ಬಸವನ ಬಾಗೇವಾಡಿ
ರಾಜ್ಯದ್ಯಂತ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನಕ್ಕೆ ಇಂದು ಬಸವನ ಬಾಗೇವಾಡಿಯಲ್ಲಿ ಚಾಲನೆಯಾಗಲಿದೆ.
ಬಸವಜನ್ಮಭೂಮಿಯಾದ ಬಸವನ ಬಾಗೇವಾಡಿಯಲ್ಲಿ ಉದ್ಘಾಟನೆಗೊಂಡು ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ ಅಕ್ಟೋಬರ್ 5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾರೋಪ ಗೊಳ್ಳಲಿದೆ.
ಒಂದು ತಿಂಗಳ ನಡೆಯುವ ಈ ಅಭಿಯಾನವು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ಪೂಜ್ಯ ನಾಡೋಜ ಡಾ. ಬಸವಲಿಂಗ ಪಟ್ಟದೇವರು, ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಪೂಜ್ಯ ಮಾತೆ ಗಂಗಾದೇವಿಯವರ ನೇತೃತ್ವದಲ್ಲಿ ನಡೆಯಲಿದ್ದು ನಾಡಿನ ಎಲ್ಲಾ ಬಸವ ತತ್ವಪರ ಪೂಜ್ಯರು, ಸಂಘಟನೆಗಳು, ಸಂಘ-ಸಂಸ್ಥೆಗಳ ಮುಖ್ಯಸ್ಥರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.
ಪ್ರತಿ ಜಿಲ್ಲೆಯಲ್ಲಿ ಬೆಳಗ್ಗೆ 10 ಗಂಟೆಗೆ ವಿದ್ಯಾರ್ಥಿಗಳ ಜೊತೆ ವಚನ ಸಂವಾದ, ಮಧ್ಯಾಹ್ನ 4 ಗಂಟೆಗೆ ನಗರದ ಪ್ರಮುಖ ರಸ್ತೆಯಲ್ಲಿ ಬಸವನಡಿಗೆ ಸಾಯಂಕಾಲ 6:00ಗೆ ವೇದಿಕೆ ಕಾರ್ಯಕ್ರಮ ನಡೆಯುತ್ತದೆ. ವೇದಿಕೆ ಕಾರ್ಯಕ್ರಮಗಳಲ್ಲಿ ನಾಡಿನ ಖ್ಯಾತ ಸಾಹಿತ್ಯ ಸಂಶೋಧಕರಿಂದ ಉಪನ್ಯಾಸ, ಅನುಭಾವಿಗಳಿಂದ ಪ್ರವಚನ ಹಾಗೂ ಪೂಜ್ಯರಿಂದ ಆಶೀರ್ವಚನ ನಡೆಯಲಿದ್ದು ಸಾಣೆಹಳ್ಳಿಯ ಶಿವ ಸಂಚಾರ ಕಲಾತಂಡದಿಂದ ವಚನ ಸಂಗೀತ ಹಾಗೂ ಜಂಗಮದಡಿಗೆ ನಾಟಕ ಪ್ರದರ್ಶನಗೊಳ್ಳಲಿದೆ.
ಈ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲು ಈಗಾಗಲೇ ಎಲ್ಲ ಜಿಲ್ಲೆಗಳಲ್ಲಿ ಸ್ವಾಗತ ಸಮಿತಿಯನ್ನು ರಚನೆಗೊಂಡು ಪೂಜ್ಯರ ಮಾರ್ಗದರ್ಶನದಲ್ಲಿ ಎಲ್ಲ ಸಿದ್ಧತೆಗಳನ್ನು ಭರದಿಂದ ಸಾಗುತ್ತಿವೆ.
ಆ ದಿಶೆಯಲ್ಲಿ ಬಸವ ಸಂಸ್ಕೃತಿ ಅಧ್ಯಯನ ಇಡೀ ರಾಜ್ಯದಲ್ಲಿಯೇ ಬಸವಾದಿ ಶರಣರ ಮೌಲ್ಯ ಸಾರುವ ವಿನೂತನ ಅಭಿಯಾನ ಆಗಿದೆ. ಅದಕ್ಕಾಗಿ ತಮ್ಮ ತಮ್ಮ ಜಿಲ್ಲೆಗಳಲ್ಲಿ ಈ ಅಭಿಯಾನ ಬಂದಾಗ ಎಲ್ಲ ಸಮಾಜಗಳ ಬಾಂಧವರು ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಶ್ವಗುರು ಬಸವಣ್ಣನವರನ್ನು ಕರ್ನಾಟಕ ಸರ್ಕಾರ ಸಾಂಸ್ಕೃತಿಕ ನಾಯಕರೆಂದು ಘೋಷಣೆ ಮಾಡಿ ಒಂದು ವರ್ಷ ಆಗುತ್ತಿದೆ. ಅದಕ್ಕಾಗಿ ಬಸವಾದಿ ಶರಣರ ಚಿಂತನೆಗಳನ್ನು ಜನಮನದಲ್ಲಿ ಬಿತ್ತುವ ಸದುದ್ದೇಶದಿಂದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
