ಶಿವಭಕ್ತಿಯ ಶ್ರೇಷ್ಟ ಶರಣ ಕುರುಬ ಗೊಲ್ಲಾಳ

ಕೂಡಲ ಸಂಗಮ

ಕುರಿಯ ಹಿಕ್ಕೆಯಲ್ಲಿ ಪರಮಾತ್ಮನನ್ನು ಪ್ರತ್ಯಕ್ಷೀಕರಿಸಿಕೊಂಡ ಶ್ರೇಷ್ಟ ಶರಣ ವೀರಗೊಲ್ಲಾಳ ಈತನನ್ನು ಕುರುಬ ಗೊಲ್ಲಾಳ, ಕುರುಬ ಗೊಲ್ಲಾಳೇಶ್ವರ ಎಂದು ಕೂಡ ಕೆಲವರು ಕರೆಯುವರು.

ಐತಿಹಾಸಿಕ ಪುರುಷನಾದ ಈತ ವೀರ ಬೀರೇಶ್ವರ ಅಂಕಿತದಲ್ಲಿ ರಚಿಸಿದ ೧೧ ವಚನಗಳು ದೊರಕಿವೆ. ದೊರೆತ ವಚನಗಳಲ್ಲಿ ಬಸವಣ್ಣ ಹಾಗೂ ಸಮಕಾಲೀನ ಶರಣರನ್ನು ನೆನೆಯದೆ ಇರುವುದರಿಂದ ಬಸವಣ್ಣನ ಸಮಕಾಲೀನನೋ ಅಥವಾ ಬಸವಣ್ಣನಿಗಿಂತಲೂ ಪೂರ್ವದಲ್ಲಿಯೇ ಬದುಕಿದ ಶರಣನೆ ಎಂಬ ಅಂಶ ಇನ್ನೂ ತಿಳಿದುಬಂದಿಲ್ಲ. ತನ್ನ ಒಂದು ವಚನದಲ್ಲಿ ಬಳ್ಳವಲ್ಲಾಡದೆ ಲಿಂಗವಹಳ್ಳಿ ಎಂದು ವ್ಯಾಪಾರಿ ಮಲ್ಲಶೆಟ್ಟಿಯ ಪೂಜಾ ಪ್ರಸಂಗವನ್ನು ನೆನಿಸಿಕೊಂಡಿರುವುದರಿಂದ ಮಲ್ಲಶೆಟ್ಟಿಗಿಂತ ಈಚಿನವನಾಗಿರಬೇಕು ಆದರೆ ಆ ಮಲ್ಲ ಶೆಟ್ಟಿಯ ಕಾಲವೂ ಲಭ್ಯವಾಗಿಲ್ಲ.

ಅನೇಕ ಕಾವ್ಯಗಳಲಿ ಕುರುಬ ಗೊಲ್ಲಾಳನ ಕಥೆ ಉಲ್ಲೇಖಗೊಂಡಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೊಲಗೇರಿ ಸಮೀಪದ ಢವಳಾರ ಗ್ರಾಮದಲ್ಲಿ ಕಾಟಕೂಟ ಎಂಬ ಕುರುಬನಿದ್ದನು, ಈತನ ಇನ್ನೊಂದು ಹೆಸರು ಬಲ್ಲುಗ, ಇವನ ಹೆಂಡಿತಿ ದುಗ್ಗಳೆ ಈಕೆಯನ್ನು ದ್ಯಾವಳವ್ವ ಎಂದು ಕೆಲವರು ಕರೆದಿದ್ದಾರೆ.

