ಕಡ್ಡಾಯವಾಗಿ ಜನಗಣತಿಯಲ್ಲಿ ಲಿಂಗಾಯತ ಎಂದು ಮಾತ್ರ ಬರೆಸಿ: ಶಿವಾನಂದ ಶ್ರೀ

‘ಯಾವ ಕಾರಣಕ್ಕೂ, ಒತ್ತಡಕ್ಕೂ, ಸುಳ್ಳು ಮಾಹಿತಿಗೂ ಬಲಿಯಾಗದೆ ಲಿಂಗಾಯತ ಎಂದು ಮಾತ್ರ ಬರೆಯಿಸಿ.’

ಹುಲಸೂರ

ಪಟ್ಟಣದ ಅಲ್ಲಮಪ್ರಭು ಶೂನ್ಯ ಪೀಠದ ಆವರಣದಲ್ಲಿ ಬಸವಕೇಂದ್ರ ತಾಲೂಕು ಘಟಕದ ಸಹಯೋಗದಲ್ಲಿ ಭಾನುವಾರ ಶರಣ ಸಂಸ್ಕೃತಿ ಶಿಬಿರ ನಡೆಯಿತು.

ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಗುರು ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಪೂಜ್ಯ ಶಿವಾನಂದ ಸ್ವಾಮೀಜಿ ಮುಂಬರುವ ದಿನಗಳಲ್ಲಿ ಸರ್ಕಾರ ನಡೆಸುವ ಜನಗಣತಿಯ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಮಾತ್ರ ಬರೆಸಬೇಕು. “ಯಾವ ಕಾರಣಕ್ಕೂ. ಒತ್ತಡಕ್ಕೂ, ಸುಳ್ಳು ಮಾಹಿತಿಗೂ ಬಲಿಯಾಗದೆ ಕಡ್ಡಾಯವಾಗಿ ಲಿಂಗಾಯತ ಎಂದು ಮಾತ್ರ ಬರೆಯಿಸಿ,” ಎಂದು ಶಿಬಿರಾರ್ಥಿಗಳಿಗೆ ಆಗ್ರಹಿಸಿದರು.

ಬಸವ ಪೂರ್ವ ಇತಿಹಾಸ ಮತ್ತು 12ನೇ ಶತಮಾನದಲ್ಲಿ ಶರಣ ಚಳುವಳಿ ವಿವರಿಸುತ್ತಾ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟವನ್ನು ಚುರುಕುಗೊಳಿಸುವಂತೆ ಕರೆ ನೀಡಿದರು.

ಲಿಂಗಾಯತರಿಗೆ ಬಸವಣ್ಣನವರು ಶ್ರೇಷ್ಠ ಧರ್ಮ ನೀಡಿದ್ದಾರೆ ಇದನ್ನು ಅರ್ಥಮಾಡಿಕೊಂಡು ಆಚರಣೆ ಮಾಡುವ ಮೂಲಕ ಬದುಕು ಸಾಗಿಸುವುದು ಉತ್ತಮ ಎಂದು ಹೇಳಿದರು.

ಲಿಂಗಾಯತ ಧರ್ಮಿಯರು ಸನಾತನ ಧರ್ಮದವರಲ್ಲ, ನಾವು ಸನಾತನ ಧರ್ಮದ ವಿರೋಧಿಗಳೂ ಅಲ್ಲ. ಸಾಂಪ್ರದಾಯಿಕ ಮೌಢ್ಯ, ಕಂದಾಚಾರ, ಧಾರ್ಮಿಕ ಶೋಷಣೆ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ವಿರೋಧಿಸುವದು ಲಿಂಗಾಯತ ಧರ್ಮದ ತತ್ವ ಹಾಗೂ ಸಿದ್ದಾಂತವಾಗಿದೆ ಎಂದು ಹೇಳಿದರು.

ಶರಣ ಸಂಸ್ಕೃತಿ ಶಿಬಿರದ ನೇತೃತ್ವ ವಹಿಸಿದ್ದ ಉಸ್ತೂರಿ ಮಠದ ಕೋರಣೇಶ್ವರ ಸ್ವಾಮೀಜಿ ಇಂದು ಭಯಾನಕವಾಗಿ ಸಾಂಸ್ಕೃತಿಕ, ಸಾಮಾಜಿಕ, ಸಾಹಿತ್ಯಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಲಿಂಗಾಯತ ಸಮುದಾಯದ ಮೇಲೆ ದಾಳಿ ನಡೆಯುತ್ತಿದೆ.

ಸನಾತನ ಧರ್ಮ ಶ್ರೇಷ್ಠವೇ ಆಗಿದ್ದರೆ ನಮ್ಮ ನೆಲೆಯಲ್ಲಿ ಬೌದ್ಧ, ಜೈನ, ಸಿಖ್, ಲಿಂಗಾಯತ ತತ್ವಗಳು ಪ್ರತ್ಯೇಕವಾಗಿ ಹುಟ್ಟಿಕೊಳ್ಳಲು ಕಾರಣವೇನೆಂಬುದು ಸನಾತನ ಧರ್ಮದವರಿಗೆ ನನ್ನ ಪ್ರಶ್ನೆ ಎಂದು ಶ್ರೀಗಳು ತಿಳಿಸಿದರು.

