ಚಾಮರಾಜನಗರ :
ತಾಲೂಕಿನ ಮರಿಯಾಲ ಗ್ರಾಮದ ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನ ಮಠದ ಆವರಣದಲ್ಲಿ ಮಂಗಳವಾರ ಸಾವಯವ ಕೃಷಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಮಠದ ಪೀಠಾಧಿಪತಿ ಪೂಜ್ಯ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ರೈತರು ಭೂಮಿಯ ಒಡೆಯರಾಗಬೇಕೇ ಹೊರತು ಅದನ್ನು ಮಾರಾಟ ಮಾಡಿ ಕೂಲಿ ಕಾರರಾಗಬಾರದು.

ಮಣ್ಣು, ನೀರು, ಗಾಳಿಯ ಮಾಲಿನ್ಯ ತಡೆಯುವ ಸಾವಯವ ಕೃಷಿ ವಿಧಾನದಿಂದ ಪರಿಸರ ಸಂರಕ್ಷಣೆಯಾಗಲಿದೆ. ಉತ್ತಮ ಆಹಾರ ಪದ್ಧತಿ ರೂಢಿಸಿಕೊಳ್ಳಲು, ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ, ಎಂದು ಹೇಳಿದರು.
ರೈತ ನಾಯಕ ಹೊನ್ನೂರು ಪ್ರಕಾಶ್ ಮಾತನಾಡಿ, ಬಂಡೀಪುರದ ಸುತ್ತಮುತ್ತಲಿನ ಶೇ.30ರಷ್ಟು ಭೂಮಿಯನ್ನು ರೈತರು ಮಾರಾಟ ಮಾಡಿಬಿಟ್ಟಿದ್ದಾರೆ. ಕೃಷಿ ಉಳಿಯಬೇಕಾದರೆ ಹಳ್ಳಿಗಳಲ್ಲಿ ರೈತರು ಗುಂಪು ಕೃಷಿ ಮಾಡಬೇಕೆಂದು ಒತ್ತಾಯಿಸಿದರು.

ಮುಂದೊಂದು ದಿನ ಕುಡಿಯುವ ನೀರನ್ನೂ ದುಡ್ಡು ಕೊಟ್ಟು ಖರೀದಿ ಮಾಡಬೇಕಾಗುತ್ತದೆ ಎಂದು ಪ್ರೊ. ಡಿ.ನಂಜುಂಡಸ್ವಾಮಿ ಹೇಳಿದ್ದರು. ಅದರಂತೆಯೇ ಈಗ ಆ ಪರಿಸ್ಥಿತಿ ಬಂದಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಆದರೆ ರೈತರು ಬೆಳೆದ ಬೆಳೆಗಳ ಬೆಲೆ ನಿಗದಿಯಾಗಿ, ಬೆಲೆ ಏರಿಕೆ ಮಾತ್ರ ಮಾಡುತ್ತಿಲ್ಲ. ರೈತರ ಆತ್ಮಹತ್ಯೆಗೆ ಈ ವಿಚಾರವೂ ಪ್ರಮುಖ ಕಾರಣವಾಗಿದೆ, ಎಂದು ಹೇಳಿದರು.

ಕಾರ್ಯಾಗಾರ ಉದ್ಘಾಟಿಸಿದ ಪ್ರಗತಿಪರ ರೈತ ಮಾಲಂಗಿ ರೇಚಣ್ಣ,
ಕೃಷಿಕ ತಂದೆ ತನ್ನ ಮಗನಿಗೆ ಬೇರೆ ಉದ್ಯೋಗ ಮಾಡಲು ಹೇಳುತ್ತಿದ್ದಾನೆಯೇ ಹೊರತು ಕೃಷಿ ಮಾಡಿಸುತ್ತಿಲ್ಲ. ಕೃಷಿಕರ ಮಕ್ಕಳಿಗೆ ಕೃಷಿಕರೇ ಹೆಣ್ಣು ಕೊಡುತ್ತಿಲ್ಲ. ಅರ್ಧ ಅಥವಾ ಒಂದು ಎಕರೆ ಇರುವ ರೈತ ಜಮೀನು ಮಾರಾಟ ಮಾಡಿ ಭೂಮಿ ಕಳೆದುಕೊಳ್ಳುತ್ತಿದ್ದಾನೆ ಎಂದು ಕಳವಳ ವ್ಯಕ್ತಪಡಿಸಿದರು.

ಮೇಲಾಜಿಪುರದ ಬಸವಾನುಭವ ಮಂಟಪದ ಶಿವಬಸವ ಸ್ವಾಮೀಜಿ, ಪ್ರಗತಿಪರ ಕೃಷಿಕ ಪಡಗೂರು ರಾಜಪ್ಪ, ಹೊನ್ನೂರು ಪ್ರಕಾಶ್, ಮತ್ತು ವಿವಿಧ ಗ್ರಾಮಗಳ ರೈತರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

