ಲಿಂಗಾಯತ ಚಳುವಳಿ: ಸಂಘಟನೆ ಬೆಳೆಯುತ್ತಿದೆ, ಸೈದ್ಧಾಂತಿಕ ಸ್ಪಷ್ಟತೆ ಮೂಡುತ್ತಿದೆ

ಚಳುವಳಿಗೆ ಮುನ್ನ ಬಸವ ವಿರೋಧಿಗಳನ್ನು ಲಿಂಗಾಯತರು ನೇರವಾಗಿ ಪ್ರತಿಭಟಿಸುತ್ತಿರಲಿಲ್ಲ.

ಬೆಂಗಳೂರು

2017-18ರಲ್ಲಿ ಒಂಬತ್ತು ತಿಂಗಳುಗಳ ಕಾಲ ನಡೆದ ಲಿಂಗಾಯತ ಧರ್ಮದ ಚಳುವಳಿ ರಾಜ್ಯದಲ್ಲಿ ದೊಡ್ಡ ಸಂಚಲನ ಮೂಡಿಸಿ, ರಾಷ್ಟ್ರೀಯ, ಅಂತರಾಷ್ಟೀಯ ಮಾಧ್ಯಮಗಳ ಗಮನ ಸೆಳೆದವು.

ಆದರೆ ಇತ್ತೀಚೆಗೆ ರಂಭಾಪುರಿ ಶ್ರೀಗಳು ಈಗ ಲಿಂಗಾಯತ ಧರ್ಮದ ಚಳುವಳಿ ಇತಿಹಾಸಕ್ಕೆ ಸೇರಿ ಹೋಗಿದೆ, ಅದಕ್ಕೆ ಎಲ್ಲರೂ ಮೊದಲಿನಂತೆಯೇ ವೀರಶೈವ-ಲಿಂಗಾಯತ ಎಂದು ಗುರುತಿಸಿಕೊಳ್ಳಿ ಎಂದು ಕರೆ ನೀಡಿದ್ದಾರೆ.

ಲಿಂಗಾಯತ ಚಳುವಳಿ ಸುಂಟರಗಾಳಿಯಂತೆ ಬಂದು ಸುಳಿವಿಲ್ಲದಂತೆ ಮಾಯವಾಯಿತೇ? ಅಥವಾ ನಮ್ಮಲ್ಲಿ ಮಹತ್ತರ ಬದಲಾವಣೆಗಳನ್ನು ತಂದು ಲಿಂಗಾಯತ ಸಮಾಜಕ್ಕೆ ಹೊಸ ದಿಕ್ಕು, ಸ್ವರೂಪ ನೀಡಿತೆ? ಎಂಟು ವರ್ಷಗಳ ನಂತರ ಅದರ ಪ್ರಭಾವವನ್ನು ನಾವು ಇಂದು ಹೇಗೆ ಅರ್ಥೈಸಬೇಕು?

ಈ ಪ್ರಶ್ನೆಗಳ ಮೇಲೆ ದಾವಣಗೆರೆ ಹಿರಿಯ ಶರಣ ಸಾಹಿತಿ ಟಿ ಆರ್ ಚಂದ್ರಶೇಖರ್ ತಮ್ಮ ಚಿಂತನೆ ಹಂಚಿಕೊಂಡಿದ್ದಾರೆ.

(೧). ೨೦೧೭-೧೮ರ ಚಳುವಳಿ ಬಂದ ಹಾಗೆ ಮಾಯವಾಯಿತೆ? ಅಥವಾ ಏನಾದರೂ ದೀರ್ಘಕಾಲೀನ ಬದಲಾವಣೆ ತಂದತೆ?

ಅನೇಕರು ತಪ್ಪಾಗಿ ಸ್ವತಂತ್ರ ಲಿಂಗಾಯತ ಧರ್ಮದ ಹೋರಾಟ ೨೦೧೭-೧೮ರಲ್ಲಿ ಆರಂಭವಾಯಿತು ಎಂದು ತಿಳಿದುಕೊಂಡಿದ್ದಾರೆ. ನಿಜ, ೨೦೧೭-೧೮ರಲ್ಲಿ ಹೋರಾಟ ಹೆಚ್ಚು ವ್ಯಾಪಕವಾಗಿತ್ತು ಮತ್ತು ಖಚಿತವಾಗಿತ್ತು.

