ಬಸವ ಯುಗಕ್ಕೆ ನಾಂದಿ ಹಾಡಿದ ಚೇತನಶಕ್ತಿ

ಬಸವ ಭಕ್ತರಿಗೆ ದಾರಿದೀಪವಾದ ಪೂಜ್ಯ ಲಿಂಗಾನಂದ ಸ್ವಾಮೀಜಿ ೧೯೯೫ ಜೂನ್ ೩೦ರಂದು ಲಿಂಗೈಕ್ಯರಾದರು.

ಕೂಡಲ ಸಂಗಮ

ಮೂಢನಂಬಿಕೆ, ಕಂದಾಚಾರಗಳಿಂದ ಜಿಡ್ಡುಗಟ್ಟಿದ ಸಮಾಜವನ್ನು ಪ್ರವಚನದ ಮೂಲಕ ಪರಿಶುದ್ಧಗೊಳಿಸಿ, ಬಸವ ಯುಗಕ್ಕೆ ನಾಂದಿ ಹಾಡಿದ ಚೇತನಶಕ್ತಿ ಲಿಂಗಾನಂದ ಸ್ವಾಮೀಜಿ. ಧರ್ಮದ ಕಡೆಗೆ ಜನರು ಬರದೇ ಇದ್ದಾಗ ಧರ್ಮವನ್ನೇ ಅವರ ಕಡೆಗೆ ಒಯ್ಯಬೇಕೆಂದು ಘೋಷಿಸಿ ನುಡಿದಂತೆ ನಡೆದು ಲಿಂಗಾಯತ ಧರ್ಮಕ್ಕೆ ಸ್ಪೂರ್ತಿ, ನವಚೇತನ ತುಂಬಿದ ಧೀಮಂತ.

ಭಕ್ತರಿಗೆ ಧರ್ಮದ ಕುರಿತು ಶ್ರದ್ಧೆ, ಆಸಕ್ತಿ, ಅಭೀಪ್ಸೆ ಹುಟ್ಟಿಸಿ ಕರ್ನಾಟಕ ರಾಜ್ಯ ಮಾತ್ರವಲ್ಲದೆ ನೆರೆಯ ರಾಜ್ಯಗಳಲ್ಲಿ ಪ್ರವಚನದ ಮೂಲಕ ತಾತ್ವಿಕ, ನೈತಿಕ, ಆಧ್ಯಾತ್ಮಿಕ, ಬೌದ್ಧಿಕ ಪರಿವರ್ತನೆ ತಂದು ಅಸಂಖ್ಯಾತ ಚೇತನಗಳಿಗೆ ಅರಿವಿನ ಬೆಳಕು ಕೊಟ್ಟು ಜ್ಞಾನ ದೇಗುಲವಾದ ಲಿಂಗಾನಂದ ಸ್ವಾಮೀಜಿ ನಾಡಿನಾದ್ಯಂತ ‘ಪ್ರವಚನ ಪಿತಾಮಹ’ ಎಂದೇ ಖ್ಯಾತರು.

ಧರ್ಮವನ್ನು ತಮ್ಮ ಸ್ತ್ರೋತ್ರವನ್ನಾಗಿ ಮಾಡಿಕೊಂಡ, ಮುಗ್ಧ ಭಾವುಕ ಭಕ್ತರ ಮೂಢನಂಬಿಕೆ, ಮೂಢಾಚಾರಗಳನ್ನು ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡ ಸಂಪ್ರದಾಯವಾದಿಗಳ, ಪಟ್ಟಭದ್ರ ಹಿತಾಸಕ್ತಿಗಳ ಪಾಲಿಗೆ ಚಂಡಮಾರುತವಾಗಿ ಪರಿಣಮಿಸಿದರು. ಪ್ರವಚನಕ್ಕೆ ಹೊಸ ಆಯಾಮ ಕೊಟ್ಟ ಲಿಂಗಾನಂದ ಸ್ವಾಮೀಜಿ ಸಂಪ್ರದಾಯಕ್ಕಿಂತ ಸತ್ಯ ಶ್ರೇಷ್ಠ ಎಂದು ನಂಬಿದ್ದರು. ಅವರ ದೃಷ್ಠಿಯಲ್ಲಿ ಜಂಗಮನೆಂದರೆ ಧರ್ಮ ಪ್ರಚಾರಕ, ತನ್ನನ್ನು ತಾನು ಅರಿತವನು, ಜ್ಞಾನ ದೇಗುಲ, ಜಂಗಮನ ಜೀವನ ತೆರೆದಿಟ್ಟ ಪುಸ್ತಕ ವಾಗಿರಬೇಕು ಎನ್ನುತ್ತಿದ್ದರು.

ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಮನಗೂಳಿ ಗ್ರಾಮದ ಲಿಂಗಾಯತ ದಂಪತಿಗಳಾದ ಮಲ್ಲಪ್ಪ ಕಪ್ಪರದ-ಕಲ್ಲಮ್ಮ ಕಪ್ಪರದ ಅವರ ಮಗನಾಗಿ ಸೆಪ್ಟೆಂಬರ್ ೧೫, ೧೯೩೧ ರಂದು ಹುಟ್ಟಿದ ಲಿಂಗಾನಂದ ಸ್ವಾಮೀಜಿಯವರ ಜನ್ಮನಾಮ ‘ಸಂಗಮೇಶ’. ಹುಟ್ಟಿದಾಗ ತಕ್ಕಮಟ್ಟಿಗೆ ಸಿರಿವಂತಿಕೆ ಇದ್ದರೂ ಕಾಲಾನಂತರ ಬಂದೆರಗಿದ ಬಡತನದ ವಿರುದ್ಧ ಸೆಣಸುತ್ತ ತಮ್ಮ ಸ್ವಂತ ಪ್ರತಿಭೆ ಮತ್ತು ಪ್ರಯತ್ನದಿಂದ ಸಮಾಜದ ಮುಖ್ಯವಾಹಿನಿಗೆ ಬಂದವರು.

ವಿಜಯಪುರ ಸಿದ್ದೇಶ್ವರ ಹೈಸ್ಕೂಲನಲ್ಲಿ ಪ್ರೌಢ ಶಾಲಾ ಶಿಕ್ಷಣ ಮುಗಿಸುವ ಹೊತ್ತಿಗೆ, ಜಿಲ್ಲೆಯಲ್ಲಿರುವ ಮೂಢನಂಬಿಕೆಗಳು, ತಂದೆಯ ಬಡತನ ಸಂಗಮೇಶನ ಮೇಲೆ ಪ್ರಭಾವ ಬೀರಿ ಕಮುನಿಸಮ್‌ನತ್ತ ಆತನನ್ನು ತಳ್ಳಿದ್ದವು. ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳುವಳಿಯ ಕೆಲಸ ಮಾಡುತ್ತ, ಸರ್ಕಾರದ ಕೆಂಗಣ್ಣಿನ ನೋಟಕ್ಕೆ ಗುರಿಯಾಗಿ ಭೂಗತರಾಗಿದ್ದ ಕಾಮ್ರೇಡ್‌ಗಳಿಗೆ ಸಂಗಮೇಶ ಸಹಕಾರಿಯಾಗಿದ್ದ. ಬಡತನ ಒಡ್ಡಿದ ಸವಾಲನ್ನು ಸ್ವೀಕರಿಸಿ ವಾರಾನ್ನವನ್ನುಂಡು, ಧನ ಭಿಕ್ಷೆಯನ್ನು ಪಡೆದು, ಮನೆಪಾಠ ಹೇಳುವ ಕಾಯಕ ಮಾಡಿ, ಒಂದೊಂದು ದಿನ ಅರೆಹೊಟ್ಟೆ ಉಂಡು, ಉಪವಾಸ ಮಾಡಿ, ಪ್ರತಿಭೆ, ಪರಿಶ್ರಮದಿಂದ ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಅಭ್ಯಾಸಮಾಡಿ ಬಿ.ಎ. ಆನರ್ಸ್ ಪದವಿಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಸಂಗಮೇಶ ಅಭ್ಯಾಸದೊಂದಿಗೆ ಕ್ರೀಡೆ, ಈಜುಗಾರಿಕೆ, ಎನ್.ಸಿ.ಸಿ, ರೈಫಲ್ ತರಬೇತಿಯಲ್ಲಿಯೂ ಮುಂದೆ ಇದ್ದರು.

