ಕಲಬುರಗಿ
ನಗರದ ಹಾರಕೂಡ ಚನ್ನಬಸವ ಕಲ್ಯಾಣ ಮಂಟಪದಲ್ಲಿ ಕಲಬುರ್ಗಿಯ ಗುಡ್ಡಾ ಪರಿವಾರದ ಕಾಂತಮ್ಮ ಹಣಮಂತ ಅವರ ಮಗಳಾದ ಸಾಕ್ಷಿ ಮತ್ತು ಭಂಟನಳ್ಳಿಯ ಸೊಂತ ಪರಿವಾರದ ಶೋಭಾವತಿ ವಿಜಯಕುಮಾರ ಮಗನಾದ ಶಿವಾನಂದ ಇವರ ನಿಜಾಚರಣೆ ಕಲ್ಯಾಣ ಮಹೋತ್ಸವದ ರವಿವಾರ ನಡೆಯಿತು.

ವಚನಾಧಾರಿತವಾಗಿ ಮತ್ತು ಬಸವತತ್ವ ವಿಧಿವಿಧಾನಗಳಿಂದ ಗುಣತೀರ್ಥದ ಕಲ್ಯಾಣ ಮಹಾಮನೆಯ ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ನಡೆಸಿಕೊಟ್ಟರು.
ಇದೇ ಸಂಧರ್ಭದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ, ವಚನ ಪ್ರಾರ್ಥನೆ ಮತ್ತು ಪುಸ್ತಕ ಬಿಡುಗಡೆ ಮಾಡಲಾಯಿತು.
ದಿವ್ಯ ಸಾನಿಧ್ಯ ವಹಿಸಿಕೊಂಡು ಮಾತನಾಡುತ್ತಾ ನಿಷ್ಕಲ ಮಂಟಪದ ಪೂಜ್ಯ ನಿಜಗುಣಾನಂದ ಮಹಾಸ್ವಾಮೀಜಿ ಇಂದಿನ ಕಾಲದ ಮದುವೆಗಳು ಆಡಂಬರದ ಬೆನ್ನು ಹತ್ತಿವೆ, ಮನರಂಜನೆಯ ಕೇಂದ್ರ ಬಿಂದುಗಳಾಗಿವೆ ಇದು ಪ್ರಜ್ಞಾವಂತ ಸಮಾಜದ ಲಕ್ಷಣವಲ್ಲ. ಮದುವೆಗಳು ಸಂಸ್ಕೃತಿಯ ಪ್ರತೀಕವಾಗಿರಬೇಕು ಎಂದು ಅಭಿಮತ ವ್ಯಕ್ತಪಡಿಸಿದರು.

ಬಸವಾದಿ ಶರಣರು ಕಟ್ಟಬಯಸಿದ್ದ ದಾಂಪತ್ಯ ಧರ್ಮವು ಧಾರ್ಮಿಕ ಮತ್ತು ನೈತಿಕ ತಳಹದಿಯ ಮೇಲೆ ನಿಂತಿತ್ತು, ಇಂದಿನ ಮದುವೆಗಳಲ್ಲಿ ಮೌಲ್ಯಗಳ ಕೊರತೆ ಕಾರಣ ಮಕ್ಕಳಲ್ಲಿ ಉತ್ತಮ ಚಿಂತನೆಗಳು ಒಡಮೂಡುತ್ತಿಲ್ಲ ಎಂಬುದನ್ನು ದಂಪತಿಗಳು ಅರ್ಥ ಮಾಡಿಕೊಳ್ಳಬೇಕು. ಆಡಂಬರದ ಮತ್ತು ಮೂಢನಂಬಿಕೆ ಮದುವೆಗಳನ್ನು ಮಾಡಿಸದೆ ವೈಚಾರಿಕ ಮತ್ತು ಸರಳ, ಹಾಗೂ ಬಸವ ತತ್ವ ಆಧಾರಿತ ಮದುವೆಗಳು ಹೆಚ್ಚೆಚ್ಚು ನಡೆಯಬೇಕು ಎಂದು ಮಾರ್ಮಿಕವಾಗಿ ಮಾತನಾಡಿದರು.


ಮದುವೆ ಸಮಾರಂಭದಲ್ಲಿ ಪೂಜ್ಯ ಪ್ರಭು ಶ್ರೀ ಮಾತಾಜಿ, ಡಾ. ಅಪ್ಪಾಸಾಹೇಬ ವಿ. ದೇಶಮುಖ, ಡಾ. ಶ್ರೀಕಾಂತ ವಡ್ಡನಕೇರೆ, ಡಾ. ಕಿರಣ ದೇಶಮುಖ, ಡಾ. ಪಲ್ಲವಿ ದೇಶಮುಖ, ಅಲ್ಲಮಪ್ರಭು ನಾವದಗೇರೆ, ಶಿವಕುಮಾರ ಸಾಲಿ, ಡಾ. ಸುನಿತಾ ಸಿ. ಗುಮ್ಮಾ, ಮಾಲತಿ ರೇಷ್ಮೆ ವಕೀಲರು, ಶಿವಶರಣಪ್ಪ ದೇಗಾವ, ರಾಜಶೇಖರ ಯಂಕಂಚಿ, ರವೀಂದ್ರ ಶಾಬಾದಿ, ಆರ್.ಜಿ. ಶೆಟಗಾರ, ಉದಯಕುಮಾರ ಸಾಲಿ, ನಾಗೇಂದ್ರಪ್ಪ ನಿಂಬರ್ಗಿ, ಶಿವಲೀಲಾ ಬಿ. ಚಟ್ನಳ್ಳಿ, ಅಂಜನಾದೇವಿ ಶಾಂತಪ್ಪ ದುಬಲಗುಂಡಿ ಉಪಸ್ಥಿತರಿದ್ದರು.