ಗದಗ
೧೨ನೇ ಶತಮಾನದಲ್ಲಿ ಬಸವಾದಿ ಶರಣರಿಂದ ರೂಪುಗೊಂಡ ಲಿಂಗಾಯತ ಧರ್ಮದ ಶರಣರು ಧರ್ಮ ಜ್ಞಾನದ ಬೆಳಕು ನೀಡಿ ಈ ಜಗವ ಬೆಳಗುವಂತೆ ಮಾಡಿದ್ದಾರೆ. ಅಂಥ ಶರಣರಲ್ಲಿ ಅಕ್ಕ ಅನ್ನಪೂರ್ಣ ತಾಯಿಯವರು ಒಬ್ಬರು ಎಂದು ಶರಣೆ ಗೌರಕ್ಕ ಬಡಿಗಣ್ಣವರ ಹೇಳಿದರು.
ಅವರು ಈಚೆಗೆ ನಡೆದ ಬಸವದಳದ ೧೬೪೭ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ, “ಬಸವತತ್ವ ಪ್ರಸಾರದಲ್ಲಿ ಪೂಜ್ಯ ಡಾ. ಅಕ್ಕ ಅನ್ನಪೂರ್ಣ ತಾಯಿ ಒಂದು ನೆನಪು” ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಅಕ್ಕ ಅವರ ಜಂಗಮ ಸೇವೆಯಲ್ಲಿ ರೂಪುಗೊಂಡ ಬೀದರಿನ ಬಸವ ಸೇವಾ ಪ್ರತಿಷ್ಠಾನದ ಬಸವಗಿರಿ ಕಣ್ಮುಂದೆ ಬರುತ್ತದೆ. ಅವರ ಬಸವ ನಿಷ್ಠೆಯೇ ಹಾಗೆ, ತಮ್ಮ ಶ್ರದ್ಧಾಪೂರ್ಣ ಕೆಲಸಗಳಿಂದಲೇ ಅವರು ಧರ್ಮಸೇವೆ ಗೈದವರು. ಬಸವತತ್ವ ಪ್ರಸಾರದ ಪ್ರವಚನ, ಸಂಘಟನೆಯ ಮೂಲಕ ಸಮಾಜದಲ್ಲಿ ಧರ್ಮ ಜಾಗೃತಿ ಮೂಡಿಸಿದರು, ಪ್ರವಚನ ಪಿತಾಮಹ ಪೂಜ್ಯ ಲಿಂಗಾನಂದ ಮಹಾಸ್ವಾಮೀಜಿ ಹಾಗೂ ಪೂಜ್ಯ ಮಾತೆ ಮಹಾದೇವಿಯವರ ಶಿಷ್ಯತ್ವ ಹೊಂದಿ ಅವರ ಮಾರ್ಗದರ್ಶನದಲ್ಲಿ ಸಾಗಿದವರು ಅವರು.
ಅಕ್ಕ ಅನ್ನಪೂರ್ಣರವರು ಬೀದರಿನಲ್ಲಿ ಶರಣ ಉದ್ಯಾನವನ, ಬಸವ ಸೇವಾ ಪ್ರತಿಷ್ಠಾನ, ಲಿಂಗಾಯತ ಮಹಾಮಠ, ನೀಲಮ್ಮನ ಬಳಗ, ಲಿಂಗಾಯತ ಸೇವಾದಳ ಮುಂತಾದ ಸಂಘಟನೆಗಳ ಮೂಲಕ ಬಸವತತ್ವ ಪ್ರಸರಿಸಿದರು. ಪ್ರತಿವರ್ಷ ‘ವಚನ ವಿಜಯೋತ್ಸವ’ ‘ಕಲ್ಯಾಣ ಕ್ರಾಂತಿಯ ವಿಜಯೋತ್ಸವ’ವನ್ನು ಅವರು ಮಾಡುತ್ತಿದ್ದುದು ರಾಜ್ಯದ ತುಂಬ ಮನೆ ಮಾತಾಗಿದೆ.

ಹೀಗೆ ಲಿಂಗಾಯತ ಧರ್ಮಕ್ಕೆ ಅವರ ಸೇವೆ ಸಲ್ಲುತ್ತಿದ್ದ ವೇಳೆಯಲ್ಲೇ ಫಲ ಪಕ್ವಗೊಂಡು ತೊಟ್ಟು ಕಳಚಿ ಧರೆ ಸೇರುವಂತೆ ಅವರು ಲಿಂಗಯ್ಯನಲ್ಲಿ ಅಡಕರಾದರು. ಅವರ ಅಗಲಿಕೆ ಬಸವತತ್ವ ಪ್ರಸಾರಕ್ಕೊಂದು ದೊಡ್ಡ ಪೆಟ್ಟು, ಬಸವಾನುಯಾಯಿಗಳಿಗೆ ತುಂಬ ನೋವನ್ನುಂಟು ಮಾಡಿದೆ ಎಂದು ಗೌರಕ್ಕನವರು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶರಣ ವಿ. ಕೆ. ಕರೇಗೌಡ್ರ ವಹಿಸಿ ಮಾತನಾಡಿದರು. ಶರಣ ಕಳಕಪ್ಪ ವ್ಯಾಪಾರಿ ಮತ್ತು ಶರಣ ಮಾಲತೇಶ ಕರೇಗೌಡ್ರ ಅತಿಥಿಗಳಾಗಿ ವೇದಿಕೆಯ ಮೇಲಿದ್ದರು.
ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ, ಸಿಬಿಎಸ್ನಲ್ಲಿ ಶೇ. ೮೫ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾದ ಕುಮಾರಿ ಚಿನ್ಮಯಿ ಕರೇಗೌಡ್ರ ಇವರನ್ನು ಸನ್ಮಾನಿಸಲಾಯಿತು. ಶರಣೆ ವಿಜಯಲಕ್ಷ್ಮೀ ಗೌಡಪ್ಪಗೌಡ ಪಾಟೀಲ ಹಾಗೂ ಶರಣೆ ರತ್ನಕ್ಕ ಎಂ. ಅಂಗಡಿ ಇವರುಗಳು ಬಸವದಳದ ಕಟ್ಟಡಕ್ಕೆ ಧನ ದಾಸೋಹ ಮಾಡಿದರು.
ಆರಂಭದಲ್ಲಿ ವಚನ ಪ್ರಾರ್ಥನೆಯನ್ನು ಶರಣೆ ಗಂಗಮ್ಮ ಹೂಗಾರ ಮಾಡಿದರು. ಸ್ವಾಗತ ಹಾಗೂ ಅತಿಥಿಗಳ ಪರಿಚಯವನ್ನು ಮೃತ್ಯುಂಜಯ ಜಿನಗಾ ನಡೆಸಿದರು. ನಿರೂಪಣೆ ರಾಮಣ್ಣ ಕಳ್ಳಿಮನಿಯವರು ಮಾಡಿದರು. ಶರಣು ಸಮರ್ಪಣೆ ಪ್ರಕಾಶ ಅಸುಂಡಿ ಮಾಡಿದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಬಸವದಳದ ಅನೇಕ ಶರಣ ಬಂಧುಗಳು ಭಾಗವಹಿಸಿದ್ದ ಕಾರ್ಯಕ್ರಮದ ಪ್ರಸಾದ ಸೇವೆಯನ್ನು ಕರೇಗೌಡ್ರ ಕುಟುಂಬದವರು ವಹಿಸಿದ್ದರು.
ಅರ್ಥಪೂರ್ಣ ಕಾರ್ಯಕ್ರಮ.
ಶರಣು ಶರಣಾರ್ಥಿಗಳು💐🙏