ಭಾರತ-ಚೀನಾ ಯುದ್ಧದಲ್ಲಿ ತಮ್ಮ ಚಿನ್ನಾಭರಣ ರಾಷ್ಟ್ರಕ್ಕೆ ನೀಡಿದ್ದ ಜಯವಿಭವ ಶ್ರೀಗಳು

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ

೧೯೬೨ರಲ್ಲಿ ನಡೆದ ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ಮುರುಘ ಮಠದ ಶ್ರೀ ಜಯವಿಭವ ಮುರುಘರಾಜೇಂದ್ರ ಮಹಾಸ್ವಾಮಿಗಳು ತಾವು ಧರಿಸುತ್ತಿದ್ದ ಚಿನ್ನದ ಕಿರೀಟ, ಆಭರಣ ಹಾಗೂ ಧನವನ್ನು ರಾಷ್ಟ್ರ ರಕ್ಷಣಾ ನಿಧಿಗೆ ಸರ್ಮಪಿಸಿ ದೇಶಭಕ್ತಿ ಮೆರೆದಿದ್ದರು ಎಂದು ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ಸ್ಮರಿಸಿದರು.

ಮಠದಲ್ಲಿರುವ ಜಯವಿಭವ ಮುರುಘರಾಜೇಂದ್ರ ಶ್ರೀಗಳ ಲೀಲಾ ವಿಶ್ರಾಂತಿ ತಾಣದಲ್ಲಿ ಬುಧವಾರ ನಡೆದ ೬೧ನೇ ಸ್ಮರಣೋತ್ಸವದಲ್ಲಿ ಶ್ರೀಗಳ ಗದ್ದುಗೆಗೆ ಪುಷ್ಪವೃಷ್ಟಿ ಮತ್ತು ವಚನಾಭಿಷೇಕದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ಮುರುಘಾಮಠ ಪರಂಪರೆಯಲ್ಲಿ ಆಗಿಹೋಗಿರುವ ಎಲ್ಲಾ ಜಗದ್ಗುರುಗಳು ದೂರದೃಷ್ಟಿಯುಳ್ಳವರಾಗಿದ್ದರು. ನಮ್ಮ ದೇಶ ಉಳಿದರೆ ನಾವು ಉಳಿವೆವು ಎಂಬುದು ಮಲ್ಲಿಕಾರ್ಜುನ ಶ್ರೀಗಳವರ ವಾಣಿಯಾಗಿತ್ತು. ಜಯವಿಭವ ಶ್ರೀಗಳು ಯುದ್ಧದ ಸಂದರ್ಭದಲ್ಲಿ ದೇಶಕ್ಕಾಗಿ ಏನಾದರೂ ನೀಡಬೇಕು ಎಂಬ ಚಿಂತನೆಯೊಂದಿಗೆ ಚಿನ್ನಾಭರಣ ಮತ್ತು ಧನವನ್ನು ದೇಶದ ರಕ್ಷಣಾನಿಧಿಗೆ ಅರ್ಪಿಸಿ ಶ್ರೀಮಠದ ಗೌರವ-ಘನತೆಯನ್ನು ಹೆಚ್ಚಿಸಿದ್ದರು ಎಂದರು.

ಅವರು ತಮ್ಮ ಗುರುಗಳಾದ ಜಯದೇವ ಶ್ರೀಗಳೊಂದಿಗೆ ಹಾಗೂ ಕಿರಿಯರಾದ ಮಲ್ಲಿಕಾರ್ಜುನ ಶ್ರೀಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಬಹುಬಾಷಾ ಪಂಡಿತರಾಗಿದ್ದರು. ಕೃಷಿಯ ಕಡೆ ಹೆಚ್ಚಿನ ಒಲವು ಹೊಂದಿ ಶ್ರೀಮಠದ ಪಕ್ಕದ ತೋಟವನ್ನು ಮಾಡಿದ್ದಾರೆ. ತಮ್ಮ ಅಲ್ಪ ಕಾಲಾವಧಿಯಲ್ಲಿ ಶ್ರೀಮಠವನ್ನು ಅಭಿವೃದ್ಧಿಪಡಿಸಿದರು. ಬೆಂಗಳೂರಿನಲ್ಲಿ ಸರ್ಪಭೂಷಣ ಮಠ ಸ್ಥಾಪನೆ ಮಾಡಿದರು. ಹಾಸನ, ಚಿಕ್ಕಜಾಜೂರಿನಲ್ಲಿ ವಿದ್ಯಾರ್ಥಿ ನಿಲಯಕ್ಕಾಗಿ ಜಾಗಗಳನ್ನು ಖರೀದಿ ಮಾಡಿದ್ದರು ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಆಧ್ಯಕ್ಷ ಎಂ.ಕೆ. ತಾಜ್‌ಪೀರ್ ಮಾತನಾಡಿ, ನಮ್ಮ ಕುಟುಂಬ ಹಿಂದಿನಿಂದಲೂ ಶ್ರೀಮಠದೊಂದಿಗೆ ಉತ್ತಮ ಭಾಂದವ್ಯ ಹೊಂದಿದೆ. ಶ್ರೀಮಠದಲ್ಲಿ ೧೯೬೨ರಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನಮ್ಮ ತಂದೆಯವರ ವಿವಾಹ ನಡೆದು, ಶ್ರೀ ಜಯವಿಭವ ಸ್ವಾಮಿಗಳು ಆಶೀರ್ವಾದ ಮಾಡಿದ್ದರು ಎಂದು ನಮ್ಮ ತಂದೆ ಸ್ಮರಿಸುತ್ತಿದ್ದರು. ನಮ್ಮ ಹಿರಿಯರು ಮಾಡಿದ ಸತ್ಕಾರ್ಯ ಫಲವಾಗಿ ನಾನು ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದೇನೆೆ ಎಂದು ತಿಳಿಸಿದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಕೆ.ಎಂ. ವೀರೇಶ್ ಮಾತನಾಡಿ, ಡಾ. ಬಸವಕುಮಾರ ಸ್ವಾಮಿಗಳು ಶ್ರೀಮಠದಲ್ಲಿ ಶರಣರ, ಮಹನೀಯರ ಸ್ಮರಣೆ ಮತ್ತು ಜಯಂತಿ ಕಾರ್ಯಕ್ರಮಗಳನ್ನು ಜವಾಬ್ದಾರಿಯುತವಾಗಿ ಅರ್ಥಪೂರ್ಣವಾಗಿ ಆಯೋಜಿಸುತ್ತಾ ಬರುತ್ತಿದ್ದಾರೆ. ಶ್ರೀಮಠವು ನವಕೋಟಿ ನಾರಾಯಣ ಪೀಠವೆಂದು ಪ್ರಸಿದ್ಧಿ ಪಡೆದಿತ್ತು. ಜಯವಿಭವ ಶ್ರೀಗಳು ಮಾನವೀಯತೆ ಗುಣವುಳ್ಳವರಾಗಿದ್ದರು. ಶ್ರೀಗಳ ಕಾರ್ಯಗಳು ಅವಿಸ್ಮರಣೀಯ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ ಮಾತನಾಡಿ, ಜಯದೇವ ಶ್ರೀಗಳು ನಿಜವಾದ ಸನ್ಯಾಸಿಗಳು. ಅವರದ್ದು ಸಾತ್ವಿಕÀ ಗುಣ. ೧೯೫೮ರಲ್ಲಿ ನಾನು ಪಿಯುಸಿ ಓದುವಾಗ ನಮ್ಮ ಕಾರ್ಯಕ್ರಮಕ್ಕೆ ಶ್ರೀಗಳು ಆಗಮಿಸಿ ನಮಗೆ ಆಶೀರ್ವಚನ ನೀಡುತ್ತ ಅಭ್ಯಾಸ, ಕಲಿಕೆಯ ಜೊತೆಗೆ ಅಷ್ಟಾವರಣ, ಪಂಚಚಾರವನ್ನು ಕಲಿಯಬೇಕು ಆ ಮೂಲಕ ನಮ್ಮ ಪ್ರತಿಭೆ ಅನಾವರಣಗೊಳ್ಳಬೇಕು ಎಂದು ಆಶಿಸುತ್ತ ಶಿಕ್ಷಣದ ಮಹತ್ವವನ್ನು ನಮಗೆ ತಿಳಿಸಿದ್ದು ಜಯವಿಭವ ಶ್ರೀಗಳು ಎಂದು ತಿಳಿಸಿದರು.

ಚಂದ್ರವಳ್ಳಿಯ ಎಸ್.ಜೆ.ಎಂ. ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಹೆಚ್.ಎಸ್. ಪಂಚಾಕ್ಷರಿ ಮಾತನಾಡಿ, ಜಯದೇವ ಶ್ರೀಗಳು ಜಯವಿಭವ ಶ್ರೀಗಳನ್ನು ತಮ್ಮ ಉತ್ತರಾಧಿಕಾರಿಯಾಗಿ ಆರಿಸಿಕೊಂಡು ಅವರಿಗೆ ಕಾಶಿಯಲ್ಲಿ ಉನ್ನತ ಶಿಕ್ಷಣ ಕೊಡಿಸಿದರು. ಜಯವಿಭವ ಶ್ರೀಗಳು ಬಂಡೀವಾಡದಲ್ಲಿ ಸಿದ್ಧಲಿಂಗಯ್ಯ ಪಕೀರವ್ವ ದಂಪತಿಗಳ ಮಗನಾಗಿ ಜನಿಸಿದರು.