ಸನಾತನ ಧರ್ಮದಲ್ಲಿ ಕುಂತು ತಿನ್ನುವ ವರ್ಗ ಒಂದಿದೆ. ವರ್ಣವ್ಯವಸ್ಥೆ, ಯಜ್ಞ, ಯಾಗ, ಗುಡಿ ಸಂಸ್ಕೃತಿ, ಮೌಢ್ಯ ಕಂದಾಚಾರವನ್ನು ಹುಟ್ಟು ಹಾಕಿ ತಮ್ಮನ್ನು ತಾವು ಶ್ರೇಷ್ಠ ಜನಾಂಗದವರು ಎಂದು ಬಿಂಬಿಸಿಕೊಳ್ಳುತ್ತಾರೆ. ಇದರಿಂದ ದುಡಿಯುವ ವರ್ಗದ ಜನರ ಶೋಷಣೆಯನ್ನು ತಪ್ಪಿಸಲು ಮಹಾವೀರ, ಬುದ್ಧ, ಬಸವಣ್ಣ ಅವರಂತ ಮಹಾತ್ಮರು ಹೊಸ ಧರ್ಮ ಸಂಸ್ಕಾರಗಳು ಹುಟ್ಟು ಹಾಕಿ ಮುಕ್ತ ಸಮಾಜ ನಿರ್ಮಾಣಕ್ಕೆ ತೊಡಗಿದರು.

ಸನಾತನ ಧರ್ಮಿಯರು ಕೃಷಿ ಸಂಸ್ಕೃತಿಯ ವಿರುದ್ಧ ಋಷಿ ಸಂಸ್ಕೃತಿ ಹುಟ್ಟು ಹಾಕಿ, ದುಡಿಯುವ ಸಂಸ್ಕೃತಿ ನಾಶ ಮಾಡಿದ ಮದ್ಯ ಏಷ್ಯನ್ ಯುರೇಷಿಯನ್ ಜನಾಂಗದವರು. ನಮ್ಮ ಮೂಲ ದ್ರಾವಿಡ ಸಂಸ್ಕೃತಿ ವಿನಾಶಕ್ಕೆ ಕಾರಣಿಭೂತರು.

ಇವರು ವಿದೇಶದಿಂದ ಬಂದ ಸಾಂಸ್ಕೃತಿಕ ಭಯೋತ್ಪಾದಕರು ಆಗಿದ್ದು, ಇವರು ಲಿಂಗಾಯತರಲ್ಲಿ ಧಾರ್ಮಿಕ ಮೂಢನಂಬಿಕೆ, ಕಂದಾಚಾರದಂತ ವಿಚಾರಗಳನ್ನು ತುಂಬುವ ಮೂಲಕ ಭಯ ಹುಟ್ಟಿಸಿ ನಮನ್ನು ಗುಲಾಮರಾಗಿ ಮಾಡಲು ಸತತ ಪ್ರಯತ್ನ ನಡೆಸುತ್ತಿದ್ದಾರೆಂದು ಶ್ರೀಗಳು ತಿಳಿಸಿದರು. ಲಿಂಗಾಯತ ಧರ್ಮ ಸಂಸ್ಕಾರಗಳು ಜಾಗತಿಕ ಮಟ್ಟದಲ್ಲಿ ಚರ್ಚೆ ಮಾಡುವಷ್ಟು ಬೆಳೆಯುತ್ತಿರುವ ಧರ್ಮ ಆಗಿದ್ದು ಇದು ನಮ್ಮ ಸಮುದಾಯದವರಿಗೆ ಹೆಮ್ಮೆಯ ವಿಷಯ ಎಂದು ಕೊರಣೇಶ್ವರ ಶ್ರೀ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಸವಕೇಂದ್ರ ತಾಲೂಕು ಅಧ್ಯಕ್ಷ ಆಕಾಶ ಖಂಡಾಳೆ, ತಾಲೂಕಿನಲ್ಲಿ ಬಸವ ಕೇಂದ್ರದಿಂದ ಪ್ರಥಮ ಶರಣ ಸಂಸ್ಕೃತಿ ಕುರಿತಾದ ಶಿಬಿರ ಹಮ್ಮಿಕೊಳ್ಳಲಾಗಿದೆ. ಈ ಗಡಿ ಭಾಗದಲ್ಲಿ ಶರಣರ ವಚನಗಳಿಂದ ಕನ್ನಡ ಸಾಹಿತ್ಯ ಬೆಳೆಯಲು ಸಾಧ್ಯವಾಗಿದೆ, ಯುವಕರು ಶರಣರ ವಿಚಾರಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕು ಇತರೆ ಧರ್ಮಿಯರ ಸಿದ್ಧಾಂತಗಳಿಗೆ ಮಾರುಹೋಗಿ ತಮ್ಮ ಜೀವನವನ್ನು ಸಂಕಷ್ಟಕ್ಕೆ ದೂಡಿಕೊಳ್ಳಬಾರದೆಂದರು.

