ಬೆಂಗಳೂರು
ಕುಂಬಳಗೋಡಿನ ಬಸವ ಗಂಗೋತ್ರಿಯಲ್ಲಿ ಮಾರ್ಚ್ 16 ನಡೆದ ಪೂಜ್ಯ ಮಾತೆ ಮಹಾದೇವಿಯವರ ಸಂಸ್ಮರಣೋತ್ಸವ ಕಾರ್ಯಕ್ರಮವನ್ನು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಬಸವ ಜ್ಯೋತಿ ಬೆಳಗುವುದರೊಂದಿಗೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡುತ್ತಾ ಅವರು ಗುರುಬಸವ ರಥದ ಎರಡು ಮಹಾನ್ ಚಕ್ರಗಳು ಪೂಜ್ಯ ಲಿಂಗಾನಂದ ಅಪ್ಪಾಜಿ ಹಾಗು ಮಾತಾಜಿಯವರು. ಅವರಿಬ್ಬರೂ ತಮ್ಮ ಇಡೀ ಬಾಳನ್ನು ಲಿಂಗಾಯತ ಧರ್ಮದ ಪ್ರಚಾರಕ್ಕಾಗಿ, ಗುರು ಬಸವಣ್ಣನವರಿಗಾಗಿ ಗಂಧದ ಕೊರಡಿನಂತೆ ಸವಿಸಿದರು, ಎಂದು ತಿಳಿಸಿದರು.

ಗುರು ಬಸವಣ್ಣನವರ ವಿಚಾರಗಳನ್ನು ನಮ್ಮ ರಾಜ್ಯದಲ್ಲಿ ಅಷ್ಟೇ ಅಲ್ಲ ಬೇರೆ ರಾಜ್ಯಗಳಲ್ಲಿ ಹಾಗು ಹೊರ ದೇಶಗಳಲ್ಲಿ ಪ್ರಚಾರವಾಗಲು ಅವರ ಶ್ರಮವೇ ಕಾರಣ. ಅಪ್ಪಾಜಿಯವರಿಗಿಂತ ಮಾತಾಜಿಯವರು ಎರಡು ಪಟ್ಟು ಗುರು ಬಸವಣ್ಣನವರ ಸೇವೆ ಮಾಡಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ.
ಎಷ್ಟೇ ಎಡರು ತೊಡರುಗಳು ಬಂದರೂ ಲೆಕ್ಕಿಸದೆ ಧರ್ಮ ಬದ್ಧತೆಯಿಂದ ಗುರು ಬಸವಣ್ಣನವರ ತತ್ವಗಳನ್ನ ಪ್ರಚಾರ ಮಾಡಿದ್ದಾರೆ, ಪರಮ ಪೂಜ್ಯ ಮಾತಾಜಿಯವರು ಅವ್ಯಾಹತ ಪ್ರವಚನಗಳಿಂದ ಎಲ್ಲರ ಮನೆ ಮನಗಳಿಗೂ ಬಸವ ತತ್ವವನ್ನ ಬಿತ್ತರಿಸಿ ಒಂದು ನವ ಬಸವ ಸಾಮ್ರಾಜ್ಯದ ನಿರ್ಮಾಣ ಮಾಡಿದ್ದಾರೆ ಎಂದು ವಿವರಿಸಿದರು.

