ಗದಗ
ಮಡಿವಾಳ ಮಾಚಿದೇವರು ಬಸವಣ್ಣನವರನ್ನು ಗುರು, ಲಿಂಗ, ಜಂಗಮ ಈ ಮೂರು ರೂಪದಲ್ಲಿ ಕಂಡಿದ್ದಾರೆ. ಮಾಚಿದೇವರ ಜನ್ಮಸ್ಥಳ ದೇವರ ಹಿಪ್ಪರಗಿ, ಆದರೆ ಕಲ್ಯಾಣದಲ್ಲಿ ಬಸವಣ್ಣನವರ ಅನುಭವ ಮಂಟಪದ ಮಹಿಮೆ ಕೇಳಿ ಕಲ್ಯಾಣಕ್ಕೆ ಬಂದರು. ಮಾಚಿದೇವರ ಕಾಯಕ ಮತ್ತು ಅವರ ಶರಣತತ್ವ ನಿಷ್ಠೆಯನ್ನು ಬಹಳಷ್ಟು ಶರಣರು ಹೊಗಳಿದ್ದನ್ನು ನಾವು ಕಾಣಬಹುದು.
ಮಡಿವಾಳ ಸಮಾಜದವರು ತಮ್ಮನ್ನು ಮಾಚಿದೇವರ ಸಂತಾನವೆಂದೇ ತಿಳಿದುಕೊಂಡಿದ್ದಾರೆ ಎಂದು ಶಿಕ್ಷಕರು ಹಾಗೂ ಅಂಬಿಗರ ಚೌಡಯ್ಯ ಪ್ರತಿಷ್ಠಾನದ ಸಂಚಾಲಕರಾದ ಎಸ್.ಎಂ. ಹಾದಿಮನಿಯವರು ಹೇಳಿದರು.
ಅವರು ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ, ಗಿರಿಜಮ್ಮಾ ಪ್ರಭಣ್ಣ ಮಡಿವಾಳರ ಇವರ ಮನೆಯಲ್ಲಿ ನಡೆದ ಬಸವಣ್ಣನವರ ೮೫೮ನೇ ಸ್ಮರಣೆಯ ಅಂಗವಾಗಿ ‘ವಚನ ಶ್ರಾವಣ-೨೦೨೫’ರ ಕಾರ್ಯಕ್ರಮದಲ್ಲಿ,
“ಬಸವಣ್ಣನ ನಡೆ ಪರುಷ, ಬಸವಣ್ಣನ ನುಡಿ ಪರುಷ, ಬಸವಣ್ಣನ ದೃಷ್ಠಿ ಪರುಷ, ಬಸವಣ್ಣನ ಹಸ್ತ ಪರುಷ, ಬಸವಣ್ಣನ ಮನ ಪರುಷ, ಬಸವಣ್ಣನ ಭಾವ ಪರುಷ, ತನು ಮನ ಧನವ ಗುರುಲಿಂಗ ಜಂಗಮಕ್ಕೆ, ನಿವೇದಿಸಿದಾತನು ಬಸವಣ್ಣನಯ್ಯ, ಬಸವಣ್ಣನ ನೆನೆಯುವುದೇ ಲಿಂಗಾರ್ಚನೆ, ಬಸವಣ್ಣನ ನೆನೆವುದೇ ಪರತತ್ವ, ಬಸವಣ್ಣನ ನೆನೆಯುವುದೇ ಕಲ್ಯಾಣವೆನಗೆ ಕಲಿದೇವರದೇವಯ್ಯಾ”
ಈ ವಚನ ನಿರ್ವಚನಗೈಯುತ್ತಾ, ಬಸವಣ್ಣನವರು ಈ ಜಗವ ಉದ್ಧರಿಸಲೆಂದೇ ಹುಟ್ಟಿದವರು. ಅವರ ನಡೆ, ನುಡಿಗಳೆಲ್ಲ ಪರುಷವಾಗಿದ್ದವು, ಅಂದರೆ ನಿರ್ಮಲವಾಗಿದ್ದವು. ಈ ಜಗತ್ತಿನ ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದವರು ಬಸವಣ್ಣನವರು. ಅವರ ತನು, ಮನ, ಭಾವಗಳೆಲ್ಲವೂ ಪರುಷವಾಗಿದ್ದವು. ಇದರ ಪ್ರಭಾವದಿಂದ ಅನುಭವ ಮಂಟಪದ ಶರಣರು ಅನುಕರಿಸಿ ಅವರು ಬದುಕೂ ಪರುಷಮಯವಾಗಿತ್ತು.

ಬಸವಣ್ಣನವರು ತಮ್ಮ ಕಾಯಕ, ದಾಸೋಹದ ಮೂಲಕ ಇಡೀ ಸಮಾಜಕ್ಕೆ ಅರ್ಪಿಸಿದ್ದರು. ಅವರ ಬದುಕೇ ಜಗಕೆ ಅರ್ಪಿತವಾಗಿತ್ತು. ಕಲ್ಯಾಣದ ಶರಣರಲ್ಲಿ ಬಹುಜನರು ತಳವರ್ಗ, ಜನಮಾನಾನ್ಯರು, ಕಾಯಕ ವರ್ಗದಿಂದ ಬಂದವರಾಗಿದ್ದರು. ಇವರಿಗೆ ತಮ್ಮ ನಿಷ್ಠಾಪೂರ್ಣತೆಯಿಂದ ತತ್ವ ದಾಸೋಹ ಮಾಡಿ, ಅವರಲ್ಲೂ ವಚನ ರಚಿಸುವಂತಹ ಶಕ್ತಿಯನ್ನು ತುಂಬಿದ್ದರು. ಆ ಕಾರಣಕ್ಕೆ ಅಂದಿನ ಶರಣರು, ಶರಣೆಯರ ಮೇಲೆ ಬಸವಣ್ಣನವರು ಬಹುದೊಡ್ಡ ಪ್ರಭಾವ ಬೀರಿದ್ದರು. ಅವರಿಗೆ ಗುರು, ಲಿಂಗ, ಜಂಗಮ ಸಮಸ್ತವೂ ಆಗಿ ಕಂಡರು. ಕಲ್ಯಾಣಗುಣ ಹೊಂದಿದ ಇಂತಹ ಗುರುವನ್ನು ನೆನೆವುದೇ ತಮಗೆ ಕಲ್ಯಾಣವೆಂದು ಮಡಿವಾಳ ಮಾಚಿದೇವ ಶರಣ ಅಂದಿದ್ದಾರೆ ಎಂದು ಹಾದಿಮನಿ ಹೇಳಿದರು.
ಗೌರಕ್ಕ ಬಡಿಗಣ್ಣನವರ ಇದೇ ವಚನದ ಕುರಿತಾಗಿ ಮತ್ತಷ್ಟು ಚಿಂತನೆ ಗೈದರು.
ಬಸವದಳದ ಶರಣೆಯರ ವಚನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು, ಗಿರಿಜಮ್ಮಾ ಪ್ರಭಣ್ಣ ಮಡಿವಾಳ ಸ್ವಾಗತ, ನಿರೂಪಣೆ ಮಂಜುಳಾ ಹಾಸಿಲಕರ ಮಾಡಿದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಬಸವದಳದ ಕಾರ್ಯಕರ್ತರು, ಬೆಟಗೇರಿಯ ಜನತೆ ಹಾಗೂ ಮಡಿವಾಳ ಮಾಚಿದೇವ ಸಂಘಟನೆಯ ಸದಸ್ಯರು ಪಾಲ್ಗೊಂಡಿದ್ದರು.