ಮೂರು ದಿನಗಳ ಮಕ್ಕಳ ಸಾಹಿತ್ಯ ಸಂಸ್ಕೃತಿ ಕಮ್ಮಟಕ್ಕೆ ತೆರೆ

ಸಾಣೇಹಳ್ಳಿ

ಇಲ್ಲಿನ ಎಸ್ ಎಸ್ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ಶಿವಕುಮಾರ ಕಲಾಸಂಘ ಸಾಣೇಹಳ್ಳಿ ಇವರ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆದ ರಾಜ್ಯ ಮಟ್ಟದ “ಮಕ್ಕಳ ಸಾಹಿತ್ಯ ಸಂಸ್ಕೃತಿ ಕಮ್ಮಟ” ನಡೆಯಿತು.

ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಕ್ಕಳು ತೋಟದಲ್ಲಿರುವ ಹೂವು ಇದ್ದಂತೆ. ಯಾವ ಮಕ್ಕಳು ಪ್ರತಿಭಾಹೀನರಲ್ಲ. ಪ್ರತಿಯೊಬ್ಬ ಮಕ್ಕಳಲ್ಲೂ ಒಂದಿಲ್ಲೊಂದು ಪ್ರತಿಭೆ ಅಡಕವಾಗಿರುತ್ತದೆ. ಅದಕ್ಕೆ ಸ್ಪೂರ್ತಿ ತುಂಬಿದರೆ ಹೊರಹೊಮ್ಮುವುದು.

ಮಕ್ಕಳಿಗೆ ಅಂಕಗಳಿಕೆ ಮುಖ್ಯವಾಗದೇ ಮಾನವೀಯ ಮೌಲ್ಯಗಳು‌ ಮುಖ್ಯವಾಗಬೇಕು. ಮಕ್ಕಳಿಗೆ ಸಾಂಸ್ಕೃತಿಕ, ನೈತಿಕ, ಧಾರ್ಮಿಕ ನೆಲಗಟ್ಟಿನ ಮೇಲೆ ಶಿಕ್ಷಣ ಕೊಡಬೇಕು. ಆಗ ತನ್ನ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳಲು ಸಾಧ್ಯ.

ಮಕ್ಕಳು ಹಿರಿಯರ ಬಗ್ಗೆ ಶ್ರದ್ಧೆ, ಗೌರವವನ್ನಿಟ್ಟುಕೊಳ್ಳಬೇಕು. ತಂದೆ ಮಕ್ಕಳಲ್ಲಿ ಪ್ರೀತಿ, ವಿಶ್ವಾಸದ ಬಾಂಧವ್ಯ ಇದ್ದಾಗ ಬದುಕಿಗೆ ಕಳೆ ಬರುವುದು. ಯಾವ ಮಕ್ಕಳು ತಂದೆ ತಾಯಿಗಳ ಪ್ರೀತಿಯನ್ನು ಕಳೆದುಕೊಳ್ಳಬಾರದು. ಮಕ್ಕಳು ಮೊಬೈಲ್, ಟಿವಿಯ ದಾಸರಾಗದೇ ಪುಸ್ತಕದ ದಾಸರಾಗಬೇಕು. ಈ ಹಿನ್ನಲೆಯಲ್ಲಿ ನಮ್ಮ ಮಕ್ಕಳು ವಚನ ಹೇಳುವ ಸಂಸ್ಕೃತಿ ಬೆಳೆಸಿಕೊಂಡರೆ ಅವರ ಬದುಕು ಸಂಸ್ಕಾರವಂತ ಆಗುವುದು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಹಿತಿ ನಿಂಗು ಸೊಲಗಿ ಮಾತನಾಡಿ, ಇಂತಹ ಕಮ್ಮಟಗಳು ಪ್ರತಿಭೆಗೆ ಪ್ರೋತ್ಸಾಹ ನೀಡುವಂಥದ್ದು. ಸಾಣೇಹಳ್ಳಿಯಲ್ಲಿ ಕ್ರಿಯಾಶೀಲ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತವೆ. ಮಕ್ಕಳು ಕೇಳಿ ಕಲಿಯದೇ ನೋಡಿ ಕಲಿಯುವರು. ರಂಗಭೂಮಿ, ಸಾಹಿತ್ಯ, ಸಂಗೀತದ ಮೂಲಕ ಮಕ್ಕಳು ತಮ್ಮ ವ್ಯಕ್ತಿತ್ವ ವಿಕಾಸವನ್ನು ಮಾಡಿಕೊಳ್ಳುವರು. ಪ್ರತಿಯೊಬ್ಬರು ಪ್ರದರ್ಶನಕ್ಕಿಂತ ಪ್ರೊಸೆಸ್ಸಾಗಿ ಕೆಲಸ ಮಾಡಬೇಕು. ಸಾಣೇಹಳ್ಳಿ ರಂಗಭೂಮಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವುದು. ಮೌಲ್ಯಗಳನ್ನು ಬಿತ್ತುವ ಕೃಷಿಕರಾಗಬೇಕು. ನಮ್ಮ ಮಕ್ಕಳು ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗುವಿಕೆಯಲ್ಲಿ ಹಿಂದುಳಿದಿದ್ದಾರೆ. ಅವರನ್ನು ಮುನ್ನೆಲೆಗೆ ತರಬೇಕು ಎಂದರು.

