ಬೀದರ
ಅಕ್ಕ ಮಹಾದೇವಿ ವಚನಗಳು ಆಧ್ಯಾತ್ಮಿಕದ ಆಗರವಾಗಿದ್ದು, ಮನುಕುಲಕ್ಕೆ ಮಾರ್ಗದರ್ಶಿಯಾಗಿವೆ ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.
ಲಿಂಗಾಯತ ಮಹಾ ಮಠದ ವತಿಯಿಂದ ಇಲ್ಲಿಯ ಬಸವಗಿರಿಯಲ್ಲಿ ಶನಿವಾರ ನಡೆದ ಮಹಾಶರಣೆ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಅಕ್ಕನ ಆದರ್ಶ ಮೈಗೂಡಿಸಿಕೊಂಡವರ ಬಾಳು ಬಂಗಾರವಾಗುತ್ತದೆ ಎಂದು ತಿಳಿಸಿದರು. ಅಕ್ಕ ಉಡುತಡಿಯಲ್ಲಿ ಜನಿಸಿ, ಕೈ ಹಿಡಿಯಲು ಮುಂದಾದ ರಾಜ ಕೌಶಿಕನನ್ನು ಧಿಕ್ಕರಿಸಿ, ದೇವನೇ ಪತಿಯೆಂದು ಬಸವಣ್ಣನವರ ಕಲ್ಯಾಣಕ್ಕೆ ಆಗಮಿಸಿದ್ದು ಬಹು ರೋಚಕ ಹೆಜ್ಜೆ ಎಂದು ಹೇಳಿದರು.
ಹೆಜ್ಜೆ ಹೆಜ್ಜೆಗೂ ಕಷ್ಟ-ನಷ್ಟಗಳನ್ನು ಅನುಭವಿಸಿ, ಲಿಂಗಾಂಗ ಸಾಮರಸ್ಯದ ಗುರಿ ಸಾಧಿಸಿದ್ದು ವಿಶೇಷ. ಪ್ರಭುದೇವರ ಪರೀಕ್ಷೆ ಎದುರಿಸಿ, ಸೈ ಎನಿಸಿಕೊಂಡು ಅನುಭವ ಮಂಟಪದ ಮಾಣಿಕ್ಯವಾಗಿ ಪ್ರಜ್ವಲಿಸಿದರು. ಶ್ರೀಶೈಲ ಸಮೀಪದ ಕದಳಿಯಲ್ಲಿ ಐಕ್ಯವಾದ ಅಕ್ಕ ವಿಶ್ವದ ಮೊದಲ ಕವಯತ್ರಿ ಎಂದು ಬಣ್ಣಿಸಿದರು.
ಶಿವಯೋಗ ಸಾಧಕರ ಕೂಟದಿಂದ ಆಯೋಜಿಸಿದ್ದ ಸಾಮೂಹಿಕ ಶಿವಯೋಗದಲ್ಲಿ ಪ್ರಾಣ ಲಿಂಗಾರ್ಚನೆ ಹೇಳಿಕೊಟ್ಟ ಸಾಹಿತಿ ರಮೇಶ ಮಠಪತಿ ಅವರು, ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆಗೈದ ಜಗದಕ್ಕ ಅಮರಳಾದಳು. ಅಕ್ಕ ಆತ್ಮವಿಶ್ವಾಸ, ಧೈರ್ಯದ ಸಂಕೇತ. ಅಕ್ಕನ ಪ್ರತಿ ಉಸಿರು ಹೋರಾಟಮಯ ಎಂದು ಹೇಳಿದರು.
900 ವರ್ಷಗಳ ಹಿಂದೆ ಯವ್ವನದಲ್ಲಿ ಏಕಾಂಗಿಯಾಗಿ ಉಡುತಡಿಯಿಂದ ಕಲ್ಯಾಣಕ್ಕೆ, ಕಲ್ಯಾಣದಿಂದ ಕದಳಿವರೆಗೆ ಕಾಲ್ನಡಿಗೆಯಲ್ಲೇ ಸಂಚರಿಸಿದ್ದು ಅಸಾಮಾನ್ಯ ಎಂದರು. ಅಕ್ಕನಂಥ ಧೀರ ಮಹಿಳೆ ಇತಿಹಾಸದಲ್ಲಿ ಮತ್ತಾರನ್ನು ಕಾಣಲಾರೆವು. ಅಕ್ಕಮಹಾದೇವಿ ಕನ್ನಡ ನಾಡಿನವರೆಂಬುದು ಹೆಮ್ಮೆಯ ಸಂಗತಿ. ಅಕ್ಕನ ದರ್ಶನದಿಂದ ಜೀವನ ಪಾವನವಾಗುತ್ತದೆ ಎಂದು ತಿಳಿಸಿದರು.
ನೀಲಮ್ಮನ ಬಳಗದ ಸಹೋದರಿಯರು ಅಕ್ಕನ ತೊಟ್ಟಿಲು ಇಟ್ಟು, ಜೋಗುಳ ಹಾಡಿ ನಲಿದರು. ಪ್ರತಿ ಮನೆಯಲ್ಲಿ ಅಕ್ಕಮಹಾದೇವಿ ಜನಿಸಿ ಬರಲೆಂದು ಹರಸಿದರು.

ಪ್ರಮುಖರಾದ ಅಶೋಕ ಎಲಿ, ಮಾಣಿಕಪ್ಪ ಗೋರನಾಳೆ, ರಾಜಕುಮಾರ ಪಾಟೀಲ, ಚನ್ನಬಸಪ್ಪ ಹಂಗರಗಿ, ಅಣವೀರ ಕೊಡಂಬಲ, ಮಾರುತಿ ಪಾಟೀಲ, ಜಗನ್ನಾಥ ಚಿಮಕೋಡೆ, ವೈಜನಾಥ ಹುಣಸಗೇರಿ, ವೀರೇಶ ರೂಗನ್, ಅಭಿಷೇಕ ಮಠಪತಿ ಉಪಸ್ಥಿತರಿದ್ದರು.
ಪರುಷ ಕಟ್ಟೆಯ ಚನ್ನಬಸವಣ್ಣ ಪ್ರಾರ್ಥನೆ ನಡೆಸಿಕೊಟ್ಟರು. ಶ್ರೀದೇವಿ ಮಠಪತಿ, ನೀಲಮ್ಮ ರೂಗನ್, ಲಾವಣ್ಯ ಹಂಗರಗಿ, ಶಾಮಲಾ ಎಲಿ ಸುಶ್ರಾವ್ಯವಾಗಿ ವಚನ ಗಾಯನ ಮಾಡಿದರು. ಸಿ.ಎಸ್. ಗಣಾಚಾರಿ ಭಕ್ತಿ ದಾಸೋಹಗೈದರು. ಸಂಗೀತಾ ಗಣಚಾರಿ ಸ್ವಾಗತಿಸಿದರು.