ಆದರೆ ಈ ಬೇಡಿಕೆಯ, ಹೋರಾಟದ ಆರಂಭವನ್ನು ೨೦ನೆಯ ಶತಮಾನದ ಆರಂಭದ ದಶಕಗಳಲ್ಲಿ ಕಾಣಬಹುದು. ಅಖಿಲ ಭಾರತ ವೀರಶೈವ ಮಹಾಸಭೆಯ ೧೯೪೦ರ ದಶಕದ ಒಂದು ಸಮಾವೇಶದಲ್ಲಿ ಲಿಂಗಾಯತರು ಹಿಂದೂಗಳಲ್ಲ, ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಕ ಮುಂತಾದ ನಿರ್ಣಯಗಳು ಮಂಡನೆಯಾಗಿದ್ದವು. ಆದರೆ ಅದಕ್ಕೆ ಹೆಚ್ಚಿನ ಬೆಂಬಲ ದೊರೆಯಲಿಲ್ಲ. ಆದರೆ ಈ ಹೋರಾಟದ ಬೀಜಗಳು ಅಂದೇ ಬಿತ್ತನೆಯಾಗಿದ್ದವು.

ಈ ಚಳುವಳಿಯು ಮಾಯವಾಗುವ ಪ್ರಶ್ನೆಯು ಉದ್ಭವವಾಗುವುದಿಲ್ಲ. ಏಕೆಂದರೆ ಕಲ್ಲಿನಲ್ಲಿ ಹುಟ್ಟಿದವರ ನೇತೃತ್ವ ಇದಕ್ಕಿಲ್ಲ. ರಕ್ತ-ಮಾಂಸ ತುಂಬಿದ ಜನರ ಕೈಯಲ್ಲಿ ಚಳುವಳಿಯಿದೆ. ೨೦೧೭-೧೮ರ ಚಳುವಳಿಯು ರಾಜ್ಯದ ಅನೇಕ ಲಿಂಗಾಯತರಲ್ಲಿ ಇದ್ದ ವೀರಶೈವ-ಲಿಂಗಾಯತ ನಡುವಿನ ಗೊಂದಲ ನಿವಾರಿಸಿ ಸ್ಪಷ್ಟತೆ ನೀಡಿತು.

೨೦೧೭-೧೮ರ ಚಳುವಳಿಯಿಂದ ಲಿಂಗಾಯತಕ್ಕೆ ಅಖಿಲ ಭಾರತ ಸ್ವರೂಪವನ್ನು ಪ್ರಾಪ್ತವಾಯಿತು. ದೆಹಲಿಯ ಜನರು, ಪತ್ರಕರ್ತರು, ವಿದ್ವಾಂಸರು ಲಿಂಗಾಯತದ ಬಗ್ಗೆ ತಿಳಿದುಕೊಳ್ಳತೊಡಗಿದರು ಮತ್ತು ಬರೆದರು-ಚರ್ಚೆ ಮಾಡಿದರು. ಇಂದು ಮಾಧ್ಯಮಗಳಲ್ಲಿ, ಪ್ರಚಲಿತ ಚರ್ಚೆಗಳಲ್ಲಿ, ರಾಜಕಾರಣದಲ್ಲಿ ‘ಲಿಂಗಾಯತ’ ನುಡಿಯು ಬಳಕೆಯಾಗುತ್ತಿದೆಯೇ ವಿನಾ ವೀರಶೈವವಲ್ಲ.

(೨) ೨೦೧೭-೧೮ರ ಚಳುವಳಿ ತಂದ ದೀರ್ಘಕಾಲೀನ ಬದಲಾವಣೆಗಳೇನು?

ಪ್ರಪ್ರಥಮವಾಗಿ ಲಿಂಗಾಯತಕ್ಕೆ ಸರ್ಕಾರವೊಂದರ ‘ಮನ್ನಣೆ’ ದೊರೆಯಿತು.