ನಂತರದಲ್ಲಿ ಮುಳುಗುಂದದ ಬಸವಲಿಂಗ ಶ್ರೀಗಳು ತಮ್ಮ ಮಠಕ್ಕೆ ಮರಿಯಾಗಿ ಕರೆದೊಯ್ಯುತ್ತಾರೆ. ಮುಂದೆ ಇವರಿಗೆ ಮೃತ್ಯುಂಜಯ ಅಪ್ಪಗಳ, ಅಥಣಿ ಗಚ್ಚಿನ ಮಠದ ಶಿವಯೋಗಿಗಳ ಆಶೀರ್ವಾದ ದೊರಕುತ್ತದೆ. ನಂತರದಲ್ಲಿ ಜಯದೇವ ಶ್ರೀಗಳು ಜಯವಿಭವ ಶ್ರೀಗಳಿಗೆ ಕಾಶಿಯಲ್ಲಿ ಉನ್ನತ ಅಭ್ಯಾಸ ಮಾಡಿಸಿ ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡುತ್ತಾರೆ. ಜಯವಿಭವ ಶ್ರೀಗಳು ಕೃಷಿಗೆ ಹೆಚ್ಚು ಒತ್ತು ನೀಡಿ ಶ್ರೀಮಠದ ಮುಂದೆ ತೋಟದ ನಿರ್ಮಾಣ ಮಾಡಿದರು. ಭಾರತ ಚೀನಾ ಯುದ್ಧದ ಸಂದರ್ಭದಲ್ಲಿ ಕಿರೀಟ ಆಭರಣಗಳನ್ನು ರಕ್ಷಣಾನಿಧಿಗೆ ನೀಡಿದ್ದರು ಎಂದು ತಿಳಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಸಿ. ನಿರಂಜನಮೂರ್ತಿ, ವೀರಶೈವ ಸಮಾಜದ ನಿರ್ದೇಶಕ ಎಸ್. ಪರಮೇಶ್ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ಬಸವರಾಜ ಕಟ್ಟಿ, ಪೈಲ್ವಾನ್ ತಿಪ್ಪೇಸ್ವಾಮಿ, ಹರಗುರು ಚರಮೂರ್ತಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಎಸ್.ಜೆ.ಎಂ. ವಿದ್ಯಾಪೀಠದ ಸಿಬ್ಬಂದಿ, ಭಕ್ತರು ಹಾಗೂ ಶ್ರೀಮಠದ ಅಭಿಮಾನಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿ, ಡಾ.ಆನಂದ್ ಸ್ವಾಗತಿಸಿ, ಡಾ.ರೇವಣ್ಣ ನಿರೂಪಿಸಿ, ಶ್ರೀ ನವೀನ್ ಮಸ್ಕಲ್ ಶರಣು ಸಮರ್ಪಣೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FYCnBXoFfiK0GH4dAJvoia/

Share This Article
1 Comment
  • ಪೂಜ್ಯ ಬಸವಕುಮಾರ ಶ್ರೀಗಳು ಮುರುಗಾ ಮಠದ ಪರಂಪರೆಯ ಇತಿಹಾಸ ಜ್ಞಾನವುಳ್ಳವರಾಗಿ ಈ ಹಿಂದೆ ಮಠದ ಅಭಿವೃದ್ಧಿಗಾಗಿ ಶ್ರಮಿಸಿ ಲೀಲಾ ವಿಶ್ರಾಂತಿ ಹೊಂದಿರುವ ಎಲ್ಲಾ ಸ್ವಾಮೀಜಿಗಳ ಸಮಗ್ರ ಮಾಹಿತಿಯೊಂದಿಗೆ ಎಲ್ಲಾ ಪೂಜ್ಯರ ಸ್ಮರಣೋತ್ಸವಗಳನ್ನು ಮಾಡುತ್ತಾ ಬಂದಿರುವುದು ನಮಗೆಲ್ಲ ಹೆಮ್ಮೆಯ ವಿಷಯ ಈ ಕೃಷ್ಣಪ್ಪ ಬಸವ ಟಿವಿ

Leave a Reply

Your email address will not be published. Required fields are marked *