ದಿವ್ಯಾಂಜಲಿ: ಭಾಲ್ಕಿ ಮಠದಲ್ಲಿ ಬೆಳೆದ ಅನಾಥ ಮಗು ಈಗ ‘ಮಹಾನಟಿ’ ಸ್ಪರ್ಧೆಯಲ್ಲಿ

‘ನಮ್ಮನ್ನೆಲ್ಲ ಬಸವಣ್ಣನ ಮಕ್ಕಳು ಅಂತ ಅಪ್ಪೋರು ಕರೀತಾರ.’

ಭಾಲ್ಕಿ

ಉದಯೋನ್ಮಖ ನಟಿಯರನ್ನು ಸ್ಪರ್ಧಾತ್ಮಕವಾಗಿ ಗುರುತಿಸುವ ಜೀ ಕನ್ನಡ ವಾಹಿನಿಯ ‘ಮಹಾನಟಿ ರಿಯಾಲಿಟಿ ಶೋ’ ಕಾರ್ಯಕ್ರಮದ ಎರಡನೇ ಆವೃತ್ತಿಗೆ ಭಾಲ್ಕಿ ಮಠದಲ್ಲಿ ಬೆಳೆದಿರುವ ದಿವ್ಯಾಂಜಲಿ ಆಯ್ಕೆಯಾಗಿದ್ದಾಳೆ.

ರವಿವಾರ ನಡೆದ ಮೆಗಾ ಆಡಿಷನ್ ನಲ್ಲಿ ಭಾವುಕಳಾಗಿ ‘ಹುಚ್ಚಿ’ ಪಾತ್ರದಲ್ಲಿ ಅಭಿನಯಿಸಿ ತೀರ್ಪುಗಾರರ ಮೆಚ್ಚುಗೆ ಗಳಿಸಿದಳು. ವೀಕ್ಷಕರೆಲ್ಲ ಎದ್ದು ನಿಂತು ಚಪ್ಪಾಳೆ ಮೂಲಕ ಅಭಿನಂದಿಸಿದರು.

ಮಹಾನಟಿ ಕಾರ್ಯಕ್ರಮದ ಸ್ಪರ್ಧೆಯಲ್ಲಿ ಅಭಿನಯದಲ್ಲಿ ಆಸಕ್ತಿ ಇರುವ ರಾಜ್ಯದ ಬೇರೆ ಬೇರೆ ಕಡೆಯ 25 ಜನ ಯುವತಿಯರು ಪಾಲ್ಗೊಂಡಿದ್ದರು. ಅವರಲ್ಲಿ 20 ನಟಿಯರು ಆಯ್ಕೆಗೊಂಡಿದ್ದಾರೆ. ಮುಂದೆ ಮೂರು ತಿಂಗಳು ಇವರ ಮಧ್ಯೆ ಸ್ಪರ್ಧೆ ನಡೆಯಲಿದೆ.

ಪ್ರತಿ ಶನಿವಾರ ಹಾಗೂ ರವಿವಾರ ರಾತ್ರಿ 7.30ಕ್ಕೆ ಶೋ ಪ್ರಸಾರವಾಗಲಿದೆ. ನಟ ರಮೇಶ ಅರವಿಂದ, ನಟಿ ಪ್ರೇಮಾ, ನಿರ್ದೇಶಕ ತರುಣ್ ಸುಧೀರ, ನಟಿ ನಿಶ್ಚಿಕಾ ಸ್ಪರ್ಧೆಯ ತೀರ್ಪುಗಾರರಾಗಿದ್ದಾರೆ.

ರವಿವಾರ ಅಭಿನಯಿಸಿದ ಪ್ರಸಂಗ ತನ್ನ ಜೀವನದ್ದೇ, ತಾನು ಅನಾಥೆ, ಹುಟ್ಟಿದಾಗ ಜನ್ಮ ನೀಡಿದವರು ತನ್ನನ್ನು ಕಸದ ತೊಟ್ಟಿಗೆ ಹಾಕಿ ಹೋಗಿದ್ದರು ಎಂದು ಕಾರ್ಯಕ್ರಮದಲ್ಲಿ ದಿವ್ಯಾಂಜಲಿ ಮನ ಮಿಡಿಯುವಂತೆ ಮಾತನಾಡಿದಳು. ವಿಷಯ ತಿಳಿದ ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಬಸವಲಿಂಗ ಪಟ್ಟದ್ದೇವರು ಎತ್ತಿಕೊಂಡು ಹೋಗಿ ಮಠದಲ್ಲಿ ಬೆಳಸಿದರು.