ಢವಳಾರ ಗ್ರಾಮ ಮಹಾದೇವ ರಾಜನ ಆಳ್ವಿಕೆ ಒಳಪಟ್ಟಿತ್ತು. ಬಲ್ಲುಗ ದುಗ್ಗಳೆ ದಂಪತಿಗಳಿಗೆ ೬೦, ೫೦ ವಯಸ್ಸಾಗಿದ್ದರು ಮಕ್ಕಳಿಲ್ಲದ ಚಿಂತೆ ಅವರನ್ನು ಕಾಡುತ್ತಿತ್ತು. ಶಿವಕರುಣೆಯಿಂದ ಸಂತಾನ ಪ್ರಾಪ್ತಿಯಾಯಿತು. ಹುಟ್ಟಿದ ಮಗನಿಗೆ ಮನೆದೇವರು, ಕುಲದೇವರಾದ ಬೀರಪ್ಪನ ಹೆಸರಿನಲ್ಲಿ ಬೀರಲಿಂಗ ಎಂದು ಹೆಸರಿಟ್ಟರು.

ಕುಲವೃತ್ತಿಯಾದ ಕುರಿಗಳನ್ನು ಮೇಯಿಸುವ ಕಾಯಕವನ್ನು ಕುರುಬಗೊಲ್ಲಾಳ ಬ್ಯಾಲದಿಂದಲೇ ಮಾಡುತ್ತಿದ್ದ. ಬೆಳಿಗ್ಗೆ ಎದ್ದ ಕೂಡಲೇ ಕುರಿಗಳನ್ನು ಮೇಯಿಸಲು ಕಾಡಿಗೆ ಹೋಗುತ್ತಿದ್ದ, ಕುರಿಗಳನ್ನು ಮೇಯಲು ಬಿಟ್ಟು ಶಿವಚಿಂತೆ, ಶಿವಧ್ಯಾನದಲ್ಲಿ ತಲ್ಲಿನನಾಗುತ್ತಿದ್ದ. ಮುಗ್ದ ಗೊಲ್ಲಾಳನಿಗೆ ಲಿಂಗವನ್ನು ಪೂಜಿಸುವ ಆಸೆಯಾಯಿತು. ಲಿಂಗ ಎಲ್ಲಿ ಸಿಗುತ್ತದೆ ಎಂದು ಜೊತೆಗಾರರಿಗೆ ಕೇಳಿದ ಅವರು ಶ್ರೀಶೈಲದ ಪಾತಾಳ ಗಂಗೆಯಲ್ಲಿ ಸಿಗುತ್ತವೆಯೆಂದು ಹೇಳಿದಾಗ ಅದು ತನಗೆ ಎಟುಕದ ಜಾಗವೆಂದು ಮೌನ ತಾಳಿದ. ಆದರೂ ಲಿಂಗವನ್ನು ಪೂಜಿಸುವ ಬಯಕೆಯನ್ನು ಮಾತ್ರ ಬಿಡಲಿಲ್ಲ.

