ಬಸವಾದಿ ಶರಣರ ವಿಚಾರಗಳನ್ನು ತಿರುಚುವ ಪ್ರಯತ್ನಗಳನ್ನು ಜನಸಾಮಾನ್ಯರೇ ವಿರೋಧಿಸುತ್ತಿದ್ದಾರೆ
ದಾವಣಗೆರೆ
2017-18ರಲ್ಲಿ ಒಂಬತ್ತು ತಿಂಗಳುಗಳ ಕಾಲ ನಡೆದ ಲಿಂಗಾಯತ ಧರ್ಮದ ಚಳುವಳಿ ರಾಜ್ಯದಲ್ಲಿ ದೊಡ್ಡ ಸಂಚಲನ ಮೂಡಿಸಿ, ರಾಷ್ಟ್ರೀಯ, ಅಂತರಾಷ್ಟೀಯ ಮಾಧ್ಯಮಗಳ ಗಮನ ಸೆಳೆದವು.
ಆದರೆ ಇತ್ತೀಚೆಗೆ ರಂಭಾಪುರಿ ಶ್ರೀಗಳು ಈಗ ಲಿಂಗಾಯತ ಧರ್ಮದ ಚಳುವಳಿ ಇತಿಹಾಸಕ್ಕೆ ಸೇರಿ ಹೋಗಿದೆ, ಅದಕೆ ಎಲ್ಲರೂ ಮೊದಲಿನಂತೆಯೇ ವೀರಶೈವ-ಲಿಂಗಾಯತ ಎಂದು ಗುರುತಿಸಿಕೊಳ್ಳಿ ಎಂದು ಕರೆ ನೀಡಿದ್ದಾರೆ.
ಲಿಂಗಾಯತ ಚಳುವಳಿ ಸುಂಟರಗಾಳಿಯಂತೆ ಬಂದು ಸುಳಿವಿಲ್ಲದಂತೆ ಮಾಯವಾಯಿತೇ? ಅಥವಾ ನಮ್ಮಲ್ಲಿ ಮಹತ್ತರ ಬದಲಾವಣೆಗಳನ್ನು ತಂದು ಲಿಂಗಾಯತ ಸಮಾಜಕ್ಕೆ ಹೊಸ ದಿಕ್ಕು, ಸ್ವರೂಪ ನೀಡಿತೆ? ಎಂಟು ವರ್ಷಗಳ ನಂತರ ಅದರ ಪ್ರಭಾವವನ್ನು ನಾವು ಇಂದು ಹೇಗೆ ಅರ್ಥೈಸಬೇಕು?
ಈ ಪ್ರಶ್ನೆಗಳ ಮೇಲೆ ದಾವಣಗೆರೆ ಶರಣ ಸಾಹಿತ್ಯ ಪರಿಷತ್ತಿನ ವಿಶ್ವೇಶ್ವರಯ್ಯ ಬಿ ಎಂ ಅವರು ತಮ್ಮ ಚಿಂತನೆ ಹಂಚಿಕೊಂಡಿದ್ದಾರೆ.
1) 2017-18ರ ಚಳುವಳಿ ಬಂದ ಹಾಗೆ ಮಾಯವಾಯಿತೇ? ಅಥವಾ ಏನಾದರೂ ದೀರ್ಘಕಾಲೀನ ಬದಲಾವಣೆ ತಂದಿತೆ?
ಲಿಂಗಾಯತ ಧರ್ಮದ ಚಳುವಳಿ ದುರ್ಬಲ ಆಗಿದ್ದರೆ ರಂಭಾಪುರಿ ಶ್ರೀಗಳು ಯಾಕೆ ಲಿಂಗಾಯತ ಧರ್ಮದ ಹೋರಾಟಗಾರರನ್ನು ವೀರಶೈವರ ಜೊತೆಗೆ ಬನ್ನಿ ಎಂದು ಕರೆಯುತ್ತಿದ್ದರು? ಲಿಂಗಾಯತ ಧರ್ಮದ ಚಳುವಳಿ ಶಕ್ತಿಶಾಲಿ ಆಗಿರುವುದರಿಂದ ಮತ್ತು ವೀರಶೈವ ಸಂಘಟನೆ ದುರ್ಬಲ ಆಗಿರುವುದರಿಂದ ಪಂಚಪೀಠದವರಿಗೆ ಆತಂಕ ಆಗಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.
2017-18 ರ ಚಳುವಳಿಯಲ್ಲಿ ಇದ್ದ ಮುಖಂಡರಲ್ಲಿ ಕೆಲವರು ನಮ್ಮನ್ನು ಅಗಲಿದರು. ಇನ್ನೂ ಕೆಲವರು ಸ್ವಾರ್ಥ ಸಾಧನೆಗಾಗಿ ಹೋರಾಟದಿಂದ ಹಿಂದೆ ಸರಿದರು. ಆದರೂ ಸಹ ಲಿಂಗಾಯತ ಧರ್ಮದ ಹೋರಾಟ ಗುಪ್ತಗಾಮಿನಿಯಾಗಿ ಹರಿಯುತ್ತಿದೆ. ಲಿಂಗಾಯತ ಧರ್ಮದ ಚಳುವಳಿ ಜೀವಂತವಾಗಿ ಇದೆ, ಬಸವಾದಿ ಶರಣರ ವಿಚಾರಗಳು ಪ್ರಬಲವಾಗಿ ಬೇರೂರುತ್ತಿವೆ.
