ಹುಬ್ಬಳ್ಳಿ
ಜಾಗತಿಕ ಲಿಂಗಾಯತ ಮಹಾಸಭಾ ಧಾರವಾಡ ಜಿಲ್ಲಾ ಮಹಿಳಾ ಘಟಕ ಹಾಗೂ ಬಸವಪರ ಮಹಿಳಾ ಸಂಘಟನೆಗಳು ಜಂಟಿಯಾಗಿ ವೀರ ವಿರಾಗಿಣಿ ಅಕ್ಕಮಹಾದೇವಿ ಜಯಂತಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾ ಧಾರವಾಡ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶರಣೆ ಸವಿತಾ ನಡಕಟ್ಟಿ ವಚನ ಪಠಣ ಮಾಡುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು.

ಅಕ್ಕಮಹಾದೇವಿಯ ಫೋಟೋವನ್ನು ತೊಟ್ಟಿಲಲ್ಲಿ ಇಟ್ಟು ಜೋಗುಳ ಪದ ಹಾಡುವುದು ವಾಡಿಕೆ, ಆದರೆ ಅಕ್ಕ ಜಗನ್ಮಾತೆ ತಾಯಿಯನ್ನು ತೊಟ್ಟಿಲಲ್ಲಿ ಹಾಕಿ ತೂಗುವುದು ಅರ್ಥವಿಲ್ಲ, ಅದಕ್ಕೆ ನಾವು ಆ ಸಂಪ್ರದಾಯವನ್ನು ಕೈಬಿಟ್ಟು ಅವರ ವಚನಗಳನ್ನು ಪಠಿಸಿ, ಉದ್ಘಾಟನೆ ಮಾಡಿದ್ದೇವೆ ಎಂದು ಹೇಳಿದರು.
ಹಿರಿಯ ಶರಣೆ ಸ್ನೇಹಾ ಭೂಸನೂರ ಮಾತನಾಡುತ್ತಾ, ಕಾರ್ಯಕ್ರಮಕ್ಕೆ ಬಂದವರೆಲ್ಲಾ ಗಟ್ಟಿಕಾಳುಗಳು, ಅವರು ವಚನಗಳನ್ನು ಓದುತ್ತಾರೆ, ಓದುವುದನ್ನು ನಿಲ್ಲಿಸಬಾರದು. ಓದಿ ಅರಿಯುವುದರಿಂದ ನಮ್ಮ ಜೀವನ ಪಾವನವಾಗುತ್ತದೆ ಎಂದರು.
ಶರಣರ ವಚನಗಳು ಎಷ್ಟು ಮಧುರವೊ ಅಷ್ಟೇ ಬೆಂಕಿ ಇದ್ದ ಹಾಗೆ. ಶರಣರ ವಚನಗಳನ್ನಾಗಲಿ, ಶರಣರ ಸಿದ್ಧಾಂತವನ್ನಾಗಲಿ ಶರಣರನ್ನಾಗಲಿ ಕೆಣಕಿದರೆ, ಅವರೊಡನೆ ಸರಸವಾಡಿದರೆ ಪರಿಣಾಮ ಉರಿಯ ಬೆಂಕಿಯ ಕೊಳ್ಳಿ ತೆಗೆದುಕೊಂಡು ತಲೆ ಬಾಚಿಕೊಂಡಂತೆ ಆಗುತ್ತದೆ. ಹಾಗೆಯೆ ಸುಣ್ಣದ ಕಲ್ಲನ್ನು ಮಡಿಲಲ್ಲಿ ಕಟ್ಟಿಕೊಂಡು ಮಡುವಲ್ಲಿ ಬಿದ್ದಂತೆ ಆಗುತ್ತದೆ ಅದಕ್ಕಾಗಿ ಅವರನ್ನು ಕೆಣಕದೆ ಅವುಗಳ ಅನುಸಂಧಾನ ಮಾಡಿಕೊಂಡರೆ ಜೀವನ ಸುಗಮವಾಗುತ್ತದೆ ಎಂದು ಪರೋಕ್ಷವಾಗಿ ವಚನದರ್ಶನ ತಂಡಕ್ಕೆ ಎಚ್ಚರಿಕೆಯನ್ನು ನೀಡಿದರು.
ಕಿತ್ತೂರು ಸರಕಾರಿ ಪ್ರಥಮದರ್ಜೆ ಕಾಲೇಜಿನ ಸಹಪ್ರಾಧ್ಯಾಪಕಿ ಡಾ. ಪ್ರಜ್ಞಾ ಮತ್ತಿಹಳ್ಳಿ ಅವರು ಮಾತನಾಡುತ್ತ, ನಮ್ಮ ಮನಸಿನ ಆಳದೊಳಗೆ ನಮ್ಮ ದೇವರು ಇದ್ದಾನೆ, ನಮ್ಮ ಲಿಂಗ ಅಷ್ಟು ಒಳಗಡೆ ಇದೆ ಅದನ್ನು ಅಷ್ಟು ಒಳಗಿಟ್ಟರು ಯಾಕೆ ಅಂದ್ರೆ ಅದಕ್ಕೆ ಸಮಯ ಕೊಟ್ಟಾಗ ಅದು ತಿಳಿಯುವುದು. ನಾವು ಎಷ್ಟು ಹೊರಗೆ ನೋಡುವುದು ಬಿಡುತ್ತೇವೆ ಅಷ್ಟೇ ಒಳಗೆ ನೋಡಿದರೆ ನಾವು ದೇವರನ್ನು ಕಾಣಲು ಸಾಧ್ಯ ಎಂದರು.

ಶರಣರು ಮನುಷ್ಯರಾಗಿದ್ದರು ಸಾವಿರ ವರ್ಷ ಆದರೂ ನಾವು ಅವರನ್ನು ನೆನೆಯುತ್ತೇವೆ. ಅವರು ಶರಣರು ಹೆಂಗಾದ್ರೂ ಅನ್ನೋದನ್ನು ಕೇಳಿ ಕೇಳಿ ರೋಮಾಂಚನಗೊಳ್ಳುತ್ತೇವೆ, ಅವರು ನುಡಿದಂತೆ ನಡೆದರು ಎಂದು ನಾವು ಅವರನ್ನು ಇಂದು ಆರಾಧಿಸುತ್ತೇವೆ.
ಅವರಲ್ಲಿ ಒಬ್ಬಳು ಅಕ್ಕಮಹಾದೇವಿ ನಮ್ಮ ನಾಡಿನಲ್ಲೆ ಹುಟ್ಟಿದವಳು ಆಕೆ ಮಾಡಿದಂತಹ ಸಾಧನೆ ಜಗತ್ತಿನಲ್ಲಿ ಇದೂವರೆಗೂ ಯಾರೂ ಮಾಡಿಲ್ಲ. ಬೇರೆ ದೇಶದಲ್ಲಿ ಅಕ್ಕನ ಬಗ್ಗೆ ಓದುತ್ತಿರುವವರನ್ನು ನಾನು ತೋರಿಸಬಲ್ಲೆ ಆದರೆ ನಮ್ಮ ಯುವ ಪೀಳಿಗೆ ಆ ದಾರಿಯಲ್ಲಿ ಇಲ್ಲ ಇದನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕು ಎಂದರು.

ಪ್ರಜ್ಞಾ ನಡಕಟ್ಟಿ ಹಾಗೂ ಲತಾ ಮಂಟ ಪ್ರಾರ್ಥನೆ ಮಾಡಿದರು. ಶಶಿಕಲಾ ಕೊಡೆಕಲ್ ಸ್ವಾಗತಿಸಿದರು, ಸುನಿಲಾತಾಯಿ ಬ್ಯಾಟಿ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು, ಜಯಶ್ರೀ ಹಿರೇಮಠ ಶರಣು ಸಮರ್ಪಣೆ ಮಾಡಿದರು. ದ್ರಾಕ್ಷಾಯಿಣಿ ಕೋಳಿವಾಡ ಕಾರ್ಯಕ್ರಮ ನಿರೂಪಿಸಿದರು. ವಚನಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ನಂತರ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.