ಒಂದು ದಿನ ಶಿವಭಕ್ತರು ಆ ಮಾರ್ಗವಾಗಿ ಶ್ರೀಶೈಲಕ್ಕೆ ಪಾದಯಾತ್ರೆ ಹೊಗುತ್ತಿದ್ದರು. ಇದನ್ನು ಕಂಡ ಗೊಲ್ಲಾಳ ಭಕ್ತಿಯ ಆವೇಶದಿಂದ ಆಕರ್ಷಿತನಾಗಿ ಆ ಶರಣರ ಗುಂಪಿನಲ್ಲಿ ಸ್ವಲ ದೂರ ಶ್ರೀಶೈಲ ಮಲ್ಲಿಕಾರ್ಜುನನಿಗೆ ಉಘೇ ಉಘೇ ಎಂದು ಕೂಗುತ್ತಾ ಮುನ್ನಡೆದ. ತನ್ನ ಕಾಯಕ ನೆನಪಾಗಿ ಅಲ್ಲಿಯೇ ನಿಂತ. ಗುಂಪಿನಲ್ಲಿದ್ದ ನಂದಯ್ಯ ಶಿವಭಕ್ತ ಗೊಲ್ಲಾಳನನ್ನು ಮಾತನಾಡಿಸಿದ ನಾನು ಕೂಡ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನ ಪಡೆಯಬೇಕು ಎಂಬ ಆಸೆಯಿದೆ. ಕುರಿ ಮೇಯಿಸುವ ಕಾಯಕ ನನ್ನದಾಗಿದೆ. ನನಗೆ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನ ಮಾಡಿಸಿ ಎಂದು ವಿನಂತಿಸಿಕೊಂಡ. ನಂದಯ್ಯ ಚಿಂತಿಸಬೇಡ, ಶ್ರೀಶೈಲದಿಂದ ಮಲ್ಲಿಕಾರ್ಜುನ ಲಿಂಗವನ್ನು ತಂದು ಕೊಡುವುದಾಗಿ ಭರವಸೆ ಇತ್ತ. ಕೂಡಲೇ ಗೊಲ್ಲಾಳ ತಾನು ಕುರಿ ಮೇಯಿಸುವ ಸ್ಥಳಕ್ಕೆ ಹೋಗಿ ಅಲ್ಲಿ ತಾನು ತಯಾರಿಸಿದ ಹೊಸ ಪಾದರಕ್ಷೆ ಹಾಗೂ ಕುಡಿಕೆಯಲ್ಲಿ ಸಂಗ್ರಹಿಸಿದ ಹಣವನ್ನು ನಂದಯ್ಯನಿಗೆ ಕೊಟ್ಟು ಶ್ರೀಶೈಲದಿಂದ ಬರುವಾಗ ಲಿಂಗವನ್ನು ತಂದುಕೊಡಬೇಕೆಂದು ವಿನಂತಿಸಿಕೊಂಡ. ನಂದಯ್ಯ ಗೊಲ್ಲಾಳನಿಗೆ ಮರಳಿ ಬರುವಾಗ ಲಿಂಗವನ್ನು ತಂದುಕೊಡುತ್ತೆನೆ ಎಂದು ವಚನ ಕೊಟ್ಟು ಶಿವಭಕ್ತರೊಂದಿಗೆ ಶ್ರೀಶೈಲಕ್ಕೆ ನಡೆದ. ಆದರೆ ವಿಷಯವನ್ನು ಮರೆತ ಪುನ: ಗೊಲ್ಲಾಳನನ್ನು ಕಂಡಾಗ ನಂದಯ್ಯನಿಗೆ ಏನು ಹೇಳಬೇಕೋ ತಿಳಿಯದೆ ಅಲ್ಲಿಯೇ ಇದ್ದ ಕುರಿ ಹಿಕ್ಕಿಯನ್ನೇ ಶಿವಲಿಂಗವೆಂದು ಕೊಟ್ಟು ಪೂಜಿಸಲು ಹೇಳಿದ.

