ಸಿಂಧನೂರು
ದೇಶದಲ್ಲಿ ಇತಿಹಾಸವನ್ನು ತಿರುಚಿ ಮುಸ್ಲಿಮರ ಬಗ್ಗೆ ಕೋಮು ವಿಷಬೀಜ ಬಿತ್ತಿ, ಸೌಹಾರ್ದತೆ ಹಾಳು ಮಾಡಲಾಗುತ್ತಿದೆ. ಫ್ಯಾಶಿಸ್ಟ್ ಶಕ್ತಿಗಳು ಮುಸ್ಲಿಮರನ್ನು ಭಯೋತ್ಪಾದಕರಂತೆ ಚಿತ್ರಿಸಿ, ಹಿಂದೂ ರಾಷ್ಟ್ರವನ್ನಾಗಿಸುವ ಹುನ್ನಾರ ನಡೆಸಿರುವುದು ಅಪಾಯಕಾರಿಯಾಗಿದೆ ಎಂದು ನವದೆಹಲಿ ವಿಶ್ವವಿದ್ಯಾಲಯದ ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ಶಂಸುಲ್ ಇಸ್ಲಾಂ ಹೇಳಿದರು.
ಜಿಲ್ಲೆಯ ಸಿಂಧನೂರು ನಗರದ ಸತ್ಯಗಾರ್ಡನ್ನಲ್ಲಿ ʼಅಸಮಾನ ಭಾರತ ಸಮಾನತೆಗಾಗಿ ಸಂಘರ್ಷ ಅಂದು -ಇಂದುʼ ಧ್ಯೇಯವಾಕ್ಯದ ಅಡಿಯಲ್ಲಿ ʼಮೇ ಸಾಹಿತ್ಯ ಬಳಗ ಸಿಂಧನೂರುʼ ನೇತೃತ್ವದಲ್ಲಿ ಆಯೋಜಿಸಿದ್ದ 11ನೇ ಮೇ ಸಾಹಿತ್ಯ ಮೇಳದಲ್ಲಿ ಅವರು ಮಾತನಾಡಿದರು.

ಆರೆಸ್ಸೆಸ್ ಮತ್ತು ಸಂಘಪರಿವಾರ ಸಂಘಟನೆಗಳು ದ್ವೇಷ ಬಿತ್ತುವ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಮಾಡುತ್ತಿವೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ಮನುವಾದಿ ಸಂಸ್ಕೃತಿಯನ್ನು ಹೇರಲು ಹೊರಟಿರುವ ಬಲಪಂಥೀಯ ಸಂಘಟನೆಗಳು ಅಸಮಾನತೆಗೆ ಕಾರಣವಾಗಿದೆ ಎಂದರು.
ಭಾರತವನ್ನು ಹನ್ನೊಂದು ನೂರು ವರ್ಷಗಳ ಕಾಲ ಮುಸ್ಲಿಂ ರಾಜರು ಆಳಿದರೂ, ಕೂಡ ದೇಶ ಇಸ್ಲಾಂ ದೇಶವಾಗಿಲ್ಲ. ಯಾವ ಯುದ್ಧಗಳೂ ಹಿಂದೂ-ಮುಸ್ಲಿಂ ವಿಷಯದ ಮೇಲೆ ನಡೆದಿಲ್ಲ, ಯುದ್ಧ ನಡೆಯಲು ಬೇರೆ-ಬೇರೆ ಕಾರಣಗಳಿವೆ. ಹಲವಾರು ಹಿಂದೂ ರಾಜರಿಗೆ ಮುಸ್ಲಿಂ ಸಲಹೆಗಾರರಿದ್ದರು, ಮುಸ್ಲಿಂ ರಾಜರೊಂದಿಗೆ ಹಿಂದೂ ಸಲಹೆಗಾರರು, ಆಡಳಿತಗಾರರು ಇದ್ದರು. ಆದರೆ ಇದನ್ನು ಮುಚ್ಚಿಟ್ಟು ಇತಿಹಾಸವನ್ನು ತಿರುಚಿ ಪ್ರಚಾರಪಡಿಸಲಾಗುತ್ತಿದೆ. ಇದರ ಬಗ್ಗೆ ದೇಶದ ನಾಗರಿಕರು ಜಾಗೃತರಾಗಬೇಕು ಎಂದು ಕಿವಿಮಾತು ಹೇಳಿದರು.