ಬೆಳಗಾವಿಯ ಲಿಂಗರಾಜ ಕಾಲೇಜನಲ್ಲಿ ಬಿ.ಎ. ಆರ್ಟ್ಸ್ ಅಧ್ಯಯನ ಮಾಡುವಾಗ ಕಾರ್ಲ್ಮಾರ್ಕ್ಸನ ಸಾಮ್ಯವಾದವೇ ಸಂಗಮೇಶನ ಮನದಲ್ಲಿ ಅಚೊತ್ತುತ್ತಿತ್ತು. ಒಂದು ದಿನ ಲಿಂಗರಾಜ ಕಾಲೇಜನಲ್ಲಿ ತತ್ವಶಾಸ್ತ್ರವನ್ನು ಭೋಧಿಸುತ್ತಿದ್ದ ಡಾ. ರಾಜಗೋಪಾಲ ಅವರು ಸಂಗಮೇಶನ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿ, ನಾಸ್ತಿಕವಾದದಿಂದ ಆಸ್ತಿಕ ತತ್ವಜ್ಞಾನಕ್ಕೆ ಆಕರ್ಷಿಸಿಯೇ ಬಿಟ್ಟರು.

ಸಮತಾವಾದದ ಆರಾಧಕನಾಗಿದ್ದ ಸಂಗಮೇಶನನ್ನು ಆಧ್ಯಾತ್ಮದ ಅಡಿಪಾಯದ ಮೇಲೆಯೇ ಸಮತಾವಾದವನ್ನು ಪ್ರತಿಪಾದಿಸಿದ ಬಸವಣ್ಣನ ವಿಚಾರಧಾರೆಗಳಿಗೆ ಪ್ರಭಾವಿತನಾಗಿ ೧೯೫೫ ಏಪ್ರಿಲ್ ೨೫ರ ಬಸವ ಜಯಂತಿಯ ದಿನ ಆಧ್ಯಾತ್ಮಿಕ ಮಾನಸಾಂತರ ಹೊಂದಿದರು. ಬಿ.ಎ ಆರ್ಟ್ಸ್ ಫಲಿತಾಂಶದ ನಂತರ ವಿಜಯಪುರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಸೇರಿದ ಸಂಗಮೇಶ ಹೆಚ್ಚಿನ ಅಧ್ಯಯನ ಮಾಡಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಶಿಕ್ಷಕ ವೃತ್ತಿ ತೊರೆದು ಎಂ.ಎ ತತ್ವಜ್ಞಾನ ಅಧ್ಯಯನ ಮಾಡಲು ಕರ್ನಾಟಕ ವಿಶ್ವವಿದ್ಯಾಲಯ ಪ್ರವೇಶಿಸಿದನರು.

ಶಿಕ್ಷಕ ವೃತ್ತಿಯಲ್ಲಿ ಇದ್ದಾಗ ವೇದಾಂತ ಕೇಸರಿ ಎಂದು ಖ್ಯಾತರಾದ ಮಲ್ಲಿಕಾರ್ಜುನ ಸ್ವಾಮೀಜಿಯವರ ಪ್ರವಚನಕ್ಕೆ ಪ್ರಭಾವಿತನಾಗಿ ಅವರಿಂದಲೇ ಲಿಂಗದೀಕ್ಷೆಯನ್ನು ಪಡೆದುಕೊಂಡಿದ್ದರು. ಧಾರವಾಡದಲ್ಲಿ ಅಧ್ಯಯನ ಮಾಡುವಾಗ ನವಕಲ್ಯಾಣ ಮಠದ ಕುಮಾರ ಸ್ವಾಮಿಗಳ ಉಪನ್ಯಾಸಗಳು ಸಂಗಮೇಶನ ಮೇಲೆ ಅಧಿಕ ಪ್ರಭಾವ ಬೀರಿದವು. ಅದೇ ಸಮಯದಲ್ಲಿ ಆರ್ಥಿಕ ಸಂಕಷ್ಟ ಮೇರೆ ಮೀರಿ ಅಭ್ಯಾಸ ಮುಂದುವರಿಸಲು ಆಗಲಿಲ್ಲ.

೧೯೫೬ ನವೆಂಬರ್ ೧೯ ರಂದು ಸಂಗಮೇಶ ಬೆಳಗ್ಗೆ ಧಾರವಾಡ ಹೊರವಲಯದ ಗುಡ್ಡಕ್ಕೆ ಹೋಗಿ ಕಾವೀವಸ್ತ್ರಗಳನ್ನು ಸ್ವಯಂ ಪ್ರೇರಣೆಯಿಂದ ಧರಿಸಿ ಜ್ಞಾನ ಸನ್ಯಾಸ ಸ್ವೀಕರಿಸಿ, ಬಸವಣ್ಣನವರೇ ದೀಕ್ಷಾಗುರುವೆಂದು ಭಾವಿಸಿ ಪ್ರತಿಜ್ಞೆ ಕೈಗೊಂಡು ಸ್ವಾಮಿ ಲಿಂಗಾನಂದರಾದರು. ಕಾವೀ ವಸ್ತ್ರ ಧರಿಸಿ ಬಂದಾಗ ಸಹಪಾಠಿಗಳಿಗೆ ಆಶ್ಚರ್ಯ- ಆಘಾತ. ತಮ್ಮ ಬಳಿ ಇದ್ದ ಬಟ್ಟೆ, ವಸ್ತುಗಳನ್ನು ಮಿತ್ರರಿಗೆ ಕೊಟ್ಟು ಸೊಗಲ ಸೋಮೇಶ್ವರ, ಮಾಣಿಕ್ಯಗಿರಿ ಮುಂತಾದ ಕಡೆಗಳಲ್ಲಿ ಸಂಚರಿಸಿ ಯೋಗಾಭ್ಯಾಸ, ನಿರಂತರ ಧ್ಯಾನ ಮಾಡಿದರು. ಆಳವಾಗಿ ವಚನ ಸಾಹಿತ್ಯ, ಶಾಸ್ತ್ರಾಧ್ಯಯನ ಮಾಡಿದರು. ೧೯೬೧ ಆಗಷ್ಟ್ ೭ ರಂದು ಸುತ್ತೂರು ಜಗದ್ಗುರುಗಳಿಂದ ಕ್ರಿಯಾ ಸನ್ಯಾಸ ಪಡೆದು, ನಾಡಿನಾದ್ಯಂತ ಸಂಚರಿಸಿ ಪ್ರವಚನದ ಮೂಲಕ ಬಸವತತ್ವ ಪ್ರಚಾರ ಮಾಡಿ ಬಸವ ಯುಗದ ಪುನರುತ್ಥಾನಕ್ಕೆ ನಾಂದಿ ಹಾಡಿದರು.

ಪ್ರಥಮ ಮಹಿಳಾ ಜಗದ್ಗುರು ಪೀಠ ಸ್ಥಾಪನೆ:

ಮಹಿಳೆಯು ಜಗದ್ಗುರುವಾಗಬೇಕು ಎಂಬ ಸದುದ್ದೇಶದಿಂದ ಲಿಂಗಾನಂದ ಸ್ವಾಮೀಜಿ ಎಪ್ರಿಲ್ ೨೧, ೧೯೭೦ರಲ್ಲಿ ಧಾರವಾಡ ಅಕ್ಕಮಹಾದೇವಿ ಆಶ್ರಮದಲ್ಲಿ ಅಕ್ಕಮಹಾದೇವಿ ಅನುಭಾವ ಪೀಠ ಸ್ಥಾಪಿಸಿ, ಪೀಠಕ್ಕೆ ಜಗದ್ಗುರು ಮಾತೆ ಮಹಾದೇವಿಯನ್ನು ಪ್ರಥಮ ಪೀಠಾಧಿಪತಿಯನ್ನಾಗಿ ಮಾಡಿದರು. ಇದು ಜಗತ್ತಿನಲ್ಲಿಯೇ ಆರಂಭವಾದ ಪ್ರಥಮ ಮಹಿಳಾ ಜಗದ್ಗುರು ಪೀಠ.