ಬಸವ ಮೀಡಿಯಾದೊಂದಿಗೆ ಮಾತನಾಡುತ್ತ “ನಮ್ಮ ಗುರುಕುಲದಲ್ಲಿ ಬಾಳ ಮಕ್ಳು ಅದಿವಿ ನಾವು. ನಮ್ಮನ್ನೆಲ್ಲ ಬಸವಣ್ಣನ ಮಕ್ಕಳು ಅಂತ ಅಪ್ಪೋರು ಕರೀತಾರ,” ಎಂದಳು.

“ನಮ್ಮನ್ನೆಲ್ಲ ಬೆಳೆಸಿದ ನಮ್ಮ ಅಪ್ಪೋರಾದ ಪೂಜ್ಯ ಬಸವಲಿಂಗ ಪಟ್ಟದ್ದೇವರು ನನ್ನ ಆಯ್ಕೆ ತಿಳಿದು ಬಹಳ ಖುಷಿ ಪಟ್ಟಿರ್ತಾರ, ಆನಂದದಿಂದ ಕಣ್ಣೀರು ಹಾಕಿರ್ತಾರ. ಅಷ್ಟೇ ಅಲ್ಲ, ಗುರುಕುಲದಾಗ ಇರೋರೆಲ್ಲ ಖುಷಿಗೊಂಡಿರ್ತಾರ.

“ನಾನು ಆರನೇತ್ತಾ ಇದ್ದಾಗ ಹುತಾತ್ಮ, ಕ್ರಾಂತಿಕಾರಿ ಭಗತ್ ಸಿಂಗ್ ನಾಟಕ ಮಾಡಿದ್ದೆ. ಆ ನಾಟಕ ನೋಡಿದ್ದ ಅಪ್ಪಾವ್ರು ನನ್ನ ನಟನೆ ಮೆಚ್ಚಿದ್ದರು. ಆವಾಗಲೇ ಅವರು ನನ್ನೊಳಗಿನ ನಟನೆಯ ಪ್ರತಿಭೆ ಗುರ್ತಿಸಿದರು. ಮುಂದೆ ಒಬ್ಬ ಒಳ್ಳೆಯ ನಟಿ ಆಗುತ್ತೀ ಎಂದು ಅಂದೇ ಹಾರೈಸಿದ್ದರು. ಅದರಂತೆ ನಾನು ಪಿ.ಯು.ಸಿ ಮುಗಿಸಿದ ನಂತರ ರಂಗತರಬೇತಿಗೆ ಸೇರಿಸಿದರು,” ಎಂದಳು.

ನಂತರ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘದ ಶಿವಸಂಚಾರ ನಾಟಕಗಳಲ್ಲಿ ವರ್ಷಕಾಲ ಅಭಿನಯಿಸಿ ಉತ್ತಮ ನಟಿಯೆಂದು ಸೈ ಎನಿಸಿಕೊಂಡಿದ್ದಾಳೆ.

ದಿವ್ಯಾಂಜಲಿ ಪ್ರತಿಭಾವಂತೆ. ಭವಿಷ್ಯದಲ್ಲಿ ಇನ್ನಷ್ಟು ಸಾಧಿಸಬಲ್ಲಳು ಎಂದು ಸಾಣೇಹಳ್ಳಿಯ ರಂಗನಿರ್ದೆಶಕ, ಕಲಾವಿದ ದಂಪತಿ ಮಂಜುಳಾ ಬದಾಮಿ ಮತ್ತು ವೈ.ಡಿ. ಬದಾಮಿ ಹೇಳುತ್ತಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/DAHwtSaP5nUL2sT483TnP6

