ಕುಷ್ಟಗಿ
ಬಸವಣ್ಣನ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಸವ ಸಮಿತಿ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವಣ್ಣನವರ ಅನುಯಾಯಿಗಳು ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ತಹಸೀಲ್ದಾರ ಮೂಲಕ ವಿಧಾನಸಭೆಯ ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಬಸವ ಸಮಿತಿಯ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್ಲ ಮಾತನಾಡಿ, ಸಾಂಸ್ಕೃತಿಕ ನಾಯಕ ಬಸವಣ್ಣನ ಕುರಿತು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯವಾಗಿದ್ದು, ಕೂಡಲೇ ಕ್ಷಮೆ ಕೇಳಬೇಕು ಎಂದು ಹೇಳಿದರು.
ಬಸವಣ್ಣನವರ ಹಾಗೆ ನೀವು ಹೊಳ್ಯಾಗ ಜಿಗೀರಿ ಎಂದು ಅತ್ಯಂತ ಅವಹೇಳನಾಕಾರಿ ಹೇಳಿಕೆ ನೀಡುವ ಮೂಲಕ ಬಸವಣ್ಣನವರಿಗೆ ಅಪಚಾರ ಮಾಡಿದ್ದಾರೆ. ಇದು ಬಸವ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ. ಕೂಡಲೇ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಟಿ. ಬಸವರಾಜ ಮಾತನಾಡಿ, ಮಾನವತಾವಾದಿ, ಸಾಂಸ್ಕೃತಿಕ ನಾಯಕ ಬಸವಣ್ಣನವರ ಇತಿಹಾಸವನ್ನು ಅರಿಯದ ಶಾಸಕ ಯತ್ನಾಳ ಇಂತಹ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಅದನ್ನು ಸಮರ್ಥಿಸಿಕೊಂಡಿರುವ ಅವರ ಅನುಚಿತ ವರ್ತನೆ ಅಕ್ಷಮ್ಯ ಅಪರಾಧವಾಗಿದೆ ಎಂದರು.
ಕಾನೂನು ಸುವ್ಯವಸ್ಥೆ ಹಾಳು ಮಾಡುವ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ, ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟು ಮಾಡುವ ಇಂತಹ ಶಾಸಕರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಹಾದೇವಪ್ಪ ಮಹಾಲಿಂಗಪೂರ, ಕಳಕನಗೌಡ ರೆಡ್ಡೆರ, ಶರಣಪ್ಪ ಜೀಗೇರಿ, ಮಹಾದೇವಪ್ಪ ಸೇರಿದಂತೆ ಬಸವ ಸಮಿತಿಯ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಮುಖರು ಹಾಗೂ ಅನೇಕ ಬಸವಭಕ್ತರು, ಬಸವಾನುಯಾಯಿಗಳು ಉಪಸ್ಥಿತರಿದ್ದರು.
ಯತ್ನಾಳ್ ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಬೇರೆಯವರಿಗೆ ಒತ್ತಾಯಿಸುವುದು ಒಂದುಕಡೆಯಾದರೆ ಲೀ ಗಾಯತಾರೆ ಎಲ್ಲಾ ಒಟ್ಟಿಗೆ ಸೇರಿ ಅವರನ್ನು ರಾಜಕೀಯವಾಗಿ ಬಹಿಷ್ಕರಿಸಲು ಕರೆ ಕೊಡಬೇಕು. ರಾಜ್ಯದಾದ್ಯಂತ ಅಂತಹ ಚಳುವಳಿ ರೂಪಿಸಬೇಕು.