ಇಂದಿನ ಪೀಠಾಧ್ಯಕರಾದಂಥ ಪರಮ ಪೂಜ್ಯ ಗಂಗಾಮಾತಾಜಿಯವರು ಪೂಜ್ಯ ಅಪ್ಪಾಜಿ ಹಾಗು ಮಾತಾಜಿಯವರ ಆಶಯದಂತೆ ಬಸವ ಧರ್ಮವನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ತಿಳಿಸಿದರು.
ಗುರು ಬಸವಣ್ಣನವರ ಮೂರ್ತಿ ದರ್ಶನ
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಓಡಾಡುವ ಎಲ್ಲರಿಗೂ ಗುರು ಬಸವಣ್ಣನವರ ೧೧೨ ಅಡಿ ಎತ್ತರದ ಸುಂದರ ಮೂರ್ತಿಯ ದರ್ಶನವಾಗುತ್ತದೆ, ಇದರಿಂದ ಅವರ ಕಣ್ಣು ಪಾವನವಾಗುತ್ತದೆ. ಈ ಮೂರ್ತಿಯ ಕೆಲಸಕ್ಕೆ ಎಲ್ಲರು ಸಹಕರಿಸಬೇಕು ಎಂದು ಕರೆ ಕೊಟ್ಟರು.
ದಿವ್ಯ ಸಮ್ಮುಖವನ್ನು ವಹಿಸಿದ್ದಂತ ಪವಾಡ ಶ್ರೀ ಬಸವಣ್ಣ ದೇವರ ಮಠದ ನೆಲಮಂಗಲ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಜಿಗಳು ಷಟ್ಸ್ಥಲ ಧ್ವಜಾರೋಹಣವನ್ನು ನೆರವೇರಿಸಿ ಆಶೀರ್ವಚನ ನೀಡಿದರು.
ನಂತರ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್ ಬಸವಾದಿ ಶರಣರ ವಚನಗಳನ್ನು ತಿದ್ದುವ, ತಿರಚುವ, ಉಲ್ಟಾ ಅರ್ಥ ಬರುವ ಹಾಗೆ ಮಾಡುವ ಒಂದು ರಾಜಕೀಯ ಶುರುವಾಗಿದೆ. ಒಂದು ರಾಜಕೀಯ ಪಕ್ಷವನ್ನು ಬೆಂಬಲಿಸುವ ಮುಖ್ಯ ಸಂಘಟನೆಗಳ ಕಡೆಯಿಂದ ಈ ಪ್ರಯತ್ನವಾಗುತ್ತಿದೆ.
ಇವತ್ತು ಪೂಜ್ಯ ಮಾತೆ ಮಹಾದೇವಿ, ಲಿಂಗಾನಂದ ಅಪ್ಪಾಜಿಯವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ, ವಚನಗಳ, ಶರಣರ ಬಗ್ಗೆ ಇಂತಹ ಸುಳ್ಳು, ಪೊಳ್ಳು ಪ್ರಚಾರ ಮಾಡುತ್ತಿರುವುದನ್ನು ತಿರಸ್ಕರಿಸಿ, ಅದರ ವಿರುದ್ಧ ಸಾಮಾಜಿಕವಾಗಿ ಎಲ್ಲಾ ಕಡೆ ನೀವು, ನಾವು ಪ್ರಚಾರ ಮಾಡಬೇಕು, ಎಂದು ಹೇಳಿದರು.
ಪೂಜ್ಯ ಮಾತಾಜಿ ಆಶಯಗಳನ್ನು ಈಡೇರಿಸಲು ಸಮಾವೇಶದಲ್ಲಿ ಸಂಕಲ್ಪ ಮಾಡಲಾಯಿತು.
1) ಬಸವ ಗಂಗೋತ್ರಿಯಲ್ಲಿ ವಿಶ್ವಗುರು ಬಸವಣ್ಣನವರ ಪುತ್ತಳಿಯನ್ನು, ಈ ವರ್ಷದಲ್ಲಿ ಲೋಕಾರ್ಪಣೆಗೊಳಿಸಬೇಕು,
2) ಪೂಜ್ಯ ಮಾತಾಜಿಯವರು, ರಚಿಸಿದ ಧರ್ಮ ಗ್ರಂಥವನ್ನು ಮುದ್ರಣ ಮಾಡಬೇಕು.
3) ಲಿಂಗಾಯತ ಧರ್ಮದ, ಸಾಂವಿಧಾನಿಕ ಮಾನ್ಯತೆಗಾಗಿ ಹೋರಾಡುವುದು.

ಕಾರ್ಯಕ್ರಮದಲ್ಲಿ ಪೂಜ್ಯ ಗಂಗಾದೇವಿ ತಾಯಿಯವರು ಸಾನಿಧ್ಯ ವಹಿಸಿದ್ದರು ಹಾಗು ಸದ್ಗುರು ಬಸವಯೋಗಿ ಮಹಾಸ್ವಾಮೀಜಿಯವರು ನೇತೃತ್ವ ವಹಿಸಿದ್ದರು, ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ ಎಂ ಜಾಮದಾರ್ ಅಧ್ಯಕ್ಷತೆ ವಹಿಸಿದ್ದರು, ಲಂಡನ್ ಬಸವ ಫೌಂಡೇಶನ್ ನೀರಜ್ ಪಾಟೀಲ್, ರಾಷ್ಟೀಯ ಬಸವ ದಳದ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿಯವರು ಕರ್ನಾಟಕ ರಾಜ್ಯಾಧ್ಯಕ್ಷ ಕೆ ವೀರೇಶ್ ಕುಮಾರ, ತೆಲಂಗಾಣ ಅಧ್ಯಕ್ಷ ಶಂಕ್ರಪ್ಪ ಪಾಟೀಲ್ ಉಪಸ್ಥಿತರಿದ್ದರು.
ಮಾನ್ಯ ಜಾಮದಾರರೆ ತಾವುಗಳು ವಚನಗಳನ್ನು ತಿರುಚುವ ಮತ್ತು ಅಪಾರ್ಥ ಬರುವ ಹೇಳಿಕೆಗಳನ್ನು ನೀಡುವವರ ಬಗ್ಗೆ ಎಚ್ಚರಿಕೆ ನೀಡಬೇಕು. ನಿಮ್ಮಗೆ ನಮ್ಮ ಸದಾ ಬೆಂಬಲವಿದೆ.