ಗದಗ
ಬಸವಾದಿ ಶಿವಶರಣ ಪ್ರಣೀತ ಲಿಂಗಾಯತ ಧರ್ಮ ವೈಜ್ಞಾನಿಕ, ಸರಳ ಆಚರಣೆಗಳ ಧರ್ಮವಾಗಿದೆ. ಶರಣರ ವಚನಗಳು ಲಿಂಗಾಯತ ಧರ್ಮಗ್ರಂಥ. ಅವುಗಳಲ್ಲಿ ಸಮಾಜಕ್ಕೆ ಬೇಕಾದ ಸರ್ವ ಆಚರಣೆಗಳ ವಿವರಣೆ ಇದೆ. ಆದರೆ ಈ ಬಗ್ಗೆ ಅರಿಯದೇ ಅನ್ಯಪದ್ದತಿಗಳ ಪ್ರಭಾವಕ್ಕೆ ಲಿಂಗಾಯತರು ಒಳಗಾಗಿ ನಿಜಾಚರಣೆಗಳನ್ನು ಮಾಡುತ್ತಿಲ್ಲ.
ಆದರೆ ಇದೀಗ ವಚನ ಸಾಹಿತ್ಯ ಅಧ್ಯಯನ, ಓದು ಹೆಚ್ಚಾಗುತ್ತಿದ್ದು ಈ ಕಾರಣದಿಂದಾಗಿ ನಮ್ಮವರು ತಮ್ಮ ಅನೇಕ ಕಾರ್ಯಕ್ರಮ, ಆಚರಣೆಗಳಲ್ಲಿ ವಚನಾಧಾರಿತ ಸಂಸ್ಕಾರಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆಂದು ಪೂಜ್ಯ ಡಾ. ಮಹಾಂತ ಬಸವಲಿಂಗ ಸ್ವಾಮಿಗಳು, ಶ್ರೀಗುರು ಬಸವೇಶ್ವರಮಠ, ಬೇಲೂರು, ನುಡಿದರು.

ಜಯಶ್ರೀ ಪಿ. ಹಳ್ಳಿಕೇರಿ ಅವರ ಹೊಸಮನೆ ‘ಬಸವಪ್ರಭು’ ಗುರುಪ್ರವೇಶ ಹಾಗೂ ಬಸವದಳದ ೧೬೫೧ನೇ ಶರಣ ಸಂಗಮ ಕಾರ್ಯಕ್ರಮದ ಸಾನಿಧ್ಯ ವಹಿಸಿ ಲಿಂಗಾಯತ ನಿಜಾಚರಣೆಗಳ ಮಹತ್ವದ ಕುರಿತು ಮಾತನಾಡಿ, ಇಂದು ಲಿಂಗಾಯತರಲ್ಲಿ ವೈದಿಕ ಪದ್ದತಿಗಳು ಹಾಸು ಹೊಕ್ಕಾಗಿವೆ. ಇದಕ್ಕೆ ವ್ಯವಸ್ಥೆಯೂ ಕಾರಣವಾಗಿದೆ. ಇವು ನಮ್ಮವಲ್ಲದ ಹಾಗೂ ವೈಜ್ಞಾನಿಕವಲ್ಲದ ವೆಚ್ಚದಾಯಕವಾಗಿವೆ. ಈ ಸಂದರ್ಭದಲ್ಲಿ ನಡೆವ ಹೋಮ, ಹವನ, ನವಗ್ರಹ ಸ್ಥಾಪನೆಗಳಂತಹವು ನಮ್ಮ ಪದ್ದತಿಗಳು ಅಲ್ಲವೇ ಅಲ್ಲ. ಅವು ವ್ಯರ್ಥ ಖರ್ಚಿನ ಪದ್ದತಿಗಳಾಗಿವೆ. ಆದರೆ ಇತ್ತೀಚಿಗೆ ಶರಣರ ವಚನಾಧಾರಿತ ನಿಜಾಚರಣೆಗಳನ್ನು ನಮ್ಮವರಿಗೆ ಅರುಹುವಲ್ಲಿ ಬಸವಪರ ಸಂಘಟನೆಗಳು ನಿಧಾನವಾಗಿ ಯಶಸ್ಸು ಕಾಣುತ್ತಿವೆ. ಈ ಪರಿಣಾಮ ಸಮಾಜದ ಜನರು ಅರಿಯುತ್ತಿದ್ದು, ಕ್ರಮೇಣವಾಗಿ ಅಳವಡಿಸಿಕೊಳ್ಳುತ್ತಿದ್ದಾರೆ.
ಸರಳ, ಅರ್ಥಪೂರ್ಣ ಆಚರಣೆಗಳಿವು. ನಿಜಾಚರಣೆಗಳನ್ನು ಧರ್ಮೀಯರೆಲ್ಲರೂ ಅಳವಡಿಸಿಕೊಳ್ಳಲೇಬೇಕಾಗಿದೆ. ಮನೆಯಲ್ಲಿ ನಡೆವ ವಿವಿಧ ಕಾರ್ಯಕ್ರಮಗಳಲ್ಲಿ ನಿಜಾಚರಣೆ ಮಾಡಬೇಕು. ಶರಣರು ಸರಳತೆ, ವೈಜ್ಞಾನಿಕತೆಯ ಬಗ್ಗೆ ವಚನಗಳಲ್ಲಿ ಹೇಳಿದ್ದು ಅದೇ ತೆರನಾಗಿ ಜಯಶ್ರೀ ತಾಯಿಯವರ ಹೊಸಮನೆ ಪ್ರವೇಶ ಕೂಡಾ ಲಿಂಗಾಯತ ಆಚರಣೆಯಂತೆ ‘ಗುರುಪ್ರವೇಶ’ ಪಡೆದಿದೆ. ಇಂಥ ಸಹಜ, ಸರಳತೆಯ ಅರ್ಥಪೂರ್ಣ ಅಚರಣೆಗಳನ್ನು ಲಿಂಗಾಯತರು ತಮ್ಮ ಮನೆಗಳಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಆರಂಭದಲ್ಲಿ ಜಯಶ್ರೀ ಅವರಿಂದ ಷಟ್ಸ್ಥಲ ಧ್ವಜಾರೋಹಣ ನೆರವೇರಿತು. ಧರ್ಮಗುರು ಬಸವಣ್ಣನವರ ಭಾವಚಿತ್ರ ಮತ್ತು ಧರ್ಮಗ್ರಂಥ ವಚನ ಸಾಹಿತ್ಯದೊಂದಿಗೆ ಗುರುಪ್ರವೇಶವಾಯಿತು.

ಗಿರಿಜಕ್ಕ ಧರ್ಮರೆಡ್ಡಿಯವರ ಮಾರ್ಗದರ್ಶನದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿತು. ಇದೇ ಸಂದರ್ಭದಲ್ಲಿ ಗಿರಿಜಕ್ಕನವರು ಇಷ್ಟಲಿಂಗ ಪೂಜೆ ಹಾಗೂ ಶಿವಯೋಗದ ಮಹತ್ವದ ಕುರಿತು ಹೇಳುತ್ತಾ, ಇಂದು ಮಕ್ಕಳಿಗೆ ಲಿಂಗಧಾರಣೆಯ ಅವಶ್ಯಕತೆ ಬಹಳ ಇದೆ. ನಮ್ಮವರಿಗೆ ನಿಜಾಚರಣೆಗಳ ಅರಿವು ಹೆಚ್ಚಾಗಬೇಕೆಂದರು. ಈ ನಿಟ್ಟಿನಲ್ಲಿ ಸಮಾಜದ ಪ್ರಮುಖ ಸಂಸ್ಥೆಗಳು ಚಿಂತನೆ ನಡೆಸಬೇಕೆಂದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಇಷ್ಟಲಿಂಗ ದೀಕ್ಷೆ ನೆರವೇರಿಸಿದರು.
ಮತ್ತೋರ್ವ ಶರಣರಾದ ಅಶೋಕ ಬರಗುಂಡಿಯವರು ನುಡಿಗಳನ್ನಾಡಿ, ಇಂದು ಸಮಾಜದಲ್ಲಿ ಲಿಂಗಾಯತ ಸಂಸ್ಕಾರದ ಅರಿವು ಹೆಚ್ಚಾಗಬೇಕಿದೆ ಎಂದು ನಿಜಾಚರಣೆಗಳ ಮಹತ್ವವನ್ನು ತಿಳಿಸಿದರು. ನಮ್ಮವರು ಇಷ್ಟಲಿಂಗದ ಮಹತ್ವ ಅರಿತುಕೊಳ್ಳಬೇಕು. ಇಷ್ಟಲಿಂಗ ಪೂಜೆ, ಶಿವಯೋಗ ಮಹತ್ವದ್ದಾಗಿದೆ. ನಮ್ಮವರು ಕಡ್ಡಾಯವಾಗಿ ನಿತ್ಯ ಲಿಂಗಪೂಜೆ, ಶಿವಯೋಗಗಳನ್ನು ಆಚರಿಸಿಕೊಳ್ಳಿರೆಂದರು.

ಗೌರಕ್ಕ ಬಡಿಗಣ್ಣನವರ ಇದೇ ವಿಷಯದ ಬಗ್ಗೆ ಪ್ರಾಸ್ತಾವಿಕ ಮಾತನಾಡುತ್ತಾ, ಅನ್ಯ ಆಚರಣೆಗಳನ್ನು ತೊರೆಯಬೇಕು. ನಮ್ಮ ಆಚರಣೆಗಳನ್ನು ಅಳವಡಿಸಿಕೊಳ್ಳಬೇಕೆಂದರು.
ಆರಂಭದಲ್ಲಿ ವಚನ ಪ್ರಾರ್ಥನೆಯು ಬಸವದಳದ ಶರಣರಿಂದ ಜರುಗಿತು. ಜಯಶ್ರೀ ಹಳ್ಳಿಕೇರಿಯವರು ತಮ್ಮ ಹೊಸಮನೆ ಗುರುಪ್ರವೇಶಕ್ಕೆ ಆಗಮಿಸಿದವರನ್ನು ಸ್ವಾಗತಿಸಿದರು.
ಅಧ್ಯಕ್ಷೀಯ ಭಾಷಣವನ್ನು ವಿ.ಕೆ. ಕರೇಗೌಡ್ರ ಮಾಡಿದರು. ಕಾರ್ಯಕ್ರಮದ ನಿರುಪಣೆಯು ಪ್ರಕಾಶ ಅಸುಂಡಿಯವರಿಂದ ನೆರವೇರಿತು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.