ಲಾತೂರ (ಮಹಾರಾಷ್ಟ್ರ)
ದೇಶದಲ್ಲಿ ಸಾವಿರಾರು ಮಠಗಳಿವೆ, ಆ ಮಠಗಳ ಕೆಲಸ ಬರೀ ಸಂಪತ್ತನ್ನು ಸಂಗ್ರಹಿಸುವುದಲ್ಲ, ಬದಲಿಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಲು, ಅನ್ನದಾಸೋಹದ ಜೊತೆಗೆ ಜ್ಞಾನದಾಸೋಹ ನೀಡುವ ಸಾಂಸ್ಕೃತಿಕ ಕೇಂದ್ರಗಳು ಅವು ಆಗಬೇಕು ಎಂದು ಲಿಂಗಾಯತ ಚಳುವಳಿಯ ರಾಷ್ಟ್ರೀಯ ಪ್ರಚಾರಕ ಮತ್ತು ಉಸ್ತೂರಿ ಹಾಗೂ ಆಳಂದ ಮಠದ ಮಠಾಧೀಶ ಪೂಜ್ಯ ಕೊರಣೇಶ್ವರ ಸ್ವಾಮೀಜಿ ಹೇಳಿದರು.
ಲಾತೂರ ಜಿಲ್ಲೆಯ ನಿಲಂಗಾ ಪಟ್ಟಣದ ಸಂಗನಬಸವ ವಿರಕ್ತಮಠದಲ್ಲಿ ನಡೆಸಲಾಗುತ್ತಿರುವ, ಮಹಾತ್ಮ ಬಸವೇಶ್ವರ ಗುರುಕುಲದ ಮೊದಲನೆ ವಾರ್ಷಿಕೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ದೇಶದ ಪ್ರಗತಿಯಲ್ಲಿ ಲಿಂಗಾಯತ ಮಠಗಳ ಕೊಡುಗೆ ಬಹಳ ದೊಡ್ಡದಾಗಿದೆ. ದೇಶಾದ್ಯಂತ ಲಿಂಗಾಯತ ಮಠಗಳು ನಡೆಸುವ ವಿವಿಧ ಶೈಕ್ಷಣಿಕ ಸಂಸ್ಥೆ ಮತ್ತು ಗುರುಕುಲಗಳ ಮೂಲಕ ಧಾರ್ಮಿಕ ಮೌಲ್ಯಗಳು ಮತ್ತು ಸಾಮಾಜಿಕ ಸಮಾನತೆಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ತುಂಬಲಾಗಿದೆ.
ಇಂದಿನ ಮೊಬೈಲ್ ತಂತ್ರಜ್ಞಾನದ ಯುಗದಲ್ಲಿ, ಯುವ ಪೀಳಿಗೆಯಲ್ಲಿ ಉತ್ತಮ ಮೌಲ್ಯಗಳನ್ನು ತುಂಬಲು ಮಠಗಳ ಗುರುಕುಲ ಶಿಕ್ಷಣ ವ್ಯವಸ್ಥೆಯ ಅವಶ್ಯಕತೆಯಿದೆ. ಸಮಾಜ ಸೇವೆಯೇ ನಿಜವಾದ ದೇಶಸೇವೆ ಮತ್ತು ಪ್ರಜೆಗಳ ಉನ್ನತಿಯೇ ದೇಶದ ಉನ್ನತಿ ಎಂದು ಹೇಳಿದರು.
ನಮಗೆ ಬಸವಾದಿ ಶಿವಶರಣರು ತನುವಿನ ಶುದ್ದಿಗಾಗಿ ಕಾಯಕ, ಮನದ ಶುದ್ಧಿಗಾಗಿ ಶಿವಯೋಗ, ಧನದ ಶುದ್ಧಿಗಾಗಿ ದಾಸೋಹ ಮಾರ್ಗವನ್ನು ತೋರಿದ್ದಾರೆ. ಈ ಸಿದ್ಧಾಂತದ ಮೇಲೆ ಮಠಾಧೀಶರು ತಮ್ಮ ಜೀವನವನ್ನು ಸಾಗಿಸಬೇಕೆಂದು ಹೇಳಿದರು. ಗುರು, ಲಿಂಗ, ಜಂಗಮವು ವ್ಯಕ್ತಿ, ವಸ್ತು, ಅಥವಾ ಸಮುದಾಯವಲ್ಲ, ಅವುಗಳು ಶರಣ ಜೀವನ ನಡೆಸುವ ಸರಳ ಸಿದ್ಧಾಂತಗಳಾಗಿವೆ. ಇದನ್ನು ಅರಿತು ಮಠಾಧೀಶರು ತಮ್ಮ ಕಾರ್ಯವನ್ನು ಮುಂದುವರಿಸಿದ್ದಾರೆ.

ಇಲ್ಲಿಯವರೆಗೆ, ಲಿಂಗಾಯತ ವಿರಕ್ತಮಠಗಳು ಜಾತಿ, ವರ್ಗ ಮತ್ತು ವರ್ಣಮುಕ್ತ ಸಮಾಜವನ್ನು ಸೃಷ್ಟಿಸಲು ಅಮೂಲ್ಯ ಕೊಡುಗೆಯನ್ನು ನೀಡಿವೆ. ಈ ಮಠದ ಮುಖ್ಯ ಕೆಲಸವೆಂದರೆ ತ್ರಿವಿಧ ದಾಸೋಹ ನಡೆಸುವುದು. ಈ ಮಹಾನ್ ಉದ್ದೇಶಕ್ಕಾಗಿಯೇ ಮಠಗಳು ಸ್ಥಾಪನೆಗೊಂಡಿವೆ. ಆ ತತ್ವವನ್ನು ಅನುಸರಿಸುವ ಮಠವು ನಿಲಂಗದಲ್ಲಿರುವ ಶ್ರೀ ಸಂಗನಬಸವ ವಿರಕ್ತಮಠವಾಗಿದೆ ಎಂದು ಕೊರಣೇಶ್ವರ ಸ್ವಾಮೀಜಿ ಹೇಳಿದರು.
ಸಂಗನಬಸವ ಮಠದ ಮಠಾಧೀಶ ಪೂಜ್ಯ ಸಂಗನಬಸವ ಮಹಾಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಗನಬಸವ ವಿರಕ್ತ ಮಠದ ನೂತನ ಅಧ್ಯಕ್ಷ ಅಮೋಲ್ ಆರ್ಯ, ಉಪಮೇಯರ್ ಮನೋಜ್ ಕೊಲ್ಲೆ, ಶಿವಾಜಿ ರೇಷ್ಮೆ ಗುರೂಜಿ, ವಿನೋದ್ ಆರ್ಯ, ಕಾಶಿನಾಥಪ್ಪ ಅಗ್ರೆ, ಶಿವಹಾರ್ ವಾಡ್ಕರ್ ಲಾತೂರ್, ಉದ್ಧವ್ ಮಹಾರಾಜ್ ಹೈಬತ್ಪುರೆ, ಶಿವರಾಜ್ ಪಾಟೀಲ್ ಉದ್ಗೀರ್, ಧನರಾಜ ಜಳಕೋಟೆ, ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗುರುಕುಲದ ವಿದ್ಯಾರ್ಥಿಗಳ ವಚನ ಗಾಯನದೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು.