ಕಲಬುರಗಿ
ಸಾಮಾಜಿಕ ಜಾಲತಾಣದಲ್ಲಿ ವಿಶ್ವಗುರು ಬಸವಣ್ಣ ಹಾಗೂ ವೈರಾಗ್ಯನಿಧಿ ಅಕ್ಕ ಮಹಾದೇವಿ ಅವರ ಬಗ್ಗೆ ಅಶ್ಲೀಲ, ಅವಹೇಳನಕಾರಿ ಪೋಸ್ಟ್ ಹಂಚಿಕೊಂಡಿರುವ ರಮಾಕಾಂತ ಎಂ. ಎಂಬುವವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಾಗೂ ಬಸವಪರ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಜಗತ್ ವೃತ್ತದ ಬಸವೇಶ್ವರ ಪುತ್ಥಳಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಅಲ್ಲಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ಪತ್ರ ಸಲ್ಲಿಸಲಾಯಿತು.
ಸಾಮಾಜಿಕ ಜಾಲತಾಣದಲ್ಲಿ ಮಹಾಪುರುಷರ ಬಗ್ಗೆ ಅವಹೇಳನಕಾರಿ ಬರಹ ಬರೆದು ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತಿರುವ ವ್ಯಕ್ತಿ ಹಾಗೂ ಸಂಘಟನೆಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಘೋಷಣೆ ಕೂಗಿ ಆಗ್ರಹಿಸಿದರು.
ಅವಹೇಳನಕಾರಿಯಾದ ಇಂತಹ ಪೋಸ್ಟ್ ಗಳು ಅಸಮಾಧಾನಕ್ಕೆ ಕಾರಣವಾಗಿ ಸಾಮಾಜಿಕ ಸಂಘರ್ಷಕ್ಕೆ ನಾಂದಿ ಹಾಡಿದಂತಾಗುತ್ತದೆ. ಕೂಡಲೇ ರಮಾಕಾಂತ ಅವರನ್ನು ಬಂಧಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಆರ್.ಜಿ. ಶೆಟಗಾರ, ಪ್ರಧಾನ ಕಾರ್ಯದರ್ಶಿ ಅಶೋಕ ಘೂಳಿ, ಗೌರವಾಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ, ಬಸವಪರ ಸಂಘಟನೆಗಳ ಒಕ್ಕೂಟದ ರವೀಂದ್ರ ಶಾಬಾದಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಶಿವಶರಣಪ್ಪ ದೇಗಾಂವ, ಹಣಮಂತರಾಯ ಕುಸನೂರ, ದಿನೇಶ ದೊಡ್ಡಮನಿ, ಸಿದ್ದರಾಮ ಯಳವಂತಗಿ, ಬಸವರಾಜ ಧೂಳಾಗುಂಡಿ, ಸಿದ್ರಾಮಪ್ಪ ಲದ್ದೆ, ಜಗನ್ನಾಥ ರಾಚಟ್ಟೆ, ಶಾಂತಪ್ಪ ಪಾಟೀಲ, ಅಂಬಾರಾಯ ಪಾಟೀಲ ಬಿರಾದಾರ, ಸತೀಶ ಸಜ್ಜನ್, ನೀಲಕಂಠ ಅವಂಟಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