ಮಕ್ಕಳ ಸಾಹಿತ್ಯ ಪರಿಷತ್ತಿನ ರಾಜ್ಯಧ್ಯಕ್ಷ ಸಿ ಎನ್ ಅಶೋಕ ಮಾತನಾಡಿ; ವಿಶ್ವಮಾನವ ಸಂದೇಶವನ್ನು ಪೂಜ್ಯರು ಸಾರುತ್ತಿದ್ದಾರೆ. ಮಕ್ಕಳು ಉದ್ಯಾನವನದಲ್ಲಿರುವ ಹೂಗಳು. ಇವುಗಳನ್ನು ಬಾಡಿಸದೇ ದೇಶವನ್ನು ಕೊಟ್ಟುವ ಕೆಲಸದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು. ಮಕ್ಕಳ ಮನಸ್ಸಿನಲ್ಲಿ ಜಾತಿಯ ವಿಷ ಬೀಜವನ್ನು ಬಿತ್ತಿ ಅಲ್ಪಮಾನವನನ್ನಾಗಿ ಮಾಡಿದ್ದೇವೆ. ಮಕ್ಕಳು ವಿಶ್ವಮಾನವನಾಗಬೇಕು.


ಮಕ್ಕಳ ಸಾಹಿತ್ಯ ಪರಿಷತ್ತಿನ ಕಾರ್ಯಧ್ಯಕ್ಷ ಮಹಾದೇವ ಮಾತನಾಡಿ; ಕರ್ನಾಟಕದ ಭೂಪಟದಲ್ಲಿ ಸಾಣೇಹಳ್ಳಿ ವಿಶೇಷತೆ ಪಡೆದಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಯೋಗೀಶ್ ಸಹ್ಯಾದ್ರಿ ಮಾತನಾಡಿ, ಯಾವುದೇ ಕೆಲಸ ಮಾಡಿದರೂ ಮನಸ್ಸು ಇರಬೇಕು. ಮನಸ್ಸಿನ ಜೊತೆಗೆ ವ್ಯಕ್ತಿತ್ವ ಇರಬೇಕು. ಜೀವನ ಎಂದರೆ ನಮ್ಮನ್ನು ನಾವು ಕ್ರಿಯೇಟ್ ಮಾಡಿಕೊಳ್ಳುವುದು ಎಂದರು.

ಕಮ್ಮಟಕ್ಕೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬಂದ 300 ಜನ ವಿದ್ಯಾರ್ಥಿಗಳು ಮೂರು ದಿನಗಳಲ್ಲಿ ಕಲಿತ ಕತೆ, ಕವನ, ನಾಟಕ, ಮಲ್ಲಿಹಗ್ಗ, ಗಾಂಧಾರಿ ವಿದ್ಯೆ, ಚಿತ್ರಕಲೆ, ನೃತ್ಯ ಪ್ರದರ್ಶಿಸಿದರು.

ವೇದಿಕೆಯ ಮೇಲೆ ಹೂವಿನಹಳ್ಳಿ ಸಿದ್ದೇಶ, ಮಹೇಶ, ಲತಾ, ಜಗದೀಶ, ಪುಟ್ಟೇಗೌಡ್ರು, ವಿರೂಪಾಕ್ಷಪ್ಪ, ಸಂಜೀವ ದುಮಕನಾಡ, ವೆಂಕಟೇಶ, ರವಿ ಸಾಗರ, ಮನೋಹರ, ಮಹಾದೇವಪ್ಪ ಇತರರು ಉಪಸ್ಥಿತರಿದ್ದರು. ಸಂಪತ್ ಕುಮಾರ್ ಸ್ವಾಗತಿಸಿದರೆ ದೀಪ್ತಿ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FYCnBXoFfiK0GH4dAJvoia/

Share This Article
Leave a comment

Leave a Reply

Your email address will not be published. Required fields are marked *