ದಾವಣಗೆರೆ:
ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ಕೊಟ್ಟ ವಿಶ್ವದ ಮೊದಲ ದಾರ್ಶನಿಕ ಬಸವಣ್ಣ ಎಂದು ಅತ್ತಿವೇರಿ ಶ್ರೀ ಬಸವೇಶ್ವರಿ ಮಾತಾಜಿ ಹೇಳಿದರು.
ದಾವಣಗೆರೆ ತಾಲ್ಲೂಕಿನ ಕಕ್ಕರಗೊಳ್ಳ ಗ್ರಾಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜನೆಗೊಂಡಿದ್ದ ‘ಶರಣತತ್ವ ದರ್ಶನ’ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದರು.

ಲಿಂಗದೀಕ್ಷೆ ಮಾಡುವ ಮೂಲಕ ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ಕಲ್ಪಿಸಿಕೊಡುವ ಮೂಲಕ ಸಮಸಮಾಜ ನಿರ್ಮಾಣಕ್ಕೆ ಬಸವಣ್ಣ ಕಾರಣರಾದರು. ಬಲವಾಗಿ ಬೇರೂರಿದ್ದ ಮೂಢನಂಬಿಕೆ, ವರ್ಗೀಕೃತ ಸಮಾಜದ ವ್ಯವಸ್ಥೆ ಧಿಕ್ಕರಿಸಿ, ಶೋಷಣೆರಹಿತ, ಜಾತ್ಯತೀತ, ಸಮಸಮಾಜದ ನಿರ್ಮಾಣಕ್ಕೆ ಎಲ್ಲಾ ಶರಣರು ಮುಂದಾದರು. ಕತ್ತಲೆಯ ಜಗತ್ತಿಗೆ ಆಕಾಶ ದೀಪವಾಗಿ ಬಸವಣ್ಣ ಉದಯಿಸಿದರು ಎಂದು ತಿಳಿಸಿದರು.
ದೇವರು ಬಾಹ್ಯ ಆಡಂಬರಗಳಿಗೆ ಒಲಿಯುವುದಿಲ್ಲ ಎಂದ ಮಾತಾಜಿ, ಬಸವಣ್ಣನವರ ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರು ಹಳಿಯಲುಬೇಡ ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ಧಿ’ ವಚನ ಉದಾಹರಿಸಿ ಜೀವನದಲ್ಲಿ ಇದನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಕೆ.ಜಿ. ಬಸವನಗೌಡ್ರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ, ಕದಳಿ ವೇದಿಕೆ ಅಧ್ಯಕ್ಷೆ ಮಮತಾ ನಾಗರಾಜ, ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಸಿರಿಗೆರೆ ಪರಮೇಶ್ವರಪ್ಪ, ಕಕ್ಕರಗೊಳ್ಳ ಮುದೇಗೌಡ್ರು ನಾಗರಾಜ, ಬಿ.ಟಿ. ಪ್ರಕಾಶ, ಉಪನ್ಯಾಸಕ ಇಬ್ರಾಹಿಂ ಖಲೀಲುಲ್ಲಾ, ಗ್ರಾ.ಪಂ. ಉಪಾಧ್ಯಕ್ಷ ಗುತ್ಯಪ್ಪ ಕಕ್ಕರಗೊಳ್ಳ ಸೇರಿದಂತೆ ಅನೇಕರಿದ್ದರು.