ಹೇಳಿರುವಂತೆ ಲಿಂಗಾಯತ ಒಂದು ಧರ್ಮ; ವೀರಶೈವವು ಅದರ ಒಂದು ಅನುಬಂಧ, ಒಂದು ಉಪಪಂಗಡ ಎಂಬುದು ನೆಲೆಗೊಂಡಿತು. ಅನೇಕ ಮುಗ್ದ – ರೈತಾಪಿ ಲಿಂಗಾಯತರಲ್ಲೂ ಇದ್ದ ಗೊಂದಲ ನಿವಾರಣೆಯಾಯಿತು. ನಾವು ಲಿಂಗಾಯತರು ಎಂಬುದು ಎಲ್ಲೆಡೆ ಪ್ರಸಾರವಾಯಿತು. ಅದೊಂದು ಧರ್ಮವೇ ವಿನಾ ಜಾತಿಯಲ್ಲ ಎಂಬುದೂ ನೆಲೆಗೊಂಡಿತು.

ಬಸವ ಪ್ರಣಾಳಿಕೆಯ ಮೌಲ್ಯಗಳು ವೈಜ್ಞಾನಿಕ, ವೈಚಾರಿಕ, ಪ್ರಗತಿಪರ ಎಂಬುದು ಸ್ಪಷ್ಟ ರೂಪ ತಳೆದ ಕಾರಣ ಸಮಾಜದಲ್ಲಿನ ಅನೇಕ ಪ್ರಗತಿಪರರು, ಚಿಂತಕರು, ವಿದ್ವಾಂಸರು ಅದನ್ನು ಒಪ್ಪಿಕೊಳ್ಳತೊಡಗಿದರು, ಅಪ್ಪಿಕೊಳ್ಳತೊಡಗಿದರು.

ಅತ್ಯಂತ ಮಹತ್ವದ ಬದಲಾವಣೆಯೆಂದರೆ ಬಸವ ಸಿದ್ಧಾಂತ ಖಚಿತವಾದ ಮನ್ನಣೆ ಪಡೆಯತೊಡಗಿತು. ಅದರ ಲಿಂಗ ಸಮಾನತೆ ಪ್ರಣಾಳಿಕೆಯು ಚರ್ಚೆಯ ಮುನ್ನೆಲೆಗೆ ಬಂತು. ಇಂದು ಬಸವಣ್ಣನ ಬಗ್ಗೆ, ಲಿಂಗಾಯತದ ಬಗ್ಗೆ, ಲಿಂಗ ಸಮಾನತೆ ಸಿದ್ಧಾಂತದ ಬಗ್ಗೆ, ಲಿಂಗಾಯತದ ಸೈದ್ಧಾಂತಿಕ ಆಧಾರದ ಬಗ್ಗೆ ತಿಳುವಳಿಕೆ ವ್ಯಾಪಕವಾಗಿ ಹರಡತೊಡಗಿದೆ.

(೩) ೨೦೧೭-೧೮ಕ್ಕಿಂತ ಮುಂಚೆ ಬಸವ ತತ್ವದ ಪ್ರಚಾರ, ಪ್ರಸಾರ ಹೇಗಿತ್ತು, ಈಗ ಹೇಗಿದೆ?

ಬಸವ ತತ್ವದ ಬಗ್ಗೆ ಅನೇಕ ತಪ್ಪು ನಂಬಿಕೆಗಳು, ಭಾವನೆಗಳು ಸಮಾಜದಲ್ಲಿದ್ದವು. ಇಂದು ಬಸವಣ್ಣ ಎಂಬುದು ಒಂದು ತತ್ವ, ಸಿದ್ಧಾಂತ, ಒಂದು ಪ್ರಣಾಳಿಕೆ ಎಂಬುದು ನೆಲೆಗೊಂಡಿದೆ.

ಲಿಂಗಾಯತದೊಳಗೆ ‘ತಟ್ಟೆಕಾಸಿ’ನ ಸಂಸ್ಕೃತಿ, (ಗೊಡ್ಡು)ಆಚರಣೆಗಳು, (ಮೂಢ)ನಂಬಿಕೆಗಳು ಪ್ರವೇಶಿಸಿಬಿಟ್ಟಿದ್ದವು. ೨೦೧೭-೧೮ರ ಚಳುವಳಿಯಿಂದಾಗಿ ವೈದಿಕಾಚರಣೆಗಳು, ಪೌರೋಹಿತ್ಯ, ಅಸಮಾನತೆ, ಮೇಲು-ಕೀಳು ಭಾವನೆ, ಗಂಗೆ ನದಿಯಲ್ಲಿನ ನೀರು ಮಾತ್ರ ಪವಿತ್ರ, ತೀರ್ಥಸ್ನಾನ, ಲಿಂಗ ದರ್ಶನ ಮಾಡಬೇಕು ಮುಂತಾದ ನಂಬಿಕೆಗಳು ಇಂದು ಲಿಂಗಾಯತದಿಂದ ಮಾಯವಾಗುತ್ತಿವೆ.

