ವಿಜಯಪುರ
ಮಹಿಳಾ ಪರ ಹೋರಾಟಗಾರ್ತಿ ಕಲಬುರ್ಗಿಯ ಮೀನಾಕ್ಷಿ ಬಾಳಿ ಅವರಿಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಲು ನಿರ್ಣಯವಾಗಿದೆ.
ಜನವರಿ 9ರಂದು ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ ಎಂದು ಕುಲಪತಿ ಪ್ರೊ. ತುಳಸಿಮಾಲಾ ತಿಳಿಸಿದರು.
ಜೊತೆಗೆ ಚಿತ್ರನಟಿ ತಾರಾ ಅನುರಾಧ ಮತ್ತು ಶಿಗ್ಗಾವಿಯ ಉತ್ಸವ ರಾಕ್ ಗಾರ್ಡನ್ ನಿರ್ವಾಹಕಿ ವೇದರಾಣಿ ದಾಸನೂರು ಅವರಿಗೂ ಕೂಡ ಗೌರವ ಡಾಕ್ಟರೇಟ್ ನೀಡಲಾಗುತ್ತದೆ.
ಘಟಿಕೋತ್ಸವದಲ್ಲಿ ಒಟ್ಟು 34 ವಿದ್ಯಾರ್ಥಿನಿಯರಿಗೆ ಪಿ.ಎಚ್ ಡಿ, ಒಟ್ಟು 1,106 ವಿದ್ಯಾರ್ಥಿನಿಯರಿಗೆ ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ನೀಡಲಾಗುವುದು ಎಂದರು.
ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯ ಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ್, ಘಟಿಕೋತ್ಸವ ಸಂಯೋಜನಾಧಿಕಾರಿ ಪ್ರೊ. ಸಕ್ಪಾಲ್ ಹೂವಣ್ಣ, ಪ್ರೊ.ಓಂಕಾರ ಕಾಕಡೆ, ಡಾ.ತಹಮೀನಾ ಕೋಲಾರ, ಸಂದೀಪ ನಾಯಕ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