ಗೊಲ್ಲಾಳ ಅಂದನ್ನು ನಂಬಿ ಭಕ್ತಿಯಿಂದ ಪೂಜಿಸತೊಡಗಿದ. ಇದನ್ನು ನೋಡಿದ ಅವನ ತಂದೆ ಸಿಟ್ಟಿಗೆದ್ದು ಲಿಂಗವನ್ನು ತುಳಿದು ಹಾಕಿದ. ಕೂಡಲೇ ವ್ಯಗ್ರನಾದ ಗೊಲ್ಲಾಳ ತಂದೆಯ ತಲೆಯನ್ನು ಕೊಚ್ಚಿಹಾಕಿದ. ಅವನ ಉಗ್ರಭಕ್ತಿಗೆ ಮೆಚ್ಚಿದ ಶಿವ ಪ್ರತ್ಯಕ್ಷನಾಗಿ ವರಬೇಡಲು ಹೇಳಿದಾಗ, ತಂದೆಯಿಂದಲೇ ಶಿವದರ್ಶನವಾಯಿತು. ಅವನ ಪ್ರಾಣ ಬರಲಿ ಎಂದ. ಶಿವ ಆಶೀರ್ವದಿಸಿದ. ಅಂದಿನಿಂದ ಗೊಲ್ಲಾಳ ವೀರಗೊಲ್ಲಾಳನಾದ. ಗೋಲಗೇರಿಯಲ್ಲಿ ಗೊಲ್ಲಾಳೇಶ್ವರ ದೇವಾಲಯವಿದ್ದು ಅಲ್ಲಿ ಪ್ರತಿವರ್ಷ ಜಾತ್ರೆ ನಡೆಯುತ್ತದೆ.
ಗೊಲ್ಲಾಳ ವೀರಗೊಲ್ಲಾಳನಾಗಿ ಶಿವಶರಣರನಾದ, ಕಲ್ಯಾಣದಲ್ಲಿ ಬಸವಣ್ಣನವರ ಚಳುವಳಿಯ ವಿಚಾರಗಳಿಂದ ಆಕರ್ಷಿತನಾಗಿ ಕಲ್ಯಾಣಕ್ಕೆ ಬಂದು ಅನುಭವ ಮಂಟಪದ ಗೋಷ್ಠಿಯಲ್ಲಿ ಕೆಲವು ದಿನಗಳ ಕಾಲ ಭಾಗವಹಿಸಿದ ಈ ಅವಧಿಯಲ್ಲಿಯೇ ವೀರ ಬೀರೇಶ್ವರ ಅಂಕಿತದಲ್ಲಿ ವಚನ ರಚನೆ ಮಾಡುತ್ತಾನೆ. ಕೆಲವು ದಿನಗಳ ನಂತರ ಕಲ್ಯಾಣದಿಂದ ಗೊಲಗೇರಿಗೆ ಬಂದು ನೆಲೆಸುತ್ತಾನೆ. ಗೊಲಗೇರಿಯಲ್ಲಿ ಶಿವಚಿಂತನೆಯೊಂದಿಗೆ ಜನರಲ್ಲಿ ವೈಚಾರಿಕತೆಯನ್ನು ಬೋಧಿಸುತ್ತಾ ಅಲ್ಲಿಯೇ ಲಿಂಗೈಕ್ಯನಾಗುತ್ತಾನೆ.

ಗೊಲಗೇರಿಯಲ್ಲಿ ಗೊಲ್ಲಾಳನ ಸಮಾಧಿ ಹಾಗೂ ದೇವಾಲಯ ಇಂದಿಗೂ ಇದೆ.
ವಚನಗಳಲ್ಲಿ ಕುರಿ, ಆಡು, ಹೋತಗಳ ಉಲ್ಲೇಖವಿರುವುದರಿಂದ ಈತ ಕುರಿಕಾಯುವ ವೃತ್ತಿಯವನೆಂಬುದು ಸ್ಪಷ್ಟವಾಗುತ್ತದೆ. ಚಿಂತನಪರವಾದ ಈತನ ವಚನಗಳು ಗಂಭೀರ ವಿಚಾರಗಳಿಂದ , ಬೇಡಗಿನಿಂದ ಕೂಡಿವೆ.

ಆಡು ಆರುದಿಂಗಳು ಹುಟ್ಟಿ, ಮೂರುದಿನ ಬದುಕಿ
ಒಂದುದಿನ ಸತ್ತಿತ್ತು
ಕುರಿ ಕುರುಹ ಮೇದು, ಮರಿಗೆ ಮೊಲೆಗೊಟ್ಟಿತ್ತು
ಮರಿಯು ಮೊಲೆಯ ನುಂಗಿ
ಕುರುಹಿನೊಳಗಡಗಿತ್ತು
ಆಡು ಕುರಿ ಬಂದ ಬಟ್ಟೆಯ ಸೋಧಿಸಿಕೊಂಡು
ತೋಳಬ ತೊಡಕಿನಲ್ಲಿ ಸಾಯದೆ
ಅರಿ ವೀರಬೀರೇಶ್ವರಲಿಂಗವಾ.
-ವೀರ ಗೊಲ್ಲಾಳೇಶ್ವರ

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KW7PgYimGT7HL73bAEKzSR

Share This Article
Leave a comment

Leave a Reply

Your email address will not be published. Required fields are marked *