ಲಿಂಗಾಯತ ಚಳುವಳಿಯು ಮಾಯವಾಗುತ್ತಿಲ್ಲ. ಬದಲಾಗಿ ಹಿಂದುತ್ವ, ವೀರಶೈವತ್ವವು ಹರಡಿದ್ದ ಕೊಳೆ ಲಿಂಗಾಯತದಿಂದ ಮಾಯವಾಗುತ್ತಿದೆ.

ಗೃಹ ಪ್ರವೇಶ ಎನ್ನುವುದು ಇಂದು ಗುರುಪ್ರವೇಶವಾಗಿದೆ. ವಚನ ಮಾಂಗಲ್ಯ ಮದುವೆಗಳು ನಡೆಯುತ್ತಿವೆ, ಸಮಾದಿಯ ಮೇಲೆ ಜಾತಿಜಂಗಮರು ಕಾಲಿಟ್ಟು ಪಾಧಪೂಜೆ ಮಾಡಿಸಿಕೊಳ್ಳುವುದನ್ನು ಲಿಂಗಾಯತರು ತಿರಸ್ಕರಿಸುತ್ತಿದ್ದಾರೆ. ಇಂದು ಲಿಂಗಾಯತರಲ್ಲಿ ಸೈದ್ಧಾಂತಿಕ ಸ್ಪಷ್ಟತೆ ಮೂಡತೊಡಗಿದೆ.

(೪) ೨೦೧೭-೧೮ರ ನಂತರ ಜಿಲ್ಲಾ, ತಾಲ್ಲೂಕು ಬಸವ ಕಾರ್ಯಕರ್ತರಲ್ಲಿ ಕಾಣುತ್ತಿರುವ ಬದಲಾವಣೆ?

ಬಸವಣ್ಣನವರ ಮೇಲೆ, ವಚನ ಸಾಹಿತ್ಯದ ಮೇಲೆ, ಲಿಂಗಾಯತ ಚಳುವಳಿಯ ಬಗ್ಗೆ ಕೀಳಾಗಿ ಮಾತನಾಡುವುದರ ವಿರುದ್ಧ, ಅವುಗಳನ್ನು ವಿಕೃತಗೊಳಿಸುವುದಕ್ಕೆ ಸಂಘ ಪರಿವಾರ ನಡೆಸುತ್ತಿರುವ ಪ್ರಯತ್ನಗಳನ್ನು ತಾಲ್ಲೂಕು ಮಟ್ಟದಲ್ಲಿಯೂ ವಿರೋಧಿಸಲಾಗುತ್ತಿದೆ.

ಇದೆಕ್ಕೆ ಇತ್ತಿಚಿಗಿನ ಪ್ರಕರಣವೆಂದರೆ ‘ಬಿದರಿ’ ಹೊರಡಿಸಿದ್ದ ಸುತ್ತೋಲೆಗೆ ವ್ಯಕ್ತವಾದ ರಾಜ್ಯದಾದ್ಯಂತ ಪ್ರತಿಭಟನೆ-ಪ್ರತಿರೋಧ. ಬಸವ ದಳ, ಬಸವ ಕೇಂದ್ರ, ಜಾಗತಿಕ ಲಿಂಗಾಯತ ಸಂಘಟನೆ, ಮಾತಾಜಿ ಅವರ ಬೆಂಬಲಿಗರು, ಬಸವಣ್ಣನನ್ನು ಒಪ್ಪಿಕೊಂಡ ವೀರಶೈವರು ಒಟ್ಟಾಗುತ್ತಿದ್ದಾರೆ.

