ಬೆಳಗಾವಿ
ನದಿ, ಕಾಡುಮೇಡು, ಗುಹೆಗಳಲ್ಲಿ ತಪಸ್ಸು ಮಾಡದೇ ದಾಂಪತ್ಯ ಜೀವನದಲ್ಲಿ ಇದ್ದುಕೊಂಡು ಕಾಯಕ, ದಾಸೋಹ, ಅನುಭಾವ, ಶಿವಯೋಗದೊಂದಿಗೆ ಭಕ್ತಿಮಾರ್ಗದಲ್ಲಿ ಯಶಸ್ಸು ಕಂಡವರು 12 ನೇ ಶತಮಾನದ ಬಸವಾದಿ ಶರಣರು.
ಲಿಂಗ, ಜಾತಿ, ಕುಲಕಸಬುಗಳ ಆಧಾರದ ಮೇಲೆ ಶೋಷಣೆ ಮಾಡುತ್ತಿದ್ದ ಸಂದರ್ಭದಲ್ಲಿ ಬಸವಣ್ಣನವರು ಶೋಷಿತರಿಗೆ ಬೆಳಕಾಗಿ ಕಂಡರು. ಮೋಕ್ಷ ಸಾಧನೆಗೆ ಸರ್ವರೂ ಅರ್ಹರು ಎಂಬುದನ್ನು ನಿರೂಪಿಸಿದರು. ಅಜ್ಞಾನದಿಂದ ಜ್ಞಾನದೆಡೆಗೆ, ಕತ್ತಲೆಯಿಂದ ಬೆಳಕಿನೆಡೆ ಗೃಹಸ್ಥ ಧರ್ಮವನ್ನು ಪಾಲಿಸುತ್ತ ಮಾನವ ಸಮಾಜಕ್ಕೆ ಶರಣರು ದಾರಿದೀಪವಾದರು ಎಂದು ಸಂಶೋಧಕರಾದ ಡಾ. ಬಾಳಪ್ಪ ಚಿನಗುಡಿ ಅವರು ಹೇಳಿದರು.

ಅವರು ಮಂಗಳವಾರ ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕದಿಂದ ಮಹಾಂತೇಶ ನಗರ ಮಹಾಂತ ಭವನದಲ್ಲಿ ಏರ್ಪಡಿಸಿದ ಮಾಸಿಕ ಅನುಭಾವ ಗೋಷ್ಠಿಯಲ್ಲಿ ಶರಣರ ಗೃಹಸ್ಥ ಧರ್ಮ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು.
ಸಾನಿಧ್ಯ ವಹಿಸಿದ್ದ ರುದ್ರಾಕ್ಷಿಮಠದ ಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ವಚನ ಕಂಠಪಾಠ ಸ್ಪರ್ಧೆಯ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಿ ಆಶಿರ್ವಚನ ನೀಡುತ್ತ, ಗೃಹಸ್ಥ ಧರ್ಮವನ್ನು ಆಚರಿಸಿ ಮೋಕ್ಷ ಹೊಂದಬಹುದೆಂಬಂದನ್ನು ಬಸವಾದಿ ಶರಣರು ತೋರಿಸಿಕೊಟ್ಟಿದ್ದಾರೆ. ಶರಣರು ಸಮಾಜದಲ್ಲಿ ಕಾಯಕ, ದಾಸೋಹ, ಶಿವಯೋಗದೊಂದಿಗೆ ಭಕ್ತಿಯನ್ನು ಆಚರಿಸಿದರು ಎಂದು ಹೇಳಿದರು.

ವಚನ ಪ್ರಾರ್ಥನೆಯನ್ನು ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಶರಣೆಯರು ನಡೆಸಿಕೊಟ್ಟರು. ಅಧ್ಯಕ್ಷತೆಯನ್ನು ಹಿರಿಯ ಶರಣ ಅಡಿವೆಪ್ಪ ಬೆಂಡಿಗೇರಿ ಅವರು ವಹಿಸಿದ್ದರು.
ವೇದಿಕೆಯ ಮೇಲೆ ಷಟಸ್ಥಲ ಧ್ವಜಾರೋಹಣ ನೆರವೇರಿಸಿದ ಶರಣೆ ನೈನಾ ಗಿರಿಗೌಡರ, ವಚನ ಕಂಠಪಾಠ ಸ್ಪರ್ಧೆಯ ಪ್ರಾಯೋಜಕರಾದ ಶರಣ ಬಸವರಾಜ ಮಿಂಡೊಳ್ಳಿ ಇದ್ದರು.
ಜಾಗತಿಕ ಲಿಂಗಾಯತ ಮಹಾಸಭಾದ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಎಂ. ಬೂದಿಹಾಳ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಖಜಾಂಚಿ ಮುರಿಗೆಪ್ಪ ಬಾಳಿ, ಗುರುಬಸವ ಬಳಗದ ಸಂಚಾಲಕ ಮಹಾಂತೇಶ ತೋರಣಗಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶರಣೆ ಭಾರತಿ ರಾಮಗುರವಾಡಿ ವಂದಿಸಿದರು.

ಕಾರ್ಯಕ್ರಮದಲ್ಲಿ ಈರಣ್ಣ ಚಿನಗುಡಿ, ಪ್ರವೀಣಕುಮಾರ ಚಿಕ್ಕಲಿ, ಎಸ್.ಜಿ. ಸಿದ್ನಾಳ, ಆನಂದ ಯಲ್ಲಪ್ಪ ಕೊಂಡಗುರಿ, ಎಫ್.ಆರ್. ಪಾಟೀಲ, ಸೂರನಾಯಕ ಇಂಚಲ, ಅರವಿಂದ ಪರೂಶೆಟ್ಟಿ, ಸುಜಾತಾ ಮತ್ತಿಕಟ್ಟಿ, ರತ್ನಾ ಬೆಣಚನಮರಡಿ ಮುಂತಾದವರು ಉಪಸ್ಥಿತರಿದ್ದರು.