ಬೆಂಗಳೂರು
ಶರಣ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆಯ ಆರೋಪಿಗಳಾದ ಅಮೋಲ್ ಎ.ಕಾಳೆ, ಗಣೇಶ್ ಮಿಸ್ಕಿನ್, ಶರದ್ ಕಲಾಸ್ಕರ್ ಅವರಿಗೆ ಜಾಮೀನು ದೊರತಿದೆ.
ಇದರಲ್ಲಿ ಪುಣೆಯ ಚಿಂಚವಾಡಾದ ಅಮೋಲ್ ಎ.ಕಾಳೆ ಹತ್ಯೆ ಪ್ರಕರಣದ ಪ್ರಮುಖ ಎ1 ಆರೋಪಿ, ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್ 2ನೇ ಆರೋಪಿ ಮತ್ತು ಮಹಾರಾಷ್ಟ್ರದ ಸಂಭಾಜಿ ನಗರದ ಶರದ್ ಕಲಾಸ್ಕರ್ 5ನೇ ಆರೋಪಿ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಪೂರ್ಣಿಮಾ ಎನ್.ಪೈ. ಪುರಸ್ಕರಿಸಿದರು.
ʼಪ್ರಕರಣದ ವಿಚಾರಣೆ ಶೀಘ್ರದಲ್ಲೇ ಮುಗಿಯುವ ಸಾಧ್ಯತೆಯೂ ಕಾಣುತ್ತಿಲ್ಲ. ಅರ್ಜಿದಾರರು ಜಾಮೀನು ಪಡೆಯಲು ಸೂಕ್ತ ಕಾರಣಗಳನ್ನು ನೀಡಿದ್ದಾರೆ’ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಈಗಾಗಲೇ ಪ್ರಕರಣದ ಆರೋಪಿಗಳಾದ ಪ್ರವೀಣ್, ವಾಸುದೇವ್ ಸೂರ್ಯವಂಶಿ, ಅಮಿತ್ ಬಡ್ಡಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
2015ರ ಆಗಸ್ಟ್ 30ರಂದು ಧಾರವಾಡದ ಕಲ್ಯಾಣನಗರದಲ್ಲಿ ಕಲಬುರ್ಗಿ ಅವರಿಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಈ ಕುರಿತು ಧಾರವಾಡದ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದಲ್ಲಿಯೂ ಬಂಧನಕ್ಕೊಳಗಾಗಿದ್ದ ಎಲ್ಲಾ ಆರೋಪಿಗಳೆಲ್ಲರಿಗೂ ವಿಚಾರಣೆ ವಿಳಂಬವಾದ ಕಾರಣದಿಂದ ಜಾಮೀನು ದೊರೆತಿದೆ.