(೫) ೨೦೧೭-೧೮ ಲಿಂಗಾಯತ ಧರ್ಮದ ಬೇಡಿಕೆ ಮುಂಚೆ ಹೇಗಿತ್ತು? ಈಗ ಹೇಗಿದೆ?

೨೦೧೭-೧೮ಕ್ಕೆ ಮುಂಚೆ ಲಿಂಗಾಯತದ ಬಗ್ಗೆ ಖಚಿತವಾದ ತಿಳುವಳಿಕೆ ಇರಲಿಲ್ಲ. ಸೈದ್ಧಾಂತಿಕ ಅರಿವು ಇರಲಿಲ್ಲ. ಇದ್ದರೂ ಅದು ಸಣ್ಣಮಟ್ಟದಲ್ಲಿತ್ತು, ವ್ಯಕ್ತಿಗತವಾಗಿತ್ತು. ಲಿಂಗಾಯತವು ಇಂದು ಒಂದು ಸಂಘಟಿತ ಸ್ವರೂಪ ಪಡೆದುಕೊಂಡಿದೆ.

ಬಸವ ವಿರೋಧಿಗಳ ಬಗ್ಗೆ ಲಿಂಗಾಯತರು ನೇರವಾಗಿ ಪ್ರತಿಭಟಿಸುತ್ತಿರಲಿಲ್ಲ. ಈಗ ನೇರವಾಗಿ ಸಂಘಪರಿವಾರವನ್ನು ಗುರಿಯಾಗಿಟ್ಟುಕೊಂಡು ಲಿಂಗಾಯತರು ಹೋರಾಟ ಮಾಡುತ್ತಿದ್ದಾರೆ, ಸಂಘ ಪರಿವಾರವು ವಚನ ಸಾಹಿತ್ಯವನ್ನು, ಬಸವ ಸಿದ್ಧಾಂತವನ್ನು ತಿರುಚುವ, ವಿಕೃತಿಗೊಳಿಸುವ, ಭ್ರಷ್ಠಗೊಳಿಸುವ ಪ್ರಯತ್ನವಾಗಿ ಹೊರತಂದ “ವಚನ ದರ್ಶನ’ ಕೃತಿಯನ್ನು ಲಿಂಗಾಯತ ಹೇಗೆ ವಿರೋಧಿಸಿತ್ತು ಎಂಬುದು ಇಂದು ಇತಿಹಾಸವಾಗಿದೆ.

ಲಿಂಗಾಯತವು ಇತಿಹಾಸವಾಗಿಲ್ಲ, ಅದರ ಮೇಲೆ ನಡೆಸುವ ಹಾವಳಿಗಳು ಇತಿಹಾಸದ ಬುಟ್ಟಿ ಸೇರುತ್ತಿವೆ. ಶಂಕರ ಮಹಾದೇವ ಬಿದರಿ ಅವರ ಹಾರಾಟ-ಚೀರಾಟವೆಲ್ಲ ಏತಕ್ಕಾಗಿ ಎಂಬುದು ಜನರಿಗೆ ತಳಿದಿದೆ. ಅವರನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಲಿಂಗಾಯತರು ಅವರನ್ನು ‘ಅಪ್ರಸ್ತುತ’ಗೊಳಿಸುತ್ತಿದ್ದಾರೆ.

ಬಿದರಿ ಮಾಡುತ್ತಿರುವುದು ಅವರ ರಾಜಕೀಯ ಮಹತ್ವಾಕಾಂಕ್ಷೆಯ ಒಂದು ಭಾಗವೇ ವಿನಾ ಅದು ಲಿಂಗಾಯತವೂ ಅಲ್ಲ, ವೀರಶೈವವೂ ಅಲ್ಲ. ಸಂಘಪರಿವಾರದ ಒಲವನ್ನು ಗಳಿಸುವ ಒಂದು ಭಾಗವಾಗಿ ಅವರ ಪ್ರಯತ್ನವನ್ನು ನೋಡಬೇಕು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KW7PgYimGT7HL73bAEKzSR

Share This Article
Leave a comment

Leave a Reply

Your email address will not be published. Required fields are marked *

ಲೇಖಕರು ಅರ್ಥಶಾಸ್ತ್ರಜ್ಞರು ಮತ್ತು ಬಸವ ತತ್ವ ಚಿಂತಕರು