ದಾವಣಗೆರೆ
ಲಿಂಗೈಕ್ಯ ಶರಣ ಮಹಾಂತೇಶ ಅಗಡಿ ಅವರಿಗೆ ‘ನುಡಿ ನಮನ’ ಕಾರ್ಯಕ್ರಮ ಸದ್ಯೋಜಾತ ಸ್ವಾಮಿಗಳ ಹಿರೇಮಠ, ಎಂಸಿಸಿ, ‘ಬಿ’ ಬ್ಲಾಕ್ ನಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ದಾವಣಗೆರೆ ವಿರಕ್ತಮಠದ ಪೂಜ್ಯ ಬಸವಪ್ರಭು ಸ್ವಾಮೀಜಿ ವಹಿಸಿದ್ದರು. ಅವರು ನುಡಿನಮನ ಸಲ್ಲಿಸುತ್ತಾ, ಲಿಂಗೈಕ್ಯ ಶರಣ ಮಹಾಂತೇಶ ಅವರು ಮಹಾ ದಾಸೋಹಿಯಾಗಿದ್ದರು. ಬಸವತತ್ವಕ್ಕೆ ಎಲ್ಲಿಯೇ ಧಕ್ಕೆಯಾದರು ಅದರ ವಿರುದ್ಧ ಧ್ವನಿ ಎತ್ತುತ್ತಿದ್ದರು. ಅವರ ಅಗಲಿಕೆಯಿಂದ ಸಮಾಜಕ್ಕೆ, ಅವರ ಕುಟುಂಬಕ್ಕೆ ನಷ್ಟವುಂಟಾಗಿದೆ, ಎಂದರು.

ಶರಣ ಸಾಹಿತ್ಯ ಪರಿಷತ್ತಿನ ವಿಶ್ವೇಶ್ವರಯ್ಯ ಬಿ.ಎಂ. ಮಾತನಾಡುತ್ತಾ, ಲಿಂಗೈಕ್ಯ ಮಹಾಂತೇಶ ಅಗಡಿ ಅವರು ಬಸವಾದಿ ಶರಣರ ಆಶಯವನ್ನು ಈಡೇರಿಸಲು ಸದಾ ಸಿದ್ಧರಿದ್ದರು. ಲಿಂಗಾಯತ ಧರ್ಮದ ವಿರುದ್ಧ ಮಾತನಾಡಿದ ವಚನಾನಂದ ಶ್ರೀಗಳ ಹೇಳಿಕೆ ಖಂಡನೆ ಮಾಡುವ ಸಂದರ್ಭದಲ್ಲಿ, ಪತ್ರಕರ್ತ ವಿಶ್ವೇಶ್ವರ ಭಟ್ ಅವರ ವಿರುದ್ಧ ಪ್ರತಿಭಟನೆ, ರಂಗನಿರ್ದೆಶಕ ಅಡ್ಡಂಡ ಕಾರ್ಯಪ್ಪನವರ ಲಿಂಗಾಯತ ವಿರೋಧಿ ಹೇಳಿಕೆಗೆ ಖಂಡನೆ, ಸೇರಿದಂತೆ ಹಲವಾರು ಹೋರಾಟಕ್ಕೆ ನಮಗೆ ಮಾರ್ಗದರ್ಶನ ಮಾಡಿದ್ದರು.
ಲಿಂಗಾಯತ ಧರ್ಮದ ಅಧ್ಯಯನ ಶಿಬಿರ ನಡೆಸಲು ಸಲಹೆ ಸೂಚನೆಗಳನ್ನು ನೀಡಿ ಯಶಸ್ವಿ ಆಗಲು ಸಹಕರಿಸಿದರು ಎಂದು ಲಿಂಗೈಕ್ಯರ ಕಾರ್ಯವನ್ನು ಸ್ಮರಿಸಿದರು.
ಜಾ.ಲಿಂ. ಮಹಾಸಭಾ ಕಲಬುರ್ಗಿ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ, ದಾವಣಗೆರೆ ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಎಂ. ಶಿವಕುಮಾರ, ವೀರಶೈವ ಮಹಾಸಭಾ ರಾಜ್ಯ ಉಪಾಧ್ಯಕ್ಷ ಅಥಣಿ ವೀರಣ್ಣ, ದಾವಣಗೆರೆ ಮಾಜಿ ಉಪಮೇಯರ್ ಸೋಗಿ ಶಾಂತಕುಮಾರ, ಬಸವ ಬಳಗದ ಅಧ್ಯಕ್ಷ ಎ.ಎಚ್. ಹುಚ್ಚಪ್ಪ ಮಾಸ್ಟರ್, ಮಾಜಿ ಶಾಸಕ ಶಿವಶಂಕರ, ಧಾರವಾಡ ಶಾಸಕರಾದ ಅರವಿಂದ ಬೆಲ್ಲದ, ಶರಣ ಸಾಹಿತ್ಯ ಪರಿಷತ್ತಿನ ದಾವಣಗೆರೆ ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ, ಮತ್ತಿತರರು ಲಿಂಗೈಕ್ಯ ಶರಣರ ಸೇವೆ ಸ್ಮರಿಸಿ ನುಡಿನಮನ ಸಲ್ಲಿಸಿದರು.

ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಶರಣೆ ಶಾಂತಾದೇವಿ ಅಗಡಿ, ಸುಜಾತ ಅಗಡಿ, ಷಡಕ್ಷರಿ, ಆವರಗೆರೆ ರುದ್ರಮುನಿ, ಸುಮಾ ಅಂಗಡಿ, ಬಸವ ಬಳಗ, ಬಸವ ಕಲಾ ಲೋಕ, ಜಾ.ಲಿಂ. ಮಹಾಸಭಾ, ಶ.ಸಾ.ಪರಿಷತ್ತು, ಬಸವ ಕೇಂದ್ರ ಮತ್ತಿತರ ಲಿಂಗಾಯತ, ಬಸವಪರ ಸಂಘಟನೆಗಳ ಮುಖಂಡರು, ಸದಸ್ಯರು ಅಗಡಿ ಪರಿವಾರದವರು ಉಪಸ್ಥಿತರಿದ್ದರು.
ಆರಂಭದಲ್ಲಿ ಲಿಂಗೈಕ್ಯ ಶರಣರ ಭಾವಚಿತ್ರಕ್ಕೆ ಪೂಜ್ಯರು, ಗಣ್ಯರು ಪುಷ್ಪಾರ್ಪಣೆ ಮಾಡಿದರು. ಬಸವ ಕಲಾ ಲೋಕದಿಂದ ವಚನ ಭಜನೆ ನಡೆಯಿತು.
ಸೃಜನ್ ಮಹಾಂತೇಶ ಅಗಡಿ ಎಲ್ಲರನ್ನು ಸ್ವಾಗತಿಸಿದರು. ಪ್ರೇಮಾ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು. ಪರೀಕ್ಷಿತ ಅಂಗಡಿ ವಂದನಾರ್ಪಣೆ ಮಾಡಿದರು.