ಮಹಾರಾಷ್ಟ್ರದ ಔರಂಗಾಬಾದ್ನ ಹೋರಾಟಗಾರ್ತಿ ಹಾಗೂ ಅಂಬೇಡ್ಕರ್ ಅವರ ನಿಕಟವರ್ತಿಯಾಗಿದ್ದ ಬಲವಂತರಾವ್ ವರಾಳೆ ಅವರ ಸೊಸೆ ಮಾಲತಿ ವರಾಳೆ ಮಾತನಾಡಿ, ಶಿಕ್ಷಣದ ಖಾಸಗೀಕರಣದಿಂದ ಗುಣಮಟ್ಟದ ಶಿಕ್ಷಣವು ತಳ ಸಮುದಾಯದ ಮಕ್ಕಳಿಗೆ ಕೈಗೆಟುಕದಂತಾಗಿದೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಕುಸಿತದಿಂದ ದಲಿತ-ದಮನಿತ ಸಮುದಾಯಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಜಾತೀಯತೆ, ಲಿಂಗ ಅಸಮಾನತೆ, ಭ್ರೂಣಹತ್ಯೆ ನಡೆಯುತ್ತಿರುವುದು ವಿಷಾದಕರ. ಇದು ಕಡಿಮೆಯಾಗಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದ ನಂತರವೂ ಜಾತಿ ಮತ್ತು ಲಿಂಗಭೇದ ಶತಶತಮಾನಗಳಿಂದ ಮುಂದುವರಿದಿದೆ. ಒಂದು ಸಮಾಜವನ್ನು ಇನ್ನೊಂದು ಸಮಾಜ ತುಳಿಯುತ್ತ ಶೋಷಣೆ ಮಾಡುತ್ತ ಬಂದಿದೆ. ಇದು ನಿಲ್ಲಬೇಕು ಎಂದರು.

ಕಾರ್ಯಕ್ರಮದಲ್ಲಿ ಸಂಗಮ್ಮ ಮೆದಿಕಿನಾಳ, ಚಿನ್ನಮ್ಮ ಮುದ್ದಂಗುಡ್ಡಿ, ತಿಮ್ಮನಗೌಡ ಚಿಲ್ಕರಾಗಿ, ನರಸಿಂಹಪ್ಪ ಸಿಂಧನೂರು, ಹಿರೇನಗನೂರು ಭೀಮಣ್ಣ, ಜಮಾಅತೆ ಇಸ್ಲಾಂ ಹಿಂದ್ನ ಹುಸೇನ್ಸಾಬ್, ಫಾದರ್ ವಿನೋದ್ ಪೌಲ್.ಎಸ್.ಜೆ, ಪಿ.ರುದ್ರಪ್ಪ, ಮೋಕ್ಷಮ್ಮ, ಹೇಮಂತ್ ಎಂ.ಭೂತನಾಳ, ಅನಿಲ್ ಹೊಸಮನಿ ಇದ್ದರು.
ಮೇಳದ ಸಂಚಾಲಕರಾದ ಡಿ.ಎಚ್.ಕಂಬಳಿ ಸ್ವಾಗತಿಸಿದರು. ಸಂಗಮೇಶ ಮೆಣಸಿನಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಎಚ್.ಎಸ್.ಅನುಪಮಾ ಕಾರ್ಯಕ್ರಮ ನಿರ್ವಹಿಸಿದರು.
(ಕೃಪೆ ವಾರ್ತಾ ಭಾರತಿ)