ವೀರಶೈವ ಸಂಘಟನೆ ದುರ್ಬಲ ಆಗಿರುವುದರಿಂದ
ಪಂಚಪೀಠದವರಿಗೆ ಆತಂಕ ಆಗಿದೆ.
2) 2017-18ರ ಚಳುವಳಿ ತಂದ ದೀರ್ಘಕಾಲೀನ ಬದಲಾವಣೆಗಳೇನು?
ಚಳುವಳಿ ಜನಸಾಮಾನ್ಯರಿಗೆ ಜಾಗೃತಿ ಮೂಡಿಸಿದೆ. ಲಿಂಗಾಯತ ಅಂದರೆ ಏನು ಎಂಬುದರ ಸ್ಪಷ್ಟ ಅರಿವು ಆಗುತ್ತಾ ಇದೆ.
2017-18ಕ್ಕಿಂತ ಮೂದಲು ಬಸವಾದಿ ಶರಣರ ವಿಚಾರಗಳನ್ನು ಕೇವಲ ಮಠಾಧೀಶರು ಪ್ರಚಾರ ಮಾಡುತಿದ್ದರು. ಅವರು ಏನು ಹೇಳುತಿದ್ದರೋ ಅದೇ ಸತ್ಯ ಎಂದು ಜನ ನಂಬುತ್ತಿದ್ದರು. ಆದರೆ ಈಗ ಬಸವ ತತ್ವವನ್ನು ಹಳ್ಳಿಹಳ್ಳಿಗಳಲ್ಲಿ ಜನಸಾಮಾನ್ಯರು ಸ್ವಯಂ ಪ್ರೇರಣೆಯಿಂದ ಪ್ರಚಾರ ಮಾಡುತ್ತಿದ್ದಾರೆ. ಮಠಾಧೀಶರು ಬಸವ ತತ್ವಕ್ಕೆ ವಿರುದ್ಧವಾಗಿ ಮಾತನಾಡಿದಾಗ ಪ್ರಶ್ನೆ ಮಾಡುತ್ತಿದ್ದಾರೆ.
ಬಸವ ತತ್ವದ ವಿಚಾರಗಳನ್ನು ಹೇಳುವುದು ಅಷ್ಟೇ ಅಲ್ಲ ಆಚರಣೆಗೆ ಬರುತ್ತಿವೆ. ಕಾರ್ಯಾಗಾರಗಳು ಕಮ್ಮಟಗಳು ನಡೆಯುತ್ತಿವೆ. ಜನಸಾಮಾನ್ಯರು ವೈದಿಕ ಆಚರಣೆಗಳನ್ನು ಬಿಟ್ಟು ನಿಜಾಚರಣೆಗಳನ್ನು ಆಚರಿಸುತ್ತಿದ್ದಾರೆ.
ಬಸವಾದಿ ಶರಣರ ವಿಚಾರಗಳನ್ನು ತಿರುಚುವ, ವಿರೂಪಗೊಳಿಸುವ ಪ್ರಯತ್ನಗಳಿಗೆ ಜನಸಾಮಾನ್ಯರೇ ತಡೆಯೊಡ್ಡುತಿದ್ದಾರೆ. ಲಿಂಗಾಯತ ಧರ್ಮದ ಹೋರಾಟದ ಕಾರ್ಯಕರ್ತರು ಬಸವ ತತ್ವದ ಪ್ರಚಾರ ಜೊತೆಗೇ ಲಿಂಗಾಯತ ಧರ್ಮದ ಮೇಲಿನ ಸಾಂಸ್ಕೃತಿಕ ದಾಳಿಯನ್ನು ತಡೆಯಲೂ ತಮ್ಮ ಶ್ರಮ ಹಾಕುತ್ತಾ ಇದ್ದಾರೆ.
ಬಸವ ತತ್ವದ ವಿಚಾರಗಳನ್ನು ಹೇಳುವುದು ಅಷ್ಟೇ ಅಲ್ಲ ಆಚರಣೆಗೆ ಬರುತ್ತಿವೆ.
3) 2017-18ಕ್ಕಿಂತ ಮುಂಚೆ ಬಸವ ತತ್ವದ ಪ್ರಚಾರ, ಪ್ರಸಾರ ಹೇಗಿತ್ತು, ಈಗ ಹೇಗಿದೆ?
2017-18ರ ಚಳುವಳಿ ಕೇವಲ ಲಿಂಗಾಯತ ಧರ್ಮದ ಮಾನ್ಯತೆ ಪಡೆಯಲು ನಡೆಯಿತು.
ಆದರೆ ಈಗ ಮಾನ್ಯತೆ ಪಡೆಯುವುದಕ್ಕಿಂತ ಬಹಳ ಮುಖ್ಯವಾಗಿ ಬಸವ ತತ್ವವನ್ನು ಆಚರಣೆಗೆ ತರುವ ಪ್ರಯತ್ನಗಳು ನಡೆಯುತ್ತಿವೆ.
ಲಿಂಗಾಯತರಲ್ಲಿ ಮೊದಲು ಇದ್ದ ಜಾತಿ ಶ್ರೇಷ್ಠತೆ ಕರಗುತ್ತಿದೆ. ಸಮಾನತೆ ತತ್ವದ ಬಗ್ಗೆ ಜಾಗೃತಿ ಮೂಡುತ್ತಿದೆ.