ಲಿಂಗಾಯತ ಸಂಸ್ಕೃತಿಯ ಅರಿವು ಲಿಂಗಾಯತ ಯುವಕರಿಗೆ ಅಗತ್ಯ ಇದೆ, ಲಿಂಗಾಯತ ಬಸವಣ್ಣನವರ ಹೆಸರಿನಲ್ಲಿ ಸಾವಿರಾರು ಮಠಗಳು ಇವೆ, ಆದರೆ ಬಸವಣ್ಣನವರ ಸೇರಿದಂತೆ ಶರಣರ ವಿಚಾರಗಳನ್ನು ಅನುಸರಿಸಿ ಪ್ರಸಾರ ಮಾಡುವ ಮಠಗಳು ತುಂಬಾ ವಿರಳವಾಗಿವೆ ಎಂದು ರವಿ ಕೋಳಕೂರ, ರಾಷ್ಟ್ರೀಯ ಬಸವದಳ ತಾಲೂಕು ಅಧ್ಯಕ್ಷ ಹೇಳಿದರು.

ಶರಣ ಸಂಸ್ಕೃತಿಯು ತನ್ನದೇ ಆದ ಘನತೆ ಹೊಂದಿರುವುದು, ಲಿಂಗಾಯತ ಧರ್ಮದ ಸಂಸ್ಕಾರಗಳು ಸರಿಯಾದ ರೀತಿಯಲ್ಲಿ ಅರಿಯದೆ ಇರುವ ಕಾರಣ ಲಿಂಗಾಯತ ಸಮುದಾಯದವರು ಮೌಢ್ಯಾಚರಣೆ ಕಡೆ ಒಲವು ತೊರುತ್ತಿದ್ದಾರೆ. ಲಿಂಗಾಯತ ಸಮುದಾಯದವರನ್ನು ಬಲಿಪಶು ಮಾಡುತ್ತಿರುವುದು, ಲಿಂಗಾಯತ ತತ್ವಗಳು ಆಚರಣೆ, ಸಿದ್ದಾಂತಗಳ ವಿಚಾರ ಚಿಂತನೆಗಳನ್ನು ವಿರೋಧಿಸಲು ಲಿಂಗಾಯತ ಸಮುದಾಯದವರನ್ನೆ ಬಳಸಿಕೊಳ್ಳುವ ಹುನ್ನಾರ ನಡೆಯುತ್ತಿದೆ. ಲಿಂಗಾಯತ ಧರ್ಮಿಯರು ಜಾಗೃತರಾಗಬೇಕು, ನಮ್ಮ ಸ್ವಂತಿಕೆಯ ಅರಿವು ಅಗತ್ಯವಾಗಿದೆ ಎಂದು ಶಿವಕುಮಾರ ಶೇಟಕಾರ, ಶರಣ ಚಿಂತಕರು ತಿಳಿಸಿದರು.

ವಚನ ಗಾಯನವನ್ನು ವೀರೇಶ ಇಲ್ಲಾಮಲೆ, ಪ್ರೇಮ ಗೌಡಗಾಂವೆ ಅವರು ನೆರವೇರಿಸಿದರು. ಸ್ವಾಗತ ಸಚಿನ್ ಕೌಟೆ, ನಿರೂಪಣೆ ರಾಜಕುಮಾರ ತೊಂಡಾರೆ ಅವರು ನಡೆಸಿದರು.

ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಪ್ರವೀಣ ಕಾಡಾದಿ, ಬಸವರಾಜ ಮುಕ್ತಾ, ಮಹಾದೇವ ಮಹಾಜನ್, ರೇಖಾ ಕಾಡಾದಿ, ರೇವಮ್ಮ ಹುಡಗೆ , ಚಂದ್ರಶೇಖರ ಮಂಗಾ, ನಾಗರಾಜ ಕೋರೆ, ಶಂಕರ ಆದೇಪ್ಪ, ಬಿ.ಸಿ. ಪಾಟೀಲ, ಇಸ್ಮಾಯಿಲ್ ಪಠಾಣ, ಬಸವರಾಜ ರಗಟ್ಟೆ, ಸಡಕಯ್ಯ ಸ್ವಾಮಿ, ರಮೇಶ ತೋಟದ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/DAHwtSaP5nUL2sT483TnP6

Share This Article
1 Comment
  • ಧರ್ಮ ಕಾಲಂ ನಲ್ಲಿ ಲಿಂಗಾಯತ ಎಂದು ಬರೆಸುವುದು ಹಾಗೂ ಜಾತಿ ಕಾಲಂ ನಲ್ಲಿ ನಮ್ಮ ಜಾತಿ ಬರೆಸುವುದು.

Leave a Reply

Your email address will not be published. Required fields are marked *