ಮಡಹಳ್ಳಿ
ಗುಂಡ್ಲುಪೇಟೆ ತಾಲೂಕು ಮಡಹಳ್ಳಿ ಗ್ರಾಮದ ಶರಣ ದಂಪತಿ ನಾಗಮ್ಮ ಮತ್ತು ಬಸವಣ್ಣ ಅವರುಗಳು ನೂತನವಾಗಿ ನಿರ್ಮಿಸಿರುವ ಮನೆಯ ಗುರುಪ್ರವೇಶವು ಲಿಂಗಾಯತ ನಿಜಾಚರಣೆಯಂತೆ ನೆರವೇರಿತು.

ನವಗ್ರಹ ಪೂಜೆ, ಹೋಮ, ಹವನ, ಹಸು ಬಿಡುವುದು, ಒಲೆಯ ಮೇಲೆ ಹಾಲು ಉಕ್ಕಿಸುವಂಥ ಯಾವುದೇ ಅನ್ಯಾಚರಣೆಗಳನ್ನು ಮಾಡದೆ, ಬಸವಾದಿ ಶರಣರ ಭಾವಚಿತ್ರವನ್ನು ಹೊತ್ತು ಕುಟುಂಬಸ್ಥರು, ಬಸವ ಅನುಯಾಯಿಗಳು ನೂತನ ಮನೆ ಒಳಗೆ ಪ್ರವೇಶಿಸುವ ಮೂಲಕ ಗುರುಪ್ರವೇಶ ಕಾರ್ಯ ನೆರವೇರಿತು.

ವಿಶ್ವ ಬಸವಸೇನೆಯ ಪದಾಧಿಕಾರಿಗಳು, ಮಡಹಳ್ಳಿ ಸುತ್ತಮುತ್ತಲಿನ ಬಸವ ಭಕ್ತರುಗಳು ಸೇರಿ ಬಸವಾದಿ ಶರಣರ ವಚನಗಳ ಕಟ್ಟುಗಳನ್ನು ತಲೆಯ ಮೇಲೆ ಹೊತ್ತು ಬಸವಾದಿ ಶರಣರ ಭಾವಚಿತ್ರವನ್ನು ಕೈಯಲ್ಲಿ ಹಿಡಿದು ಬಸವ ಜಯಗೋಷ ಹಾಕುತ್ತಾ ಊರಿನ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮುಖಾಂತರ ನೂತನ ಮನೆಗೆ ಸಾಗಿ ಬಂದರು.

ಮೂಡಗೂರಿನ ವಿರಕ್ತಮಠದ ಇಮ್ಮಡಿ ಉದ್ದಾನ ಮಹಾಸ್ವಾಮಿಗಳ ಸಮ್ಮುಖದಲ್ಲಿ ಷಟ್ಸ್ಥಲ ದ್ವಜದ ಬಗ್ಗೆ ವಿವರಣೆಯನ್ನು ನಂದೀಶ್ವರ್ ಮಾಸ್ಟರ್ ತಿಳಿಸುವ ಮೂಲಕ ಧ್ವಜಾರೋಹಣ ನೆರವೇರಿಸಿದರು.

ಪೂಜ್ಯ ಶ್ರೀ ಇಮ್ಮಡಿ ಉದ್ದಾನ ಸ್ವಾಮೀಜಿ ಸಾಮೂಹಿಕ ಇಷ್ಟಲಿಂಗ ಪೂಜೆ, ಇಷ್ಟಲಿಂಗದ ಮಹತ್ವ, ಅಷ್ಟಾವರಣಗಳ ಅರಿವು, ಪಂಚಾಚಾರಗಳ ಮಹತ್ವದ ಬಗ್ಗೆ ಆಸೀನರಾಗಿರುವರಿಗೆ ವಿವರವಾಗಿ ತಿಳಿಸಿದರು.
ನೆರೆದಿರುವ ಬಸವ ಭಕ್ತರಲ್ಲಿ ಬಸವತತ್ವ ಪ್ರಚಾರಕರಾದ ತಿ. ನರಸೀಪುರದ ಚೌಹಳ್ಳಿ ಲಿಂಗರಾಜಪ್ಪ ಅವರು ವಿನಂತಿಸುತ್ತ, ಮೂಢನಂಬಿಕೆ, ಕಂದಾಚಾರ, ದುರಭ್ಯಾಸ, ದುಶ್ಚಟಗಳನ್ನು ಬಿಡಬೇಕು ಬಸವ ತತ್ವ ಅರಿಯಬೇಕೆಂದರು.

ಕಾರ್ಯಕ್ರಮದಲ್ಲಿ ವಿಶ್ವ ಬಸವಸೇನೆಯ ಅಧ್ಯಕ್ಷರಾದ ಬಸವ ಯೋಗೀಶ, ಪದಾಧಿಕಾರಿಗಳಾದ ಮಡಹಳ್ಳಿ ಸಿ. ಮಹೇಶ್ ಸೂರ್ಯ, ಮಹೇಶ್ ಕಲ್ಪುರ, ಮಹೇಂದ್ರ ಮಡಹಳ್ಳಿ, ವಡ್ಡಗೆರೆ ರವಿ, ಹೆಮ್ಮಿಗೆ ಗಂಗಾಧರ ಹಾಗೂ ಮಡಹಳ್ಳಿ ಗ್ರಾಮದ ಮುಖಂಡರು, ಗ್ರಾಮಸ್ಥರು ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದು ಗುರುಪ್ರವೇಶವನ್ನು ಅರ್ಥಪೂರ್ಣವಾಗಿ ನೆರವೇರಿಸಿಕೊಟ್ಟರು.