ಬೆಂಗಳೂರು
ಜಾತಿ ಗಣತಿಯಲ್ಲಿ ಮತ್ತು ಧರ್ಮಗಣತಿಯಲ್ಲಿ ಜಂಗಮರು ವೀರಶೈವ ಎಂದು ಬರೆಸುವುದಿಲ್ಲ, ಬೇಡ ಜಂಗಮ ಎಂದು ಬರೆಸುತ್ತಾರೆ.
ಆದರೆ ಮಿಕ್ಕವರಿಗೆ ಇಲ್ಲದ ವೀರಶೈವವನ್ನು ಲಿಂಗಾಯತ ಪದಕ್ಕೆ ಜೋಡಿಸಿ ವೀರಶೈವ-ಲಿಂಗಾಯತ ಎಂದು ಬರೆಸಲು ಹೇಳುತ್ತಾರೆ. ಆದರೆ ಲಿಂಗಾಯತರಿಗೆ ಇವರ ಕುತಂತ್ರ ಅರ್ಥವಾಗುತ್ತಿಲ್ಲ ಏಕೆ?
ನಮ್ಮ ಧರ್ಮ ಲಿಂಗಾಯತ. ಅದಕ್ಕಾಗಿ ಧರ್ಮದ ಕಾಲಂನಲ್ಲಿ ಕೇವಲ ಲಿಂಗಾಯತ ಎಂದೇ ಬರೆಸಬೇಕು. ಹಿಂದೂ ಎಂದು ಬರೆಸಬಾರದು ಇದು ಸಂವಿಧಾನದ ಪರಿಚ್ಛೇದ 25, 26, 27 ಅನ್ವಯ ನಮಗೆ ಕೊಟ್ಟ ಹಕ್ಕು.
ನಮ್ಮ ಧರ್ಮ ಸ್ವತಂತ್ರವಾಗಿದ್ದು ಸಾಂವಿಧಾನಿಕ ಮಾನ್ಯತೆ ಸಿಗದಿದ್ದರೂ ಈ ಹಕ್ಕನ್ನು ನಮಗೆ ನೀಡಲಾಗಿದೆ. ಅಧಿಕಾರಿಗಳಿಗೆ ನಾವು ತಿಳಿ ಹೇಳಬೇಕು.
ಹಿಂದೂ ಸಾಂವಿಧಾನಿಕವಾಗಿ ಒಂದು ಧರ್ಮವಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ, ಆದರೂ ಪ್ರತಿ ಸರ್ಕಾರಿ ದಾಖಲಾತಿಗಳಲ್ಲಿ ಧರ್ಮದ ಕಾಲಂನಲ್ಲಿ “ಹಿಂದೂ” ಧರ್ಮ ಎಂದು ಬರೆಸಲಿಕ್ಕೆ ಅವಕಾಶ ಇದೆ.
ಆದರೆ ಲಿಂಗಾಯತ ಧರ್ಮ ಬರೆಸಲು ಹೋದಾಗ ಇಲ್ಲದ ತರಲೆ ಪ್ರಶ್ನೆ ಮಾಡುತ್ತಾರೆ, ಇದನ್ನು ನಾವು ಪ್ರತಿಯೊಬ್ಬರೂ ಪ್ರಶ್ನಿಸಿ, ಧರ್ಮದ ಕಾಲಂನಲ್ಲಿ “ಲಿಂಗಾಯತ” ಎಂದು ಬರೆಸಲು ಒತ್ತಾಯಿಸಬೇಕು. ಕೋರ್ಟ್ ಮೆಟ್ಟಲು ಹತ್ತಲೂ ಹಿಂಜರಿಯಬಾರದು.
ನಮ್ಮ ಕಾಯಕ ಸಮುದಾಯಗಳಾದ ಹೂಗಾರ, ಸಮಗಾರ, ಹಡಪದ, ಮಡಿವಾಳ, ಕುಂಬಾರ, ಹಟಗಾರ ಮುಂತಾದ ಒಳಪಂಗಡಗಳು ಜಾತಿ ಕಾಲಂನಲ್ಲಿ ಅವರು ಅವರ ಜಾತಿಯನ್ನು ಬರೆಸಬಹುದು. ಜಾತಿಗೆ ಮೀಸಲಾತಿ ಇದೆ. ಧರ್ಮಕ್ಕೆ ಮೀಸಲಾತಿ ಇಲ್ಲ ಇದರಿಂದ ನಿಮ್ಮ ಮೀಸಲಾತಿಗೆ ಯಾವ ಧಕ್ಕೆ ಬರುವುದಿಲ್ಲ.
ಕಾನೂನು ರಕ್ಷಣೆ ನಮಗಿದೆ. ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ.
ಬಸವಣ್ಣನವರ ನಿಜವಾದ ಮಕ್ಕಳಾದರೆ ಈ ಹೋರಾಟ ಮಾಡಿ. ಹಿಂದೂ ಎಂದು ಬರೆಸದೇ, ವೈದಿಕರ ಗುಲಾಮರಾಗದೇ ಬಸವಾದಿ ಶರಣರ ವಚನ ಸಾಹಿತ್ಯ ಮೌಲ್ಯಗಳನ್ನು ಅರಿತು ಆಚರಿಸಿ ನಿಮ್ಮ ಬದುಕನ್ನು ಕಟ್ಟಿಕೊಳ್ಳಿ. ನಿಮಗೆ ನೀವೇ ಬೆಳಕು.
ಲಿಂಗಾಯತರು ಜನಗಣತಿ ಹಾಗೂ ಜಾತಿಗಣತಿ ಸಮಯದಲ್ಲಿ ಲಿಂಗಾಯತ ಸಮುದಾಯದ ಪ್ರಾತಿನಿಧಿಕ ಸಂಸ್ಥೆ “ಜಾಗತಿಕ ಲಿಂಗಾಯತ ಮಹಾಸಭೆ” ಕರೆಯಂತೆ ಮಾಹಿತಿಯನ್ನು ನೀಡಿರಿ.