ಧಾರ್ಮಿಕ ಸಂಸ್ಥೆಗಳ ಸ್ಥಾಪಕ:

ಧರ್ಮ ಪ್ರಸಾರ, ಸಾಮಾಜಿಕ ಕಾರ್ಯಕ್ಕಾಗಿ ಲಿಂಗಾನಂದ ಸ್ವಾಮೀಜಿ ಧಾರವಾಡದಲ್ಲಿ ಅಕ್ಕಮಹಾದೇವಿ ಆಶ್ರಮ, ಬೆಂಗಳೂರಿನ ರಾಜಾಜಿನಗರದಲ್ಲಿ ಬಸವ ಮಂಟಪ, ಕುಂಬಳಗೋಡದಲ್ಲಿ ಬಸವ ಗಂಗೋತ್ರಿ, ಕೂಡಲಸಂಗಮದಲ್ಲಿ ಬಸವ ಧರ್ಮ ಪೀಠ ಎಂಬ ಸಂಸ್ಥೆಗಳನ್ನು ಆರಂಭಿಸಿದರು.

ಬಸವ ಧರ್ಮದ ಮಹಾಜಗದ್ಗುರು ಪೀಠದ ಪ್ರಥಮ ಪೀಠಾಧಿಪತಿ : ಬಸವಾದಿ ಶರಣರ ತತ್ವಗಳು ಜಗತ್ತಿಗೆ ಭಿತ್ತರಿಸಬೇಕು, ಶರಣರ ಕ್ಷೇತ್ರಗಳು ಜಗತ್ತಿಗೆ ಪರಿಚಯಿಸುವ ಕಾರ್ಯ ನಡೆಯಬೇಕು. ಬಸವಣ್ಣನನವರ ತತ್ವ ಪ್ರಸಾರಕ್ಕಾಗಿಯೇ ಪ್ರತ್ಯೇಕ ಪೀಠ ಸ್ಥಾಪಿಸಬೇಕು ಎಂದು ಮಾತೆ ಮಾಹಾದೇವಿ ಧ್ವನಿ ಎತ್ತಿದ್ದರು. ಅದರ ಪರಿಣಾಮ ೧೯೯೨ ಜನವರಿ ೧೩ ರಂದು ಕೂಡಲಸಂಗಮದಲ್ಲಿ ಬಸವ ಧರ್ಮದ ಮಹಾಜಗದ್ಗುರು ಪೀಠ ಸ್ಥಾಪಿಸಿ ಅದರ ಪ್ರಥಮ ಪೀಠಾಧಿಪತಿಯಾಗಿ ಲಿಂಗಾನಂದ ಸ್ವಾಮೀಜಿ ಪೀಠಾರೋಹಣಗೈದರು.

ಶರಣ ಮೇಳ:

ಲಿಂಗಾಯತರ ಧರ್ಮ ಕ್ಷೇತ್ರ ಕೂಡಲಸಂಗಮ ಎಂದು ಘೋಷಿಸಿ, ಬಸವ ತತ್ವಾನುಯಾಯಿಗಳು ಬಸವ ಕ್ರಾಂತಿಯ ದಿನ ತಪ್ಪದೆ ಧರ್ಮ ಕ್ಷೇತ್ರ ಕೂಡಲಸಂಗಮಕ್ಕೆ ಬರುವ ಸಂಕಲ್ಪದೊಂದಿಗೆ ೧೯೮೮ರಲ್ಲಿ ಆರಂಭವಾದ ಶರಣ ಮೇಳಕ್ಕೆ ೩೪ ವರ್ಷ ಸಂದಿವೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಅಧಿಕಗೊಳ್ಳುತ್ತಿದೆ. ಲಿಂಗಾಯತರನ್ನು ಸಂಘಟಿಸುವಲ್ಲಿ, ಬಸವಣ್ಣನ ವಿಚಾರಗಳು, ಕೂಡಲಸಂಗಮ ಜಗತ್ತಿಗೆ ತಿಳಿಯುವಲ್ಲಿ ಶರಣ ಮೇಳ ಪ್ರಮುಖ ಪಾತ್ರವಹಿಸಿತು.

ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ:

ಪ್ರವಚನದ ಮೂಲಕ ಬಸವ ತತ್ವದ ಅಲೆ ಆರಂಭಿಸಿದ ಲಿಂಗಾನಂದ ಸ್ವಾಮೀಜಿ ಆಡಿದ ಮಾತು ಗಾಳಿಯಲ್ಲಿ ಹಾರಿ ಹೋಗುತ್ತೆ ಬರೆದ ಮಾತು ಸಾಹಿತ್ಯವಾಗಿ ಉಳಿಯುತ್ತದೆ ಎಂಬಂತೆ ವಚನ ಸಾಹಿತ್ಯ ಪ್ರಸಾರಕ್ಕಾಗಿ ಸುಯಿದಾನ ಸುಗ್ರಂಥ ಮಾಲೆ ಎಂಬ ಪ್ರಕಾಶನ ಆರಂಭಿಸಿದರು. ೧೯೬೦ರಲ್ಲಿ ಧಾರವಾಡದಿಂದ ಆರಂಭವಾದ ಪ್ರಕಾಶನಕ್ಕೆ ಅನೇಕ ಮಠಾಧೀಶರು, ಸಾಹಿತಿಗಳು ವಚನ ಸಾಹಿತ್ಯದ ಮೌಲ್ಯಯುತ ೨೫೦ಕ್ಕೂ ಅಧಿಕ ಕೃತಿಗಳನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ.

ಲಿಂಗಾನಂದ ಸ್ವಾಮೀಜಿ ೧೯೬೦ರಲ್ಲಿ ದೇವರು, ಲಿಂಗತತ್ವ ದರ್ಪಣ, ಲಿಂಗಪೂಜಾ ವಿಧಾನ, ೧೯೬೧ರಲ್ಲಿ ಚುಳುಕಾದ ಚೇತನ, ಹಿಂದೆ ಭಾಷೆಯಲ್ಲಿ ಲಿಂಗತತ್ವ ದರ್ಪಣ, ೧೯೬೨ರಲ್ಲಿ ಅಕ್ಕನ ಪ್ರವಚನ, ೧೯೬೫ರಲ್ಲಿ ಜಂಗಮ ದರ್ಶನ, ೧೯೬೯ರಲ್ಲಿ ಚಿನ್ಮೂಲಾದ್ರಿಯ ಚಿತ್ಕಳೆ, ಸಾಮೂಹಿಕ ಪ್ರಾರ್ಥನೆ, ಮಠಾಠಿ ಭಾಷೆಯಲ್ಲಿ ಲಿಂಗತತ್ವ ದರ್ಶನ, ೧೯೭೨ರಲ್ಲಿ ವಚನಾಮೃತ, ೧೯೮೦ರಲ್ಲಿ ವಚನ ನವನೀತ, ೧೯೮೬ರಲ್ಲಿ ವಚನ ರಶ್ಮಿ ಮತ್ತಿತರ ಮಹತ್ವದ ಕೃತಿಗಳನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ. ಹಲವು ಕೃತಿಗಳು ೬ ರಿಂದ ೧೦ ಬಾರಿ ಮರು ಮುದ್ರಣಗೊಂಡಿದ್ದು ಅವರ ಸಾಹಿತ್ಯಕ್ಕೆ ಹಿಡಿದ ಕೈಗನ್ನಡಿ.

ಗುರುಗಳ ಕುರಿತು ಶಿಷ್ಯರು ಗ್ರಂಥ ಬರೆಯುವುದು ಸಾಮಾನ್ಯ, ಆದರೆ ಗುರುಗಳೇ ಶಿಷ್ಯರ ಕುರಿತು ಗ್ರಂಥ ಬರೆದಿರುವುದು ಅಪರೂಪ. ಲಿಂಗಾನಂದ ಸ್ವಾಮೀಜಿ ಶಿಷ್ಯೆಯಾದ ಮಾತೆ ಮಹಾದೇವಿಯವರ ಕುರಿತು ೧೯೬೯ರಲ್ಲಿಯೇ ಚಿನ್ಮೂಲಾದ್ರಿಯ ಚಿತ್ಕಳೆ ಎಂಬ ಗ್ರಂಥ ಬರೆಯುವ ಮೂಲಕ ಹೊಸ ಚರಿತ್ರೆಗೆ ನಾಂದಿ ಹಾಡಿದರು.