Share This Article
6 Comments
  • ಭಾಲ್ಕಿ ಮಠದಲ್ಲಿ ತುಂಬ ಜನ ಅನಾಥ ಮಕ್ಕಳನ್ನು ಸಲುಹಿ ಬೆಳೆಸುತ್ತಿದ್ದಾರೆ , ಅಧ್ಬುತ ಶಿಕ್ಷಣ‌ಕೂಡ ಕೊಡಿಸುತ್ತಾರೆ , ಸಮಾಜದ ಕಟ್ಟ ಕಡೆಯ ವ್ಯಕ್ತಿ ಎಂದರೆ ಇಂತಹ ಮಕ್ಕಳನ್ನು ಎದೆಗೊತ್ತಿಕೊಂಡು ಉಣಿಸಿ ಬೆಳೆಸುವುದೇ – ಕೂಡಲಸಂಗಮದೇವ ನಿಮ್ಮ ಮನೆಯ ಮಗನೆಂದೆನಿಸಯ್ಯಾ ಎಂಬ ವಚನದ ಸಾಲು ನೆನಪಾಯಿತು , ಪೂಜ್ಯ ಗುರುಗಳಿಗೆ ಶರಣು ಶರಣಾರ್ಥಿಗಳು , ಮಗು ದಿವ್ಯಾಂಜಲಿಗೆ ಅಭಿನಂದನೆಗಳು ಭವಿಷ್ಯ ಉಜ್ವಲವಾಗಿರಲಿ

  • ಪೂಜ್ಯರ ಕಾರ್ಯ ಅತ್ಯಂತ ಸ್ಮರಣೀಯವಾಗಿದೆ. ಭಾಲ್ಕಿಯ ಶ್ರೀಮಠ ತಂದೆ ತಾಯಿ ಸಮಾಜಕ್ಕೆ ಬೇಡವಾದ ಅನೇಕ ಮಕ್ಕಳಿಗೆ ತಂದೆತಾಯಿಯಾಗಿ ಸಲುಹುತ್ತಲಿರುವರು. ತಮ್ಮ ಜನ್ಮದಿನವನ್ನು ಬಸವ ಶಿಶುಗಳ ದಿನವಾಗಿಆಚರಿಸುತ್ತಾರೆ. ಅನಾಥ ಮಕ್ಕಳಿಗೆ ಹೊಸ ಬಟ್ಟೆ ತೊಡಿಸುವ ಗುರುಗಳು ತಮ್ಮ ಜನ್ಮದಿನ ಕೂಡ ಹಳೆ ಬಟ್ಟೆಯನ್ನೆ ತೊಡುತ್ತಾರೆ. ಅನಾಥ ಮಕ್ಕಳ ಭವಿಷ್ಯವನ್ನು ರೂಪಿಸುತ್ತ ಅವರ ನಗುವಿನಲ್ಲಿಯೇ ತಮ್ಮ ಬದುಕಿನ ಸಾರ್ಥಕತೆ ಕಾಣುವ ಮಾತೃಹೃದಯದ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರಿಗೆ ಹಾಗೂ ಪೂಜ್ಯ ಗುರು ಬಸವ ಪಟ್ಟದ್ದೇವರಿಗೆ ಭಕ್ತಿಪೂರ್ವಕ ಅನಂತ ಶರಣು ಶರಣಾರ್ಥಿಗಳು🌹🌹🙏🙏

    • ಭಾಲ್ಕಿ ಮಠದ ಗುರುಗಳು ಹಾಗೂ ತರಳಬಾಳು ಜಗದ್ಗುರು ಶಾಖಾಮಠ ಸಾಣೇಹಳ್ಳಿಯ ಗುರುಗಳು, ಸಿರಿಗೆರೆಯ ಗುರುಗಳ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ

    • ಬಾಲ್ಕಿ ಪೂಜ್ಯರು ಪೋಷಿಸುತ್ತಿರುವ ಪ್ರತಿಭೆಗೆ ಶರಣು ಶರಣಾರ್ಥಿ

  • ಬಸವಾದಿ ಶರಣರ ಆಶೀರ್ವಾದ ನಿನ್ನನು ಕಾಪಾಡಲಿ ಮಗಳೇ

Leave a Reply

Your email address will not be published. Required fields are marked *