿಸಿತು.
ಇದಲ್ಲದೆ ತಂದೆ-ತಾಯಿ ಇಲ್ಲದ ಮಕ್ಕಳಿಗೆ ಉಚಿತ ಪ್ರಸಾದ ಮತ್ತು ಉಚಿತ ಶಿಕ್ಷಣ ನೀಡುತ್ತಾ 11 ದಿನಗಳವರೆಗೆ ಶರಣೆ ದಾನಮ್ಮಾ ತಾಯಿಯವರ ಕುರಿತು ಪ್ರವಚನ ಮಾಡಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು.

ವಿವಿಧ ಸ್ಪರ್ಧೆಗಳನ್ನು ನಡೆಸಿ, ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಈ ಎಲ್ಲಾ ಕಾರ್ಯಕ್ರಮಗಳಿಗೆ ಸರ್ಕಾರಿ ಶಾಲೆಯ ಎಸ್. ಡಿ. ಎಮ್.ಸಿ. ಸದಸ್ಯರಾದ ರಾಜಕುಮಾರ ಬಿರಾದಾರ ನೌಲಾಪೂರ, ಗ್ರಾಮಸ್ಥರು, ಮತ್ತಿತರರು ಸಹಕಾರ ನೀಡಿದರು.