ಧ್ವನಿ ಸುರುಳಿ, ದೃಶ್ಯ-ಶ್ರಾವ್ಯ ಸುರುಳಿಗಳು :

ಲಿಂಗಾನಂದ ಸ್ವಾಮೀಜಿಯವರ ಕ್ರಾಂತಿಕಾರಿ ಪ್ರವಚನ, ವಿಚಾರಗಳನ್ನು ಮುಂದಿನ ಯುವ ಜನಾಂಗಕ್ಕೆ ತಲುಪಿಸಬೇಕು ಎಂಬ ಉದ್ದೇಶದಿಂದ ಧ್ವನಿ ಸುರುಳಿ, ದೃಶ್ಯ-ಶ್ರಾವ್ಯ ಸುರುಳಿಗಳನ್ನು ವಿಶ್ವಕಲ್ಯಾಣ ಮಿಷನ್ ಸಂಸ್ಥೆಯ ಮೂಲಕ ತಯಾರಿಸಿದರು.

ದೇವರು-ಕಲ್ಪನೆಯೋ ಸತ್ಯವೋ?, ದೇವರ ಸ್ವರೂಪ ಭಾಗ-೧ ಮತ್ತು ೨, ಇಷ್ಟಲಿಂಗದ ಅವಶ್ಯಕತೆ, ಚುಳುಕಾದ ಚೇತನ, ಶಕ್ತಿ ವಿಶಿಷ್ಟಾದ್ವೈತ, ಅನುಭವ ಮಂಟಪ ಭಾಗ ೧ ಮತ್ತು ೨, ಗುರುತತ್ವ-ದೀಕ್ಷಾ ಸಂಸ್ಕಾರ, ಗುರುವಿನ ಲಕ್ಷಣಗಳು, ಹಿಂದು ಯಾರು ?, ಹಿಂದುತ್ವದ ಪರಿಕಲ್ಪನೆ, ಜೀವನದ ನಶ್ವರತೆ, ಪುನರ್ಜನ್ಮ ಸಿದ್ಧಾಂತ ಭಾಗ-೧ ಮತ್ತು ೨, ಮಾನವ ಜೀವನದ ಗುರಿ, ಮದುವೆ ಅದರ ಉದ್ದೇಶ, ಗುರುದರ್ಶನ ಮುಂತಾದವುಗಳನ್ನು ಇಂದು ಭಕ್ತರು ಶ್ರದ್ದೆಯಿಂದ ಆಲಿಸುವರು.

ಲಿಂಗಾನಂದ ಸ್ವಾಮೀಜಿಯವರ ಬದುಕು ಲೋಕದ ಜನರ ಬದುಕಿನಂತಲ್ಲ, ಅವರ ನಡೆ-ನುಡಿ ಭಿನ್ನ ರೀತಿಯದು. ಅವರು ನುಡಿದುದೇ ವಚನ, ಅವರ ನಡೆಯೇ ಮಾರ್ಗದರ್ಶನ ಅವರು ಬದುಕು ಇಂದಿನವರಿಗೆ, ಮುಂದಿನವರಿಗೆ ದಾರಿದೀಪ. ಭಕ್ತರಿಗೆ ಬಸವ ಎಂಬ ಮೂರಕ್ಷರ ಕಲಿಸಿ, ಲಿಂಗಾಯತ ಧರ್ಮ, ಶರಣ ಸಾಹಿತ್ಯವನ್ನು ಗಟ್ಟಿಗೊಳಿಸಿದವರು. ಶರಣ ಮೇಳ, ಗಣಮೇಳ, ರಾಷ್ಟ್ರೀಯ ಬಸವ ದಳ, ಬಸವತತ್ವ ಪರಿಷತ್ತು, ಅಖಿಲ ಭಾರತ ಲಿಂಗಾಯತ ಧರ್ಮ ಮಹಾಸಭಾ ಆರಂಭಿಸಿ ಬಸವತ್ವಾನುನುಯಾಯಿಗಳನ್ನು ಸಂಘಟಿಸಿದ ಶ್ರೀಗಳು ೧೯೯೫ ಜೂನ್ ೩೦ರಂದು ಹಿರಿಯೂರಿನಲ್ಲಿ ಲಿಂಗೈಕ್ಯರಾದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FgE69G06eauFQg8Bv3ecgq

Share This Article
Leave a comment

Leave a Reply

Your email address will not be published. Required fields are marked *